Advertisement

“ಅಂಫಾನ್‌’ಭೀತಿ: ಮತ್ತೆ ಮೀನುಗಾರಿಕೆಗೆ ಬ್ರೇಕ್‌

10:51 PM May 18, 2020 | Sriram |

ಗಂಗೊಳ್ಳಿ: ಲಾಕ್‌ಡೌನ್‌ನಿಂದಾಗಿ ಕೆಲ ದಿನಗಳ ಹಿಂದಷ್ಟೇ ಆರಂಭಗೊಂಡಿದ್ದ ಯಾಂತ್ರೀಕೃತ ಮೀನುಗಾರಿಕೆಗೆ ಈಗ “ಅಂಫಾನ್‌’ ಚಂಡಮಾರುತದ ಭೀತಿ ಎದುರಾಗಿದ್ದು, ಸೋಮವಾರ ಯಾವುದೇ ಬೋಟ್‌ಗಳು, ನಾಡದೋಣಿಗಳು ಕಡಲಿಗಿಳಿದಿಲ್ಲ.

Advertisement

ಸಮುದ್ರದಲ್ಲಿ ಗಾಳಿಯ ಅಬ್ಬರ ಜೋರಾಗಿದ್ದು, ಗಂಟೆಗೆ 40 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಗಾಳಿ ಬೀಸುತ್ತಿದೆ. ಇದಲ್ಲದೆ ಅಲೆಗಳ ಅಬ್ಬರವು ಹೆಚ್ಚಾಗಿದ್ದು, ಮೀನುಗಾರರು ಅಪಾಯವನ್ನರಿತು ಮಂಗಳವಾರವೂ ಕಡಲಿಗಿಳಿಯದಿರಲು ನಿರ್ಧರಿಸಿದ್ದಾರೆ. ಗಂಗೊಳ್ಳಿ, ಮರವಂತೆ, ಕೋಡಿ, ಕೊಡೇರಿ, ಮಡಿಕಲ್‌, ಶಿರೂರು ಸೇರಿದಂತೆ ಎಲ್ಲ ಕಡೆಗಳಲ್ಲಿ ಸೋಮವಾರ ಮೀನುಗಾರಿಕೆ ನಡೆದಿಲ್ಲ.

ಕೋವಿಡ್‌ದಿಂದಾಗಿ ಲಾಕ್‌ಡೌನ್‌ ಘೋಷಣೆ ಯಾದಂದಿನಿಂದ ಎಲ್ಲ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಆ ಬಳಿಕ ಎ. 12ರಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಮೇ 8 ರಿಂದ ಯಾಂತ್ರೀಕೃತ ಮೀನುಗಾರಿಕೆಗೂ ಕೂಡ ಜಿಲ್ಲಾಡಳಿತ ಅನುಮತಿ ನೀಡಿತ್ತು.

ನಿರೀಕ್ಷಿತ ಮೀನಿಲ್ಲ
ಮೀನುಗಾರಿಕೆ ಆರಂಭವಾದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ. ಮೀನುಗಾರಿಕೆಗೆ ತೆರಳಿ ನಷ್ಟ ಅನುಭವಿಸುವುದು ಬೇಡವೆಂದು ಹೆಚ್ಚಿನ ಬೋಟ್‌ಗಳು ಕಡಲಿಗಿಳಿಯದೇ ದಡದಲ್ಲಿಯೇ ಲಂಗರು ಹಾಕಿವೆ. ಸೀಸನ್‌ನಲ್ಲೇ 45 ದಿನಗಳಿಗೂ ಹೆಚ್ಚು ಕಾಲದಿಂದ ಮೀನುಗಾರಿಕೆಯಿಲ್ಲದೆ ಸಂಕಷ್ಟದಲ್ಲಿರುವ ಮೀನುಗಾರರಿಗೆ ಈಗ ಅಂಫಾನ್‌ ಚಂಡಮಾರುತದಿಂದ ಹೊಡೆತ ಬಿದ್ದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next