Advertisement

ತತ್ತ್ವಾ ಪೇಕ್ಷೆಯ ಸಾಕಾರಮೂರ್ತಿ ಡಾ|ಬಾಳಪ್ಪ

12:24 AM Feb 23, 2022 | Team Udayavani |

ಸ್ವಾತಂತ್ರ್ಯ ಹೋರಾಟಗಾರ ಡಾ| ಅಮ್ಮೆಂಬಳ ಬಾಳಪ್ಪ ಅವರು ಬಡತನದ ಕಾರಣದಿಂದಾಗಿ ಯೋಗ್ಯ ಶಿಕ್ಷಣವನ್ನು ಪಡೆಯು ವಲ್ಲಿ ವಿಫ‌ಲರಾದರೂ ಸ್ವಪ್ರಯತ್ನದಿಂದ ಪಂಚಭಾಷೆಗಳಲ್ಲಿ ಪ್ರಾವೀಣ್ಯ ಸಾಧಿಸಿ ದ್ದರು. ಬ್ರಿಟಿಷರ ವಿರುದ್ಧ ರಾಜ್ಯದ ಕರಾವಳಿಯಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಅವರು ಕಾರಾಗೃಹ ಶಿಕ್ಷೆಯನ್ನೂ ಅನುಭವಿಸಿದ್ದರು. ಆ ಬಳಿಕ ಶಿಕ್ಷಕ, ಪತ್ರಕರ್ತ, ವೈದ್ಯ, ಸಹಕಾರಿ, ಬಡವರು ಮತ್ತು ಶೋಷಿತರ ಸೇವೆ..ಹೀಗೆ ಹಲವು ಕ್ಷೇತ್ರಗಳಲ್ಲಿ ಯಾವುದೇ ಸ್ಥಾನ, ಹುದ್ದೆಗಳ ಅಪೇಕ್ಷೆ ಇಲ್ಲದೆ ನಿಸ್ವಾರ್ಥರಾಗಿ ದುಡಿದವರು. ಪ್ರಾಮಾಣಿಕತೆ, ಸರಳತೆ, ಸತ್ಯ ಈ ಎಲ್ಲ ಶಬ್ದಗಳಿಗೂ ಪರ್ಯಾಯದಂತಿದ್ದ ಡಾ|ಅಮ್ಮೆಂಬಳ ಬಾಳಪ್ಪ ಅವರ ಜನ್ಮಶತಮಾ ನೋತ್ಸವ ಈ ವರ್ಷ. ತನ್ನಿಮಿತ್ತ ಈ ಲೇಖನ.

Advertisement

ಪ್ರಾಮಾಣಿಕತೆ, ದೇಶಭಕ್ತಿ, ನಿಷ್ಠೆ ಯನ್ನೇ ತಮ್ಮ ಜೀವನದುದ್ದಕ್ಕೂ ಪಾಲಿ ಸುತ್ತಾ ಬಂದ ಡಾ| ಅಮ್ಮೆಂಬಳ ಬಾಳಪ್ಪ ಅವರು ಯಾವುದೇ ಸ್ಥಾನಾಪೇಕ್ಷೆ ಬಯಸದೆ ತತ್ತ್ವಾಪೇಕ್ಷೆಯಿಂದ ಕೂಡಿದ ಜೀವನವನ್ನು ತಮ್ಮ ದಾಗಿಸಿ ಕೊಂಡಿದ್ದರು. ಈ ತತ್ತ್ವಾದರ್ಶಗಳಿಂದಲೇ ಇಂದಿಗೂ ಅವರು ಜನಮಾನಸದಲ್ಲಿ ಅಜರಾಮರ ರಾಗಿದ್ದಾರೆ. ಈ ವರ್ಷ (2022) ಕೀರ್ತಿಶೇಷ ಡಾ| ಅಮ್ಮೆಂಬಳ ಬಾಳಪ್ಪ ಅವರ ಜನ್ಮಶತಮಾನೋತ್ಸವ ವರ್ಷ.

ಕಾರ್ಮಿಕ ನಾಯಕ, ದೇಶ ಕಂಡ ಅಪರೂಪದ ರಾಜಕಾರಣಿಯಲ್ಲೋರ್ವರಾದ ಜಾರ್ಜ್‌ ಫೆರ್ನಾಂಡಿಸ್‌ ಅವರ ರಾಜಕೀಯ ಗುರುವಾಗಿದ್ದ ಈ ಮಹಾನ್‌ ಚೇತನ ಹುಟ್ಟಿದ್ದು 1922ರ ಫೆಬ್ರವರಿ 23ರಂದು. ಜಾರ್ಜ್‌ರನ್ನು ನೆನಪು ಮಾಡಿಕೊಂಡಾಗಲೆಲ್ಲ ಅಮ್ಮೆಂಬಳ ಬಾಳಪ್ಪ ಅವರ ವ್ಯಕ್ತಿತ್ವ ನಮ್ಮ ಮುಂದೆ ಅನಾವರಣಗೊಳ್ಳದೇ ಇರಲಾರದು. ಡಾ| ಅಮ್ಮೆಂಬಳರದು ಹೋರಾಟದ ಬದುಕು. ಆದರೆ ಬಡವರು, ಶೋಷಿತರ ದನಿಯಾಗಿದ್ದ ಅವರು ಈ ಸಮುದಾಯಗಳಿಗಾಗಿ ತಮ್ಮ ಜೀವವನ್ನೇ ತೇಯ್ದಿದ್ದರು.

ಕುಂಬಾರರ ಕುಟುಂಬದಲ್ಲಿ ಹುಟ್ಟಿದ ಬಾಳಪ್ಪ ಅವರದು ಕಡುಬಡತನದಿಂದ ಕೂಡಿದ ಜೀವನವಾಗಿತ್ತು. ಈ ಕಾರಣದಿಂದಾಗಿಯೇ ವಿದ್ಯಾಭ್ಯಾಸವನ್ನು ನಾಲ್ಕನೇ ತರಗತಿಗೆ ಮೊಟಕುಗೊಳಿಸಿ ಆ ಬಳಿಕ ಅವರು ಮಂಗಳೂರಿನ ಓರ್ವ ಬ್ರಿಟಿಷ್‌ ಅಧಿಕಾರಿಯ ಮನೆಯಲ್ಲಿ ಕೆಲಸಕ್ಕೆ ಸೇರಿದರು. ಮನೆಕೆಲಸದ ಜತೆಯಲ್ಲಿ ಅಲ್ಲಿಯೇ ಇಂಗ್ಲಿಷ್‌ ಬರೆಯಲು, ಓದಲು ಕಲಿತರು. ಹೀಗೆ ಇಂಗ್ಲಿಷ್‌ ಅನ್ನು ಕರಗತ ಮಾಡಿಕೊಂಡ ಅವರು ಪತ್ರಿಕೆ ಓದುವ ಅಭ್ಯಾಸವನ್ನು ಬೆಳೆಸಿಕೊಂಡರು. ಈ ಹವ್ಯಾಸ ಅವರಲ್ಲಿ ದೇಶಭಕ್ತಿ ಮೊಳಕೆಯೊಡೆಯುವಂತೆ ಮಾಡಿತು.
ಬಡತನದಿಂದಾಗಿ ಕುಟುಂಬ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದರೂ ಬಾಳಪ್ಪ ಅವರು ದೇಶವನ್ನು ಪರಕೀಯರಿಂದ ಮುಕ್ತಗೊಳಿಸುವ ಪಣತೊಟ್ಟರು. ಆಗ ದೇಶಾದ್ಯಂತ ಸ್ವಾತಂತ್ರ್ಯ ಹೋರಾಟ ಕಾವೇರತೊಡಗಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಕಟಿಬದ್ಧರಾಗಿ ಹೋರಾಡುತ್ತಿದ್ದ ರಾಷ್ಟ್ರಪ್ರೇಮಿಗಳ ಸಾಲಿನಲ್ಲಿ ಅಮ್ಮೆಂಬಳ ಬಾಳಪ್ಪ ಅವರೂ ಸೇರಿಕೊಂಡರು. 1942ರಲ್ಲಿ ಮಹಾತ್ಮಾ ಗಾಂಧೀಜಿಯವರು ಕ್ವಿಟ್‌ ಇಂಡಿಯಾ ಚಳವಳಿಗೆ ಕರೆ ಕೊಟ್ಟಾಗ ಬಾಳಪ್ಪನವರಿಗೆ ಕೇವಲ 20 ವರ್ಷ. ಆಗಲೇ ಮನೆಯವರು ಬಾಳಪ್ಪ ಅವರಿಗೆ ವಿವಾಹ ಮಾಡಲು ಮುಂದಾಗಿದ್ದರು. ಆದರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದ ಬಾಳಪ್ಪನವರು ಆಗಿನ ಅವಿಭಜಿತ ದಕ್ಷಿಣ ಕನ್ನಡದ ಮೇರು ನಾಯಕರಾಗಿ ಕ್ವಿಟ್‌ ಇಂಡಿಯಾ ಚಳವಳಿಗೆ ಧುಮುಕಿದರು. ಮಂಗಳೂರಿನ ಜಿಲ್ಲಾ ನ್ಯಾಯಾಲಯವನ್ನು ಧ್ವಂಸಗೈಯುವ ಪ್ರಯತ್ನದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿ ವೆಲ್ಲೂರು ಜೈಲಿಗೆ ರವಾನೆಯಾದರು. ಈ ಪ್ರಕರಣದಲ್ಲಿ 18 ತಿಂಗಳ ಶಿಕ್ಷೆ ಅನುಭವಿಸಿದರು. ಅದೇ ಜೈಲಿನಲ್ಲಿ ಬಂಧಿಯಾಗಿದ್ದ ಮಾಜಿ ಪ್ರಧಾನಿ ದಿ| ಪಿ.ವಿ. ನರಸಿಂಹ ರಾವ್‌ ಅವರ ಸ್ನೇಹ ರಾಜಕೀಯವಾಗಿ ಮತ್ತಷ್ಟು ಬೆಳೆಯಲು ಬಾಳಪ್ಪರಿಗೆ ಸಹಕಾರಿಯಾಯಿತು. ಇದೇ ವೇಳೆ ಹಿಂದಿ ಭಾಷೆಯನ್ನು ಕಲಿತುಕೊಂಡರು. ಆ ಬಳಿಕದ ದಿನಗಳಲ್ಲಿ ಜಯಪ್ರಕಾಶ್‌ ನಾರಾಯಣ, ಜವಾಹರಲಾಲ್‌ ನೆಹರೂ ಅವರಂಥ ಮಹಾನ್‌ ರಾಜಕೀಯ ನೇತಾರರ ಪರಿಚಯವಾಗಿ ಬಾಳಪ್ಪ ಅವರು ದೇಶದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು.

ಮಹಾತ್ಮಾ ಗಾಂಧೀಜಿ ಅವರ ಕಟ್ಟಾ ಅನುಯಾಯಿ ಯಾಗಿದ್ದ ಡಾ| ಅಮ್ಮೆಂಬಳ ಬಾಳಪ್ಪ ತನ್ನ ಜೀವನದಲ್ಲಿ ಗಾಂಧೀ ತಣ್ತೀಗಳನ್ನು ಅಳವಡಿಸಿಕೊಂಡಿದ್ದರಲ್ಲದೆ ಸದಾ ಈ ತಣ್ತೀಗಳನ್ನೇ ಪ್ರತಿಪಾದಿಸುವ ಮೂಲಕ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿದ್ದರು. 1944ರಲ್ಲಿ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮುದ್ರಾಡಿಯಲ್ಲಿ 3 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಸಾರ್ವಜನಿಕ ಜೀವನದುದ್ದಕ್ಕೂ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯು ತ್ತಿದ್ದುದ ರಿಂದಾಗಿ ಜನರಿಗೆ ಅವರ ಬಗ್ಗೆ ಎಲ್ಲಿಲ್ಲದ ಅಭಿಮಾನ. ಸರಳ ಸಜ್ಜನಿಕೆಯ ಬಾಳಪ್ಪನವರು ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು.

Advertisement

ಇನ್ನು ಬಡವರೆಂದರೆ ಬಾಳಪ್ಪ ಅವರಿಗೆ ಎಲ್ಲಿಲ್ಲದ ಕಾಳಜಿ. ಬಂಟ್ವಾಳ ಭೂನ್ಯಾಯ ಮಂಡಳಿಯಲ್ಲಿ ಮೂರು ಅವಧಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಈ ಸಂದರ್ಭದಲ್ಲಿ ಬಹಳಷ್ಟು ಬಡವರಿಗೆ ಸಹಾಯ ಮಾಡಿದ್ದರು. ಬಡ ರೈತರಿಗೆ ಸ್ವತಃ ತಾವೇ ಅರ್ಜಿಗಳನ್ನು ಬರೆದುಕೊಡುತ್ತಿದ್ದುದೇ ಅಲ್ಲದೆ ಸರಕಾರಿ ಕಚೇರಿಗಳಿಗೆ ಅಲೆದಾಟ ನಡೆಸಿ ಕೆಲಸಗಳನ್ನು ಪೂರ್ಣಗೊಳಿಸಿಕೊಡುತ್ತಿದ್ದರು. ನ್ಯಾ| ವೆಂಕಟಸ್ವಾಮಿ ನೇತೃತ್ವದ ಕರ್ನಾಟಕ ಸರಕಾರದ 2ನೇ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿದ್ದರು. 1989 ರಿಂದ 92ರ ತನಕ ಮಂಗಳೂರು ವಿ.ವಿ. ಅಕಾಡೆಮಿ ಕೌನ್ಸಿಲ್‌ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ದೇಶ ಸೇವೆಯೇ ತನ್ನ ಪರಮ ಗುರಿಯೆಂದು ಅರಿತಿದ್ದ ಬಾಳಪ್ಪ ಅವರಿಗೆ 1989ರಲ್ಲಿ ಜನತಾದಳ (ಎಸ್‌) ವಿಧಾನಸಭೆಯ ಟಿಕೆಟ್‌ ಅನ್ನು ನೀಡಿತ್ತು. ಆದರೆ ಅದನ್ನು ನಯವಾಗಿಯೇ ತಿರಸ್ಕರಿಸಿದ್ದ ಅವರು, ತಮ್ಮ ಶಿಷ್ಯ ಜಾರ್ಜ್‌ ಫೆರ್ನಾಂಡಿಸ್‌ ಸಮತಾ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಆಹ್ವಾನ ನೀಡಿದಾಗಲೂ ನಿರಾಕರಿಸುವ ಮೂಲಕ ತಮ್ಮದೇನಿದ್ದರೂ ಸ್ಥಾನಾಪೇಕ್ಷೆ ರಹಿತ ಜೀವನ ಎಂದು ಸಾಬೀತುಪಡಿಸಿದರು.

ಸ್ವಾರ್ಥರಹಿತ ಬಡವರ ಸೇವೆಯೇ ಅವರ ಮುಂದಿದ್ದ ಗುರಿಯಾದ್ದರಿಂದ ಕೊನೆ ತನಕವೂ ಜನರೊಡನೇ ಬಾಳಿ ಬದುಕಿದರು. ಸಮಾಜದ ಆಗುಹೋಗುಗಳನ್ನು ಜನತೆಗೆ ಮತ್ತಷ್ಟು ಪ್ರಖರವಾಗಿ ಮುಟ್ಟಿಸಬೇಕೆಂಬ ನಿಟ್ಟಿನಲ್ಲಿ 1952ರಲ್ಲಿ ಕನ್ನಡದಲ್ಲಿ “ಮಿತ್ರ’ , 1970ರಲ್ಲಿ ತುಳು ಭಾಷೆಯಲ್ಲಿ ಮೊತ್ತ ಮೊದಲ “ಸಿರಿ’ ಎಂಬ ಪತ್ರಿಕೆಯನ್ನೂ ಪ್ರಾರಂಭಿಸಿದ್ದರು. 1980ರಲ್ಲಿ ಬಂಟ್ವಾಳದಲ್ಲಿ ಸಮಾಜ ಸೇವಾ ಸಹಕಾರಿ ಬ್ಯಾಂಕ್‌ ಸ್ಥಾಪಿಸಿ ಹಲವರಿಗೆ ಉದ್ಯೋಗವನ್ನು ನೀಡಿದ್ದರು. ಬಾಲ್ಯದಲ್ಲಿ ಆಯುರ್ವೇದ ಔಷಧ ಅನುಭವವಿದ್ದುದರಿಂದ ಸ್ವಲ್ಪ ಸಮಯ ಫಾರ್ಮಸಿಯಲ್ಲಿ ಕೆಲಸಕ್ಕೆ ಸೇರಿದ್ದರು. ಈ ಹಿನ್ನೆಲೆಯಲ್ಲಿ 1968ರಲ್ಲಿ ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯರೆಂಬ ನೋಂದಣಿ ಪಡೆದುಕೊಂಡಿದ್ದರು. ವಿವಿಧ ರಂಗಗಳಲ್ಲಿ ಸಮಾಜಮುಖೀ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಡಾ| ಅಮ್ಮೆಂಬಳ ಬಾಳಪ್ಪ ಎಲ್ಲರ ಪಾಲಿನ ಅಜಾತಶತ್ರುವಾಗಿ ಬಾಳಿ 2014ರ ಮೇ 15ರಂದು ನಿಧನ ಹೊಂದಿದರು.

ಡಾ| ಅಮ್ಮೆಂಬಳ ಬಾಳಪ್ಪ ಅವರ ಜನ್ಮ ಶತಮಾನೋತ್ಸವ ವರ್ಷಾಚರಣೆಯ ಈ ಸಂದರ್ಭದಲ್ಲಿ ಅವರು ಪಾಲಿಸಿ ಕೊಂಡು ಬಂದ ತತ್ತ್ವಾದರ್ಶಗಳನ್ನು ಕಿಂಚಿತ್‌ ಆದರೂ ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ದೇಶ ಸುಭಿಕ್ಷಗೊಳ್ಳಲು ಸಾಧ್ಯ. ವೈಯಕ್ತಿಕ ಪ್ರತಿಷ್ಠೆ, ಅಧಿಕಾರ ವ್ಯಾಮೋಹ, ಹಣ, ಆಸ್ತಿ ಇವೆಲ್ಲವೂ ನಶ್ವರ ಎಂಬುದನ್ನು ಅರಿತು ಸ್ಥಾನಾಪೇಕ್ಷೆಯನ್ನು ಬಿಟ್ಟು ತತ್ತ್ವಾಪೇಕ್ಷೆಯಿಂದ ಬದುಕಿದರೆ ಡಾ| ಅಮ್ಮೆಂಬಳ ಬಾಳಪ್ಪ ಅವರಿಗೆ ನಾವು ನೀಡುವ ಬಲುದೊಡ್ಡ ಗೌರವವೇ ಸರಿ. ಇನ್ನು ಸರಕಾರ ಇಂಥ ಅಪ್ಪಟ ದೇಶಪ್ರೇಮಿಯನ್ನು ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಾದರೂ ಗುರುತಿಸುವ ಕಾರ್ಯಕ್ಕೆ ಮುಂದಾದೀತು ಎಂಬ ಅಭಿಲಾಷೆ ಅವರ ಅಭಿಮಾನಿಗಳದ್ದಾಗಿದೆ.

-ಪ್ರೊ| ತುಕಾರಾಮ್‌ ಪೂಜಾರಿ, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next