Advertisement

ವರ್ಗಾವಣೆ ರದ್ದತಿಗೆ ಹೈಕೋರ್ಟ್‌ ಮೆಟ್ಟಿಲೇರಿದ ಐಜಿಪಿ ಅಮೃತ್‌ ಪೌಲ್‌

06:40 AM Jun 29, 2018 | |

ಬೆಂಗಳೂರು: ಚುನಾವಣಾ ಆಯೋಗದ ನಿರ್ದೇಶನದಂತೆ ಕೇಂದ್ರ ವಲಯ ಐಜಿಪಿ ಸ್ಥಾನದಿಂದ ತಮ್ಮನ್ನು ವರ್ಗಾವಣೆಗೊಳಿಸಿದ ಕೇಂದ್ರೀಯ ಆಡಳಿತಾತ್ಮಕ ಮಂಡಳಿ(ಸಿಎಟಿ) ಆದೇಶ ರದ್ದುಕೋರಿ ಆಡಳಿತ ವಿಭಾಗದ ಐಜಿಪಿ ಅಮೃತ್‌ಪೌಲ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಅಮೃತ್‌ಪೌಲ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾ.ಎಚ್‌.ಜಿ.ರಮೇಶ್‌ ಹಾಗೂ ನ್ಯಾ. ಪಿ.ಎಂ.ನವಾಜ್‌ ಅವರಿದ್ದ ವಿಭಾಗೀಯ ಪೀಠ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯಸರ್ಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿತು.

ಈ ಹಿಂದೆ ನಡೆದ ಚುನಾವಣೆ ವೇಳೆ ಕರ್ತವ್ಯ ಲೋಪ ಎಸಗಿದ ಕಾರಣದಿಂದ ವಿಚಾರಣೆ ಎದುರಿಸುತ್ತಿರುವ ಅಧಿಕಾರಿಗಳನ್ನು ಚುನಾವಣಾ ಕಾರ್ಯ ನಿರ್ವಹಿಸದಂತೆ ನೋಡಿಕೊಳ್ಳಬೇಕು ಎಂದು ಕಳೆದ ವಿಧಾನಸಭೆ ಚುನಾವಣೆ ವೇಳೆ ಚುನಾವಣಾ ಆಯೋಗ ಸರ್ಕಾರಕ್ಕೆ ಸೂಚಿಸಿತ್ತು. ಆಯೋಗ ನೀಡಿದ ಪಟ್ಟಿಯಲ್ಲಿ ಐಜಿಪಿ ಅಮೃತ್‌ಪೌಲ್‌ ಅವರ
ಹೆಸರೂ ಇತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕೇಂದ್ರ ವಲಯ ಐಜಿಪಿ ಹುದ್ದೆಯಿಂದ ಬೆಂಗಳೂರು ಆಡಳಿತ ವಿಭಾಗದ ಐಜಿಪಿ ಹುದ್ದೆಗೆ ವರ್ಗಾವಣೆಗೊಳಿಸಿ ರಾಜ್ಯಸರ್ಕಾರ ಮಾ. 9ರಂದು ಆದೇಶ ಹೊರಡಿಸಿತ್ತು.

ಇದನ್ನು ಪ್ರಶ್ನಿಸಿ ಅಮೃತ್‌ ಪೌಲ್‌ ಸಿಎಟಿ ಮೊರೆ ಹೋಗಿದ್ದರಾದರೂ ಅದು ಸರ್ಕಾರದ ಆದೇಶವನ್ನು ಎತ್ತಿಹಿಡಿದಿತ್ತು. ಈಗ ಹೈಕೋರ್ಟ್‌ ಮೊರೆ ಹೋಗಿರುವ ಅಮೃತ್‌ ಪೌಲ್‌ ಯಾವುದೇ ಕರ್ತವ್ಯ ಲೋಪವೆಸಗಿಲ್ಲ. ಪುನಃ ಕೇಂದ್ರ ವಲಯ ಐಜಿಪಿಯಾಗಿ ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಅಮೃತ್‌ ಪೌಲ್‌ ಅರ್ಜಿಯಲ್ಲಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next