Advertisement

ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಕೈ ಬಿಡಲು ಒತ್ತಾಯ

10:05 PM Jun 10, 2019 | Team Udayavani |

ಸಂತೆಮರಹಳ್ಳಿ: ರಾಜ್ಯ ಸರ್ಕಾರ ಭೂ ಸ್ವಾಧೀನ ಕಾಯ್ದೆಗೆ ಜಾರಿಗೆ ತರಲು ಉದ್ದೇಶಿಸಿರುವ ತಿದ್ದುಪಡಿಯನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿ ಯಳಂದೂರು ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯ ಕರ್ತರು ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ನಾಡಮೇಗಲಮ್ಮ ದೇಗುಲದಿಂದ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ತೆರಳಿದ ರೈತರು ಪಟ್ಟಣದ ಎಸ್‌ಬಿಐ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.

ಕಾಯ್ದೆ ತಿದ್ದುಪಡಿ ಬೇಡ: ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌ ಮಾತನಾಡಿ, ರಾಜ್ಯ ಸರ್ಕಾರ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವ ಕ್ರಮ ಸರಿಯಿಲ್ಲ. ಇದು ಉಳ್ಳವರ ಪರವಾದ ಕಾನೂನಾಗಿದೆ. ರೈತರಿಗೆ ಇದು ಮರಣ ಶಾಸನವಾಗಲಿದೆ. ಕೂಡಲೇ ಇದನ್ನು ಕೈಬಿಡಬೇಕು. ಕೇಂದ್ರದ ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಕಾಯ್ದೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆದಿಲ್ಲ: ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಅಧಿಕಾರಿಗಳ ಸಭೆ ಕರೆದಿಲ್ಲ ರೈತರನ್ನೂ ಆಹ್ವಾನಿಸಿಲ್ಲ. ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆ ಕೆರೆಗೆ ನೀರು ತುಂಬಿಸಲು ಸಿದ್ಧತೆಗಳು ಪೂರ್ಣಗೊಂಡಿದ್ದರೂ ಚಾಲನೆ ನೀಡಿಲ್ಲ.

ಅವರ ಮನೆಗೆ ಮುತ್ತಿಗೆ ಹಾಕಲು ಸಂಘದ ವತಿಯಿಂದ ನಿರ್ಧರಿಸಲಾಗಿತ್ತು. ಆದರೆ ಜೂ. 16 ರಂದು ಸಭೆ ಕರೆಯಲಾಗುವುದು ಎಂದು ಅವರು ಲಿಖೀತ ಭರವಸೆ ನೀಡಿರುವುದರಿಂದ ಅವರಿಗೆ ಆ ದಿನದ ವಗೆರೆ ಗಡುವು ನೀಡಲಾಗಿದೆ. ಕೆರೆಗೆ ನೀರು ಬಿಡದಿದ್ದಲ್ಲಿ ಜೂ.17 ರಂದು ಉತ್ತೂರು ಕೆರೆಯಿಂದ ಏತನೀರಾವರಿ ನಾವೇ ಇದಕ್ಕೆ ಚಾಲನೆ ನೀಡಲಿದ್ದೇವೆ ಎಂದು ಎಚ್ಚರಿಸಿದರು.

Advertisement

ಸ್ಥಳೀಯ ಸಮಸ್ಯೆ ಬಗೆಹರಿಸಿ: ಯಳಂದೂರು ತಾಲೂಕಿನ ಎಲ್ಲಾ ಕರೆಗಳಲ್ಲೂ ಹೂಳೆತ್ತಿಸಿ ಅಭಿವೃದ್ಧಿ ಮಾಡಬೇಕು. ತಾಲೂಕಿನ ಆಮೆಕೆರೆಯ ರೈತರಿಗೆ ಪರಿಹಾರ ಹಣ ಇನ್ನೂ ಪಾವತಿಯಾಗಿಲ್ಲ. ಆದಷ್ಟು ಬೇಗ ಈ ಹಣ ರೈತರ ಕೈ ಸೇರಬೇಕು. ಬ್ಯಾಂಕುಗಳಲ್ಲಿ ವಿನಾ ಕಾರಣ ರೈತರಿಗೆ ಸಾಲ ನೀಡದೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಎನ್‌.ಮಹೇಶ್‌ ಸಾಥ್‌: ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್‌. ಮಹೇಶ್‌ ಭೇಟಿ ನೀಡಿ ಕೆಲ ಕಾಲ ಅವರೊಂದಿಗೆ ಇದ್ದು ಪ್ರತಿಭಟನೆಗೆ ಸಾಥ್‌ ನೀಡಿ, ಮಾತನಾಡಿದ ಅವರು, ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದರೆ ರೈತರಿಗೆ ಸಮಸ್ಯೆಯಾಗುತ್ತದೆ. ಇಂಥ ಕಾಯ್ದೆಗೆ ನನ್ನ ವಿರೋಧವೂ ಇದೆ. ಈ ವರ್ಷದಲ್ಲಿ ರಾಜ್ಯ ಸರ್ಕಾರ ಜಲವರ್ಷ ಎಂದು ಘೋಷಣೆ ಮಾಡಲು ಹಾಗೂ ಕೆರೆಗಳಿಗೆ ಕಾಯಕಲ್ಪ ತರಲು ಯೋಜನೆ ರೂಪಿಸುತ್ತಿದೆ. ಶೀಘ್ರದಲ್ಲೆ ಎಲ್ಲಾ ಶಾಸಕರ ಸಭೆ ನಡೆಸಲಿದೆ. ಈ ಸಂದರ್ಭದಲ್ಲಿ ಯಳಂದೂರು ತಾಲೂಕಿನ ಎಲ್ಲಾ ಕೆರೆಗಳ ಅಭಿವೃದ್ಧಿಗೂ ಕ್ರಮ ವಹಿಸಲಾಗುವುದು. ರೈತರ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಸ್ಥಳಕ್ಕೆ ಉಪವಿಭಾಗಾಧಿಕಾರಿ ಭೇಟಿ: ಪ್ರತಿಭಟನಾ ನಿರತ ಸ್ಥಳಕ್ಕೆ ಉಪವಿಭಾಗಾಧಿಕಾರಿ ನಿಖೀತ ಭೇಟಿ ನೀಡಿ ಜಿಲ್ಲಾ ಉಸ್ತುವಾರಿ ಸಚಿವರು ರೈತರೊಂದಿಗೆ ಸಭೆ ನಡೆಸುವ ಕುರಿತು ಲಿಖೀತವಾಗಿ ನೀಡಿರುವ ಪತ್ರ ಓದಿ ಹೇಳಿದರು. ರೈತರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ವಹಿಸುವ ಭರವಸೆ ನೀಡಿದರು. ಬ್ಯಾಂಕಿನ ವ್ಯವಸ್ಥಾಪಕರನ್ನು ಕರೆಯಿಸಿ ರೈತರಿಗೆ ವಿನಾ ಕಾರಣ ತೊಂದರೆ ನೀಡಬಾರದು ಎಂದು ಎಚ್ಚರಿಸಿದರು. ತಹಶೀಲ್ದಾರ್‌ ವರ್ಷಾ ಇತರರು ಇದ್ದರು.

ವಾಹನ ಸವಾರರ ಪರದಾಟ: ಹೆದ್ದಾರಿಯನ್ನು ರೈತರು ಒಂದು ಗಂಟೆಗೂ ಅಧಿಕ ಕಾಲ ತಡೆದಿದ್ದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಕೊಳ್ಳೇಗಾಲ, ಮೈಸೂರು, ಚಾಮರಾಜನಗರಕ್ಕೆ ತೆರಳುವ ವಾಹನ ಸವಾರರು ಪರ್ಯಾಯ ಮಾರ್ಗವಾಗಿ ಮೆಳ್ಳಹಳ್ಳಿ ಗೇಟ್‌ ಮೂಲಕ ಚಲಿಸುವಂತಾಯಿತು. ಪ್ರತಿಭಟನೆಯಲ್ಲಿ ಯಾವುದೇ ತೊಂದರೆಯಾಗದಿರುವ ಹಾಗೆ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಗುರುಪ್ರಸಾದ್‌, ಪದಾಧಿಕಾರಿಗಳಾದ ಅಂಬಳೆ ಶಿವಕುಮಾರ್‌, ಹೊನ್ನೂರು ಬಸವಣ್ಣ, ಮಾಡ್ರಜಿಲ್ಲ ಮಹಾದೇವಪ್ಪ, ತಾಲೂಕು ಅಧ್ಯಕ್ಷ ಸಿದ್ದಲಿಂಗಸ್ವಾಮಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಚಂದ್ರಶೇಖರಮೂರ್ತಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next