Advertisement

ಕಾಯ್ದೆ ತಿದ್ದುಪಡಿ: ಬಿಜೆಪಿ ಸುಳ್ಳು ಪ್ರಚಾರ

11:47 PM Apr 05, 2019 | Team Udayavani |

ಬೆಂಗಳೂರು: ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಸೈನಿಕರಿಗೆ ವಿಶೇಷ ಅಧಿಕಾರ ನೀಡುವ 1958ರ ಕಾಯ್ದೆ ತಿದ್ದುಪಡಿ ಮಾಡುವ ಕುರಿತು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವುದರ ವಿರುದ್ಧ ಬಿಜೆಪಿ ಹಾಗೂ ಪ್ರಧಾನಿ ಮೋದಿ ಮಾಡಿರುವ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ ನೀಡಿದ್ದಾರೆ.

Advertisement

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕರಿಗೆ ವಿಶೇಷ ಅಧಿಕಾರ ನೀಡುವ 1958ರ ಕಾಯ್ದೆಯನ್ನು ಅಲ್ಲಿನ ನಾಗರಿಕ ಹಕ್ಕುಗಳ ರಕ್ಷಣೆ ದೃಷ್ಟಿಯಿಂದ ಸೂಕ್ತ ತಿದ್ದುಪಡಿ ಮಾಡುವ ಬಗ್ಗೆ ಪ್ರಸ್ತಾಪಿಸಿದೆ. ಆದರೆ, ಪ್ರಧಾನಿ ಮೋದಿಯವರು ಕಾಂಗ್ರೆಸ್‌ ವಿಶೇಷ ಕಾಯ್ದೆಯನ್ನೇ ರದ್ದುಪಡಿಸಲು ಮುಂದಾಗಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಅಲ್ಲದೇ 2104ರಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮಣಿಪುರದಲ್ಲಿ ಎಎಫ್ಎಸ್‌ಪಿಎ ಕಾನೂನನ್ನು ತೆಗೆದು ಹಾಕುತ್ತೇವೆ ಎಂದು ಘೋಷಣೆ ಮಾಡಿತ್ತು. ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರವೇ 2014 ರಿಂದ 18 ರವರೆಗೆ ದೇಶದಲ್ಲಿ ಶೇ.93ರಷ್ಟು ಯೋಧರು ಭಯೋತ್ಪಾದನಾ ಚಟುವಟಿಕೆಯಲ್ಲಿ ಅಸುನೀಗಿದ್ದಾರೆ. ಅಂದು ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಪ್ರಧಾನಿ ಹಾಗೂ ಅವರ ಪರಿವಾರ ಈಗ ಕಾಂಗ್ರೆಸ್‌ ದೂರುವುದನ್ನು ಬಿಟ್ಟು ಸತ್ಯವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ.

ದೇಶದ ಜನತೆ ಎಎಫ್ಎಸ್‌ಪಿಎ ಕಾನೂನನ್ನು ಪರಿಶೀಲಿಸಬೇಕು ಮತ್ತು ಬದಲಾಯಿಸಬೇಕು ಎಂಬ ನಿಲುವು ಹೊಂದಿದ್ದಾರೆ. ಮೋದಿಯಂತಹ ರಾಜಕಾರಣಿಗಳಿಗೆ ನಾಗರಿಕ ಹಕ್ಕುಗಳ ಬಗ್ಗೆ ಅಗೌರವ ಇದೆ.ಬಿಜೆಪಿ ವಕ್ತಾರರು ಕಾಂಗ್ರೆಸ್‌ ಪ್ರಣಾಳಿಕೆಯನ್ನು ಗಂಭೀರವಾಗಿ ಓದಿ, ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಭಾರತೀಯ ನಾಗರಿಕರು ಕಾಂಗ್ರೆಸ್‌ ಪಕ್ಷದ ನಿಲುವನ್ನು ಅರಿತು ಸಮ್ಮತಿಸಿದ್ದಾರೆ ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next