Advertisement

ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಅಂಬಲಪಾಡಿ ನಿವಾಸಿಗಳು

08:38 PM Dec 03, 2019 | Team Udayavani |

ಮಲ್ಪೆ: ನಗರದ ಡ್ರೈನೇಜಿನ ನೀರು ರಾಷ್ಟ್ರೀಯ ಹೆದ್ದಾರಿ ಆ್ಯಬ್ಕೋ ಸ್ಟೀಲ್‌ ಬಳಿಯ ಪೈಪ್‌ನಿಂದ ತಾವರೆಕರೆಯಿಂದ ಅಂಬಲಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ತೋಡಿನಲ್ಲಿ ಹರಿದು ಪರಿಸರದ ಈ ಪ್ರದೇಶಗಳು ಸಾಂಕ್ರಾಮಿಕ ರೋಗಗಳ ಮೂಲವಾಗಿ ಪರಿವರ್ತನೆಯಾಗಿದೆ. ಇದರಿಂದಾಗಿ ತೋಡಿನ ಪರಿಸರದ ಜನರು ದಿನದ 24 ಗಂಟೆ ಮೂಗು, ಬಾಯಿ ಮುಚ್ಚಿಕೊಂಡೆ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ. ಕಿನ್ನಿಮೂಲ್ಕಿ ಆ್ಯಬ್ಕೋ ಸ್ಟೀಲ್‌ ಬಳಿ ಇರುವ ಡ್ರೈನೇಜ್‌ ನೀರನ್ನು ರಾಜಾರೋಷವಾಗಿ ಇಲ್ಲಿನ ತೋಡಿಗೆ ಬಿಡುವುದರಿಂದ ಸಮಸ್ಯೆ ಉದ್ಭವಿಸಿದ್ದು ದಿನದಿಂದ ದಿನಕ್ಕೆ ಸಮಸ್ಯೆ ಉಲ್ಬಣಿಸುತ್ತಾ ಹೋಗುತ್ತಿದೆ ಎಂದು ಅಂಬಲಪಾಡಿ ಕಪ್ಪೆಟ್ಟು ನಾಗರಿಕರು ಒಂದೆಡೆ ಆರೋಪಿಸಿದ್ದಾರೆ.

Advertisement

ಬಾವಿ ನೀರು ಹಾಳು
ಅಂಬಲಪಾಡಿ ಶೇಡಿಕಟ್ಟ, ಕಪ್ಪೆಟ್ಟು ಗರೋಡಿ ಪ್ರದೇಶದ ಬಾವಿ ನೀರು ಶುದ್ಧವಾಗಿರುವುದರಿಂದ ಪಂ. ನೀರಿಗೆ ಆಶ್ರಯಿಸದೆ ವರ್ಷವಿಡೀ ತಮ್ಮ ಬಾವಿ ನೀರನ್ನೇ ಬಳಸುತ್ತಿದ್ದಾರೆ. ಇದೀಗ ತ್ಯಾಜ್ಯ ನೀರು ಹರಿದು ಬಾವಿ ನೀರು ಕಲುಷಿತಗೊಂಡಿದೆ.

400ಕ್ಕೂ ಅಧಿಕ ಮನೆಗಳಿಗೆ ಸಮಸ್ಯೆ
ಈ ಕೊಳಚೆ ನೀರು ಕಡೆಕಾರು ಗ್ರಾಮದ ಭಾಗಶಃ ಪ್ರದೇಶ ಸೇರಿದಂತೆ ಅಂಬಲಪಾಡಿ ಗ್ರಾಮದ ಕಪ್ಪೆಟ್ಟು, ಮಜ್ಜಿಗೆಪಾದೆ, ಕಿದಿಯೂರು, ಅಂಬಲಪಾಡಿ, ಮಜ್ಜಿಗೆ ಪಾದೆ, ಬಂಕೇರುಕಟ್ಟದ ಹರಿದು ಬಂದು ಕಲ್ಮಾಡಿ ಹೊಳೆಯನ್ನು ಸೇರುತ್ತದೆ. ತೋಡಿನ ನೀರು ಕಪ್ಪು ಬಣ್ಣಕ್ಕೆ ಪರಿವರ್ತನೆಗೊಂಡಿದ್ದು ಅಸಹ್ಯ ದುರ್ವಾಸನೆ ಬೀರುತ್ತಿದೆ. ಪರಿಸರದ 400ಕ್ಕೂ ಅಧಿಕ ಮನೆಗಳಿಗೆ ಕೊಳಚೆ ನೀರಿನಿಂದಾಗಿ ಅವರ ಬದುಕು ನರಕ ಸದೃಶವಾಗಿದೆ. ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆ ಗೊಂಡ ತೀರದ ಮಂದಿಗೆ ಈಗ ಮಲೇರಿಯಾದಂತಹ ರೋಗಗಳು ಕಾಣಿಸಿಕೊಳ್ಳಲಾರಂಭಿಸಿದೆ. ಕಳೆದ ಕೆಲವು ದಿನಗಳಿಂದ ಇಲ್ಲಿನ ಗ್ರಾಮಸ್ಥರು ಸಮಸ್ಯೆಯನ್ನು ಅನುಭವಿಸಿಕೊಂಡು ಬರುತ್ತಿದ್ದಾರೆ. ಈ ಹಿಂದೆಯೂ ಕೂಡ ಇದೇ ಸಮಸ್ಯೆ ತಲೆದೋರಿದಾಗ ನಾಗರಿಕರು ಪ್ರತಿಭಟನೆಗೆ ಮುಂದಾಗಿದ್ದರು. ಆ ಬಳಿಕ ಕೆಲವು ಕಾಲ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗಿತ್ತು.

ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣ
ಒಂದು ವಾರದಿಂದ ಸಮಸ್ಯೆ ಸೃಷ್ಟಿಯಾಗಿದೆ. ನಗರಸಭೆಯ ಪೌರಾಯುಕ್ತರಿಗೆ ಸಮಸ್ಯೆಯ ಬಗ್ಗೆ ತಿಳಿಸಿದ್ದೇವೆ. ಒಂದೆರಡು ದಿನಗಳಲ್ಲಿ ಸೂಕ್ತ ಪರಿಹಾರವನ್ನು ಕಲ್ಪಿಸಲಾಗುವುದೆಂದು ಹೇಳಿದ್ದಾರೆ. ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಾ ಹೋಗುತ್ತದೆ ವಿನಾ ಪರಿಹಾರ ಕಾಣುವಂತೆ ತೋರುತ್ತಿಲ್ಲ. ಕುಡಿಯುವ ನೀರಿನ ಪರಿಹಾರಕ್ಕೆ ಈಗಾಗಲೇ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕುವ ಕೆಲಸವೂ ಡ್ರೈನೇಜ್‌ ನೀರಿನಿಂದಾಗಿ ಬಾಕಿ ಉಳಿದಿದೆ.
-ಪ್ರಮೋದ್‌ ಸಾಲ್ಯಾನ್‌, ಅಧ್ಯಕ್ಷರು, ಅಂಬಲಪಾಡಿ ಗ್ರಾ.ಪಂ.

ಸ್ವತ್ಛತೆಯ ಬಗ್ಗೆ ನಿರ್ಲಕ್ಷ್ಯ
ಮೊದಲೇ ಕುಡಿಯುವ ನೀರಿನ ಸಮಸ್ಯೆ ಇರುವ ಈ ಭಾಗದಲ್ಲಿ ಇದ್ದ ಕೆಲವೊಂದು ಶುದ್ದ ನೀರಿನ ಬಾವಿಗಳಿಗೆ ಡ್ರೈನೇಜ್‌ನ ಕೊಳಚೆ ನೀರು ಸೇರಿ ಇದ್ದ ಬಾವಿ ನೀರನ್ನು ಉಪಯೋಗಿಸದಂತೆ ಮಾಡಿದೆ. ಒಂದೆಡೆ ಸ್ವತ್ಛ ಭಾರತದ ಬಗ್ಗೆ ದಿನ ಬೆಳಗಾದರೆ ಪುಂಗಿ ಊದಲಾಗುತ್ತಿದೆ. ಇನ್ನೊಂದೆಡೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಆಡಳಿತವೇ ಸ್ವತ್ಛತೆಯ ಬಗ್ಗೆ ನಿರ್ಲಕ್ಷé ತೋರಿಸುತ್ತಿರುವುದು ವಿಪರ್ಯಾಸ.
– ಶ್ರೀನಾಥ್‌ ಅಂಬಲಪಾಡಿ ಕಪ್ಪೆಟ್ಟು

Advertisement

ಸೊಳ್ಳೆಗಳ ಕಾಟ
ತೋಡಿನ ಕೊಳಚೆ ನೀರಿನಲ್ಲಿ ಕುಳಿತ ಸೊಳ್ಳೆಗಳು ರಾತ್ರಿ ಮನೆಯೊಳಗೆ ಹೊಕ್ಕುತ್ತವೆೆ. ಸೊಳ್ಳೆಕಾಟದಿಂದ ರಾತ್ರಿ ನಿದ್ರೆ ಮಾಡುವಂತಿಲ್ಲ. ನೀರಿನ ಕೆಟ್ಟ ವಾಸನೆಯಿಂದ ಮನೆಯಿಂದ ಹೊರಗೆ ಬರುವ ಹಾಗಿಲ್ಲ. ನಮ್ಮ ಸಮಸ್ಯೆಯನ್ನು ಯಾರೂ ಕೇಳುವವರಿಲ್ಲ. ಶೀಘ್ರವಾಗಿ ಸ್ಥಳೀಯಾಡಳಿತ ಪರಿಹಾರ ಕೈಗೊಳ್ಳಬೇಕು.
– ಜಲಜಾ ಕೋಟ್ಯಾನ್‌, ಮಜ್ಜಿಗೆಪಾದೆ

ಸಮಸ್ಯೆಗೆ ಶೀಘ್ರ ಮುಕ್ತಿ
ಈಗಾಗಲೇ ಉಂಟಾಗಿರುವ ಸಮಸ್ಯೆಯ ಬಗ್ಗೆ ಅಂಬಲಪಾಡಿ ಪಂಚಾಯತ್‌ ಮೂಲಕ ನನಗೆ ದೂರು ಬಂದಿದೆ. ಸಮಸ್ಯೆಯನ್ನು ತತ್‌ಕ್ಷಣ ಪರಿಹರಿಸುವಂತೆ ನಮ್ಮ ಎಂಜಿನಿಯರ್‌ರಿಗೆ ಹೇಳಿದ್ದೇವೆ. ಒಂದೆರಡು ದಿನದಲ್ಲಿ ಸರಿಯಾಗಲಿದೆ.
-ಆನಂದ ಸಿ. ಕಲ್ಲೋಳಿಕರ್‌, ಪೌರಾಯುಕ್ತರು ಉಡುಪಿ ನಗರಸಭೆ

ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next