Advertisement

ಬಹುಮುಖ ಪ್ರತಿಭೆಯ ಸಾಧಕ ಅಮರನಾಥ ಶೆಟ್ಟಿ

02:14 AM Jan 28, 2020 | Sriram |

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ರಂಗದ ಅನೇಕ ಪ್ರಥಮಗಳ ಸರದಾರ, ಸಮಾಜದ ವಿವಿಧ ಕಾರ್ಯ ಕ್ಷೇತ್ರಗಳಲ್ಲಿನ ಸಾಧಕ ಸವ್ಯಸಾಚಿ ಕೊಡ್ಮಾ ಣ್‌ಗುತ್ತು ಅಮರನಾಥ ಶೆಟ್ಟಿ ಅವರ ನಿಧನದಿಂದ ಈ ಪ್ರದೇಶದ ಸುಸಂಸ್ಕೃತ ಮುಖಂಡನನ್ನು ಕಳೆದು ಕೊಂಡ ಶೂನ್ಯ ಆವರಿಸಿದೆ.

Advertisement

“ಎಲ್ಲರೊಳಗೊಂದಾಗು’ ಎಂಬ ತಣ್ತೀವನ್ನು ಪರಿಪೂರ್ಣವಾಗಿ ಪಾಲಿಸಿದ ಅಜಾತಶತ್ರು “ಅಮರಣ್ಣ’. ದ. ಕನ್ನಡದ 66 ವರ್ಷಗಳ (1952-2018) ಚುನಾವಣ ಇತಿಹಾಸದಲ್ಲಿ ಅವರು 1972ರಿಂದ 2014ರ ವರೆಗೆ ಸತತವಾಗಿ ಮೂಡುಬಿದಿರೆ ಕ್ಷೇತ್ರದಿಂದ 10 ಬಾರಿ ಸ್ಪರ್ಧಿಸಿದವರು. 2018ರ ಚುನಾವಣೆಯಲ್ಲಿ ಸ್ಪರ್ಧಿಸಲು ಜಾತ್ಯತೀತ ಜನತಾದಳದಿಂದ ಅವಕಾಶ ದೊರೆತಿದ್ದರೂ ಹೊಸಬರಿಗೆ ಅವಕಾಶ ದೊರೆಯಲಿ ಎಂಬ ಮೇಲ್ಪಂಕ್ತಿ ಹಾಕಿಕೊಟ್ಟರು.

ರಾಜಕೀಯವಾಗಿ ವಿಶ್ಲೇಷಿಸುವುದಿದ್ದರೆ, ಅವರು ಜನತಾ ಪರಿವಾರದಿಂದಲೇ ಸ್ಪರ್ಧಿಸಿದವರು, ಗೆದ್ದವರು, ಸಚಿವರಾದವರು. ಅವಿಭಜಿತ ದ. ಕನ್ನಡ ಜಿಲ್ಲೆಯಲ್ಲಿ ಅವರು ಜನತಾ ಪರಿವಾರದ (ಸಂಸ್ಥಾ ಕಾಂಗ್ರೆಸ್‌, ಜನತಾ ಪಕ್ಷ, ಜನತಾದಳ) ಮುಖವಾಣಿಯೂ ಆಗಿದ್ದರು; ಐಕಾನ್‌ ಕೂಡ ಆಗಿದ್ದರು.

ಮೂಡುಬಿದಿರೆಯನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುವಲ್ಲಿಯೂ ಅವರ ಕೊಡುಗೆ ಗಮನಾರ್ಹವಾಗಿದೆ. ಸ್ವತಃ ಕಲಾವಿದರಾಗಿದ್ದ ಶೆಟ್ಟಿ ಅವರು ರಂಗಭೂಮಿಯಲ್ಲಿ, ಪಗೆತ ಪುಗೆ ಮುಂತಾದ ಚಲನಚಿತ್ರಗಳಲ್ಲಿ ಅಭಿನಯಿಸಿದರು. ಕಲಾವಿದರನ್ನು ಪ್ರೋತ್ಸಾಹಿಸಿದರು. ಅವರ ಆಕರ್ಷಕ ವ್ಯಕ್ತಿತ್ವ ಐತಿಹಾಸಿಕ- ಪೌರಾಣಿಕ ನಾಟಕ- ಸಿನೆಮಾಗಳಿಗೆ ಹೇಳಿ ಮಾಡಿಸಿದಂತಿತ್ತು. ಸಹಕಾರಿ, ಬ್ಯಾಂಕಿಂಗ್‌, ಶಿಕ್ಷಣ, ಕ್ರೀಡೆ…

ಹೀಗೆ ಎಲ್ಲ ರಂಗಗಳಲ್ಲಿಯೂ ಸಕ್ರಿಯರಾಗಿದ್ದ ಅಪೂರ್ವ ವ್ಯಕ್ತಿತ್ವ ಅವರದು.

Advertisement

ಪಂಚಾಯತ್‌ ಹಂತದಿಂದ ರಾಜ್ಯದ ಸಚಿವ ಸ್ಥಾನದವರೆಗೆ ವಿವಿಧ ಹಂತದ ಸ್ಥಳೀಯಾ ಡಳಿತಗಳಲ್ಲಿ ಅವರು ಅನುಭವ ಪಡೆದಿದ್ದರು. ಎಲ್ಲ ರಾಜಕೀಯ ಪಕ್ಷಗಳಿಂದಲೂ ಗೌರವಕ್ಕೆ ಪಾತ್ರರಾಗಿದ್ದರು.ದ. ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಅವರು ಅಧಿಕಾರಿಗಳ- ಜನಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸುತ್ತಿದ್ದ ರೀತಿ ಅವರ ಆಡಳಿತಾತ್ಮಕ ಕೌಶಲಕ್ಕೆ ನಿದರ್ಶನವಾಗಿತ್ತು. ಬಹುತೇಕ ಸಭೆ ಸಮಾರಂಭಗಳಲ್ಲಿ, ತನ್ನ ಕ್ಷೇತ್ರ ವ್ಯಾಪ್ತಿಯ ಶುಭ ಕಾರ್ಯಗಳಲ್ಲಿ ಅವರು ಭಾಗವಹಿಸುತ್ತಿದ್ದರು; ಈ ಮೂಲಕ ಜನತೆಗೆ ನಿಕಟವಾಗಿದ್ದರು. ತನ್ನ ಪಕ್ಷ ಈ ಪ್ರದೇಶದಲ್ಲಿ ಪ್ರಬಲವಾಗಿ ಇರದಿದ್ದರೂ ಶೆಟ್ಟಿ ಅವರು ಗೆಲುವು ಸಾಧಿಸುತ್ತಿದ್ದುದು ಅವರ ಮೇಲೆ ಮತದಾರರಾಗಿದ್ದ ಪ್ರೀತಿಯ ದ್ಯೋತಕವಾಗಿದೆ.

1972ರಲ್ಲಿ ಅವರು ಸ್ಪರ್ಧಿಸಿದ ಮೊದಲ ಚುನಾವಣೆಯಿಂದ ಅವರು ಸಕ್ರಿಯರಾಗಿದ್ದ 2018ರ ಚುನಾವಣೆಯವರೆಗೆ ತಾನು ಗಮನಿಸಿದ ಬದಲಾವಣೆಗಳ ಬಗ್ಗೆ ಕೇಳಿದಾಗ ಅವರು ನೀಡಿದ್ದ ಉತ್ತರ ಇಲ್ಲಿ ಉಲ್ಲೇಖನೀಯ.”ಮೌಲ್ಯಗಳ ಪತನವಾಗುತ್ತಿರುವುದನ್ನು ಕಂಡಾಗದುಃಖವಾಗುತ್ತಿದೆ. ಆರಂಭಿಕ ದಿನಗಳಲ್ಲಿ ಚುನಾವಣಪ್ರಕ್ರಿಯೆಗಳು ಪವಿತ್ರ ಎಂಬಷ್ಟು ಬದ್ಧತೆಯನ್ನು ಹೊಂದಿದ್ದವು. ಪ್ರಾಮಾಣಿಕತೆ, ಸತ್ಯಸಂಧತೆ, ಪಾರದರ್ಶಕತೆ ಚುನಾವಣೆಗೆ ಹಬ್ಬದ ಸ್ವರೂಪ ನೀಡುತ್ತಿದ್ದವು. ಆದರೆ ಈಗ ಈ ರೀತಿಯ ವಾತಾವರಣ ಮರೆಯಾಗುತ್ತಿರುವುದು ಬೇಸರದ ಸಂಗತಿ’.

-ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next