Advertisement

ಪರಮ ಪವಿತ್ರ, ಮನೋರಮಣೀಯ ಅಮರನಾಥ ಯಾತ್ರೆ

01:50 AM Jun 26, 2022 | Team Udayavani |

ಎರಡು ವರ್ಷಗಳ ಅನಂತರ ಮತ್ತೆ ಈ ಬಾರಿ ಅಮರನಾಥ ಯಾತ್ರೆ ನಡೆಯಲಿದೆ. ಜೂ. 30ರಿಂದ ಆಗಸ್ಟ್‌ 11ರ ವರೆಗೆ ಅಮರನಾಥ ಗುಹೆಯನ್ನು ಯಾತ್ರಿಕರು ಸಂದರ್ಶಿಸಬಹುದು. ಈ ಬಾರಿ 7 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಲಂಗರ್‌ ಪ್ರದೇಶಗಳಲ್ಲಿ ಈ ಬಾರಿ ಯಾತ್ರಿಕರಿಗೆ ಕರಿದ ತಿನಿಸುಗಳು, ಜಂಕ್‌ ಫ‌ುಡ್‌ಗಳು ಲಭ್ಯವಿರುವುದಿಲ್ಲ. ಹಸುರು ತರಕಾರಿಗಳು, ಸಲಾಡ್‌, ಜೋಳದ ರೊಟ್ಟಿ, ದಾಲ್‌, ಕಡಿಮೆ ಕೊಬ್ಬಿನ ಹಾಲು, ಮೊಸರು ಮೊದಲಾದ ಪೌಷ್ಟಿಕಾಂಶವುಳ್ಳ ಪದಾರ್ಥಗಳನ್ನು ಮಾತ್ರ ನೀಡಬೇಕು ಎಂದು ದೇಗುಲದ ಮಂಡಳಿಯು ಎಲ್ಲ ಲಂಗರ್‌ ಸಮಿತಿಗಳಿಗೆ ಪತ್ರ ಬರೆದಿದೆ. ದೇವಾಲಯದ ಈ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ತಜ್ಞರು, ಆರೋಗ್ಯಕರ ಆಹಾರ ಪ್ರಯಾಣಿಕರ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ. ಅವರ ಶಕ್ತಿಯ ಮಟ್ಟ ಉತ್ತಮವಾಗಿರುತ್ತದೆ. ಇದರಿಂದ ಪ್ರಯಾಣದಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದಿದ್ದಾರೆ.  ಅಮರನಾಥ ಗುಹೆಗೆ ಹೋಗುವ ದಾರಿಯಲ್ಲಿ ಹವಾಮಾನವು ನಿರಂತರ ಬದಲಾಗುತ್ತಿದೆ. ಹಿಮಪಾತ ಕೆಲವೊಮ್ಮೆ ಎರಡು ದಿನಗಳವರೆಗೂ ಮುಂದುವರಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಯಾಣದಲ್ಲಿ ವಿಳಂಬವಾಗುವ ಸಾಧ್ಯತೆಗಳಿರುತ್ತವೆ.

Advertisement

ನಿಷೇಧ

ಮಾಂಸಾಹಾರ, ಮದ್ಯ, ತಂಬಾಕು, ಗುಟ್ಕಾ, ಪುಲಾವ್‌, ಫ್ರೈಡ್‌ ರೈಸ್‌, ಪೂರಿ, ಬಟೂರಾ, ಪಿಜ್ಜಾ, ಬರ್ಗರ್‌, ಕರಿದ ಪರೋಟ, ಕರಿದ ರೊಟ್ಟಿ, ಬ್ರೆಡ್‌ ಬಟರ್‌, ಉಪ್ಪಿನಕಾಯಿ, ಚಟ್ನಿ, ಹಪ್ಪಳ, ನೂಡಲ್ಸ್‌, ತಂಪು ಪಾನೀಯ, ಹಲ್ವಾ, ಜಿಲೇಬಿ, ಚಿಪ್ಸ್‌, ಪಕೋಡಾ, ಸಮೋಸಾ ಸೇರಿದಂತೆ ಎಲ್ಲ ರೀತಿಯ ಡೀಪ್‌ ಫ್ರೈಡ್‌ ತಿನಿಸುಗಳು ಲಭ್ಯವಿರುವುದಿಲ್ಲ.

120 ಲಂಗರು ಪ್ರದೇಶ

ದೇಶಾದ್ಯಂತ 120 ಸಮಾಜ ಸೇವಾ ಸಂಸ್ಥೆಗಳು ಯಾತ್ರೆ ಮಾರ್ಗದಲ್ಲಿ ಲಂಗರ್‌ ಪ್ರದೇಶಗಳನ್ನು  ನಿರ್ಮಿಸಿವೆ. ಬಾಲ್ಟಾಲ್‌ ಕ್ಯಾಂಪ್‌, ಬಾಲ್ಟಾಲ್‌- ಡೊಮೆಲ್‌, ಡೊಮೆಲ್‌, ರೈಲ್‌ಪತ್ರಿ, ಬರಾರಿ ಮಾರ್ಗ್‌, ಸಂಗಮ್‌, ನುನ್ವಾನ್‌, ಚಂದನವಾಡಿ, ಚಂದನವಾಡಿ- ಪಿಸ್ಸುಟಾಪ್‌, ಪಿಸಾಟಾಪ್‌, ಜೋಜಿಬಲ್‌, ನಾಗಕೋಟಿ, ಶೇಷನಾಗ್‌, ವಾವ್‌ಬಾಲ್‌, ಪೋಷಪತ್ರಿ, ಕೆಲಾ°ರ್‌, ಪಂಚತಾರ್ಣಿ, ಹೋಲಿ ಕೇವ್‌ ಮೊದಲಾದ ಪ್ರದೇಶಗಳಲ್ಲಿ ಲಂಗರ್‌ಗಳನ್ನು ತೆರೆಯಲಾಗಿದೆ.

Advertisement

ಬಿಗಿ ಭದ್ರತೆ, ಆರ್‌ಎಫ್ಐಡಿ ವ್ಯವಸ್ಥೆ

ಈ ಬಾರಿ ಯಾತ್ರಾರ್ಥಿಗಳಿಗೆ ಆರ್‌ಎಫ್ಐಡಿ ವ್ಯವಸ್ಥೆಯನ್ನು ಪರಿಚಯಿಸಲು ಸರಕಾರ ಯೋಚಿಸಿದೆ. ಇದರಿಂದ ಪ್ರತಿಯೊಬ್ಬರ ಚಲನವಲನವನ್ನು ಟ್ರ್ಯಾಕ್‌ ಮಾಡಬಹುದು. ಜಮ್ಮುವಿನಿಂದ ಕಣಿವೆಯವರೆಗಿನ ಸಂಪೂರ್ಣ ಯಾತ್ರೆಯ ಮಾರ್ಗದಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಎರಡು ಮಹಿಳೆಯರ ಕಂಪೆನಿಗಳು ಸೇರಿದಂತೆ ಒಟ್ಟು 60 ಕಂಪೆನಿಗಳ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗುವುದು. ಪ್ರಯಾಣದ ಮಾರ್ಗದಲ್ಲಿ ಸ್ನಿಫ‌ರ್‌ ಡಾಗ್‌ಗಳನ್ನೂ ನಿಯೋಜಿಸಲಾಗುವುದು. ಪರ್ವತ ರಕ್ಷಣ ತಂಡಗಳನ್ನು ನಿಯೋಜಿಸುವುದರ ಜತೆಗೆ ಆಡಳಿತವು ಯಾತ್ರಾರ್ಥಿಗಳಿಗೆ ಆರೋಗ್ಯ ಶಿಬಿರಗಳನ್ನೂ ಸ್ಥಾಪಿಸುತ್ತದೆ.

ಅಮರನಾಥ ಯಾತ್ರೆಗೆ ಹಳೆ ಮತ್ತು ಹೊಸ ಮಾರ್ಗ

ಅಮರನಾಥ ಯಾತ್ರೆಯ ಮಾರ್ಗವು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಈ ಭಾಗದಲ್ಲಿ ರಸ್ತೆ ನಿರ್ಮಾಣದ ಜತೆಗೆ ಪ್ರಯಾಣದ ಮಾರ್ಗವೂ ಬದಲಾಗಿದೆ.  ಈಗ ಅಮರನಾಥ ದರ್ಶನಕ್ಕೆ ಎರಡು ಮಾರ್ಗಗಳಿವೆ. ಒಂದು ಮಾರ್ಗವು ಪಹಲ್‌ಗಾಮ್‌ನಿಂದ ಪ್ರಾರಂಭವಾಗುತ್ತದೆ. ಇಲ್ಲಿಂದ ಗುಹೆಯ ದೂರ ಸುಮಾರು 46-48 ಕಿ.ಮೀ. ಇದ್ದು, ಇದರಲ್ಲಿ ಪ್ರಯಾಣಿಸಲು 5 ದಿನಗಳು ಬೇಕಾಗುತ್ತದೆ. ಎರಡನೇ ಮಾರ್ಗವು ಬಾಲ್ಟಾಲ್‌ನಿಂದ ಪ್ರಾರಂಭವಾಗುತ್ತದೆ. ಇಲ್ಲಿಂದ ಗುಹೆಯ ದೂರವು 14-16 ಕಿ.ಮೀ. ಆದರೆ ಕಡಿದಾದ ಹತ್ತುವಿಕೆ ಯಿಂದಾಗಿ ಎಲ್ಲರಿಗೂ ತಲುಪಲು ಸಾಧ್ಯವಿಲ್ಲ. ಈ ಮಾರ್ಗದ ಮೂಲಕ ಪ್ರಯಾಣವು 1- 2 ದಿನಗಳನ್ನು ತೆಗೆದುಕೊಳ್ಳುತ್ತದೆ.

ಅಮರನಾಥ ಧಾಮ

ಹಿಂದೂಗಳ ಪವಿತ್ರ ಸ್ಥಳಗಳಲ್ಲಿ ಒಂದಾಗಿರುವ ಅಮರನಾಥ ಧಾಮವು ಜಮ್ಮು ಮತ್ತು ಕಾಶ್ಮೀರದ ಹಿಮಾಲಯದ ಮಡಿಲಲ್ಲಿರುವ ಪವಿತ್ರ ಗುಹೆಯಾಗಿದೆ. ಇಲ್ಲಿ ಶಿವನು ಹಿಮಲಿಂಗದ ರೂಪದಲ್ಲಿ  ಕುಳಿತಿದ್ದಾನೆ ಎಂದು ನಂಬಲಾಗುತ್ತದೆ. ಹಿಮದಿಂದ ಶಿವಲಿಂಗದ ರಚನೆಯಿಂದಾಗಿ ಇದನ್ನು ಬಾಬಾ ಬರ್ಫಾನಿ ಎಂದೂ ಕರೆಯಲಾಗುತ್ತದೆ. ಹಿಮ ನದಿ, ಹಿಮಭರಿತ ಪರ್ವತಗಳಿಂದ ಆವೃತ್ತವಾಗಿರುವ ಈ ಗುಹೆಯು ಬೇಸಗೆಯ ಕೆಲವು ದಿನಗಳನ್ನು ಹೊರತುಪಡಿಸಿ ವರ್ಷದ ಬಹುಪಾಲು ಹಿಮದಿಂದ ಆವೃತ್ತವಾಗಿರುತ್ತದೆ. ಹೀಗಾಗಿ ಇಲ್ಲಿ ಬೇಸಗೆಯ ದಿನಗಳಲ್ಲೇ ಯಾತ್ರಾರ್ಥಿಗಳ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಪ್ರತೀ ವರ್ಷ ಈ ಗುಹೆಯಲ್ಲಿ ಮಂಜುಗಡ್ಡೆಯ ಶಿವಲಿಂಗವು ನೈಸರ್ಗಿಕವಾಗಿ ರೂಪುಗೊಳ್ಳುತ್ತದೆ. ಗುಹೆಯ ಮೇಲ್ಛಾವಣಿಯಲ್ಲಿನ ಬಿರುಕುಗಳಿಂದ ನೀರಿನ ಹನಿಗಳು ತೊಟ್ಟಿಕ್ಕುವ ಮೂಲಕ ಇದು ರೂಪುಗೊಳ್ಳುತ್ತದೆೆ. ವಿಪರೀತ ಚಳಿಯಿಂದಾಗಿ ನೀರು ಹೆಪ್ಪುಗಟ್ಟಿ ಶಿವಲಿಂಗದ ಆಕಾರವನ್ನು ಪಡೆಯುತ್ತದೆ.

ಚಂದ್ರನ ಬೆಳಕನ್ನು ಆಧರಿಸಿ ಬೆಳೆಯುವ ಮತ್ತು ಕುಗ್ಗುವ ಏಕೈಕ ಶಿವಲಿಂಗ ಇದಾಗಿದೆ. ಈ ಶಿವಲಿಂಗವು ಶ್ರಾವಣ ಶುಕ್ಲಪಕ್ಷದ ಹುಣ್ಣಿಮೆಯಂದು ಬೃಹದಾಕಾರವಾಗಿ ಬೆಳೆಯುತ್ತದೆ ಮತ್ತು ಅನಂತರ ಬರುವ ಅಮಾವಾಸ್ಯೆಯವರೆಗೆ ಗಾತ್ರದಲ್ಲಿ ಗಮನಾರ್ಹವಾಗಿ ಕುಗ್ಗುತ್ತದೆ. ಇದು ಪ್ರತೀ ವರ್ಷ ನಡೆಯುತ್ತದೆ. ಪ್ರತೀ ವರ್ಷ ಲಕ್ಷಾಂತರ ಭಕ್ತರು ಈ ಹಿಮ ಶಿವಲಿಂಗವನ್ನು ನೋಡಲು ಅಮರನಾಥದ ಪವಿತ್ರ ಗುಹೆಗೆ ಭೇಟಿ ನೀಡುತ್ತಾರೆ. ಮಂಜುಗಡ್ಡೆ ಶಿವಲಿಂಗದ ಎಡಭಾಗದಲ್ಲಿ  ಎರಡು ಸಣ್ಣ ಮಂಜುಗಡ್ಡೆ ಶಿವಲಿಂಗಗಳಿರುತ್ತವೆ. ಅವುಗಳು ತಾಯಿ ಪಾರ್ವತಿ ಮತ್ತು ಭಗವಾನ್‌ ಗಣೇಶನ ಸಂಕೇತ ಎಂದು ನಂಬಲಾಗಿದೆ.

ದಂತಕಥೆ

ದೇವಿ ಪಾರ್ವತಿಯು ಒಮ್ಮೆ ಶಿವನನ್ನು ತನ್ನ ಅಮರತ್ವಕ್ಕೆ ಕಾರಣವೇನು ಎಂದು ಕೇಳುತ್ತಾಳೆ. ಇದಕ್ಕೆ ಒಂದು ಕಥೆಯಿದೆ ಎನ್ನುತ್ತಾನೆ ಶಿವ. ಪಾರ್ವತಿ ಆ ಕಥೆಯನ್ನು ಹೇಳುವಂತೆ ಕೇಳುತ್ತಾಳೆ. ಈ ರಹಸ್ಯವನ್ನು ಬೇರೆ ಯಾರೂ ಕೇಳಬಾರದು. ಅದಕ್ಕಾಗಿ ಸೂಕ್ತ ಸ್ಥಳವನ್ನು ಹುಡುಕುತ್ತಾರೆ. ಅಂತಿಮವಾಗಿ ಅವರು ಅಮರನಾಥ ಗುಹೆಯನ್ನು ತಲುಪಿದರು. ಅಮರನಾಥ ಗುಹೆಗೆ ಹೋಗುವ ಮೊದಲು ಅವರು ಪಹಲ್‌ಗಾಮ್‌ನಲ್ಲಿ ನಂದಿಯನ್ನು, ಚಂದನವಾಡಿಯಲ್ಲಿ ಚಂದ್ರನನ್ನು, ಶೇಷ್‌ನಾಗ್‌ ಸರೋವರದ ದಡದಲ್ಲಿ ಸರ್ಪವನ್ನು, ಮಹಾಗುಣ ಪರ್ವತದಲ್ಲಿ ಗಣೇಶನನ್ನು, ಪಂಚತಾರ್ಣಿಯಲ್ಲಿ ಐದು ಅಂಶಗಳಾದ ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶ ದೇವನನ್ನು ನಿಲ್ಲಲು ಹೇಳುತ್ತಾರೆ. ಬಳಿಕ ಪಾರ್ವತಿಯೊಂದಿಗೆ ಅಮರನಾಥ ಗುಹೆಯನ್ನು ತಲುಪಿದ ಶಿವನು, ಗುಹೆಯ ಸುತ್ತಲಿನ ಪ್ರತಿಯೊಂದು ಜೀವಿಗಳನ್ನು ನಾಶಮಾಡುವಂತೆ ಕಾಲಾಗ್ನಿಗೆ ಆದೇಶಿಸುತ್ತಾನೆ. ಇದರಿಂದಾಗಿ ಶಿವನು ಪಾರ್ವತಿಗೆ ಹೇಳಿದ ಅಮರ ಕಥೆ ಯಾರೂ ಕೇಳುವುದಿಲ್ಲ ಎಂದು ಭಾವಿಸಿದ್ದ. ಆದರೆ ಗುಹೆಯಲ್ಲಿದ್ದ ಒಂದು ಜೋಡಿ ಪಾರಿವಾಳಗಳು ಈ ಕಥೆಯನ್ನು ಕೇಳಿ ಅಮರವಾದವು. ಇಂದಿಗೂ ಇವು ಅಮರನಾಥ ಗುಹೆಯಲ್ಲಿ ಇರುವುದಾಗಿ ಅನೇಕ ಭಕ್ತರು ಹೇಳುತ್ತಾರೆ. ಈ ಪಾರಿವಾಳಗಳು ಇಷ್ಟು ಎತ್ತರದ ಮತ್ತು ತಣ್ಣನೆ ಪ್ರದೇಶದಲ್ಲಿ ಬದುಕಿ ಉಳಿದಿರುವುದೇ ಆಶ್ಚರ್ಯಕರವಾಗಿದೆ. ಇಲ್ಲಿ  ಶಿವ, ಪಾರ್ವತಿ ಮಂಜುಗಡ್ಡೆ ಲಿಂಗದ ರೂಪದಲ್ಲಿ ಕಾಣಿಸಿಕೊಂಡು ಭಕ್ತರಿಗೆ ದರ್ಶನ ನೀಡುತ್ತಾರೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

ಯಾತ್ರೆ ಪ್ರಾರಂಭವಾದದ್ದು ಯಾವಾಗ?

ಅಮರನಾಥ ಯಾತ್ರೆ ಯಾವಾಗ ಪ್ರಾರಂಭವಾಯಿತು ಎನ್ನುವುದಕ್ಕೆ ಅಧಿಕೃತ ದಾಖಲೆಗಳಿಲ್ಲ. 12ನೇ ಶತಮಾನದ ಕಲ್ಹಣನ ಪುಸ್ತಕ ರಾಜತರಂಗಿಣಿಯಲ್ಲಿ ಅಮರನಾಥ ಕ್ಷೇತ್ರದ ಕುರಿತು ಉಲ್ಲೇಖವಿದೆ. 11ನೇ ಶತಮಾನದಲ್ಲಿ ರಾಣಿ ಸೂರ್ಯಮತಿ ಅಮರನಾಥ ದೇವಾಲಯಕ್ಕೆ ತ್ರಿಶೂಲ್‌, ಬನಲಿಂಗ್‌ ಮತ್ತು ಇತರ ಅನೇಕ ಪವಿತ್ರ ವಸ್ತುಗಳನ್ನು ದಾನ ಮಾಡಿದಳು ಎನ್ನಲಾಗಿದೆ. ಒಂದು ನಂಬಿಕೆಯ ಪ್ರಕಾರ ಅಮರನಾಥ ಗುಹೆಯನ್ನು ಮೊದಲು ಭೃಗು ಋಷಿ ಕಂಡು ಹಿಡಿದನು ಎನ್ನಲಾಗುತ್ತದೆ. ಕಥೆಯ ಪ್ರಕಾರ ಒಮ್ಮೆ ಕಾಶ್ಮೀರದ ಕಣಿವೆಯ ನೀರಿನಲ್ಲಿ ಮುಳುಗಿದಾಗ ಋಷಿ ಕಶ್ಯಪರು ನದಿಗಳು ಮತ್ತು ತೊರೆಗಳ ನೀರನ್ನು ಹೊರತೆಗೆದರು. ನೀರು ಹೊರಬಂದ ಅನಂತರ ಭೃಗು ಋಷಿ ಅಮರನಾಥದಲ್ಲಿ ಶಿವನನ್ನು ಮೊದಲು ನೋಡಿದರು ಎನ್ನಲಾಗುತ್ತದೆ.

ಆಧುನಿಕ ಸಂಶೋಧಕರು ಅಮರನಾಥ ಗುಹೆಯನ್ನು ಕುರುಬನೊಬ್ಬ 1850ರಲ್ಲಿ ಕಂಡುಹಿಡಿದ ಎನ್ನುತ್ತಾರೆ. ಸೋದರಿ ನಿವೇದಿತಾ ಅವರು 1898ರಲ್ಲಿ ಅಮರನಾಥ ಗುಹೆಗೆ ಸ್ವಾಮಿ ವಿವೇಕಾನಂದ ಭೇಟಿಯ ಕುರಿತು ಸ್ವಾಮಿ ವಿವೇಕಾನಂದರೊಂದಿಗಿನ ಕೆಲವು ಅಲೆದಾಟದ ಟಿಪ್ಪಣಿಗಳಲ್ಲಿ ಉಲ್ಲೇಖೀಸಿದ್ದಾರೆ.

ಪುಣ್ಯ ಕ್ಷೇತ್ರ ಮಂಡಳಿ ರಚನೆ

ದೀರ್ಘ‌ಕಾಲದವರೆಗೆ ಬೂಟಾ ಮಲಿಕ್‌ ಮತ್ತು ಅವರ ಸಂಬಂಧಿಕರು, ದಶನಮಿ ಅಖಾರದ ಪಂಡಿತರು ಮತ್ತು ಪುರೋಹಿತ ಸಭಾ ಮಟ್ಟಾನ್‌ ಅವರು ಈ ದೇವಾಲಯದ ಸಾಂಪ್ರದಾಯಿಕ ಪೋಷಕರಾಗಿದ್ದರು. 2000ದ‌ಲ್ಲಿ ದೇವಾಲಯವನ್ನು ಮಲಿಕ್‌ ಅವರ ಕುಟುಂಬ ಮತ್ತು ಹಿಂದೂ ಸಂಘಟನೆಗಳ ದೇಗುಲ ಮಂಡಳಿಯಿಂದ ತೆಗೆದು ಹಾಕಿ ಜಮ್ಮು ಮತ್ತು ಕಾಶ್ಮೀರದ ಫಾರೂಕ್‌ ಅಬ್ದುಲ್ಲಾ ಸರಕಾರವು ಯಾತ್ರೆಯ ಅನುಕೂಲತೆಯನ್ನು ಹೆಚ್ಚಿಸಲು ರಾಜ್ಯಪಾಲರ ನೇತೃತ್ವದ ಶ್ರೀ ಅಮರನಾಥಜಿ ಪುಣ್ಯ ಕ್ಷೇತ್ರ ಮಂಡಳಿಯನ್ನು ರಚಿಸಿತು.

ಅಮರನಾಥ ಯಾತ್ರೆ ಸಾಮಾನ್ಯವಾಗಿ ಜುಲೈ- ಆಗಸ್ಟ್‌ ತಿಂಗಳಲ್ಲಿ ಬರುತ್ತದೆ. ಆರಂಭದಲ್ಲಿ 15 ದಿನ ಅಥವಾ ಒಂದು ತಿಂಗಳ ಕಾಲ ಯಾತ್ರೆ ನಡೆಸಲಾಗುತ್ತಿತ್ತು. 2004ರಲ್ಲಿ ಆಡಳಿತ ಮಂಡಳಿಯು ಎರಡು ತಿಂಗಳ ಕಾಲ ತೀರ್ಥಯಾತ್ರೆಗೆ ಅವಕಾಶ ನೀಡಲು ನಿರ್ಧರಿಸಿತ್ತು. 1995ರಲ್ಲಿ ಅಮರನಾಥ ಯಾತ್ರೆ 20 ದಿನಗಳ ಕಾಲ ನಡೆದರೆ, 2004- 2009ರವರೆಗೆ ಯಾತ್ರೆ 60 ದಿನಗಳ ಕಾಲ ನಡೆಯಿತು. ಅನಂತರದಲ್ಲಿ ಯಾತ್ರೆಯು 40- 60 ದಿನಗಳವರೆಗೆ ನಡೆಯಿತು. 2019ರಲ್ಲಿ ಜು. 1ರಿಂದ ಆಗಸ್ಟ್‌ 15ರ ವರೆಗೆ ಯಾತ್ರೆ ನಡೆಯಬೇಕಿತ್ತು. ಆದರೆ 370ನೇ ವಿಧಿಯನ್ನು ರದ್ದುಗೊಳಿಸುವ ಕೆಲವು ದಿನಗಳ ಮೊದಲು ಭದ್ರತಾ ಕಾರಣಗಳನ್ನು ನೀಡಿ ಯಾತ್ರೆಯನ್ನು ರದ್ದುಗೊಳಿಸಲಾಯಿತು. ಅಮರನಾಥ ಯಾತ್ರಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 1990ರಲ್ಲಿ ಸಾವಿರಾರು ಲೆಕ್ಕಾಚಾರದಲ್ಲಿದ್ದ ಯಾತ್ರಿಕರ ಸಂಖ್ಯೆ ಕೆಲವು ವರ್ಷಗಳಲ್ಲಿಯೇ ಲಕ್ಷಕ್ಕೆ ತಲುಪಿತ್ತು. 2011ರಲ್ಲಿ ದಾಖಲೆ ಸಂಖ್ಯೆ ಅಂದರೆ 6.34 ಲಕ್ಷ ಯಾತ್ರಾರ್ಥಿಗಳು ಅಮರನಾಥಕ್ಕೆ ಭೇಟಿ ನೀಡಿದ್ದರು. 2019ರಲ್ಲಿ ಒಟ್ಟು 3.5 ಲಕ್ಷ ಭಕ್ತರು ಆಗಮಿಸಿದ್ದರು.

ಯಾತ್ರಿಕರ ಗಮನಕ್ಕೆ

– ಎಲ್ಲ ಭಕ್ತರು ಕೋವಿಡ್‌ ಪ್ರೋಟೋಕಾಲ್‌ ಅನ್ನು ಅನುಸರಿಸಬೇಕು.

– 13 ವರ್ಷಕ್ಕಿಂತ ಕೆಳಗಿನವರು, 75 ವರ್ಷಕ್ಕಿಂತ ಮೇಲ್ಪಟ್ಟವರು, 6 ವಾರ ಮೇಲ್ಪಟ್ಟ ಗರ್ಭಿಣಿಯರಿಗೆ ಪ್ರಯಾಣಕ್ಕೆ ಅನುಮತಿ ಇಲ್ಲ.

– ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವವರನ್ನು ಹೊರತುಪಡಿಸಿ ಪಹಲ್‌ಗಾಮ್‌ ಮತ್ತು ಬಾಲ್ಟಾಲ್‌ ಯಾತ್ರೆ ಮಾರ್ಗಗಳಲ್ಲಿ ದಿನಕ್ಕೆ 10 ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ.

– ಬಾಲ್ಟಾಲ್‌ನಿಂದ ಡೊಮೆಲ್‌ವರೆಗಿನ 2 ಕಿ.ಮೀ. ದೂರದ ಪ್ರಯಾಣಕ್ಕೆ ಉಚಿತ ಬ್ಯಾಟರಿ ವಾಹನ ಸೌಲಭ್ಯ

– ಯಾತ್ರೆಯ ಭದ್ರತೆಗಾಗಿ 250 ಕಂಪೆನಿ ಭದ್ರತಾ ಪಡೆಗಳ ಸುಮಾರು 1 ಲಕ್ಷಕ್ಕೂ ಹೆಚ್ಚು ಸಿಬಂದಿ ನಿಯೋಜನೆ. ಇದರ ನೇತೃತ್ವವನ್ನು ಸಿಆರ್‌ಪಿಎಫ್ ಸಿಬಂದಿ ವಹಿಸಲಿದ್ದಾರೆ.

–  ಮಹಿಳೆಯರು ಸೀರೆ ಧರಿಸುವುದು ಅನುಕೂಲವಲ್ಲ. ಬದಲಾಗಿ ಸೆಲ್ವಾರ್‌ ಕಮೀಜ್‌, ಪ್ಯಾಂಟ್‌, ಶರ್ಟ್‌ ಅಥವಾ ಟ್ರಕ್ಕಿಂಗ್‌ ಸೂಟ್‌ ಧರಿಸಬಹುದು.

– ಚಪ್ಪಲಿಗಳು ಸೂಕ್ತವಲ್ಲ. ರಸ್ತೆಗಳು ಜಾರುವುದರಿಂದ ಲೇಸ್‌ ಹೊಂದಿರುವ ಟ್ರಕ್ಕಿಂಗ್‌ ಶೂಗಳನ್ನೇ ಆಯ್ದುಕೊಳ್ಳುವುದು ಉತ್ತಮ.

– ನಿಮ್ಮ ಸಾಮಗ್ರಿಗಳನ್ನು ಸಾಗಿಸುವವರ ಜತೆಗೇ ಇದ್ದರೆ ಅಗತ್ಯವಿದ್ದಾಗ ಬ್ಯಾಗ್‌ನಿಂದ ಬೇಕಾದ್ದನ್ನು ತ್ವರಿತವಾಗಿ ಪಡೆಯಬಹುದು.

–  ಪಹಲ್‌ಗಾಮ್‌ ಮತ್ತು ಬಾಲ್ಟಾಲ್‌ನಿಂದ ಮುಂದಿನ ಪ್ರಯಾಣಕ್ಕೆ ಹೆಚ್ಚುವರಿ ಬಟ್ಟೆ, ಆಹಾರ ವಸ್ತುಗಳನ್ನು ನೀರು ಹೀರಿಕೊಳ್ಳದ ಚೀಲದಲ್ಲಿ ಹಾಕಿ ಕೊಂಡೊಯ್ಯುವುದು ಉತ್ತಮ. ಇದರಿಂದ ನೀವು ಒದ್ದೆಯಾದಾಗ ಅವುಗಳನ್ನು ಬಳಸಬಹುದು.

– ನೀರಿನ ಬಾಟಲಿ, ಹುರಿದ ಬೇಳೆ, ಒಣ ಹಣ್ಣುಗಳು, ಚಾಕೋಲೇಟ್‌ ಮೊದಲಾದವುಗಳು ಸದಾ ಜತೆ ಇರಲಿ.

– ಸನ್‌ಬರ್ನ್ ತಪ್ಪಿಸಲು ಯಾವುದಾದರೂ ಮೊಯಿಶ್ಚರೈಸರ್‌ ಕ್ರೀಮ್‌, ವ್ಯಾಸಲೀನ್‌ ಇರಲಿ.

–  ಒಂಟಿಯಾಗಿ ಎಲ್ಲಿಯೂ ನಡೆಯಬೇಡಿ. ಸಹ ಪ್ರಯಾಣಿಕರೊಂದಿಗೇ ಇರಿ.

– ತುರ್ತು ಸಂದರ್ಭಕ್ಕಾಗಿ ನಿಮ್ಮ ಹೆಸರು, ವಿಳಾಸ, ಮನೆಯ ಫೋನ್‌ ನಂಬರ್‌, ನೀವು ಗುಂಪಿನಲ್ಲಿ ಪ್ರಯಾಣಿಸುತ್ತಿದ್ದರೆ ಇತರರ ಫೋನ್‌ ನಂಬರ್‌ ಜೇಬ್‌ನಲ್ಲಿ ಇಟ್ಟುಕೊಳ್ಳಿ.

– ಬೇಸ್‌ ಕ್ಯಾಂಪ್‌ನಿಂದ ಹೊರಡುವಾಗ ನಿಮ್ಮ ಸಹಚರರಲ್ಲಿ ಯಾರಾದರೂ ಕಳೆದುಹೋಗಿದ್ದರೆ ತತ್‌ಕ್ಷಣ ಪೊಲೀಸರಿಗೆ ವರದಿ ಮಾಡಿ.

– ಯಾವುದೇ ಶಾರ್ಟ್‌ಕಟ್‌ ದಾರಿಯಲ್ಲಿ ಪ್ರಯಾಣ ಪೂರ್ಣಗೊಳಿಸಲು ಪ್ರಯತ್ನಿಸಬೇಡಿ. ಅದು ಅಪಾಯಕಾರಿ.

Advertisement

Udayavani is now on Telegram. Click here to join our channel and stay updated with the latest news.

Next