ಮುಂಬಯಿ : ಯಾರೋ ನನಗೆ ಹೊರಗೆ ಹೋಗಬೇಡಿ ಎಂದು ಹೇಳಿದ್ದಾರೆ. ನನಗೆ ವಯಸ್ಸಾಗಿದೆಯೇ? ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಪ್ರಶ್ನಿಸುವ ಮೂಲಕ ರಾಜಕೀಯ ಹೊರಾಟ ಮುಂದುವರಿಸುವ ಬಲವಾದ ಸಂದೇಶವನ್ನು ರವಾನಿಸಿದ್ದಾರೆ.
ಪವಾರ್ ಅವರು ಸೋಮವಾರ ಸಾಸ್ವಾದ್ನಲ್ಲಿ ಭಾರೀ ಮಳೆಯಿಂದ ಹಾನಿ ಅನುಭವಿಸಿ ಸಂಕಷ್ಟದಲ್ಲಿರುವ ರೈತರೊಂದಿಗೆ ಸಂವಾದ ನಡೆಸಿದರು. ಈ ವೇಳೆ ರೈತರು ತಮ್ಮ ಸಮಸ್ಯೆಗಳನ್ನು ಪವಾರ್ ಅವರ ಮುಂದೆ ತೋಡಿಕೊಂಡರು.
ಸಭೆಯಲ್ಲಿ ಪವಾರ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಟೀಕಿಸಿ ”ಮಹಾರಾಷ್ಟ್ರದಲ್ಲಿ ಅತಿವೃಷ್ಟಿಯಿಂದ ರೈತರು ಸಾಕಷ್ಟು ನೊಂದಿದ್ದಾರೆ, ಈ ಸರ್ಕಾರ ನೀತಿ ರೂಪಿಸಬೇಕು ಆದರೆ ಮಾಡುತ್ತಿಲ್ಲ, ದೆಹಲಿಗೆ ಹೋಗುವಂತೆ ವಿನಂತಿಸುತ್ತೇನೆ. ಯಾರೋ ನನಗೆ ಹೊರಗೆ ಹೋಗಬೇಡಿ ಎಂದು ಹೇಳಿದ್ದಾರೆ. ನನಗೆ ವಯಸ್ಸಾಗಿದೆಯೇ?” ಎಂದು ಪ್ರಶ್ನಿಸಿದರು.
‘ಕೇಂದ್ರವು ರಾಜ್ಯಕ್ಕೆ ಪರಿಹಾರ ನೀಡಬೇಕು’ ಎಂದ 81 ರ ಹರೆಯದ ಪವಾರ್, ”ದೇಶ, ರಾಜ್ಯದ ಅಧಿಕಾರ ಹಿಡಿದಿರುವವರು ಗ್ರಾಮೀಣ ಭಾಗದ ಜನರಿಗೆ ಏನಾದರೂ ಮಾಡಬೇಕು ಆದರೆ ಮಾಡುತ್ತಿಲ್ಲ, ಅತಿವೃಷ್ಟಿಯಿಂದ ಮಹಾರಾಷ್ಟ್ರದಲ್ಲಿ ಅಪಾರ ಹಾನಿಯಾಗಿದೆ. ಇದರಿಂದ ರೈತರನ್ನು ಹೊರತರಲು ಅಗತ್ಯ ನೀತಿ ಅಳವಡಿಸಿಕೊಂಡಿಲ್ಲ. ರಾಜ್ಯದಲ್ಲಿ ಆಗಿರುವ ಹಾನಿಯ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡಲಾಗುವುದು” ಎಂದರು.
‘ಚುನಾವಣೆಯ ಸಂದರ್ಭದಲ್ಲಿ ಬಂದಿದ್ದೆ, ನೀವು ನನ್ನನ್ನು ಯಾವತ್ತೂ ಬರಿಗೈಯಲ್ಲಿ ಕಳುಹಿಸಿಲ್ಲ, ಪ್ರತಿ ಚುನಾವಣೆಯಲ್ಲೂ ನಿಮ್ಮ ಬೆಂಬಲ ನಮಗೆ ಸಿಕ್ಕಿದೆ’ ಎಂದರು.