Advertisement

ಪೆರಂಪಳ್ಳಿ: ಬದಲಿ ಮಾರ್ಗವೇ ಅವ್ಯವಸ್ಥೆ

09:31 AM Oct 20, 2022 | Team Udayavani |

ಉಡುಪಿ: ಅಂಬಾಗಿಲು- ಪೆರಂಪಳ್ಳಿ ಮೂಲಕ ಮಣಿಪಾಲ ಸಂಪರ್ಕಿಸುವ ಚತುಷ್ಪಥ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ಹಲವು ತಿಂಗಳುಗಳು ಕಳೆದಿವೆ. ಇದೀಗ ಅರ್ಧ ನಡೆಸಿರುವ ಕಾಮಗಾರಿ ಸಹ ನೀರಲ್ಲಿ ಹೋಮ ಮಾಡಿದಂತಾಗಿದ್ದು, ವ್ಯವಸ್ಥಿತ ರಸ್ತೆ ನಿರ್ಮಾಣದ ಯೋಜನೆ ಸಾಕಷ್ಟು ವಿಳಂಬವಾಗುತ್ತಿದೆ. ಪ್ರಸ್ತುತ ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪೆರಂಪಳ್ಳಿ ಮೂಲಕ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ ನೀಡಿದ್ದರು. ಆದರೆ ಪೆರಂಪಳ್ಳಿ ಮಾರ್ಗವೇ ದುಃಸ್ಥಿತಿಯಲ್ಲಿರುವುದರಿಂದ ಸವಾರರು ಇಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ.

Advertisement

ಅಂಬಾಗಿಲು-ಪೆರಂಪಳ್ಳಿ ಹಳೆಯ ಇಕ್ಕಟ್ಟಾದ ರಸ್ತೆ ವಿಸ್ತರಣೆಗೊಳಿಸಿ ಭೂಸ್ವಾಧೀನ ಪ್ರಕ್ರಿಯೆ ಮೂಲಕ ವ್ಯವಸ್ಥಿತ ರಸ್ತೆ ರೂಪಿಸುವ ಯೋಜನೆ ಇದಾಗಿತ್ತು. ಪೆರಂಪಳ್ಳಿ ಮೇಲ್ಸೇತುವೆಯಿಂದ ಮೂಡು ಪೆರಂಪಳ್ಳಿ ಚರ್ಚ್‌ವರೆಗೆ ಉತ್ತಮ ರಸ್ತೆ ನಿರ್ಮಾಣಗೊಂಡಿದೆ. ಆದರೆ ಅಂಬಾಗಿಲಿನಿಂದ ರೈಲ್ವೇ ಮೇಲ್ಸೇತುವೆ ವರೆಗಿನ ರಸ್ತೆಗೆ ಮೊದಲ ಲೇಯರ್‌ ಡಾಮರು ಕೆಲಸ ಮಾಡಲಾಗಿತ್ತು.

ಆರಂಭದಲ್ಲಿ ವೇಗವಾಗಿ ಸಾಗಿದ್ದ ಕಾಮಗಾರಿ ಹಲವು ದಿನಗಳಿಂದ ಕೆಲಸ ನಡೆಯದೆ ಪ್ರಸ್ತುತ ಜಲ್ಲಿ, ಮಣ್ಣಿನ ರಸ್ತೆಯಾಗಿ ರೂಪುಗೊಂಡು ಅರ್ಧಕ್ಕೆ ಕೆಲಸ ನಿಂತಿತ್ತು. ಈ ಬಗ್ಗೆ “ಉದಯವಾಣಿ ಸುದಿನ’ ವರದಿ ಪ್ರಕಟಿಸಿದ ಅನಂತರ ಮತ್ತೆ ಕಾಮಗಾರಿ ಆರಂಭಗೊಂಡಿತ್ತು. ಮಳೆಗಾಲದ ವೇಳೆ ಕೆಲಸ ನಿಲ್ಲಿಸಲಾಗಿತ್ತು.

ಮಳೆಯ ವೇಳೆ ಹಲವೆಡೆ ಮೊದಲ ಲೇಯರ್‌ ಡಾಮರು ಸಂಪೂರ್ಣ ಹದಗೆಟ್ಟು, ಹೋಗಿತ್ತು. ಅಲ್ಲಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ಕಂಟ್ರಿ ಇನ್‌ ಹೊಟೇಲ್‌ ನಿಂದ ಸಾಯಿರಾಧಾ ಗ್ರೀನ್‌ ವ್ಯಾಲಿವರೆಗೆ ರಸ್ತೆಯ ಪರಿಸ್ಥಿತಿ ಭೀಕರವಾಗಿದೆ. ಧೂಳು, ಕಲ್ಲುಗಳ ಕಣದಿಂದ ದ್ವಿಚಕ್ರ ವಾಹನ ಸವಾರರು ಪ್ರತಿನಿತ್ಯ ಸಂಕಷ್ಟಪಡುತ್ತಿದ್ದಾರೆ. ಇದರಿಂದ ಕೆಲವು ವಾಹನ ಸವಾರರು ನಿಯಂತ್ರಣ ತಪ್ಪಿ ಜಾರಿ ಬಿದ್ದಿದ್ದಾರೆ. ಶೀಘ್ರ ಪೂರ್ಣ ಪ್ರಮಾಣದಲ್ಲಿ ರಸ್ತೆ ನಿರ್ಮಿಸುವಂತೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳನ್ನು ನಾಗರಿಕರು ಆಗ್ರಹಿಸಿದ್ದಾರೆ.

2020ರಲ್ಲಿ ಕಾಮಗಾರಿಗೆ ಚಾಲನೆ

Advertisement

23 ಕೋ. ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣದಲ್ಲಿ ಅಂಬಾಗಿಲು-ಪೆರಂಪಳ್ಳಿ ರಸ್ತೆ ಯೋಜನೆ ಒಂದು ಭಾಗವಾಗಿದೆ. ಟಿಡಿಆರ್‌ ಪ್ರಕ್ರಿಯೆ ಮೂಲಕ ಭೂಸ್ವಾಧೀನವಾಗಿ 2020ರಲ್ಲಿ ಶಾಸಕ ಕೆ. ರಘುಪತಿ ಭಟ್‌ ಕಾಮಗಾರಿಗೆ ಚಾಲನೆ ನೀಡಿದ್ದರು. ಗುತ್ತಿಗೆಯನ್ನು ಮೂರು ಪಾಲುಗಳನ್ನಾಗಿ ಮಾಡಿ ನೀಡಲಾಗಿತ್ತು. ಒಂದು ಭಾಗದಲ್ಲಿ (ಚರ್ಚ್‌ ಸಮೀಪ) ಮಾತ್ರ ಕಾಂಕ್ರೀಟ್‌-ಡಾಮರು ರಸ್ತೆ ಕೆಲವು ಮೀಟರ್‌ ರಸ್ತೆ ವ್ಯವಸ್ಥಿತವಾಗಿ ನಡೆದಿದೆ. ಆದರೆ ಕಂಟ್ರಿ ಇನ್‌ ಕಡೆಯಿಂದ ಬರುವ ಇಳಿಜಾರು ರಸ್ತೆ, ಅಂಬಾಗಿಲಿನಿಂದ ರೈಲ್ವೇ ಮೇಲ್ಸೇತುವೆ ವರೆಗೆ ಹಲವೆಡೆ ರಸ್ತೆ ದುಃಸ್ಥಿತಿಯಲ್ಲಿದೆ.

ಶೀಘ್ರ ವ್ಯವಸ್ಥಿತ ರಸ್ತೆ: ಮಳೆಯಿಂದಾಗಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಮೊದಲ ಲೇಯರ್‌ ಡಾಮರು ಕೆಲಸ ನಡೆದಿದ್ದರೂ ಕೆಲವು ಕಡೆಗಳಲ್ಲಿ ಮಳೆಯಿಂದ ರಸ್ತೆ ಹದಗೆಟ್ಟಿದೆ. ಸಣ್ಣ ಪ್ರಮಾಣದಲ್ಲಿ ಆಗಾಗ ಮಳೆ ಇರುವುದರಿಂದ ದೀಪಾವಳಿ ಮುಗಿದ ಅನಂತರ ಪೂರ್ಣ ಪ್ರಮಾಣದಲ್ಲಿ ಮೊದಲ ಹಾಗೂ ಎರಡನೇ ಹಂತದ ಲೇಯರ್‌ ಡಾಮರು ಕೆಲಸವನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಲಾಗುವುದು. ನವೆಂಬರ್‌ ಅಂತ್ಯದ ಒಳಗೆ ಕೆಲಸ ಮುಗಿಸಲಾಗುತ್ತದೆ. ಇಂದ್ರಾಳಿಯಲ್ಲಿ ರೈಲ್ವೇ ಕೆಲಸ ನಡೆಯುತ್ತಿರುವುದರಿಂದ ಈ ರಸ್ತೆ ಬದಲಿ ಮಾರ್ಗವಾಗಿರುವ ಹಿನ್ನೆಲೆಯಲ್ಲಿ ಗುಂಡಿಗಳನ್ನು ಮುಚ್ಚಲು ತಾತ್ಕಾಲಿಕ ನೆಲೆಯಲ್ಲಿ ತೇಪೆ ಕಾರ್ಯ ನಡೆಸಲಾಗುತ್ತಿದೆ. – ಜಗದೀಶ್‌ ಭಟ್‌, ಎಇಇ, ಲೋಕೋಪಯೋಗಿ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next