Advertisement

ಆಲೋಕ್‌ ವರ್ಮಾಗೆ ಕ್ಲೀನ್‌ಚಿಟ್‌ ಇಲ್ಲ!

07:35 AM Nov 17, 2018 | |

ಹೊಸದಿಲ್ಲಿ: ಕಡ್ಡಾಯ ರಜೆಯ ಮೇಲಿರುವ ಸಿಬಿಐ ನಿರ್ದೇಶಕ ಆಲೋಕ್‌ ವರ್ಮಾಗೆ ವಿಚಕ್ಷಣಾ ದಳ (ಸಿವಿಸಿ) ನಡೆಸಿದ ತನಿಖೆಯಲ್ಲಿ ಕ್ಲೀನ್‌ ಚಿಟ್‌ ನೀಡಿಲ್ಲ. ಹೀಗಾಗಿ ವರ್ಮಾ ವಿರುದ್ಧ ಹೆಚ್ಚಿನ ತನಿಖೆ ನಡೆಯಬೇಕಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ಪಟ್ಟಿದೆ. ಸಿವಿಸಿ ಉಲ್ಲೇಖೀಸಿರುವ ಆರೋಪಗಳ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕಿದೆ. ಹೀಗಾಗಿ ಸಿವಿಸಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ವರ್ಮಾ ಪರ ವಕೀಲರಿಗೆ ನೀಡಬೇಕು. ಸಿವಿಸಿ ಆರೋಪಗಳಿಗೆ ವರ್ಮಾ ಪ್ರತಿಕ್ರಿಯೆ ನೀಡಿದ ನಂತರ ಪ್ರಕರಣದ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಹೇಳಿದ್ದಾರೆ. ಸೋಮವಾರದೊಳಗೆ ವರ್ಮಾ ಪ್ರತಿಕ್ರಿಯೆ ನೀಡಬೇಕಿದ್ದು, ಮಂಗಳವಾರ ಮುಂದಿನ ವಿಚಾರಣೆ ನಿಗದಿಸಲಾಗಿದೆ. ಸಿಬಿಐ ಗೌರವ ಕಾಪಾಡುವುದಕ್ಕಾಗಿ ಈ ವರದಿಯನ್ನು ಗೌಪ್ಯವಾಗಿಡಲಾಗಿದೆ ಎಂದು ಕೋರ್ಟ್‌ ವಿವರಿಸಿದೆ. 

Advertisement

ಸ್ವಲ್ಪ ದಿನ ಅಂಡಮಾನ್‌ನಲ್ಲೇ ಇರಿ!
ಕಳೆದ ತಿಂಗಳು ಸಿಬಿಐನಲ್ಲಿ ರಾತ್ರೋ ರಾತ್ರಿ ಉಂಟಾದ ಬದಲಾವಣೆಯ ವೇಳೆ ಅಂಡಮಾನ್‌ಗೆ ವರ್ಗಾವಣೆಗೊಂಡಿದ್ದ ಸಿಬಿಐ ಅಧಿಕಾರಿ ಎ.ಕೆ.ಬಸ್ಸಿ, ತಮ್ಮ ವರ್ಗಾವಣೆಗೆ ತಡೆ ಕೋರಿ ಸುಪ್ರೀಂಕೋರ್ಟ್‌ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸಿಜೆಐ ರಂಜನ್‌ ಗೊಗೋಯ್‌, ಅಂಡಮಾನ್‌ ಒಳ್ಳೆಯ ಜಾಗ. ಸ್ವಲ್ಪ ದಿನ ಅಲ್ಲೇ ಇರಿ ಎಂದಿದ್ದಾರೆ. ಅಲ್ಲದೆ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಪೋರ್ಟ್‌ ಬ್ಲೇರ್‌ಗೆ ತಕ್ಷಣ ತೆರಳುವಂತೆ ಸೂಚನೆಯನ್ನೂ ನೀಡಲಾಯಿತು. ಬಸ್ಸಿ ಸಲ್ಲಿಸಿದ್ದ ಅರ್ಜಿ ಹಾಗೂ ವರ್ಮಾರನ್ನು ರಜೆಯ ಮೇಲೆ ಕಳುಹಿಸಿದ ಕೇಂದ್ರದ ನಿರ್ಧಾರವನ್ನು ವಿರೋಧಿಸಿ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಲ್ಲಿಸಿದ ದೂರಿನ ವಿಚಾರಣೆಯನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಗೊಗೋಯ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next