Advertisement

ಪರವಾನಿಗೆ ದುರುಪಯೋಗದ ಆರೋಪ; ಗಣಿ ಅಧಿಕಾರಿಗಳಿಗೆ ತರಾಟೆ

10:18 AM Nov 07, 2019 | Team Udayavani |

ಕೋಟ: ಮರಳುಗಾರಿಕೆಗೆ ಪರವಾನಿಗೆ ನೀಡುವ ಸಂದರ್ಭ ಸ್ಥಳೀಯರನ್ನು ಕಡೆಗಣಿಸಲಾಗಿದೆ ಹಾಗೂ ಬೇರೆ ತಾಲೂಕಿನವರಿಗೆ ಆದ್ಯತೆೆ ನೀಡಲಾಗಿದೆ.

Advertisement

ಇದರಿಂದ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಐರೋಡಿ ಗ್ರಾ.ಪಂ.ನಲ್ಲಿ ನ.5ರಂದು ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪ ಡಿಸಿದರು.

ಪರವಾನಿಗೆ ದುರುಪಯೋಗ
ಸ್ಥಳೀಯರ ಮೂಲಕವೇ ಸಾಂಪ್ರದಾಯಿಕ ವಿಧಾನದಲ್ಲಿ ಮರಳುಗಾರಿಕೆ ನಡೆಸಬೇಕು ಎನ್ನುವ ನಿಯಮವಿದೆ. ಆದರೆ ಕೆಲವರು ತಮ್ಮ ಪರವಾನಿಗೆಯನ್ನು ಬೇರೆಯವರಿಗೆ ಬಾಡಿಗೆಗೆ ನೀಡಿದ್ದಾರೆ. ಕೆಲವರು ಮಾರಾಟ ಮಾಡಿದ್ದಾರೆ. ಹೊರ ರಾಜ್ಯದ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸುತ್ತಿದ್ದು ಹಲವಾರು ರೀತಿಯಲ್ಲಿ ಪರವಾನಿಗೆ ದುರುಪಯೋಗವಾಗುತ್ತದೆ ಎನ್ನುವ ಆರೋಪಗಳು ಕೇಳಿ ಬಂದವು.

ಗಣಿ ಅಧಿಕಾರಿಗಳಿಗೆ ತರಾಟೆ
ಪರವಾನಿಗೆ ನೀಡುವಾಗ ಅಥವಾ ದಿಬ್ಬಗಳನ್ನು ಗುರುತಿಸುವಾಗ ಯಾವುದೇ ವಿಚಾರವನ್ನು ಪಂಚಾಯತ್‌ ಗಮನಕ್ಕೆ ತಂದಿಲ್ಲ. ಆದರೆ ಇದೀಗ ಸಮಸ್ಯೆಯ ಕುರಿತು ಸ್ಥಳೀಯರು ಗ್ರಾ.ಪಂ. ಮತ್ತು ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿಗಳು, ಗಣಿ ಇಲಾಖೆ ಕದ್ದುಮುಚ್ಚಿ ಪರವಾನಿಗೆ ನೀಡಿದ್ದರಿಂದ ಈ ರೀತಿ ಸಮಸ್ಯೆಯಾಗಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಐರೋಡಿ ಗ್ರಾ.ಪಂ. ಅಧ್ಯಕ್ಷ ಮೋಸೆಸ್‌ ರೋಡ್ರಿಗಸ್‌ ಅಸಮಾಧಾನ ವ್ಯಕ್ತಪಡಿಸಿದರು.

ಪರವಾನಿಗೆ ನೀಡುವ ಹೊಣೆಗಾರಿಕೆ ಗಣಿ ಇಲಾಖೆಗಿಲ್ಲ. ನಾವು ಕೇವಲ ತಾಂತ್ರಿಕ ಕಾರ್ಯಗಳನ್ನು ನಿರ್ವಹಿಸುತ್ತೇವೆ . 7 ಸದಸ್ಯರ ಮಂಡಳಿ ಸೂಚಿಸಿದಂತೆ ಮರಳುಗಾರಿಕೆ ಪರವಾನಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಗಣಿ ಇಲಾಖೆಯ ಪಾತ್ರವಿಲ್ಲ. ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಗಣಿ ಅಧಿಕಾರಿ ಮಾಧೇಶ್ವರೈ ಮತ್ತು ಸಂಧ್ಯಾ ತಿಳಿಸಿದರು.

Advertisement

ಮರಳುಗಾರಿಕೆಗೆ ಸಮಸ್ಯೆಯಾಗಬಾರದು
ಸ್ಥಳೀಯರಿಗೆ ಆಧ್ಯತೆ ನೀಡಬೇಕು ಎನ್ನುವ ಆಗ್ರಹ ಸರಿಯಾಗಿದೆ. ಆದರೆ ಒಂದೆರಡು ವರ್ಷದಿಂದ ಮರಳುಗಾರಿಕೆ ಸ್ಥಗಿತಗೊಂಡು ಕೆಲಸವಿಲ್ಲದೆ ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಹೀಗಾಗಿ ಹೊರಗಿನವರಿಗೆ ಗುತ್ತಿಗೆ ನೀಡಿರುವುದನ್ನು ವಿರೋಧಿಸುವ ಬರದಲ್ಲಿ ಮರಳುಗಾರಿಕೆಗೆ ಯಾವುದೇ ಸಮಸ್ಯೆಯಾಗಬರದು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಒಂದಷ್ಟು ಕಾರ್ಮಿಕರು ಆಗ್ರಹಿಸಿದರು.

ಆಯುಷ್ಮಾನ್‌ ಯೋಜನೆ ಕುರಿತು ಅಸಮಾಧಾನ
ಆಯುಷ್ಮಾನ್‌ ಯೋಜನೆಯಡಿ ಚಿಕಿತ್ಸೆ ಪಡೆಯಲು ಸರಕಾರಿ ಆಸ್ಪತ್ರೆಗೆ ಶಿಫಾರಸ್ಸು ಪತ್ರ ಬೇಕೆನ್ನುವ ನಿಯಮದಿಂದ ರೋಗಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು ಇದನ್ನು ಬದಲಾಯಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಕುರಿತು ಮಾಹಿತಿ ನೀಡಿದರು.
ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಒ.ಆರ್‌. ಪ್ರಕಾಶ್‌ ಸಮನ್ವಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ತಾ.ಪಂ. ಸದಸ್ಯೆ ಜ್ಯೋತಿ ಉದಯ ಪೂಜಾರಿ, ವಸಂತಿ ಹಾಗೂ ಗ್ರಾ.ಪಂ. ಉಪಾಧ್ಯಕ್ಷೆ ಬೇಬಿ ಸಾಲಿಯಾನ್‌, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ಸ್ಥಳೀಯರಿಗೆ ಅನ್ಯಾಯ; ದೌರ್ಜನ್ಯ
ಮರಳುಗಾರಿಕೆಗೆ ನಮ್ಮ ವಿರೋಧವಿಲ್ಲ. ಆದರೆ ಸ್ಥಳೀಯ ಐದಾರು ಮಂದಿಗೆ ಮಾತ್ರ ಪರವಾನಿಗೆ ನೀಡಿದ್ದು ಮತ್ತುಳಿದವುಗಳನ್ನು ತಾಲೂಕಿನ ಹೊರಗಿನವರಿಗೆ ಕೊಡಲಾಗಿದೆ. ನಾಲ್ಕೈದು ಮಂದಿ ಕಾರ್ಯನಿರ್ವಹಿಸಬಹುದಾದ ದಕ್ಕೆಗಳಲ್ಲಿ 20ಕ್ಕೂ ಹೆಚ್ಚು ಜನರಿಗೆ ಪರವಾನಿಗೆ ನೀಡಲಾಗಿದ್ದು ವಾಹನಗಳ ಓಡಾಟ, ಕೆಲಸದ ತೀವ್ರತೆ ಹೆಚ್ಚಿದೆ. ಹೊರಗಿನಿಂದ ಬಂದ ಗುತ್ತಿಗೆದಾರರು ಅಂಬೇಡ್ಕರ್‌ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಸಂಚಾರಕ್ಕೆ ಸಮಸ್ಯೆ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಹಲ್ಲೆ ನಡೆಸಲು ಮುಂದಾಗುತ್ತಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಹೊರಗಡೆಯವರಿಗೆ ನೀಡಿರುವ ಪರವಾನಿಗೆ ರದ್ದುಗೊಳಿಸಿ ಸ್ಥಳೀಯರಿಗೆ ಆಧ್ಯತೆ ನೀಡಬೇಕು ಎನ್ನುವ ಆಗ್ರಹ ಕೇಳಿ ಬಂತು.

ಅಂಗನವಾಡಿ ಕಟ್ಟಡ ನಿರ್ಮಿಸುವಂತೆ ಆಗ್ರಹ
ಬಾಳುRದ್ರು ಚಿಟ್ಟಿಕಟ್ಟೆ ಅಂಗನವಾಡಿ ಕೇಂದ್ರ ಹಲವಾರು ವರ್ಷಗಳಿಂದ‌ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಹಲವು ವರ್ಷದಿಂದ ಮನವಿ ಸಲ್ಲಿಸುತ್ತಿದ್ದರು ಪ್ರಯೋಜನವಾಗಿಲ್ಲ. ಅಂಗನವಾಡಿ ನಿರ್ಮಿಸಲು ಸಂಬಂಧಪಟ್ಟ ಇಲಾಖೆ, ಸರಕಾರದ ಬಳಿ ಹಣವಿಲ್ಲದಿದ್ದರೆ ತಿಳಿಸಿ. ಸಾರ್ವಜನಿಕ ವಂತಿಗೆ ಸಂಗ್ರಹಿಸಿ ಕಟ್ಟಡ ನಿರ್ಮಿಸುತ್ತೇವೆ ಎಂದು ಊರಿನವರು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next