Advertisement

ಪಾಕ್‌ ಮನವೊಲಿಕೆಗೆ ಚೀನ ಮುಂದಾಗಲಿ

10:40 AM Jan 08, 2018 | Karthik A |

ವಾಷಿಂಗ್ಟನ್‌: ಉಗ್ರ ಸಂಘಟನೆಗಳನ್ನು ಪೋಷಿಸುತ್ತಿರುವ ಪಾಕಿಸ್ಥಾನದ ವಿರುದ್ಧ ಪದೇ ಪದೆ ಕಿಡಿ ಕಾರುತ್ತಿರುವ ಅಮೆರಿಕ ಇದೀಗ, ಸಮಸ್ಯೆಯಲ್ಲಿ ಚೀನವನ್ನೂ ಎಳೆತಂದಿದೆ. ಪಾಕಿಸ್ಥಾನವನ್ನು ಚೀನ ಮನವೊಲಿಸಬಹುದು ಎಂದು ವೈಟ್‌ಹೌಸ್‌ನ ಅಧಿಕಾರಿಗಳು ಹೇಳಿದ್ದಾರೆ. ಅಫ್ಘಾನಿಸ್ಥಾನ ಹಾಗೂ ಈ ಭಾಗದಲ್ಲಿ ಸುಸ್ಥಿರತೆಗೆ ಪಾಕಿಸ್ಥಾನದಲ್ಲಿರುವ ಉಗ್ರ ನೆಲೆಗಳನ್ನು ಧ್ವಂಸಗೊಳಿಸುವುದು ಸದ್ಯದ ಅಗತ್ಯವಾಗಿದೆ. ಚೀನ ಹಾಗೂ ಪಾಕ್‌ ಹಲವು ವರ್ಷಗಳಿಂದಲೂ ಮಿತೃತ್ವ ಹೊಂದಿವೆ. ಅಷ್ಟೇ ಅಲ್ಲ, ಸೇನಾ ಬಂಧದ ಜತೆಗೆ ಇತ್ತೀಚೆಗೆ ಪಾಕ್‌ನಲ್ಲಿ ಚೀನ ಹೂಡಿಕೆಯೂ ಹೆಚ್ಚುತ್ತಿದೆ. ಪಾಕಿಸ್ಥಾನದಲ್ಲಿ ಉಗ್ರರು ನೆಲೆ ನಿಲ್ಲುವುದರಿಂದ ಚೀನದ ಹಿತಾಸಕ್ತಿಯೂ ಪೂರೈಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಪಾಕ್‌-ಅಮೆರಿಕ ಸಂಬಂಧ ಮುಂದುವರಿಕೆ: ಉಗ್ರರನ್ನು ಪೋಷಿಸುತ್ತಿರುವುದರ ಬಗ್ಗೆ ಟೀಕೆ ಹಾಗೂ ಆರ್ಥಿಕ ಅನುದಾನ ಸ್ಥಗಿತದಂತಹ ಕಠಿಣ ಕ್ರಮಗಳನ್ನು ಕೈಗೊಂಡಿರುವ ಮಧ್ಯೆಯೂ ಪಾಕ್‌ ಹಾಗೂ ಅಮೆರಿಕದ ಸಂಬಂಧ ಹಿಂದಿನಂತೆಯೇ ಮುಂದುವರಿಯಲಿದೆ ಎಂದು ಪಾಕಿಸ್ಥಾನದ ವಿದೇಶಾಂಗ ಕಾರ್ಯದರ್ಶಿ ತೆಹ್ಮಿನಾ ಜಂಜುವಾ ಹೇಳಿದ್ದಾರೆ. ಅಮೆರಿಕ ವಿಶ್ವದ ಬೃಹತ್‌ ಆರ್ಥಿಕತೆಯಾಗಿದ್ದು, ಈ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ಹೀಗಾಗಿ ನಾವು ಅವರೊಂದಿಗೆ ಹಿಂದಿನಂತೆಯೇ ಮಾತುಕತೆ ಹಾಗೂ ಸಹಭಾಗಿತ್ವವನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಕಿಮ್‌ ಜತೆ ಫೋನ್‌ನಲ್ಲಿ ಮಾತುಕತೆಗೆ ಸಿದ್ಧ: ಅಮೆರಿಕ ಮತ್ತು ಉತ್ತರ ಕೊರಿಯಾದ ಕಲಹ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವಂತೆಯೇ, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಜತೆ ಫೋನ್‌ನಲ್ಲಿ ಮಾತುಕತೆ ನಡೆಸಲು ನಾನು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಕಿಮ್‌ ಜತೆಗೆ ಮಾತನಾಡಲು ನನಗೆ ಯಾವ ಅಭ್ಯಂತರವೂ ಇಲ್ಲ ಎಂದಿದ್ದಾರೆ. ಟ್ರಂಪ್‌ ಹಾಗೂ ಕಿಮ್‌ ಮಧ್ಯೆ ಪದೇ ಪದೆ ವಾಗ್ವಾದ ನಡೆಯುತ್ತಿದ್ದು, ಪ್ರತಿ ಬಾರಿ ಉತ್ತರ ಕೊರಿಯಾ ಅಣ್ವಸ್ತ್ರ ಕ್ಷಿಪಣಿಗಳನ್ನು ಪರೀಕ್ಷಿಸಿದಾಗಲೂ ಉಭಯ ದೇಶಗಳ ಮುಖಂಡರ ವಾಕ್ಸಮರ ತಾರಕ್ಕೇರುತ್ತದೆ.

ಹುರಿಯತ್‌ ನಾಯಕರ ವಿರುದ್ಧ ಶೀಘ್ರ ಚಾರ್ಜ್‌ಶೀಟ್‌ 
ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗೆ ಹಣಕಾಸು ಪೂರೈಸಿದ ಆರೋಪಕ್ಕೆ ಸಂಬಂಧಿಸಿ ಎನ್‌ಐಎ  ಇದೇ ತಿಂಗಳಲ್ಲಿ ಹುರಿಯತ್‌ ನಾಯಕರ ವಿರುದ್ಧ ಆರೋಪಪಟ್ಟಿ ದಾಖಲಿಸಲಿದೆ. ಈಗಾಗಲೇ ಸಂಸ್ಥೆಯು ಇದಕ್ಕೆ ಕೇಂದ್ರ ಗೃಹ ಸಚಿವಾಲಯದ ಅನುಮತಿ ಕೋರಿದೆ. ಆರೋಪಪಟ್ಟಿಯಲ್ಲಿ ಹುರಿಯತ್‌ ನಾಯಕರಾದ ನಯೀಂ ಖಾನ್‌, ಜೆಕೆಎಲ್‌ಎಫ್ ನಾಯಕ ಫಾರೂಕ್‌ ಅಹ್ಮದ್‌ ದರ್‌, ಮಿರ್ವೇಜ್‌ ಉಮರ್‌ ಫಾರೂಕ್‌ನ ಆಪ್ತ ಸಹಚರ ಅಫ್ತಾಬ್‌ ಹಿಲಾಲಿ ಶಾ, ಗಿಲಾನಿಯ ಅಳಿಯ ಅಲ್ತಾಫ್ ಅಹ್ಮದ್‌, ತೆಹ್ರೀಕ್‌-ಇ-ಹುರಿಯತ್‌ ವಕ್ತಾರ ಆಯಾಜ್‌ ಖಾನ್‌ ಸೇರಿದಂತೆ ಅನೇಕರ ಹೆಸರುಗಳಿವೆ. ಕಣಿವೆ ರಾಜ್ಯದಲ್ಲಿ ಉಗ್ರರಿಗೆ ಹಣಕಾಸು ಪೂರೈಸಿದ, ವಿಧ್ವಂಸಕ ಕೃತ್ಯ ಎಸಗಿದ ಆರೋಪ ಇವರ ಮೇಲೆ ಹೊರಿಸಲಾಗಿದೆ. ಇದೇ ವೇಳೆ, ಭಾರತ-ಪಾಕ್‌ ನಡುವೆ ಉತ್ತಮ ಬಾಂಧವ್ಯ ಏರ್ಪಡುವ ನಿಟ್ಟಿನಲ್ಲಿ ಎರಡೂ ದೇಶಗಳ ನಾಯಕರು ಹೆಜ್ಜೆಯಿಡಬೇಕು ಎಂದು ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next