Advertisement

ಮದ್ಯಮುಕ್ತ, ಆಮಿಷಮುಕ್ತ ಚುನಾವಣೆ: ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಆಗ್ರಹ

12:09 AM Apr 20, 2023 | Team Udayavani |

ಬೆಳ್ತಂಗಡಿ: ಮದ್ಯಮುಕ್ತ, ಆಮಿಷಮುಕ್ತ ಚುನಾವಣೆ ಮತ್ತು ಮದ್ಯಮುಕ್ತ ಕರ್ನಾಟಕ ನಿರ್ಮಿಸುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಆಗ್ರಹಿಸುತ್ತಿದೆ ಎಂದು ಜನ ಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್‌ ವಿ. ಪಾಯ್ಸ್ ತಿಳಿಸಿದ್ದಾರೆ.

Advertisement

ಭಾರತೀಯ ರಾಜಕೀಯ ವ್ಯವಸ್ಥೆಯ ನೈತಿಕ ಅಧಃಪತನವು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮದ್ಯಪಾನಾದಿ ದುಶ್ಚಟಗಳ ವ್ಯಾಪಕತೆಗೆ ಕಾರಣವಾಗಿದೆ. ಹೆಂಡ ಹಂಚದೆ, ಆಮಿಷಗಳಿಲ್ಲದೆ ಚುನಾವಣೆಯೇ ಇಲ್ಲ ಎಂಬಂತಹ ದುಸ್ಥಿತಿ ಉಂಟಾಗಿದೆ. ಚುನಾವಣೆಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮದ್ಯ ಹಂಚುವುದಿಲ್ಲ, ಆಮಿಷ ಒಡ್ಡುವುದಿಲ್ಲ ಎನ್ನುವ ತೀರ್ಮಾನಕ್ಕೆ ಬರಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜ್ಞಾವಂತ ನಾಗರಿಕರು ಮದ್ಯ ಮತ್ತು ಇತರ ಯಾವುದೇ ಆಮಿಷಕ್ಕೆ ಬಲಿಯಾಗಬಾರದೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಮೂ. ಕೊರವಿ ಮನವಿ ಮಾಡಿದ್ದಾರೆ. ಹೆಂಡದ ಆಮಿಷವೊಡ್ಡಿ ಮತ ಪಡೆಯುವ ಪ್ರಯತ್ನ ನಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಲ್ಲಿ ತತ್‌ಕ್ಷಣ ಚುನಾವಣ ಅಧಿಕಾರಿಗಳಿಗೆ, ತಹಶೀಲ್ದಾರರಿಗೆ, ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆಯೂ ತಿಳಿಸಿದ್ದಾರೆ.

ಪಾನಮುಕ್ತರ ನವಜೀವನ ಸಮಿತಿಗಳನ್ನು ಕಾವಲು ಸಮಿತಿಯಂತೆ ಕೆಲಸ ನಿರ್ವಹಿಸಲು ತರಬೇತಿ ನೀಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರು ನಗರಗಳಲ್ಲಿ ಮದ್ಯಮುಕ್ತ ಮತದಾನ ಎಂಬ ಶೀರ್ಷಿಕೆಯಲ್ಲಿ ಬ್ಯಾನರ್‌ ಅಳವಡಿಸಿ ಜಾಗೃತಿ ಮೂಡಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next