Advertisement

18ರಿಂದ ಅಖಿಲ ಭಾರತ ಅಗ್ರಿ ಸ್ಟಾರ್ಟ್‌ ಅಪ್‌; ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧೆ

05:58 PM Oct 12, 2022 | Team Udayavani |

ಬಾಗಲಕೋಟೆ: ತೋಟಗಾರಿಕೆ ವಿವಿಯ ಉದ್ಯಾನಗಿರಿಯಲ್ಲಿ ಅ. 18 ರಿಂದ 20ರವರೆಗೆ ಮೂರು ದಿನಗಳ ಕಾಲ ಅಖಿಲ ಭಾರತ ಅಗ್ರಿ ಸ್ಟಾರ್ಟ್‌ ಅಪ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ| ಕೆ.ಎಂ.ಇಂದಿರೇಶ ಹೇಳಿದರು.

Advertisement

ನಗರದ ತೋವಿವಿಯ ಪ್ರೇಕ್ಷಾಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.18ರಂದು ಬೆಳಗ್ಗೆ 10.30ಕ್ಕೆ ಜರುಗುವ ಕಾರ್ಯಕ್ರಮವನ್ನು ಭಾರತೀಯ ಅನುಸಂಧಾನ ಕೃಷಿ ಪರಿಷತ್ತಿನ ಉಪ ಮಹಾನಿರ್ದೇಶಕ ಡಾ|ಆರ್‌ .ಸಿ.ಅಗರವಾಲ್‌ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ತೋಟಗಾರಿಕೆ ಸಚಿವ ಎನ್‌. ಮುನಿರತ್ನ, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಶಾಸಕ ವೀರಣ್ಣ ಚರಂತಿಮಠ ಭಾಗವಹಿಸಲಿದ್ದಾರೆ ಎಂದರು.

ಅ. 20ರಂದು ಮಧ್ಯಾಹ್ನ 3ಗಂಟೆಗೆ ಜರುಗುವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಹೈದರಾಬಾದ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ನೀರಜಾ ಪ್ರಭಾಕರ, ಮಹಾನಿರ್ದೇಶಕ ಡಾ|ಪಿ.ಚಂದ್ರಶೇಖರ, ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌.ಪೂಜಾರ, ಹನಮಂತ ನಿರಾಣಿ ಭಾಗವಹಿಸಲಿದ್ದಾರೆ. ಮೊಟ್ಟ ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ತೋವಿವಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

ಭಾರತೀಯ ಕೃಷಿ ಅನುಸಂಧಾನ ಪರಿಷತ್‌, ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಯೋಜನೆ, ಸಾಂಸ್ಥಿಕ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಉದ್ಯಮಶೀಲ ಸಾಮರ್ಥ್ಯ ಮತ್ತು ಉದ್ಯೋಗಾವಕಾಶ ಹೆಚ್ಚಿಸಲು ನವೀನ ಶಿಕ್ಷಣ ವಿನ್ಯಾಸಗಳು ಎಂಬ ಯೋಜನೆ ವಿಶ್ವಬ್ಯಾಂಕ್‌ನಿಂದ 657.42 ಲಕ್ಷ ರೂ.ಗಳ ಅನುದಾನದೊಂದಿಗೆ ಬಾಗಲಕೋಟೆ ತೋಟಗಾರಿಕೆ ವಿವಿಗೆ ಮಂಜೂರಾಗಿರುವುದಾಗಿ ತಿಳಿಸಿದರು.

ಅಗ್ರಿ ಸ್ಟಾರ್ಟ್‌ಅಪ್‌ಗ್ಳು ಕೃಷಿಯೇತರ ವೃತ್ತಿಪರರಿಂದ ಪ್ರಾಬಲ್ಯ ಹೊಂದಿದ್ದು, ಕೃಷಿ ಮತ್ತು ತೋಟಗಾರಿಕೆ ಪದವೀಧರರನ್ನು ತೊಡಗಿಸಿಕೊಂಡು ವಿದ್ಯಾರ್ಥಿಗಳಲ್ಲಿ ಉದ್ಯಮ ಶೀಲತಾ ಕೌಶಲ್ಯಾಭಿವೃದ್ಧಿ ಕಡೆಗೆ ಒಲವು ಮೂಡಿಸುವಂತೆ ಚಟುವಟಿಕೆ ಕೈಗೊಳ್ಳುವಂತೆ ಮಾಡುವ ಗುರಿ ಹೊಂದಲಾಗಿದೆ. ಮೂರು ದಿನಗಳ ಸಮಾವೇಶದಲ್ಲಿ ಪ್ರದರ್ಶನ ಮಳಿಗೆ ಹಾಗೂ ಕೃಷಿ ಸ್ಟಾರ್ಟ್‌ಅಪ್‌ಗ್ಳಿಗೆ ಫಾರ್ಮ್ ಇನ್‌ ಫುಟ್‌ಗಳು-ಅವಕಾಶಗಳು ಮತ್ತು ಸವಾಲುಗಳು, ಹೊಸ ಯುಗದ ಕೃಷಿಕರಿಗೆ ಹೈಟೆಕ್‌ ಕೃಷಿ, ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ, ತೋಟದಿಂದ ತಟ್ಟಿಗೆ, ಯಾಂತ್ರೀಕರಣ ಮತ್ತು ಸ್ವಯಂ ಚಾಲಿತ ಯಾಂತ್ರಿಕ ವ್ಯವಸ್ಥೆ ಹಾಗೂ ಅಗ್ರಿ-ಸ್ಟಾರ್ಟ್‌ಅಪ್‌ಗ್ಳಿಗಾಗಿ ಮಾರುಕಟ್ಟೆ ಸಂಪರ್ಕಗಳು ಮತ್ತು ನೆಟ್‌ವರ್ಕಿಂಗ್‌ ಅಂಶಗಳು ಮತ್ತು ಅನುದಾನ ಕುರಿತು 6 ತಾಂತ್ರಿಕ ಅಧಿವೇಶನಗಳು ಒಳಗೊಂಡಿವೆ ಎಂದರು.

Advertisement

ಹ್ಯಾಕ್‌ಥಾನ್‌ ಸಹ ಆಯೋಜಿಸಿದ್ದು, ಮೂರು ವಿಭಿನ್ನ ವಿಷಯಗಳ ಅಡಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಡಿಜಿಟಲ್‌ ತಂತ್ರಜ್ಞಾನಗಳ ಅಳವಡಿಕೆ ಹೆಚ್ಚಿಸುವ ತಂತ್ರಗಳು ಮತ್ತು ವಿಧಾನಗಳು, ಕ್ರಾಪ್‌ ಮಾಡೆಲಿಂಗ್‌ ಮತ್ತು ಮಾರುಕಟ್ಟೆ ಮುನ್ಸೂಚನೆ ಥೀಮ್‌-3ರಲ್ಲಿ ಎ1 ತಂತ್ರಜ್ಞಾನಗಳ ಅಪ್ಲಿಕೇಶನ್‌, ವರ್ಧಿತ ಬೆಳೆ ಬೆಳವಣಿಗೆಗೆ ಸಸ್ಯ ಆಧಾರಿತ ಉತ್ಪನ್ನಗಳ ಅಭಿವೃದ್ಧಿ, ಫಾರ್ಮ್ ಟು ಪೋರ್ಕ್‌ ವಿಷಯಗಳಡಿ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಪ್ರಥಮ 25 ಸಾವಿರ ರೂ., ದ್ವಿತೀಯ 15 ಸಾವಿರ ರೂ., ತೃತೀಯ 10 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತಿದೆ ಎಂದರು.

ತೋವಿವಿಯ ಪ್ರಧಾನ ಸಂಶೋಧಕ ಡಾ|ಆರ್‌. ಕೆ. ಮೇಸ್ತಾ ಮಾತನಾಡಿ, ಈ ಸಮಾವೇಶದ ಉದ್ದೇಶ ವಿಶ್ವವಿದ್ಯಾಲಯಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ರಾಜ್ಯ ಸರಕಾರದಿಂದ ಶೇ.20 ಅನುದಾನದ ಸಹಕಾರ ದೊರೆಯಲಿದೆ. ಅಮೆರಿಕ, ಪೋಲಂಡ್‌ ಸೇರಿದಂತೆ ಇತರೆ ದೇಶದಲ್ಲಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕೊಡಿಸಲಾಗುತ್ತಿದೆ. ಬೋಧಕರಿಗೂ ಸಹ ತರಬೇತಿಗಾಗಿ ವಿದೇಶಕ್ಕೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ತೋಟಗಾರಿಕೆ ರಿಜಿಸ್ಟರ್‌ ಡಾ|ಟಿ.ಬಿ. ಅಲ್ಲೋಳ್ಳಿ, ಸಹ ಪ್ರಧಾನ ಸಂಶೋಧಕ ಡಾ|ಐ.ಬಿ.ಬಿರಾದಾರ, ಡಾ|ವೆಂಕಟೇಶಲು, ಸಂವಹಣಾ ಕೇಂದ್ರದ ಡಾ|ಎಸ್‌. ಶಶಿಕುಮಾರ, ತೋವಿವಿಯ ಉಪಹಣಕಾಸು ನಿಯಂತ್ರಣಾಧಿಕಾರಿ ಡಾ| ಡಿ.ಎಲ್‌.ಸುತಗಟ್ಟಿ, ಡಾ|ಐ.ಬಿ. ಬಿರಾದಾರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next