Advertisement

ಅಂತರಿಕ್ಷಕ್ಕೆ ಟಾರ್ಚು ಬಿಟ್ಟು ಏಲಿಯನ್‌ ಹುಡುಕುವವರು!

03:45 AM May 04, 2017 | |

ರಾಷ್ಟ್ರೀಯ ಹಬ್ಬಗಳಂದು ದೇಶದ ಪ್ರಧಾನಮಂತ್ರಿ ಅಥವಾ ಅಧ್ಯಕ್ಷರು ವಿದೇಶಿ ಗಣ್ಯರನ್ನು ತಮ್ಮ ದೇಶಕ್ಕೆ ಆಹ್ವಾನಿಸುವುದು ವಾಡಿಕೆ. ಈಗ ಖಗೋಳ ವಿಜ್ಞಾನಿಗಳು ಈ ಕೆಲಸದಲ್ಲಿ ನಿರತರಾಗಿದ್ದಾರೆ. ವಿಜ್ಞಾನಿಗಳು ಸಂಶೋಧನೆಯಲ್ಲಿ ನಿರತರಾಗುವುದು ಬಿಟ್ಟು ಸ್ವಾಗತಕಾರಿಣಿಯರ ಕೆಲಸ ಯಾವಾಗ ಶುರು ಹಚ್ಚಿಕೊಂಡರು ಎಂದು ಅಚ್ಚರಿ ಪಡುತ್ತಿದ್ದೀರಾ? ಅಂದ ಹಾಗೆ ವಿಜ್ಞಾನಿಗಳು ಆಹ್ವಾನಿಸುತ್ತಿರುವುದು ಯಾವುದೋ ದೇಶದ ಪ್ರಧಾನಿ, ಅಧ್ಯಕ್ಷ ಅಥವಾ ಇನ್ಯಾರೋ ಅಧಿಕಾರಿಗಳನ್ನಲ್ಲ. ಅನ್ಯಗ್ರಹ ಜೀವಿಗಳನ್ನು!

Advertisement

ಸುಮಾರು ಐವತ್ತು ವರ್ಷಗಳಿಂದ ಖಗೋಳ ವಿಜ್ಞಾನಿಗಳು ಅಂತರಿಕ್ಷದಲ್ಲಿ ಇರಬಹುದಾದ ಜೀವಜಗತ್ತಿನ ಹುಡುಕಾಟದಲ್ಲಿ ತೊಡಗಿದ್ದಾರೆ. ಇಷ್ಟೊಂದು ಬೃಹತ್ತಾದ ವಿಶ್ವದಲ್ಲಿ ಚಿಕ್ಕ ಅಣುವಿನಂತಿರುವ ಭೂಮಿಯ ಮೇಲೆಯೇ ಇಷ್ಟೊಂದು ಬಗೆಯಲ್ಲಿ ಜೀವಜಾಲ ವಿಕಸನಗೊಂಡಿರಬೇಕಾದರೆ, ವಿಶ್ವದ ಮೂಲೆಯಲ್ಲೆಲ್ಲೋ ಜೀವ ಉಗಮವಾಗಿರಲಾರದೇ ಎನ್ನುವ ಸಂಶಯ ಮತ್ತು ವಿಶ್ವಾಸ ವಿಜ್ಞಾನಿಗಳನ್ನು ಅನೇಕ ವರ್ಷಗಳಿಂದ ಕಾಡುತ್ತಿದೆ. ಈ ಕುರಿತು ಹುಡುಕಾಟ ನಡೆಸುವ ವಿಜ್ಞಾನಿಗಳ ಒಂದು ತಂಡವೇ ಇದೆ. ಅದರ ಹೆಸರು ಸೇಟಿ(SETI- Search For Extra Terrestrial life).  

ಏಲಿಯನ್‌ ಬೇಟೆ ಹೇಗೆ?
ಕತ್ತಲ ಕೋಣೆಯಲ್ಲಿ ಟಾರ್ಚು ಹಿಡಿದು ಯಾವುದೋ ವಸ್ತುವನ್ನು ಹುಡುಕಿದಂತಲ್ಲ, ಅನ್ಯಗ್ರಹ ಜೀವಿಗಳ ಹುಡುಕಾಟ. ಖಗೋಳ ವಿಜ್ಞಾನಿಗಳು ಅಂತರಿಕ್ಷದಿಂದ ತೂರಿ ಬರುವ ಶಬ್ದ ತರಂಗ, ರೇಡಿಯೊ ತರಂಗಗಳನ್ನು ಜಾಲಾಡಿ ಮಾಹಿತಿ ಕಲೆ ಹಾಕುತ್ತಿವೆ. ಬಹಳಷ್ಟು ಸಲ ದೂರದ ನಕ್ಷತ್ರಪುಂಜಗಳಿಂದ ಹೊರಟ ರೇಡಿಯೊ ತರಂಗಗಳು ಬಲೆಗೆ ಬಿದ್ದಾಗ, ಅನ್ಯಗ್ರಹಜೀವಿಗಳು ಭೂಮಿಯನ್ನು ಸಂಪರ್ಕಿಸುತ್ತಿವೆ ಎಂದು ತಪ್ಪಾಗಿ ಅರ್ಥೈಸಿ ಬೇಸ್ತು ಬಿದ್ದಿದ್ದೂ ಇದೆ. ಇವರು ಅಂತರಿಕ್ಷದಲ್ಲಿ ಅತ್ತಲಿಂದ ಬರಬಹುದಾದ ಸಂಕೇತಗಳನ್ನು ನಿರೀಕ್ಷಿಸಿ ಕುಳಿತಿಲ್ಲ.  ಸಂಕೇತಗಳನ್ನು ಅಂತರಿಕ್ಷಕ್ಕೆ ಕಳಿಸುತ್ತಲೂ ಇದ್ದಾರೆ.

ಭಯವೇತಕೆ?
ಕೆಲ ವಿಜ್ಞಾನಿಗಳು ಅನ್ಯಗ್ರಹ ಜೀವಿಗಳ ಹುಡುಕಾಟದ ಬಗ್ಗೆ ಆಕ್ಷೇಪವೆತ್ತುತ್ತಾರೆ. ನಾವು ಮನುಷ್ಯರು ಭೂಮಿ ಮೇಲೆ ಹೇಗೋ ನೆಮ್ಮದಿಯಾಗಿ ವಾಸಿಸುತ್ತಿದ್ದೇವೆ. ಭೂಮಿ ಮತ್ತದರ ವಾತಾವರಣ ಇವಾಗಿನ ಸ್ಥಿತಿ ತಲುಪುವುದಕ್ಕೆ, ರೂಪಾಂತರಗೊಳ್ಳುವುದಕ್ಕೆ ಅದೆಷ್ಟೋ ಕೋಟಿ ಮಿಲಿಯ ವರ್ಷಗಳೇ ಹಿಡಿದಿವೆ. ಅಂಥದ್ದರಲ್ಲಿ ನಮ್ಮ ಅಸ್ತಿತ್ವವನ್ನು ಬ್ರಹ್ಮಾಂಡದಾಚೆ ಜಾಹೀರುಗೊಳಿಸುವ ಅಗತ್ಯವೇನಿದೆ ಎನ್ನುವುದು ಅವರ ಪ್ರಶ್ನೆ. ಅದು ಅವರ ಭಯವೂ ಹೌದು. ಒಂದು ವೇಳೆ ನಮ್ಮ ಸಂಕೇತಗಳನ್ನು ಅನುಸರಿಸಿ ಏಲಿಯನ್ನರು ಬಂದಿದ್ದೇ ಆದರೆ ಅವರು ಖಂಡಿತಾ ನಮಗಿಂತ ಮುಂದುವರಿದವರಾಗಿರುತ್ತಾರೆ, ತಮಗಿಂತ ಎಷ್ಟೋ ಪಟ್ಟು ಸುಧಾರಿಸಿದ ತಂತ್ರಜ್ಞಾನವನ್ನು ಹೊಂದಿರುತ್ತಾರೆ. ಮತ್ತು ಅವರು ಒಳ್ಳೆಯವರಾಗಿರುತ್ತಾರೆ ಎಂಬುದಕ್ಕೆ ಯಾವ ಖಾತರಿಯೂ ಇಲ್ಲ. ಇವೇ ಮುಂತಾದ ವಾದಗಳನ್ನು ಕೆಲವರು ಮುಂದಿಡುತ್ತಾರೆ.

ಏಲಿಯನ್ನರಿಗೆ ಹೆಲೋ ಹೇಳಿ
ರೇಡಿಯೊ ಟೆಲಿಸ್ಕೋಪ್‌ಗ್ಳು ಅಕಾಶಕಾಯಗಳ ವೀಕ್ಷಣೆಗೆ ರೇಡಿಯೊ ತರಂಗಗಳನ್ನು ಬಳಸುತ್ತವೆ. ಇದೇ ತಂತ್ರಜ್ಞಾನ ಅಂತರಿಕ್ಷಕ್ಕೆ ಭೂಮಿಯ ಸಂಕೇತ ಕಳಿಸುವಲ್ಲಿ ಬಳಕೆಯಾಗುತ್ತಿದೆ. ಅಂಥ ಒಂದು ಬೃಹತ್‌ ರೇಡಿಯೊ ಟೆಲಿಸ್ಕೋಪು ಆರ್ಸಿಬೊ. ಇದು ಪೊರ್ಟೊರಿಕೋದಲ್ಲಿದೆ. ಸ್ವಾರಸ್ಯಕರ ವಿಷಯವೆಂದರೆ 1972ರಲ್ಲಿ ಜರ್ಮನ್‌ ಒಲಿಂಪಿಕ್ಸ್‌ ನಡೆದ ಸಂದರ್ಭದಲ್ಲಿ ಕಾರ್ಯಕ್ರಮದ ಬಿತ್ತರಗೊಳ್ಳುತ್ತಿದ್ದಂತೆ, ಅದೇ ಸಿಗ್ನಲ್ಲನ್ನು ಮೊತ್ತ ಮೊದಲ ಬಾರಿಗೆ ಅಂತರಿಕ್ಷಕ್ಕೆ ಕಳಿಸಲಾಗಿತ್ತು. ಈ ಸಂಕೇತಗಳು ಈಗಲೂ ಅಂತರಿಕ್ಷದಲ್ಲಿ ಚಲಿಸುತ್ತಿವೆ. ಮುಂದೆಂದಾದರೂ ಯಾವುಓ ಗ್ರಹದ ಜೀವಿಗಳಿಗೆ ಇದು ತಾಕಬಹುದು!

Advertisement

ಏಲಿಯನ್ನರ ಹುಡುಕಾಟವೇಕೆ?
ಸದ್ಯದ ಮಟ್ಟಿಗೆ ಅನ್ಯಗ್ರಹ ಜೀವಿಗಳ ಕುರಿತು ನಮಗಿರುವ ಮಾಹಿತಿ ಸೊನ್ನೆಯೆಂದೇ ಹೇಳಬೇಕು. ಏನಿದ್ದರೂ ಕತೆ, ಕಾದಂಬರಿ ಮತ್ತು ಸಿನಿಮಾಗಳಿಗಷ್ಟೇ ನಮ್ಮ ಜ್ಞಾನ ಸೀಮಿತ. ನಾವಂದುಕೊಂಡಿದ್ದೇ ನಿಜವಾಗಬೇಕೆಂದೇನಿಲ್ಲವಲ್ಲ. ಅಷ್ಟಕ್ಕೂ ಅವೆಲ್ಲವೂ ಕಪೋಲಕಲ್ಪಿತವಲ್ಲವೇ? ಇವೆಲ್ಲದರ ನಡುವೆ ದೈನಂದಿನ ಜಂಜಡದ ನಡುವೆ, ದೇಶ ದೇಶಗಳು ಎದುರಿಸುತ್ತಿರುವ ನಾನಾ ಸಮಸ್ಯೆಗಳ ನಡುವೆ ಏಲಿಯನ್ನರ ಹುಡುಕಾಟ ಏಕೆ ಎಂಬುದುದು ಪ್ರಸ್ತುತವೆನ್ನಿಸುವ ಪ್ರಶ್ನೆ. ಮಾನವ ನಾಗರಿಕತೆಯ ಇತಿಹಾಸದತ್ತ ಕಣ್ಣು ಹಾಯಿಸಿದರೆ ನಮಗೆ ತಿಳಿದುಬರುವ ಗಮನಾರ್ಹ ಸಂಗತಿಯೆಂದರೆ ಮನುಷ್ಯ ತನಗೆ ಅಪರಿಚಿತವೆನಿಸುವ ಭೂಮಿ ಮತ್ತು ಜನರನ್ನು ಭೇಟಿ ಮಾಡಿ ಅವರ ಸಂಸ್ಕೃತಿಯನ್ನು ತಿಳಿದುಕೊಳ್ಳುವ ಕುತೂಹಲವನ್ನು ವ್ಯಕ್ತಪಡಿಸಿದ್ದಾನೆ. ಇದರಿಂದ ತನಗೆ ಗೊತ್ತಿರುವುದನ್ನು ಅವರಿಗೆ ಹೇಳಿಕೊಟ್ಟು, ಅವರಿಂದ ತಾನೂ ಹೊಸದೇದನ್ನೋ ಕಲಿಯುತ್ತಾ ತನ್ನ ಬದುಕನ್ನು ಉತ್ತಮಪಡಿಸಿಕೊಳ್ಳುವುದು ಅವನ ಉದ್ದೇಶ. ಇದೇ ಉದ್ದೇಶ ಏಲಿಯನ್‌ ಹುಡುಕಾಟದ್ದೂ ಕೂಡಾ! 

 ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next