Advertisement

ಬೆಲೆ ಬಾಳುವ ಜೀವನಕ್ಕೆ ಮದ್ಯ, ಮಾದಕ ವ್ಯಸನ ಮಾರಕ

01:57 AM Nov 16, 2021 | Team Udayavani |

ಬೆಳ್ತಂಗಡಿ: ಶ್ರೀಮಂತಿಕೆಯ ವ್ಯಾಖ್ಯಾನ, ದುಡ್ಡು, ಐಶ್ವರ್ಯಗಳು ಆಸ್ತಿ ಅಲ್ಲ. ಸುಖ, ಸಂತೋಷ, ನೆಮ್ಮದಿ, ಆರೋಗ್ಯವಾಗಿದೆ. ಅಮೂಲ್ಯವಾದ ಬೆಲೆ ಬಾಳುವ ನಮ್ಮ ಜೀವನಕ್ಕೆ ಮಾದಕ ಮತ್ತು ಮದ್ಯವ್ಯಸನಗಳು ಮಾರಕವಾಗಿರುವುದರಿಂದ ವ್ಯಸನದಿಂದ ದೂರವಿದ್ದು ದೃಢ ಸಂಕಲ್ಪ ದೊಂದಿಗೆ ಅಮೂಲ್ಯವಾದ ಬದುಕನ್ನು ರೂಪಿಸಿಕೊಳ್ಳಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸಂದೇಶ ನೀಡಿದ್ದಾರೆ.

Advertisement

ಲಾೖಲ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ದಾಖಲಾಗಿ ಮದ್ಯ ವರ್ಜನದ ಚಿಕಿತ್ಸೆ ಪಡೆದ 164ನೇ ವಿಶೇಷ ಶಿಬಿರದ 79 ಮಂದಿ ಶಿಬಿರಾರ್ಥಿ ಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬುದ್ಧಿ ಹಾಳಾದರೆ ಒಂದೇ ಕ್ಷಣದಲ್ಲಿ ಸೋಲನ್ನು ಅನುಭವಿಸಬಹುದು. ಆದರೆ ಮಾದಕ ವ್ಯಸನ ಬೆಂಕಿ ಕಡ್ಡಿಯಂತೆ. ಇದರ ಬಳಕೆಯಿಂದ ಕುಟುಂಬ ಜೀವನವೇ ಬೆಂಕಿ ಗಾಹುತಿಯಾಗುವ ಅಪಾಯವಿದೆ. ಪ್ರಾಣಿ ಪಕ್ಷಿಗಳು ಸತ್ತ ನಂತರವೂ ಬೆಲೆ ಬಾಳುತ್ತವೆ. ಆದರೆ ಮನುಷ್ಯನಿಗೆ ಬದುಕಿರುವಾಗ ಮಾತ್ರ ಬೆಲೆಯಿದೆ. ಹಾಗಾಗಿ ಚಂಚಲವಾಗಿರುವ ಮನಸ್ಸು, ಬುದ್ಧಿಯ ಹತೋಟಿ ಮತ್ತು ನಿರ್ವಹಣೆ ಮಾಡುವುದೇ ಬಹಳ ಪ್ರಾಮುಖ್ಯವಾದ ವಿಷಯ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್‌. ಮಂಜುನಾಥ್‌ ಅವರು, ಕುಟುಂಬದ ದಿನದ ಅಂಗವಾಗಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿ ದೇವರ ಪ್ರೀತಿ, ಕೌಟುಂಬಿಕ ಸಂಬಂಧ, ಹಿರಿಯರಿಗೆ ಗೌರವ ಮತ್ತು ಸಾಮಾಜಿಕ ಜೀವನದ ಕುರಿತು ಮಾಹಿತಿ ನೀಡಿದರು.

ಇದನ್ನೂ ಓದಿ:ದಾಂಪತ್ಯಕ್ಕೆ ಕಾಲಿಟ್ಟ ರಾಜ್‌ಕುಮಾರ್‌ ರಾವ್‌-ಪತ್ರಲೇಖಾ

Advertisement

ಡಾ| ಹೆಗ್ಗಡೆ ವಿಶ್ವಕ್ಕೆ ಮಾದರಿ

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಹನುಮ ನರಸಯ್ಯ ಮಾತನಾಡಿ, ಮದ್ಯವರ್ಜನ ಶಿಬಿರಗಳ ಮೂಲಕ ರಾಜ್ಯವ್ಯಾಪಿ ಅತೀ ಹೆಚ್ಚು ವ್ಯಸನಿಗಳನ್ನು ಗುರುತಿಸಿ ಅವರನ್ನು ಸರಿದಾರಿಗೆ ತರುವಲ್ಲಿ ಪ್ರಯತ್ನಿಸುತ್ತಿರುವ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಯತ್ನ ಅನುಕರಣೀಯ ವಾಗಿದೆ. ಮಠ ಮಂದಿರಗಳ ಮೂಲಕ ಜಾಗೃತಿ ಕಾರ್ಯಗಳು ಹೆಚ್ಚು ಹೆಚ್ಚು ನಡೆದಾಗ ಅವುಗಳನ್ನು ಯಶಸ್ವಿಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು.

ನಿವೃತ್ತ ನೋಂದವಣಾಧಿಕಾರಿ ರಂಗಸ್ವಾಮಿ, ನಿವೃತ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಶಿವಕುಮಾರ್‌, ಗಾಂಧಿ ಭವನ ಬೆಂಗಳೂರಿನ ನಂದೀಶ್‌, ಪುತ್ತೂರಿನ ಜಗದೀಶ್‌ ನೆಲ್ಲಿಕಟ್ಟೆ, ಕಾಟಿಪಳ್ಳದ ಮೈಮುನಾ ಫೌಂಡೇಶನ್‌ ಅಧ್ಯಕ್ಷ ಆಸಿಫ್‌, ಬೆಳ್ತಂಗಡಿಯ ಸಮಾಜಸೇವಕ ಜಲೀಲ್‌ ಉಪಸ್ಥಿತರಿದ್ದರು.

ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್‌ ವಿ. ಪಾçಸ್‌ ಶಿಬಿರದ ನೇತೃತ್ವ ವಹಿಸಿದ್ದು, ಯೋಜನಾಧಿಕಾರಿ ಮೋಹನ್‌, ಶಿಬಿರಾಧಿಕಾರಿ ನಾಗರಾಜ್‌, ಆರೋಗ್ಯ ಸಹಾಯಕಿ ರಂಜಿತಾ ಸಹಕರಿಸಿದ್ದಾರೆ.

ನ. 22: ವಿಶೇಷ ಶಿಬಿರ
ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ಮುಂದಿನ ವಿಶೇಷ ಶಿಬಿರವು ನ. 22ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next