Advertisement

ಆಲಮಟ್ಟಿಗೆ ಮಹಾಪೂರ ನಿರ್ವಹಣೆ ಉನ್ನತ ಸಮಿತಿ ಭೇಟಿ

04:00 PM Feb 09, 2020 | Naveen |

ಆಲಮಟ್ಟಿ: ಮಹಾರಾಷ್ಟ್ರ ರಾಜ್ಯ ನೇಮಿಸಿರುವ ಮಹಾಪೂರ ನಿರ್ವಹಣೆ ಉನ್ನತ ಮಟ್ಟದ ಸಮಿತಿ ಆಲಮಟ್ಟಿಯ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಿತು.

Advertisement

ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ನಂದಕುಮಾರ ವಡ್ನೇರೆ ಅಧ್ಯಕ್ಷತೆಯಲ್ಲಿ ಯೋಜನೆ ಹಾಗೂ ಸಹಕಾರ ಕಾರ್ಯದರ್ಶಿ ಸಂಜಯ ಘನೇಕರ, ಕಾಡಾ ಕಾರ್ಯದರ್ಶಿ ಆರ್‌.ಆರ್‌. ಪವಾರ, ತಾಂತ್ರಿಕ ಸದಸ್ಯ ವಿ.ಎಂ. ಕುಲಕರ್ಣಿ, ನಿವೃತ್ತ ಉಪನ್ಯಾಸಕ ಪ್ರದೀಪ ಪುರಂದರೆ, ಎಂ.ಆರ್‌.ಎಸ್‌.ಎ.ಸಿಯ ವಿವೇಕಾನಂದ ಘಾರೆ, ಮುಖ್ಯ ಅಭಿಯಂತರ ಅತುಲ್‌ ಕಪೋಲೆ ಹಾಗೂ ಇನ್ನೊಬ್ಬ ಮುಖ್ಯ ಅಭಿಯಂತರ ಆರ್‌.ಡಿ. ಮೋಹಿತೆ, ಕೋಯ್ನಾ ಜಲಾಶಯದ ಅಧೀಕ್ಷಕ ಅಭಿಯಂತರ ಎಸ್‌. ಎಲ್‌. ಡಾಯ್‌ಪೋಡೆ, ಸಾಂಗ್ಲಿ ನೀರಾವರಿ ಯೋಜನೆ ಅಧೀಕ್ಷಕ ಅಭಿಯಂತರ ಎಚ್‌.ವಿ. ಗುನಾಳೆ, ಕಾರ್ಯಪಾಲಕ ಅಭಿಯಂತರ ಎನ್‌. ಎಸ್‌. ಕರೆ ಹಾಗೂ ಧೈರ್ಯಶೀಲ ಪವಾರ ಅವರನ್ನು ಸಮಿತಿ ಸದಸ್ಯರುಗಳಾಗಿ ನೇಮಕ ಮಾಡಿ ಮಹಾಪೂರ ಅಧ್ಯಯನ ಸಮಿತಿ ರಚಿಸಿ ಆಲಮಟ್ಟಿಗೆ ತಂಡವನ್ನು ಕಳಿಸಿದೆ.

ಜುಲೈ-ಆಗಸ್ಟ್‌ 2019ರಲ್ಲಿ ಕೃಷ್ಣಾ ನದಿಗೆ ಬಂದಿದ್ದ ಮಹಾಪೂರದ ವೇಳೆ ಹಾನಿಯಾದ ಕುರಿತು ಸಮಿತಿ ಅಣೆಕಟ್ಟು ವೃತ್ತ ಅಧೀಕ್ಷಕ ಅಭಿಯಂತರರ ಕಚೇರಿಯಲ್ಲಿ ಸಭೆ ನಡೆಸಿ ಮಾಹಿತಿ ಪಡೆಯಿತು. ಸಭೆ ನಂತರ ಪ್ರವಾಸಿಮಂದಿರದಲ್ಲಿ ಮಾಧ್ಯಮದವರು ತಂಡದ ನೇತೃತ್ವ ವಹಿಸಿದ್ದ ನಂದಕುಮಾರ ಅವರನ್ನು ಮಾತನಾಡಿಸಿದಾಗ, 2019ರಲ್ಲಿ ಕೃಷ್ಣೆಗೆ ಮಹಾಪೂರ ಬಂದಿರುವ ವೇಳೆಯಲ್ಲಿ ರಾಜಾಪುರ ಬ್ಯಾರೇಜಿಗೆ ಸಮೀಪ ಸೇರಿದಂತೆ ಕೃಷ್ಣೆ ಪಕ್ಕದ ಗ್ರಾಮ, ಪಟ್ಟಣ, ನಗರಗಳಲ್ಲಿ ಅಪಾರ ಹಾನಿಯಾಗಿತ್ತು. ಕೃಷ್ಣಾ ನದಿಗೆ ಆಗಾಗ ಮಹಾಪೂರ ಬರುವುದು ವಾಡಿಕೆಯಾಗಿದೆ. ಈ ಹಿಂದೆಯೂ ಹಲವಾರು ಬಾರಿ ಮಹಾಪೂರ ಬಂದು ನೆರೆ ಹಾವಳಿಯಿಂದ ಕೃಷ್ಣೆಯ ದಡದಲ್ಲಿ ಸಂಭವಿಸಿದೆ, ಈಗ ಆಲಮಟ್ಟಿಯಲ್ಲಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ಹಿನ್ನೀರಿನಿಂದ ಬಾಧಿತಗೊಂಡಿವೆಯೇ? ಎನ್ನುವ ಪ್ರಶ್ನೆ ಮೂಡುವಂತಾಗಿತ್ತು. ಈ ಕುರಿತು ನಡೆದ ಸಭೆಯಲ್ಲಿ ಆಲಮಟ್ಟಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಲಾಶಯದ ಮುಖ್ಯ ಅಭಿಯಂತರರು ಹಾಗೂ ಅಧೀಕ್ಷಕ ಅಭಿಯಂತರರು ನೆರೆ ಹಾವಳಿ ವೇಳೆ ಕೈಗೊಂಡ ನಿರ್ಣಯಗಳ ಕಡತಗಳನ್ನು ಹಾಜರುಪಡಿಸಿದ್ದಲ್ಲದೇ ಮಹಾರಾಷ್ಟ್ರದಲ್ಲಿ ಹಾನಿಯಾಗಿರುವದಕ್ಕೆ ಶಾಸ್ತ್ರಿ ಜಲಾಶಯ ಹಿನ್ನೀರಿನಿಂದಲ್ಲ ಅದು ಕೃಷ್ಣೆ ಭಾಗವಾಗಿರುವ ದೂದಗಂಗಾ ನದಿಗಳು ಸೇರಿ ಕೃಷ್ಣೆಯಿಂದ ಎನ್ನುವದನ್ನು ಮನವರಿಕೆ ಮಾಡಿದ್ದಾರೆ ಎಂದರು.

ನೀರು ರಾಷ್ಟ್ರೀಯ ಸಂಪತ್ತು. ಇದರ ಬಳಕೆ ಎಲ್ಲ ರಾಜ್ಯಗಳಿಗೂ ಸಂಬಂ ಧಿಸಿದ್ದಾಗಿದೆ. ಇದರಿಂದ ನೆರೆ ಹಾಗೂ ಬರಗಾಲದ ವೇಳೆಯಲ್ಲಿ ನೀರು ನಿರ್ವಹಣೆ ಬಗ್ಗೆ ವಾಸ್ತವಾಂಶಗಳ ಬಗ್ಗೆ ಕೋಯ್ನಾ, ಆಲಮಟ್ಟಿಯ ಶಾಸ್ತ್ರೀ, ನಾರಾಯಣಪುರದ ಬಸವಸಾಗರ ವ್ಯಾಪ್ತಿ ಅಧಿ ಕಾರಿಗಳ ನಡುವೆ ಮಾಹಿತಿ ವಿನಿಮಯದ ಸಹಕಾರ ಅತಿ ಮುಖ್ಯವಾಗಿದೆ ಎಂದು ಹೇಳಿದರು.

ನಂತರ ಮಾತನಾಡಿದ ಮುಖ್ಯ ಅಭಿಯಂತರ ಆರ್‌.ಪಿ. ಕುಲಕರ್ಣಿ, ಜುಲೈ-ಆಗಸ್ಟ್‌ ತಿಂಗಳಿನಲ್ಲಿ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿದಿರುವುದರಿಂದ ಕೃಷ್ಣೆ ಹಾಗೂ ಅದರ ಉಪ ನದಿಗಳು ವ್ಯಾಪಕವಾಗಿ ತುಂಬಿ ಹರಿದಿದ್ದರಿಂದ ನೆರೆ ಹಾವಳಿಯುಂಟಾಗಿತ್ತು.

Advertisement

ಆಲಮಟ್ಟಿಗೆ ಎಷ್ಟು ನೀರು ಹರಿದು ಬಂದಿತ್ತು ಅದನ್ನು ಜಲಾಶಯದಿಂದ ಎಷ್ಟು ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡಲಾಗಿತ್ತು ಎನ್ನುವದರ ಬಗ್ಗೆ ಸಮಗ್ರ ಅಂಕಿ ಅಂಶಗಳನ್ನು ಸಮಿತಿ ಮುಂದಿಡಲಾಯಿತು ಎಂದರು. ಇನ್ನು ಆಲಮಟ್ಟಿ ಮೇಲ್ಭಾಗದಲ್ಲಿ ಕೋಯ್ನಾ ಜಲಾಶಯ ಹಾಗೂ ಕೆಳ ಭಾಗದಲ್ಲಿ ನಾರಾಯಣಪುರ ಜಲಾಶಯವಿದೆ. ಈ ಮೂರು ಜಲಾಶಯಗಳ ಮಧ್ಯೆ ಸಹಕಾರ ಅತಿ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿರುವ ನೀರಿನ ಸಂಗ್ರಹ, ಒಳಹರಿವು ಹಾಗೂ ಹೊರ ಹರಿವಿನ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಲಭಿಸುವಂತಾಗಬೇಕು ಎಂದು ಚರ್ಚಿಸಲಾಗಿದೆ ಎಂದು ಹೇಳಿದರು.

ಈ ವೇಳೆಯಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ ತಂಡದ ಸದಸ್ಯರುಗಳು ಹಾಗೂ ಆಲಮಟ್ಟಿ ಅಣೆಕಟ್ಟು ವೃತ್ತ ಅಧೀಕ್ಷಕ ಅಭಿಯಂತರ ಡಿ.ಬಸವರಾಜು ಸೇರಿದಂತೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next