Advertisement

ಇನ್ನೂ ಸ್ಥಳಾಂತರವಾಗದ 9 ಕಚೇರಿಗಳು

10:44 AM Apr 27, 2019 | Team Udayavani |

ಆಲಮಟ್ಟಿ: ರಾಜ್ಯದ ರಾಜಧಾನಿಯಿಂದ ಉತ್ತರ ಕರ್ನಾಟಕ ಭಾಗಕ್ಕೆ ಕೆಲ ಇಲಾಖೆಗಳ ಕೇಂದ್ರ ಕಚೇರಿಗಳನ್ನು ವರ್ಗಾಯಿಸಿದ್ದರೂ ಕೂಡ ಉತ್ತರ ಕರ್ನಾಟಕಕ್ಕೆ ಬಾರದೇ ಬೆಂಗಳೂರಿನಲ್ಲಿಯೇ ಮುಂದುವರಿಯುತ್ತಿರುವೆ!

Advertisement

ಸಮಗ್ರ ಅಭಿವೃದ್ಧಿಗಾಗಿ ಸಿಎಂ ಕುಮಾರಸ್ವಾಮಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ 9 ಕಚೇರಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಸೂಚಿಸಿದ್ದರೂ ಇನ್ನೂ ಅನುಷ್ಠಾನಗೊಂಡಿಲ್ಲ. ಬೆಂಗಳೂರಿನಲ್ಲಿರುವ ಜಲ ಸಂಪನ್ಮೂಲ ಇಲಾಖೆ ವ್ಯಾಪ್ತಿಯ ಕೃಷ್ಣಾಭಾಗ್ಯ ಜಲ ನಿಗಮದ ಆಡಳಿತ ಕಚೇರಿ ಕೇಂದ್ರ ಸ್ಥಾನವಾಗಿದ್ದ ಆಲಮಟ್ಟಿಗೆ ನೋಂದಾಯಿತ ಕಚೇರಿಯಿಂದ ಆಡಳಿತ ಕಚೇರಿ ಆಲಮಟ್ಟಿಗೆ ಹಾಗೂ ನೀರಾವರಿ ನಿಗಮವನ್ನು ದಾವಣಗೆರೆಗೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ವಿದ್ಯುತ್‌ ಮಗ್ಗಗಳ ಅಭಿವೃದ್ಧಿ ನಿಗಮ) ಹಾಗೂ ಸಕ್ಕರೆ ನಿರ್ದೇಶಕರು ಮತ್ತು ಕಬ್ಬು ಅಭಿವೃದ್ಧಿ ಆಯುಕ್ತರ ಕೇಂದ್ರ ಕಚೇರಿ. ನಗರಾಭಿವೃದ್ಧಿ ಇಲಾಖೆಯ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯನ್ನು ವಿಭಜಿಸಿ ಉತ್ತರ ಕರ್ನಾಟಕದ ಹುಬ್ಬಳ್ಳಿಗೆ ಪ್ರತ್ಯೇಕವಾಗಿ ಸ್ಥಾಪಿಸುವುದು ಹಾಗೂ ಮೈಸೂರಿನಲ್ಲಿದ್ದ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರಾ ಇಲಾಖೆಯನ್ನು ಹಂಪಿಗೆ ಹಾಗೂ ಕಾನೂನು ಇಲಾಖೆಯ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರ ಪೈಕಿ ಒಬ್ಬ ಸದಸ್ಯರ ಕಚೇರಿಯನ್ನು ಧಾರವಾಡಕ್ಕೆ ವರ್ಗಾಯಿಸುವಂತೆ ಸೂಚಿಸಲಾಗಿತ್ತು.

ಬೆಂಗಳೂರಿನಲ್ಲಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (ಸ್ಪಂದನ) ಇಲಾಖೆಯ ರಾಜ್ಯ ಮಾಹಿತಿ ಆಯೋಗದ ಆಯುಕ್ತರುಗಳ ಪೈಕಿ ಎರಡು ಮಾಹಿತಿ ಆಯುಕ್ತರ ಕಚೇರಿಗಳಲ್ಲಿ ಒಂದು ಪೀಠ ಕಲಬುರಗಿಗೆ ಹಾಗೂ ಒಂದು ಪೀಠ ಬೆಳಗಾವಿಗೆ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (ಜಾಗೃತ ವಿಭಾಗ) ಇಲಾಖೆಯ ಕರ್ನಾಟಕ ಲೋಕಾಯುಕ್ತದಲ್ಲಿರುವ ಎರಡು ಉಪ ಲೋಕಾಯುಕ್ತ ಕಚೇರಿಗಳ ಪೈಕಿ ಒಂದು ಉಪ ಲೋಕಾಯುಕ್ತ ಕಚೇರಿಯನ್ನು ಧಾರವಾಡಕ್ಕೆ ಸ್ಥಳಾತರಿಸಿ 2019, ಏ.1ರಂದು ಜಾರಿಗೆ ಬರುತ್ತದೆ ಎಂದು ತಿಳಿಸಲಾಗಿತ್ತು. ಆದರೆ ಮಾರ್ಚ್‌ ಮುಗಿದರೂ ಕೂಡ ಯಾವ ಕಚೇರಿಗಳೂ ಕೂಡ ತಮ್ಮ ಮೂಲ ಸ್ಥಾನ ಬಿಟ್ಟು ಕದಲಿಲ್ಲ. ಇದು ಉತ್ತರ ಕರ್ನಾಟಕ ಭಾಗದ ರೈತರು ಹಾಗೂ ಹೋರಾಟಗಾರರನ್ನು ಕೆರಳಿಸುವಂತಾಗಿದೆ.

ಆಡಳಿತ ಸರಳೀಕರಣಕ್ಕಾಗಿ ಬೆಂಗಳೂರಿನಲ್ಲಿದ್ದ ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಗೊಳಿಸುವ ವಿಚಾರದಲ್ಲಿ ಸರ್ಕಾರ ಉತ್ತರ ಕರ್ನಾಟಕ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ತೊಡಗಿದೆ. ಉತ್ತರ ಕರ್ನಾಟಕದಲ್ಲಿದ್ದ ಕೆಲ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರಗೊಳಿಸಿದ್ದಾರೆ. ಚುನಾವಣೆ ಮುಗಿದ ನಂತರ ಹೋರಾಟ ಮಾಡಲು ಅಣಿಯಾಗಬೇಕಾಗುತ್ತದೆ.
ಬಸವರಾಜ ಕುಂಬಾರ,
ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ

ಕೃಷ್ಣಾ ಭಾಗ್ಯ ಜಲ ನಿಗಮದ ಆಡಳಿತ ಕಚೇರಿ ಆಲಮಟ್ಟಿಯೇ ಆಗಿದೆ. ಅಲ್ಲಿ ವ್ಯವಸ್ಥಾಪಕ ನಿರ್ದೇಶಕರ ಕೊಠಡಿಗಳು ಸೇರಿದಂತೆ ಎಲ್ಲ ಸವಲತ್ತುಗಳಿವೆ. ಆದರೆ ರಾಜಧಾನಿಯಲ್ಲಿ ಹಲವಾರು ಸಭೆಗಳು, ಅಧಿವೇಶನಗಳು ಹೀಗೆ ಬಿಡುವಿಲ್ಲದ ಕಾರ್ಯವಿರುವುದರಿಂದ ಬೆಂಗಳೂರಿನಲ್ಲಿರುವ ಕಚೇರಿಯನ್ನು ಸಂಪರ್ಕ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ. ಇದರಿಂದ ಈಗ ಇರುವಂತೆಯೇ ಮುಂದುರಿಯಲಿದೆ.
• ವಿ.ಶಂಕರ,
 ಕೆಬಿಜೆಎನ್ನೆಲ್ ವ್ಯವಸ್ಥಾಪಕ ನಿರ್ದೇಶಕ

Advertisement

ಅಧಿವೇಶನದಲ್ಲಿ ಸಿಎಂ ನೀಡಿದ ಭರವಸೆಯಂತೆ ಆಲಮಟ್ಟಿಗೆ ಕೆಬಿಜೆಎನೆಲ್ ಎಂಡಿ ಕಚೇರಿ ಸ್ಥಳಾಂತರಗೊಳಿಸಲು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಹಾಗೂ ಕುಮಾರಸ್ವಾಮಿ ಅವರನ್ನು ಸೋಮವಾರ ಭೇಟಿಯಾಗಿ ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರಗೊಳಿಸಲು ವಿನಂತಿಸಲಾಗುವುದು.
ಎಂ.ಸಿ. ಮನಗೂಳಿ,
ಜಿಲ್ಲಾ ಉಸ್ತುವಾರಿ ಸಚಿವ

ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next