Advertisement

ಆಲಮಟ್ಟಿಯಿಂದ 1,01,078 ಕ್ಯೂಸೆಕ್‌ ನೀರು ಬಿಡುಗಡೆ

04:04 PM Jul 29, 2019 | Naveen |

ಆಲಮಟ್ಟಿ: ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯದಿಂದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ನೀರು ಹರಿಬಿಲಾಗುತ್ತಿದೆ. ಇದರಿಂದ ನಾರಾಯಣಪುರ ಬಸವಸಾಗರದ ಹಿನ್ನೀರು ರೈತರ ಜಮೀನುಗಳಿಗೆ ನುಗ್ಗುವ ಆತಂಕ ಎದುರಾಗಿದೆ.

Advertisement

ಕೃಷ್ಣೆ ಉಗಮ ಸ್ಥಾನ ಹಾಗೂ ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಬರುತ್ತಿದೆ. ಹಾಗಾಗಿ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಲಾಶಯದ 12 ಗೇಟುಗಳಿಂದ ಹಾಗೂ ವಿದ್ಯುದ್ದಾಗಾರಗಳಿಂದ ಬಸವಸಾಗರ ಜಲಾಶಯಕ್ಕೆ ನದಿ ಮೂಲಕ ನೀರು ಬಿಡಲಾಗುತ್ತಿದೆ. 2019ನೇ ಸಾಲಿನಲ್ಲಿ ಇದೇ ಪ್ರಥಮ ಬಾರಿಗೆ ಜಲಾಶಯ ಸಂಪೂರ್ಣ ತುಂಬಿದ್ದರಿಂದ ರವಿವಾರ ಬೆಳಗ್ಗೆಯಿಂದ 6 ಗೇಟ್ ಮತ್ತು ಸಂಜೆ 12 ಗೇಟ್ ಹಾಗೂ ಕೆಪಿಸಿಎಲ್ಗಳಿಂದ ನದಿ ಪಾತ್ರಕ್ಕೆ ನೀರು ಹರಿಸಲಾಗುತ್ತಿದೆ. ಗರಿಷ್ಠ 519.60 ಮೀ ಎತ್ತರದ ಜಲಾಶಯ ಗರಿಷ್ಠ 123.81 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ರವಿವಾರ ಬೆಳಗ್ಗೆ 519.350 ಮೀ. ಎತ್ತರದಲ್ಲಿ 118.727 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ರವಿವಾರ ಜಲಾಶಯಕ್ಕೆ 80 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದ ಒಟ್ಟು 1,01,078 ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಈಗ ಅ.ಸಂಖ್ಯೆ-1ರಿಂದ 6ವರೆಗಿನ ಗೇಟುಗಳನ್ನು ಬಂದ್‌ ಮಾಡಿ 7ರಿಂದ 18 ಗೇಟ್‌ಗಳನ್ನು ಒಂದು ಮೀಟರ್‌ವರೆಗೆ ಎತ್ತರಿಸಿ ನೀರು ಹರಿಸುತ್ತಿದ್ದು, ಇನ್ನುಳಿದ 8 ಗೇಟ್ ಬಂದ್‌ ಮಾಡಲಾಗಿದೆ. ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್‌ ಉತ್ಪಾದನಾ ಕೇಂದ್ರದ ಮೂಲಕ 42,000 ಕ್ಯೂಸೆಕ್‌ ನೀರನ್ನು ಬಿಡುತ್ತಿರುವುದರಿಂದ ಅಲ್ಲಿನ ಎಲ್ಲ ಆರು ಘಟಕಗಳಿಂದ 270 ಮೆಗಾವ್ಯಾಟ್ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ನಾಳೆ ಒಳಗೆ ಒಳಹರಿವು ಇನ್ನಷ್ಟು ಹೆಚ್ಚಿದರೆ ಜಲಾಶಯದ ಗೇಟ್‌ಗಳ ಎತ್ತರ ಇನ್ನಷ್ಟು ಹೆಚ್ಚಿಸಿ ಹೊರಹರಿವು ಹೆಚ್ಚಿಸಲಾಗುವುದು ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಗಳು ತಿಳಿಸಿವೆ.

ಕಳೆದ ಬಾರಿ ಇದೇ ದಿನ 519.03 ಮೀ. ಎತ್ತರದಲ್ಲಿ 95.812 ಟಿಎಂಸಿ ಅಡಿ ಸಂಗ್ರಹವಾಗಿ ಒಳ ಹರಿವು 92,657 ಕ್ಯೂಸೆಕ್‌ ಜಲಾಶಯದಿಂದ 53,708 ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next