Advertisement

ನೀರಿಗಾಗಿ ರಾಜಧಾನಿಯತ್ತ ರೈತರ ಚಿತ್ತ

10:55 AM Jul 20, 2019 | Naveen |

ಶಂಕರ ಜಲ್ಲಿ
ಆಲಮಟ್ಟಿ:
ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಜಿಲ್ಲೆಗಳ ಕಾಲುವೆಗಳಿಗೆ 2018ನೇ ಸಾಲಿನ ಹಿಂಗಾರು ಹಂಗಾಮಿಗೆ ರೈತರ ಜಮೀನಿಗೆ ನೀರು ಹರಸದಿರುವುದರಿಂದ ನೀರಿಗಾಗಿ ಭಾಗದ ರೈತರ ಚಿತ್ತ ಜು. 20ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿಯತ್ತ ನೆಟ್ಟಿದೆ.

Advertisement

ಉತ್ತರ ಕರ್ನಾಟಕದ ಬರಗಾಲ ನಿವಾರಣೆಗಾಗಿ ಆಲಮಟ್ಟಿಯಲ್ಲಿ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಮಹಾರಾಷ್ಟ್ರದ ಮಹಾಬಳೇಶ್ವರ ಹಾಗೂ ಸಾಂಗ್ಲಿ ಮತ್ತು ಸಾತಾರ ಜಿಲ್ಲೆಗಳು ಹಾಗೂ ರಾಜ್ಯದ ಬೆಳಗಾವಿ ಜಿಲ್ಲೆ ಸೇರಿದಂತೆ ಕೃಷ್ಣಾ ಜಲಾಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿರುವ ಪರಿಣಾಮ ಜಲಾಶಯ ಬಹುತೇಕ ತುಂಬಿದೆ.

ಪ್ರತಿ ಬಾರಿಯೂ ಆಲಮಟ್ಟಿಯಲ್ಲಿರುವ ಕೃಷ್ಣಾ ಭಾಗ್ಯಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಭಾಭವನದಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ನಡೆಯುವುದು ವಾಡಿಕೆ. ಯುಕೆಪಿ ಫಲಾನುಭವಿ ಜಿಲ್ಲೆಗಳಾಗಿರುವ ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳಿಗೆ ಆಲಮಟ್ಟಿ ಮಧ್ಯವರ್ತಿ ಸ್ಥಳದಲ್ಲಿರುವುದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಿ ಕಾಲುವೆಗಳಲ್ಲಿ ನೀರು ಹರಿಸುವ ಹಾಗೂ ಅವಳಿ ಜಲಾಶಯಗಳಲ್ಲಿರುವ ನೀರಿನ ಲಭ್ಯತೆ ಹಾಗೂ ರೈತರು ಅನುಭವಿಸುವ ಸಮಸ್ಯೆಗಳ ನಿವಾರಣೆ ಹೀಗೆ ಎಲ್ಲ ಬಗೆಯಲ್ಲಿ ಚರ್ಚೆಯಾಗುತ್ತಿತ್ತು.

ಫಲಾನುಭವಿ ಜಿಲ್ಲೆಗಳ ರೈತರೂ ಕೂಡ ತಮ್ಮ ವಿವಿಧ ಸಮಸ್ಯೆಗಳನ್ನು ನೀರಾವರಿ ಸಲಹಾ ಸಮಿತಿ ಸಭೆ ಮುಂದಿಟ್ಟು ಪರಿಹಾರ ಕಂಡುಕೊಳ್ಳುತ್ತಿದ್ದರು. ಆದರೆ ಆಲಮಟ್ಟಿಯಲ್ಲಿ ನಡೆಯಬೇಕಿದ್ದ ನೀರಾವರಿ ಸಲಹಾ ಸಮಿತಿ ಸಭೆ ರಾಜಕೀಯ ಸ್ಥಿತ್ಯಂತರಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವುದಕ್ಕೆ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮಳೆಯಾದ ಪರಿಣಾಮ ಆಲಮಟ್ಟಿ ಜಲಾಶಯಕ್ಕೆ ಲಕ್ಷಾಂತರ ಕ್ಯೂಸೆಕ್‌ ಒಳಹರಿವು ಬಂದು ಜಲಾಶಯ ತುಂಬುವ ಹಂತದಲ್ಲಿದೆ. ಇನ್ನು ಕಳೆದ ಎರಡು ದಿನಗಳಿಂದ ಒಳಹರಿವಿನಲ್ಲಿ ಇಳಿಕೆಯಾಗಿದ್ದರೂ ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಹಾಗೂ ನಾರಾಯಣಪುರ ಬಸವಸಾಗರ ಜಲಾಶಯಗಳು ಬಹುತೇಕ ತುಂಬಿದ್ದು ಈ ಬಾರಿಯಾದರೂ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ನೀರು ದೊರೆಯಬಹುದೇ ಎನ್ನುವುದು ರೈತರು ಆಸೆಗಣ್ಣಿನಿಂದ ನೋಡುತ್ತಿದ್ದಾರೆ.

Advertisement

ಪೂರ್ಣಗೊಳ್ಳದ ಕ್ಲೋಸರ್‌ ಕಾಮಗಾರಿ: ಪ್ರತಿ ಬಾರಿ ಕಾಲುವೆಗಳಿಗೆ ನೀರು ಹರಿಸುವ ಮುನ್ನ ಅದರಲ್ಲಿನ ಹೂಳು ಹಾಗೂ ಗಿಡ ಗಂಟಿಗಳನ್ನು ತೆರವುಗೊಳಿಸಿ ನೀರು ಹರಿಸುವುದು ವಾಡಿಕೆ. ಆದರೆ 2018ನೇ ಸಾಲಿನಲ್ಲಿ ಐಸಿಸಿ ಸಭೆ ತೀರ್ಮಾನದಂತೆ ರೈತರ ಜಮೀನಿಗೆ ನೀರುಣಿಸಲು ಯೋಜನೆಯ ಯಾವ ಕಾಲುವೆಗಳಿಗೂ ನೀರು ಹರಿಸುವುದು ಬೇಡವೆಂದು ತೀರ್ಮಾನಿಸಿ ಅದರಂತೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈಗ ಕಾಲುವೆಗಳ ಹೂಳು ತೆಗೆಯಲು 19.64 ಕೋಟಿ ರೂ. ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ. ಇನ್ನೂ ಕೆಲವು ಗುತ್ತಿಗೆದಾರರಿಗೆ ಕೆಲಸದ ಆದೇಶ ನೀಡಿಲ್ಲ. ಹೀಗಾಗಿ ಕಾಮಗಾರಿ ಆರಂಭಗೊಳ್ಳಲು ಇನ್ನೂ ಒಂದು ವಾರ ವಿಳಂಬವಾಗಲಿದೆ.

ಇದರಿಂದ ಕಾಮಗಾರಿ ಯಾವಾಗ ಪೂರ್ಣಗೊಳಿಸುತ್ತಾರೋ, ಇನ್ನೂ ಕಾಲುವೆಗೆ ಯಾವಾಗ ನೀರು ಹರಿಸುತ್ತಾರೆ? ಎಂಬ ಅನುಮಾನ ಮೂಡಿದೆ.

ಕರೆಯಲಾಗಿರುವ ಟೆಂಡರ್‌ಗಳನ್ನು ಪಡೆದ ಗುತ್ತಿಗೆದಾರರು ಇನ್ನೂವರೆಗೆ ಯಾವುದೇ ಕಾಮಗಾರಿಗಳನ್ನು ಆರಂಭಿಸಿಲ್ಲ. ಇದರಿಂದ ಮೊದಲೇ ಎರಡು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದರೆ ಇನ್ನು ಕೆಲವರು ಬಿತ್ತನೆ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇದರಿಂದ ರೈತರಿಗೆ ಅಗತ್ಯವಾಗಿ ನೀರು ಬೇಕಾದ ಸಮಯದಲ್ಲಿ ಕಾಲುವೆಗಳ ದುರಸ್ತಿ ಹಾಗೂ ಹೂಳು ಮತ್ತು ಕಂಟಿ ತೆರವುಗೊಳಿಸಲು ಸಾಧ್ಯವೇ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next