Advertisement

ಆಲಮಟ್ಟಿ: ಶಾಸ್ತ್ರಿ ಜಲಾಶಯಕ್ಕೆ ಒಳ ಹರಿವು ಆರಂಭ

06:26 PM Jul 13, 2023 | Team Udayavani |

ಆಲಮಟ್ಟಿ: ಕೈ ಕೊಟ್ಟ ಮುಂಗಾರು ಹಂಗಾಮಿನ ಮಳೆಗಳಿಂದ ಜನ-ಜಾನುವಾರುಗಳ ಕುಡಿಯುವ  ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗುವ ವೇಳೆ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದರಿಂದ ರೈತರ ಕನಸು ಚಿಗುರೊಡೆಯುವಂತಾಗಿದೆ.

Advertisement

ಪ್ರತಿ ವರ್ಷವೂ ರೋಹಿಣಿ, ಮೃಗಶಿರಾ ಮಳೆಗಳು ಸುರಿದು ಭೂಮಿಯನ್ನು ಹದವಾಗಿರಿಸಿಕೊಂಡಿದ್ದರೈತರು ಬಿತ್ತನೆ ಮಾಡುತ್ತಿದ್ದರು. ಆದರೆ ಈ ಬಾರಿ ಮುಂಗಾರು ಹಂಗಾಮಿನ ಮಳೆಗಳು ಸಮರ್ಪಕವಾಗಿ ಸುರಿಯದಿರುವುದರಿಂದ ಬಿತ್ತನೆ ಮಾಡಲು ರೈತರು ಭೂಮಿಯನ್ನು ಹದವಾಗಿರಿಸಿಕೊಂಡಿದ್ದರೂ ಬಿತ್ತನೆ ಮಾಡದೇ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.

ಮುಂಗಾರು ಬಿತ್ತನೆಗಾಗಿ ಹುರುಳಿ, ಅಲಸಂದಿ, ಮಡಿಕೆಕಾಳು, ಹೆಸರು, ಉದ್ದು, ಸಜ್ಜೆ, ನವಣೆ, ಮೆಕ್ಕೆಜೋಳ, ಹೈಬ್ರಿಡ್‌ ಜೋಳ, ಉದ್ದು, ಹತ್ತಿ, ಉಳ್ಳಾಗಡ್ಡಿ ಹೀಗೆ ಹಲವಾರು ಬೆಳೆಗಳನ್ನು ಬಿತ್ತನೆ ಮಾಡಲು ರೈತರು ಬೀಜ ಗೊಬ್ಬರ ಕೊಂಡು ಬಿತ್ತನೆ ತಯಾರಿಯಲ್ಲಿದ್ದರು. ಸಮರ್ಪಕವಾಗಿ ಮಳೆ ಸುರಿಯದಿರುವುದರಿಂದ ಮುಂಗಾರು ಬೆಳೆಗಳನ್ನು ಬಿತ್ತಲಾಗದೇ ರೈತರು ಪ್ರತಿ ದಿನ ಆಕಾಶದತ್ತ ಮುಖ ಮಾಡಿ ಮಳೆರಾಯ ಧರೆಗಿಳಿಯುವನೇ ಎಂದು ಕಾದು ನೋಡುವಂತಾಗಿತ್ತು.

ಇನ್ನು ಕೃಷ್ಣೆಯ ಉಗಮ ಸ್ಥಾನ ಮತ್ತು ಕೃಷ್ಣೆಯ ಉಪ ನದಿಗಳ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಮಂಗಳವಾರ ರಾತ್ರಿಯಿಂದ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು ನದಿ ತೀರದ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಯ ಫಲಾನುಭವಿ ರೈತರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ಬಾರಿ ವಾಡಿಕೆಗಿಂತಲೂ ಮುಂಚಿತವಾಗಿ ಮೇ 21ರಂದು ಜಲಾಶಯಕ್ಕೆ ಒಳ ಹರಿವು ಆರಂಭವಾಗಿತ್ತು. ಇದರಿಂದ ಕೃಷ್ಣೆಯ ತೀರದಲ್ಲಿ ಸಮರ್ಪಕವಾಗಿ ಮಳೆಯಾಗದೇ ಇದ್ದರೂ ರೈತರು ಮುಂಗಾರು ಹಾಗೂ ಹಿಂಗಾರು ಬಿತ್ತನೆ ಮಾಡಿದ್ದರು. ಈ ಬಾರಿ ಸುಮಾರು ಎರಡು ತಿಂಗಳ ನಂತರ ಜುಲೈ 11ರ ರಾತ್ರಿಯಿಂದ ಒಳ ಹರಿವು ಆರಂಭಗೊಂಡಂತಾಗಿದೆ.

Advertisement

ಮುಂಗಾರು ಹಂಗಾಮಿನ ಮಳೆಯಾಗದಿರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಈ ಸಂದರ್ಭದಲ್ಲಿ ಸರ್ಕಾರ
ರೈತರ ನೆರವಿಗೆ ಬಂದು ಆತ್ಮಸ್ಥೈರ್ಯ ತುಂಬಬೇಕು ಎನ್ನುತ್ತಾರೆ ತಾಪಂ ಮಾಜಿ ಸದಸ್ಯ ಮಲ್ಲೇಶ ರಾಠೊಡ.

ಗರಿಷ್ಠ 519.6 ಮೀ. ಎತ್ತರದಲ್ಲಿ 123.081 ಟಿಎಂಸಿ ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದಲ್ಲಿ ಬುಧವಾರದ ಬೆಳಗಿನ ಮಾಹಿತಿಯಂತೆ 507.76 ಮೀ. ಎತ್ತರದಲ್ಲಿ 20.547 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಇದರಲ್ಲಿ 17.620 ಟಿಎಂಸಿ ಅಡಿ ಜಲಚರಗಳಿಗೆ ಮೀಸಲಿದ್ದು ಇನ್ನುಳಿದ 2.927 ಟಿಎಂಸಿ ಅಡಿ ನೀರು ಬಳಸಿಕೊಳ್ಳಬಹುದಾಗಿದೆ.

ಜಲಾಶಯಕ್ಕೆ ಒಳ ಹರಿವು 19,172 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದ ವಿವಿಧ ಕುಡಿಯುವ ನೀರಿನ ಘಟಕಗಳಿಗೆ ಮತ್ತು ಭಾಷ್ಪೀಭವನ ಸೇರಿ ಒಟ್ಟು 561 ಕ್ಯೂಸೆಕ್‌ ನೀರು ಹೊರ ಹರಿವಿದೆ. ಕಳೆದ 22 ವರ್ಷಗಳಲ್ಲಿ 2021ನೇ ಸಾಲಿನಲ್ಲಿ ಮೇ 23ಕ್ಕೆ ಒಳ ಹರಿವು ಆರಂಭವಾಗಿ ಅಕ್ಟೋಬರ್‌ 22ರಂದು ಒಳ ಹರಿವು ಸ್ಥಗಿತಗೊಂಡಿತ್ತು. ನಂತರ ಮತ್ತೆ ಕೃಷ್ಣೆಯ ಜಲಾನಯನ ಪ್ರದೇಶದಲ್ಲಿ ಮಳೆ ಆರಂಭವಾಗಿದ್ದರ ಪರಿಣಾಮವಾಗಿ ಮತ್ತೆ ನವೆಂಬರ್‌ 20ರಿಂದ ಒಳ ಹರಿವು ಆರಂಭಗೊಂಡು ಡಿಸೆಂಬರ್‌ 29ರಂದು ಸ್ಥಗಿತಗೊಂಡಿತ್ತು.

ಮಳಿ ಆಗಲಾರ್ದಕ ಬಿತ್ತುದ ಬಿಟ್ಟ ಬೀಜ ಗೊಬ್ಬರ ಹಂಗ ಮನ್ಯಾಗ ಇಟ್ಕೊಂಡ ಕುಂತೀವ್ರಿ. ಮ್ಯಾಲಕ ಅರ ಮಳಿ ಆಗಿದ್ರ ಆಲಮಟ್ಟಿ ಡ್ಯಾಮಿಗಿ ನೀರ ಬಂದ್ರ ಕೆನಾಲಕ ನೀರ ಬಿಡತಿದ್ರ. ಆ ನೀರರ ಹೊಲಕ ಉಣ್ಣಸಿತ್ತೀದ್ದೀವ್ರಿ, ಈ ಸಲಾ ಅದೂ ಇಲ್ಲ ನಮ್ಮ ಗತಿ ಹೆಂಗ ಅನ್ನುವಂಗ ಆಗೇತ್ರಿ.
ಖಾಜೇಸಾಬ ಗಂಜ್ಯಾಳ, ಬೇನಾಳ

ಪ್ರತಿ ಸಲ ಮಳೆಯಾಗುತ್ತಿದ್ದರಿಂದ ಅಕಡಿ ಕಾಳುಗಳನ್ನು ಚೆಲೋ ಬೆಳೀತ್ತಿದ್ದೀವ್ರಿ. ಆದ್ರ ಈ ಸಲಾ ಮಳಿ ಆಗಲಿಲ್ಲ, ಒಣ ನೆಲಾ ಹಂಗ ಇಟ್ಟೇವ್ರಿ.
ಮಲ್ಲಿಕಾರ್ಜುನ ಗುಳೇದ, ಕಾರಜೋಳ

ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next