Advertisement

ಜಲಾಶಯ ಹಿನ್ನೀರು ನುಗ್ಗಿ ಬೆಳೆಹಾನಿ

10:18 AM Aug 02, 2019 | Team Udayavani |

ಆಲಮಟ್ಟಿ: ಲಾಲ್ ಬಹಾದ್ದೂರಶಾಸ್ತ್ರಿ ಜಲಾಶಯಕ್ಕೆ 1,98,752 ಕ್ಯೂಸೆಕ್‌ ನೀರು ಹರಿದು ಬರುತ್ತಿರುವುದರಿಂದ 2,38,752 ಕ್ಯೂಸೆಕ್‌ ನೀರನ್ನು ಜಲಾಶಯದ ಗೇಟ್‌ಗಳ ಮೂಲಕ ನದಿಪಾತ್ರಕ್ಕೆ ಹರಿದು ಬಿಡಲಾಗುತ್ತಿದೆ. ಇದರಿಂದ ನದಿ ತೀರದ ಜಮೀನುಗಳಿಗೆ ಬಸವಸಾಗರದ ಹಿನ್ನೀರು ಪ್ರವೇಶಿಸಿ ಬೆಳೆ ನಾಶಕ್ಕೆ ಕಾರಣವಾಗುವಂತಾಗಿದೆ.

Advertisement

ಆಲಮಟ್ಟಿ ಲಾಲ್ ಬಹಾದ್ದೂರಶಾಸ್ತ್ರಿ ಜಲಾಶಯದಲ್ಲಿ 2000ನೇ ಸಾಲಿನಿಂದ ನೀರು ನಿಲ್ಲಿಸಿ ಜಲಾಶಯದ ಭದ್ರತೆಯನ್ನು ಗಮನದಲ್ಲಿರಿಸಿಕೊಂಡು ನದಿ ಪಾತ್ರಕ್ಕೆ ನೀರು ಬಿಡಲಾಗುತ್ತಿದ್ದರೂ ಕೂಡ ಸುಮಾರು 15 ವರ್ಷಗಳಿಂದ ಬಸವಸಾಗರದ ಹಿನ್ನೀರು ಅವಳಿ ಜಿಲ್ಲೆಯ ಹಲವಾರು ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗುವುದರಿಂದ ರೈತರು ಹಾನಿಯನ್ನನುಭವಿಸುವಂತಾಗಿದೆ.

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಲಾಲ್ ಬಹಾದ್ದೂರಶಾಸ್ತ್ರಿ ಜಲಾಶಯಕ್ಕೆ ವ್ಯಾಪಕ ನೀರು ಹರಿದು ಬರುತ್ತಿರುವುದು ಮುಂದುವರಿದಿದೆ. ಮಹಾರಾಷ್ಟ್ರ ಹಾಗೂ ರಾಜ್ಯದ ಬೆಳಗಾವಿ ಜಿಲ್ಲೆ ಸೇರಿದಂತೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವದರಿಂದ ಕೊಯ್ನಾ ಹಾಗೂ ರಾಜಾಪುರ ಬ್ಯಾರೇಜ್‌ಗಳಿಂದ ವ್ಯಾಪಕವಾಗಿ ನದಿ ಪಾತ್ರಕ್ಕೆ ಹರಿದು ಬಿಡುತ್ತಿರುವದರಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರುಬರುತ್ತಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಕೃಷ್ಣಾಭಾಗ್ಯ ಜಲ ನಿಗಮದ ಅಧಿಕಾರಿಗಳು ಕರ್ನಾಟಕ ವಿದ್ಯುದಾಗಾರ ಆಲಮಟ್ಟಿ ಘಟಕ, 26 ಗೇಟ್‌ಗಳು ಹಾಗೂ ಕಾಲುವೆಗಳ ಮುಖಾಂತರ ಸೇರಿ ಒಟ್ಟು ಗುರುವಾರ ರಾತ್ರಿ 8 ಗಂಟೆಯಿಂದ 2,38,752 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯದಿಂದ ನೀರು ಹೊರಬಿಟ್ಟಂತಾಗಿದೆ.

519.60 ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ 123.081ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ ಗುರುವಾರ ಮುಂಜಾನೆ ಮಾಹಿತಿಯಂತೆ 518.55 ಮೀ. ಎತ್ತರದಲ್ಲಿ 105.872 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇನ್ನು ಒಳಹರಿವು 1,50,409 ಕ್ಯೂಸೆಕ್‌, ಹೊರಹರಿವು 2,13,453 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿತ್ತು.

ರಾತ್ರಿ 8ಗಂಟೆ ಸುಮಾರಿಗೆ ಒಳಹರಿವಿನಲ್ಲಿ ವ್ಯಾಪಕ ಏರಿಕೆಯಾಗಿ 1,98,752 ಕ್ಯೂಸೆಕ್‌ ನೀರು ಹರಿದುಬರುತ್ತಿರುವುದರಿಂದ ಜಲಾಶಯದ ವಿವಿಧ ಮೂಲಗಳಿಂದ 2,38,573 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಇತ್ತೀಚೆಗಷ್ಟೇ ಕೆಲವರು ಸೂರ್ಯಕಾಂತಿ, ಮೆಕ್ಕೆಜೋಳ, ತೊಗರಿ ಬಿತ್ತನೆ ಮಾಡಿದ್ದರು. ಇನ್ನುಳಿದವರು ಕಬ್ಬು ಬೆಳೆ ಬೆಳೆಯುತ್ತಿದ್ದಾರೆ. ಇದರಿಂದ ಮುಂಗಾರು ಬಿತ್ತನೆ ಮಾಡಿದ ರೈತರ ಜಮೀನಿಗೆ ನೀರು ನುಗ್ಗಿದ್ದರಿಂದ ನೀರು ನಿಂತು ಬೆಳೆಗಳು ಕೊಳೆಯುವಂತಾಗುತ್ತದೆ. ಆದ್ದರಿಂದ ರೈತರ ಜಮೀನಿನಲ್ಲಿ ನೀರು ನುಗ್ಗದಂತೆ ತಡೆಗೋಡೆ ನಿರ್ಮಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

Advertisement

ಹಿನ್ನೀರಿನಲ್ಲಿ ಏರಿಕೆ
ಆಲಮಟ್ಟಿ ಲಾಲ್ ಬಹಾದ್ದೂರಶಾಸ್ತ್ರಿ ಜಲಾಶಯದಿಂದ ವ್ಯಾಪಕವಾಗಿ ನೀರು ಹರಿದು ಬಿಡುತ್ತಿರುವದರಿಂದ ನಾರಾಯಣಪುರದ ಬಸವಸಾಗರ ಜಲಾಶಯದ ಹಿನ್ನೀರು ಏರಿಕೆಯಾಗಿ ಬಾಗಲಕೋಟೆ ಜಿಲ್ಲೆಯ ನಾಗಸಂಪಗಿ, ಮನಹಳ್ಳಿ ಸೇರಿದಂತೆ ನದಿತೀರದಲ್ಲಿರುವ ಗ್ರಾಮಗಳ ರೈತರ ಜಮೀನಿನಲ್ಲಿ ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಹಾಗೂ ನಿಡಗುಂದಿ ತಾಲೂಕಿನ ಗ್ರಾಮಗಳಾದ ಮುದೂರ, ಕಾಳಗಿ, ಬಳಬಟ್ಟಿ, ವಡವಡಗಿ, ಮಸೂತಿ, ಯಲ್ಲಮ್ಮನಬೂದಿಹಾಳ, ಕಾಶಿನಕುಂಟಿ, ಯಲಗೂರ ಹಾಗೂ ಅರಳದಿನ್ನಿಯ ಯಲಗೂರದಪ್ಪ ಕೊಳ್ಳಾರ, ಯಲಗೂರದಪ್ಪ ಟುಬಾಕಿ, ಮಲ್ಲವ್ವ ಕೊಳ್ಳಾರ, ಚಂದ್ರಪ್ಪ ಕೊಳ್ಳಾರ, ಮಹಾಂತೇಶ ಕೊಳ್ಳಾರ, ಶೇಖಪ್ಪ ಟುಬಾಕಿ, ಅಯ್ಯಪ್ಪ ಚನಗೊಂಡ ಸೇರಿದಂತೆ ಯಲಗೂರದ ಗೋಪಾಲಗದ್ದನಕೇರಿ, ಪೂಜಾರಿ ಹೀಗೆ ಕೃಷ್ಣೆಯ ದಡದಲ್ಲಿರುವ ರೈತರ ಜಮೀನಿನಲ್ಲಿ ನೀರುನುಗ್ಗಿದೆ.

Advertisement

Udayavani is now on Telegram. Click here to join our channel and stay updated with the latest news.

Next