ಮುಂಬೈ: ಜಗತ್ತಿನೆಲ್ಲಡೆ ಹರಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಭಾರತವೂ ಹೋರಾಟ ನಡೆಸುತ್ತಿದೆ. ವೈರಸ್ ವಿರುದ್ಧದ ಹೋರಾಟಕ್ಕೆ ಸಾಮಾನ್ಯ ಜನರು, ಉದ್ಯಮಿಗಳು ಸೇರಿದಂತೆ ಸೆಲೆಬ್ರಿಟಿಗಳೂ ಕೈ ಜೋಡಿಸಿದ್ದಾರೆ. ಸಿನಿ ತಾರೆಯರು ಆಯಾ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿ ಸೇರಿದಂತೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಕೈಲಾದಷ್ಟು ಹಣ ಸಹಾಯ ಮಾಡುತ್ತಿದ್ದಾರೆ.
ನಿನ್ನೆಯಷ್ಟೆ ಪ್ರಭಾಸ್ 3 ಕೋಟಿ, ಮೊನ್ನೆ ಪವನ್ ಕಲ್ಯಾಣ್ ಒಂದು ಕೋಟಿ ಹೀಗೆ ಹಲವಾರು ಮಂದಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಸ್ವಲ್ಪ ಸಮಯದ ಹಿಂದೆಯಷ್ಟೆ ಉದ್ಯಮಿ ರತನ್ ಟಾಟಾ ಅವರೂ ಟಾಟಾ ಟ್ರಸ್ಟ್ ವತಿಯಿಂದ 500 ಕೋಟಿ ನೀಡುತ್ತಿರುವುದಾಗಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈಗ ನಟ ಅಕ್ಷಯ್ ಕುಮಾರ್ ಸಹ 25 ಕೋಟಿ ಹಣವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.
ಇಲ್ಲಿಯವರೆಗೆ ಇಷ್ಟು ದೊಡ್ಡ ಮೊತ್ತದ ಹಣ ನೀಡಿದ ಏಕೈಕ ನಟ ಎಂದರೆ ಅದು ಅಕ್ಷಯ್ ಕುಮಾರ್. ಆ್ಯಕ್ಷನ್ ಕಿಂಗ್ ದೇಶದಲ್ಲಿ ಯಾವಾಗ ಇಂತಹ ಪರಿಸ್ಥಿತಿ ಎದುರಾದರೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಅಕ್ಷಯ್ ಕುಮಾರ್ ಅವರ ಟ್ವೀಟ್ ನೋಡಿರುವ ಪ್ರಧಾನಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಅಕ್ಷಯ್ ಅವರ ನಿರ್ಧಾರದಿಂದ ಖುಷಿಯಾಗಿರುವ ಟ್ವಿಂಕಲ್ ಖನ್ನಾ ಸಹ ಹೆಮ್ಮೆಯಿಂದ ಟ್ವೀಟ್ ಮಾಡಿದ್ದಾರೆ.
ಕೊರೋನಾ ವಿರುದ್ಧದ ಹೋರಾಟಕ್ಕೆ ಹೃತಿಕ್ ರೋಷನ್ 20 ಲಕ್ಷ, ಕಪಿಲ್ ಶರ್ಮಾ 50 ಲಕ್ಷ ನೀಡಿದ್ದಾರೆ. ಹೀಗೆ ಟಾಲಿವುಡ್, ಸ್ಯಾಂಡಲ್ವುಡ್ ಕಲಾವಿದರೂ ಸಹ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.