Advertisement

ಬಡವರ ಬಾಳಲ್ಲಿ ಅಕ್ರಮ ಸಕ್ರಮ ಆಶಾಕಿರಣ

10:44 AM Jun 12, 2021 | Team Udayavani |

ಸಿಂಧನೂರು: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡವರ ಬಹು ನಿರೀಕ್ಷೆಯ ಅಕ್ರಮ-ಸಕ್ರಮ ಯೋಜನೆಗೆ ಸರ್ಕಾರ ಚಾಲನೆ ನೀಡುತ್ತಿದ್ದಂತೆ, ಅರ್ಜಿದಾರರಲ್ಲಿ ಮತ್ತೆ ನಿರೀಕ್ಷೆ ಗರಿಗೆದರಿದೆ.

Advertisement

ಕಂದಾಯ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡ ಕಾರಣಕ್ಕೆ ಸರ್ಕಾರಿ ಸೌಲಭ್ಯಗಳಿಂದ ವಂಚಿತಗೊಂಡ ಜನರಲ್ಲಿ ಈಗಿನ ಯೋಜನೆ ಹೊಸ ಆಶಾಭಾವ ಮೂಡಿಸಿದೆ. ಕಳೆದ ವರ್ಷ ಮಾ.31ರೊಳಗೆಅರ್ಜಿ ಸಲ್ಲಿಸಲು ಅವಕಾಶ ನೀಡಿದರೂ ನಂತರದಲ್ಲಿ ಕೋವಿಡ್‌ ಹಿನ್ನೆಲೆಯಲ್ಲಿ ಯೋಜನೆಗೆ ಸ್ಥಗಿತಗೊಂಡಿತ್ತು. ಕೋವಿಡ್‌ 2ನೇ ಅಲೆ ತಗ್ಗುತ್ತಿರುವ ಸಂದರ್ಭದಲ್ಲಿ ಮತ್ತೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ್ದರಿಂದ ಬಡವರಲ್ಲಿ ಹೊಸ ಕನಸು ಚಿಗುರೊಡೆದಿದೆ.

ಗ್ರಾಮೀಣ ಸ್ಥಿತಿ ಏನು?: ಸರ್ಕಾರ ಭೂ ಕಂದಾಯ ಅಧಿನಿಯಮ 1964ರ ಕಲಂ 94ಸಿ ಮತ್ತು 94 ಸಿಸಿಯಡಿ ಅರ್ಜಿ ಸಲ್ಲಿಸಲು ಕಳೆದ ವರ್ಷವೇ ಸೂಚಿಸಿತ್ತು. ಆದರೆ, ನಂತರದಲ್ಲಿ ಇತ್ಯರ್ಥಪಡಿಸಿರಲಿಲ್ಲ. ಸಿಂಧನೂರು ಹೋಬಳಿಯಲ್ಲಿ 11, ಹೆಡಗಿನಾಳ-32, ತುರುವಿಹಾಳ-190, ಬಾದರ್ಲಿ-57, ವಲ್ಕಂದಿನ್ನಿ-13, ಗೊರೇಬಾಳ-1, ಕುನ್ನಟಗಿ-47, ಜವಳಗೇರಾ-1, ಹುಡಾ-133, ಸಾಲಗುಂದಾ-78, ಗುಂಜಳ್ಳಿ ಹೋಬಳಿಯಲ್ಲಿ 118 ಅರ್ಜಿ ಸಲ್ಲಿಕೆಯಾದರೆ, ಜಾಲಿಹಾಳ ಹೋಬಳಿಯಲ್ಲಿ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿರಲಿಲ್ಲ. ಕಂದಾಯ ಇಲಾಖೆಗೆ ಸಂಬಂಧಿಸಿ ಜಮೀನುಗಳ ಮಾಲೀಕತ್ವಕ್ಕಾಗಿ 681 ಜನ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಸರ್ಕಾರ ವಿಧಿಸಲಿರುವ ಶುಲ್ಕ ಭರಿಸಲಿಕ್ಕೂ ಹಲವರು ಮುಂದೆ ಬಂದಿದ್ದರು. ಆ ಎಲ್ಲ ಜನರಲ್ಲಿ ಹೊಸದಾಗಿ ಅಕ್ರಮ-ಸಕ್ರಮ ಯೋಜನೆಯಲ್ಲಿ ಸೌಲಭ್ಯ ಪಡೆಯುವ ನಿರೀಕ್ಷೆ ಮೂಡಿಸಿದೆ.

ನಗರ ವ್ಯಾಪ್ತಿಯಲ್ಲಿ ಬೇಡಿಕೆ: ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಜನರು ನಗರ ಪ್ರದೇಶದಲ್ಲೂ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು. ಸರ್ಕಾರ ನಿಗದಿಪಡಿಸಿದ ಪ್ರಕಾರ ಜಾಗದ ಅಳತೆ ಆಧರಿಸಿ ದಂಡ ಕಟ್ಟಲಿಕ್ಕೂ ಮುಂದೆ ಬಂದಿದ್ದರು. ಇದರ ಪರಿಣಾಮ ಇಲ್ಲಿನ ನಗರಸಭೆ ಕಚೇರಿಗೆ 18 ಲಕ್ಷ ರೂ. ಮುಂಗಡವೂ ಸಲ್ಲಿಕೆಯಾಗಿತ್ತು. ಮಾ.31, 2019ರ ನಂತರ ಅರ್ಜಿ ಇತ್ಯರ್ಥಪಡಿಸದ ಹಿನ್ನೆಲೆಯಲ್ಲಿ ಬಹುತೇಕರು ಅರ್ಜಿ ವಾಪಸ್‌ ಪಡೆದಿದ್ದರು. ಜತೆಗೆ 6 ಲಕ್ಷ ರೂ. ಡಿಡಿ ಮೊತ್ತ ವಾಪಸ್‌ ಪಡೆದಿದ್ದರು.

ಬೇಡಿಕೆ ಈಡೇರುವ ಆಸೆ: ಸರ್ಕಾರ ಕಂದಾಯ ಭೂಮಿಯಲ್ಲಿ ವಾಸವಾಗಿರುವ ಮನೆಗಳನ್ನು ಸಕ್ರಮಗೊಳಿಸುವ ಆದೇಶ ಹೊರಡಿಸುತ್ತಿದ್ದಂತೆ ಬಹುತೇಕರಲ್ಲಿ ಸಂತಸ ಮೂಡಿದೆ. ಮಾ.31, 2022ರ ತನಕವೂ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದರಿಂದ ಮತ್ತೆ ಅರ್ಜಿ ಸಲ್ಲಿಸುವ ಸಿದ್ಧತೆಗಳು ಗರಿಗೆದರಿವೆ. ಕಚ್ಚಾ ಲೇಔಟ್‌ಗಳನ್ನು ಪಕ್ಕಾ ಮಾಡಿಕೊಳ್ಳುವ ಧಾವಂತ ನಗರದಲ್ಲಿ ಕಂಡುಬಂದಿದ್ದು, ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯೂ ಚುರುಕು ಪಡೆದಿದೆ.

Advertisement

ಅಕ್ರಮ-ಸಕ್ರಮ ಸಮಿತಿಗೆ ಶಾಸಕರು ಅಧ್ಯಕ್ಷರು. ನಾನು ಕಾರ್ಯದರ್ಶಿ. ಸರ್ಕಾರದಿಂದ ಆದೇಶ ಹೊರಬಿದ್ದರೆ ಕೋವಿಡ್‌ ನಂತರದಲ್ಲಿ ಸಭೆ ಕರೆದು ಸ್ಥಳ ಪರಿಶೀಲಿಸಿ ಅರ್ಜಿಗಳನ್ನು ಇತ್ಯರ್ಥಪಡಿಸುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು.-ಮಂಜುನಾಥ ಭೋಗಾವತಿ,  ತಹಶೀಲ್ದಾರ್‌, ಸಿಂಧನೂರು

 

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next