Advertisement

ಶಿವಾನುಭವದಲ್ಲಿ ಅಕ್ಕಮಹಾದೇವಿ ಜಯಂತಿ

02:42 PM Apr 25, 2019 | Team Udayavani |

ಉಪ್ಪಿನಬೆಟಗೇರಿ: ಪುರುಷ ಪ್ರಧಾನ ಸಮಾಜದಲ್ಲಿ ಮೊದಲ ಬಾರಿಗೆ ಸ್ತ್ರೀಯರಿಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಶ್ರೇಯಸ್ಸು ಶಿವಶರಣೆ ಅಕ್ಕಮಹಾದೇವಿ ಅವರಿಗೆ ಸಲ್ಲುತ್ತದೆ ಎಂದು ಸ್ಥಳೀಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.

Advertisement

ಗ್ರಾಮದ ಮೂರು ಸಾವಿರ ವಿರಕ್ತಮಠದಲ್ಲಿ ನಡೆದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ವೈರಾಗ್ಯದ ಖಣಿ ಶಿವಶರಣೆ ಅಕ್ಕಮಹಾದೇವಿಯವರ ಧರ್ಮ ನಿಷ್ಠೆ, ಅಚಲ ವಿಶ್ವಾಸ, ಆದರ್ಶ ವ್ಯಕ್ತಿತ್ವ ಪ್ರಪಂಚದ ಯಾವ ಮಹಿಳೆಯರಲ್ಲಿಯೂ ಸಿಗುವುದಿಲ್ಲ. ಅಕ್ಕಮಹಾದೇವಿಯು ಚನ್ನಮಲ್ಲಿಕಾರ್ಜುನನಲ್ಲಿ ಕೇಳಿದಂತೆ ನಾವು ಸಹ ಮಹಾನುಭವಿಗಳ, ಸತ್ಯವಂತರ, ಒಳ್ಳೆಯ ಗುರುವಿನ ಸಂಗ ನೀಡು ಎಂದು ಭಗವಂತನಲ್ಲಿ ಕೇಳಿಕೊಳ್ಳೋಣ ಎಂದರು.

ಹೊಲ-ಮನೆ, ಅಧಿಕಾರ-ಅಂತಸ್ತು ಎಂಬ ಲೌಕಿಕ ಸಂಪತ್ತಿಗಿಂತ, ಪಾಠ-ಪ್ರವಚನ, ಪೂಜಾ-ಕೈಂಕರ್ಯ ನಡೆಯುವ ಅಲೌಕಿಕ ಸಂಪತ್ತಿಗೆ ಈ ಲೋಕದಲ್ಲಿ ಬಹಳ ಬೆಲೆ ಇದೆ. ಶ್ರೀಮಠದಲ್ಲಿ ನಡೆಯುತ್ತಿರುವ ಮಾಸಿಕ ಶಿವಾನುಭವ ಗೋಷ್ಠಿ ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಅವಶ್ಯವಾಗಿದೆ. ಮಹಿಳೆಯರಂತೆ ಪುರುಷರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಜಯಂತಿ ಹಾಗೂ ಅಕ್ಕಮಹಾದೇವಿ ತೊಟ್ಟಿಲೋತ್ಸವ ಜರುಗಿತು. ಮಹಿಳೆಯರಿಂದ ಆಕರ್ಷಕ ಜಾನಪದ ಗೀತೆಗಳು ಹಾಗೂ ಮಕ್ಕಳಿಂದ ವಚನ ಕಂಠ ಪಾಠ ಜರುಗಿತು.

ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ನವಲಗುಂದ, ದಾಕ್ಷಾಯಣಿ ತೊಗ್ಗಿ, ಸುಮಿತ್ರಾ ಗೌರಿಮಠ, ಗೀತಾ ಅರಳೀಕಟ್ಟಿ, ಶೈಲಾ ಪೂಜಾರ, ಕಸ್ತೂರಿ ಬುದ್ನಿ, ಸುನಂದಾ ಮಡಿವಾಳರ, ಕಸ್ತೂರಿ ಯಲಿಗಾರ, ರೇಣುಕಾ ಲಗಮಣ್ಣವರ ಹಾಗೂ ಲಕ್ಷ್ತ್ರೀ ಮಡಿವಾಳರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಪುಷ್ಪಾ ದೊಡವಾಡ ಕಾರ್ಯಕ್ರಮ ನಿರ್ವಹಿಸಿದರು.

ಬಸವ ಜಯಂತಿಯ ಶುಭ ದಿನದಂದು ಶ್ರೀಮಠದಲ್ಲಿ ಸುಸಜ್ಜಿತ ಗ್ರಂಥಾಲಯ ಹಾಗೂ ಸಂಗೀತ ಪಾಠಶಾಲೆ ಪ್ರಾರಂಭಿಸಲಾಗುವುದು. ಗ್ರಂಥಾಲಯಕ್ಕೆ ಪುಸ್ತಕ ಸಂಗ್ರಹಿಸಲು ಗ್ರಾಮದಲ್ಲಿ ಸ್ವತಃ ನಾನೇ ಪುಸ್ತಕ ಜೋಳಿಗೆಯನ್ನು ಹಿಡಿದು ಮನೆ ಮನೆಗೆ ತೆರಳಿ ವಿಶೇಷ ಪುಸ್ತಕಗಳನ್ನು ಸಂಗ್ರಹಿಸಲು ನಿರ್ಧರಿಸಲಾಗಿದೆ. ದೇಶ ಸುತ್ತು ಕೋಶ ಓದು ಎಂಬ ನಾಣ್ಣುಡಿಯಂತೆ ಜನರಲ್ಲಿ ಓದುವ ಹವ್ಯಾಸ ಮತ್ತು ಸಂಗೀತದ ಸಂಸ್ಕೃತಿಯನ್ನು ಈ ಮೂಲಕ ಉಳಿಸಿ-ಬೆಳೆಸಲು ಯೋಚಿಸಲಾಗಿದೆ.
• ಕುಮಾರ ವಿರೂಪಾಕ್ಷ ಸ್ವಾಮೀಜಿ, ಮೂರುಸಾವಿರ ವಿರಕ್ತಮಠ, ಉಪ್ಪಿನಬೆಟಗೇರಿ
Advertisement
Advertisement

Udayavani is now on Telegram. Click here to join our channel and stay updated with the latest news.

Next