Advertisement

ಶಿವಾಜಿ ಸುರತ್ಕಲ್‌ 2 ರೆಗ್ಯುಲರ್‌ ಸ್ಕ್ರಿಪ್ಟ್  ಅಲ್ಲ…ನಿರ್ದೇಶಕ ಆಕಾಶ್‌ ಶ್ರೀವತ್ಸ ಮಾತು

04:16 PM Apr 10, 2023 | Team Udayavani |

“ಶಿವಾಜಿ ಸುರತ್ಕಲ್‌’ ಮೊದಲ ಭಾಗ ನೋಡಿದವರು “ಶಿವಾಜಿ ಸುರತ್ಕಲ್‌-2’ನ ತುಂಬಾ ಇಷ್ಟಪಡುತ್ತಾರೆ. ಒಂದೊಳ್ಳೆಯ ಸಿನಿಮಾವಾಗಿ ರಂಜಿಸಲಿದೆ’ – ಇದು ನಿರ್ದೇಶಕ ಆಕಾಶ್‌ ಶ್ರೀವತ್ಸ ಮಾತು.

Advertisement

ಹೌದು, ಆಕಾಶ್‌ ಶ್ರೀವತ್ಸ ನಿರ್ದೇಶನದ, ರಮೇಶ್‌ ಅರವಿಂದ್‌ ನಟನೆಯ “ಶಿವಾಜಿ ಸುರತ್ಕಲ್‌-2′ ಚಿತ್ರ ಏ.14ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೊದಲ ಭಾಗ ಹಿಟ್‌ ಆಗುವ ಮೂಲಕ ಸಿನಿಮಾ ತಂಡ ಈಗ ಎರಡನೇ ಭಾಗದ ಮೇಲೆ ನಿರೀಕ್ಷೆ ಇಟ್ಟಿದೆ.

ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟ್ರೇಲರ್‌, ಹಾಡುಗಳು ಹಿಟ್‌ಲಿಸ್ಟ್‌ ಸೇರುವ ಮೂಲಕ ನಿರ್ದೇಶಕ ಆಕಾಶ್‌ ಮೊಗದಲ್ಲಿ ನಗುಮೂಡಿದೆ. ಅದೇ ಕಾರಣದಿಂದ ಅವರು ಸಿನಿಮಾ ಬಗ್ಗೆ ವಿಶ್ವಾಸದ ಮಾತುಗಳನ್ನಾಡುತ್ತಾರೆ.

“ಒಂದು ಥ್ರಿಲ್ಲರ್‌ ಸಿನಿಮಾವಾಗಿ “ಶಿವಾಜಿ ಸುರತ್ಕಲ್‌-2′ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದರಲ್ಲೂ ಮೊದಲ ಭಾಗವನ್ನು ಇಷ್ಟಪಟ್ಟವರಿಗೆ ಇದು ಮತ್ತಷ್ಟು ಖುಷಿ ನೀಡಲಿದೆ. “ಶಿವಾಜಿ ಸುರತ್ಕಲ್‌-2′ ಒಂದು ಪತ್ತೆದಾರಿ ಸಿನಿಮಾ. ಹಾಗಂತ ಕೇವಲ ಅಷ್ಟಕ್ಕೇ ಸೀಮಿತವಾಗಿಲ್ಲ. ಸ್ಕ್ರಿಪ್ಟ್ನಲ್ಲಿ ಸಾಕಷ್ಟು ಹೊಸ ಅಂಶಗಳನ್ನು ಸೇರಿಸಿದ್ದೇವೆ. “ಶಿವಾಜಿ ಸುರತ್ಕಲ್‌ 2 ರೆಗ್ಯುಲರ್‌ ಸ್ಕ್ರಿಪ್ಟ್ ಅಲ್ಲ. ಇಲ್ಲಿ ಮನುಷ್ಯನ ಮನಸ್ಸಿನೊಳಗೆ ಏನಾಗುತ್ತದೆ, ಆತನ ಆಲೋಚನೆಗಳು … ಹೀಗೆ ಹಲವು ಅಂಶಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ನಾವು ಮೊದಲ ಭಾಗ ಬಿಡುಗಡೆಯಾದಾಗ ಥಿಯೇಟರ್‌ ಭೇಟಿ ನೀಡಿದ್ದೆವು. ಆಗ ಅನೇಕರು, ಚಿತ್ರದ ಕೊನೆಯಲ್ಲಿ ರಮೇಶ್‌ ಹಾಗೂ ರಾಧಿಕಾ ಅವರ ಫೋಟೋ ತೋರಿಸಿದ್ದು ಯಾಕೆ ಹಾಗೂ ಸುರತ್ಕಲ್‌ಗ‌ೂ ಚಿತ್ರಕ್ಕೂ ಸಂಬಂಧವೇನು ಎಂದು ಕೇಳಿದ್ದರು. ಅವೆಲ್ಲದಕ್ಕೂ ಉತ್ತರ ಈ ಚಿತ್ರದಲ್ಲಿದೆ. ಇಲ್ಲಿ ಕೇವಲ ಪತ್ತೆದಾರಿಯಾಗಿ ಕಥೆ ಮುಂದೆ ಸಾಗುವುದಿಲ್ಲ. ಶಿವಾಜಿಯ ಎಮೋಶನಲ್‌ ಜರ್ನಿ ಕೂಡಾ ಇಲ್ಲಿ ಸಾಗಿಬರಲಿದೆ’ ಎನ್ನುವುದು ಆಕಾಶ್‌ ಮಾತು.

ಆಕಾಶ್‌ ಶ್ರೀವತ್ಸ ಚಿತ್ರಕಥೆ ಬರೆದು, ಸಂಕಲನ ಮಾಡಿ, ನಿರ್ದೇಶನ ಮಾಡಿರುವ ಈ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಶನ್ಸ್‌ ಮೂಲಕ ಅನೂಪ್‌ ಗೌಡ ಮತ್ತು ರೇಖಾ ಕೆ ಎನ್‌ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ರಮೇಶ್‌ ಅರವಿಂದ್‌, ರಾಧಿಕಾ ನಾರಾಯಣ್‌, ಮೇಘನಾ ಗಾಂವ್ಕರ್‌, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ, ಆರಾಧ್ಯ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next