Advertisement

 Ajith Kumar: “ಅಜಿತ್‌ ನನಗೆ ಮೋಸ ಮಾಡಿದ್ದಾರೆ..” ಥಲಾ ವಿರುದ್ಧ ಗುಡುಗಿದ ನಿರ್ಮಾಪಕ

10:10 AM Jul 11, 2023 | Team Udayavani |

ಚೆನ್ನೈ: ಕಾಲಿವುಡ್‌ ಸೂಪರ್‌ ಸ್ಟಾರ್‌ ಅಜಿತ್‌ ಕುಮಾರ್‌ ಅವರಿಗೆ ದೊಡ್ಡ ಅಭಿಮಾನಿಗಳ ವರ್ಗವೇ ಇದೆ. ಸದ್ಯ ಅಭಿಮಾನಿಗಳು ಅವರ ಮುಂದಿನ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.

Advertisement

ಈ ನಡುವೆ ನಿರ್ಮಾಪಕರೊಬ್ಬರು ಅಜಿತ್‌ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಕಮಲ್ ಹಾಸನ್ ಅವರ ʼವೆಟ್ಟೈಯಾಡು ವಿಲಾಯಡುʼ ಮತ್ತುʼ ಇಂದ್ರಲೋಹತ್ತಿಲ್ ನಾ ಅಳಗಪ್ಪನ್ʼ ಚಿತ್ರಗಳನ್ನು ನಿರ್ಮಿಸಿರುವ ಮಾಣಿಕ್ಕಂ ನಾರಾಯಣನ್ ಅವರು ನಟ ಅಜಿತ್‌ ಅವರ ವಿರುದ್ಧ ಹಣಕಾಸಿನ ವಿಚಾರವಾಗಿ ಕೆಲ ಆರೋಪಗಳನ್ನು ಮಾಡಿದ್ದಾರೆ.

“ಈ ಹಿಂದೆ ಅಜಿತ್‌ ಅವರು ನನ್ನ ಬಳಿ ಅವರ ತಂದೆ – ತಾಯಿಯನ್ನು ಮಲೇಷ್ಯಾಕ್ಕೆ ಕಳುಹಿಸಬೇಕೆಂದು ಹಣವನ್ನು ಪಡೆದುಕೊಂಡಿದ್ದರು. ಆ ವೇಳೆ ಅವರು ನನಗಾಗಿ ಸಿನಿಮಾ ಮಾಡುತ್ತೇನೆ. ಅಲ್ಲಿ ನಾವು ಸಂಭಾವನೆಯಲ್ಲಿ ಈ ಹಣವನ್ನು ಅಡೆಸ್ಟ್‌ ಮಾಡಿಕೊಳ್ಳುವ ಎಂದಿದ್ದರು. ಆದರೆ ಇಲ್ಲಿಯವರೆಗೆ ಅವರು ಹಣವನ್ನು ಹಿಂದಿರುಗಿಸಲಿಲ್ಲ ಹಾಗೂ ನನಗಾಗಿ ಚಿತ್ರವನ್ನೂ ಮಾಡಲಿಲ್ಲ. ಇಷ್ಟು ವರ್ಷಗಳಲ್ಲಿ ಅವನು ಇದರ ಬಗ್ಗೆ ಮಾತನಾಡಲಿಲ್ಲ, ಅವರು ತನ್ನನ್ನು ತಾನು ಸಂಭಾವಿತ ಎಂದು ಕರೆಯುತ್ತಾರೆ, ಆದರೆ ಅವರಲ್ಲ” ಎಂದು ನಟನ ವಿರುದ್ಧ ಮಾಧ್ಯಮಗಳ ಮುಂದೆಯೇ ಕಿಡಿಕಾಡಿದ್ದಾರೆ.

“ಅಜಿತ್ ಅವರ ಪತ್ನಿ ಶಾಲಿನಿ ಅವರು ನನಗೆ ಹಲವು ವರ್ಷಗಳ ಹಿಂದೆ ಉತ್ತಮ ಸ್ನೇಹಿತೆ ಆಗಿದ್ದರು. ಅವರು ಒಳ್ಳೆಯ ವ್ಯಕ್ತಿಯೂ ಹೌದು. ಅವರದು ಉತ್ತಮ ಕುಟುಂಬ. ಇಂದು ಅಜಿತ್‌ ಒಂದು ಸಿನಿಮಾಕ್ಕೆ 50 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇಂಥವರು ಜನರಿಗೆ ಮೋಸ ಮಾಡುವ ಅವಶ್ಯಕತೆ ಏನಿದೆ? ಎಎಮ್ ರತ್ನಂ ಅವರಂತಹ ಕೆಲವು ನಿರ್ಮಾಪಕರು ಅಜಿತ್ ಚಿತ್ರಗಳನ್ನು ನಿರ್ಮಿಸುವ ಮೂಲಕ ಬಹಳಷ್ಟು ಹಣವನ್ನು ಕಳೆದುಕೊಂಡಿದ್ದಾರೆ. ಆದರೆ ಅಜಿತ್‌ ಎಂದಿಗೂ ಅವರ ಪರವಾಗಿ ನಿಂತಿಲ್ಲ” ಎಂದು ನಿರ್ಮಾಪಕರು ಹೇಳಿದರು.

ಮಾಣಿಕ್ಕಂ ನಾರಾಯಣನ್ ಅಜಿತ್‌ ಅವರ ಮೇಲೆ ಆರೋಪಗಳನ್ನು ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಇದೇ ವಿಚಾರವಾಗಿ ಅವರು ಆರೋಪಗಳನ್ನು ಮಾಡಿದ್ದಾರೆ. ಆದರೆ ಇದುವರೆಗೆ ನಟನಿಂದ ಯಾವ ಹೇಳಿಕೆಯೂ ಬಂದಿಲ್ಲ.

Advertisement

ನಟ ಅಜಿತ್‌ ಸದ್ಯ ಮಾಗಿಜ್ ತಿರುಮೇನಿಯ ಅವರ ʼವಿದಾ ಮುಯಾರ್ಚಿʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಪ್ರಿ ಪ್ರೊಡಕ್ಷನ್‌ ವರ್ಕ್‌ ಚಾಲ್ತಿಯಲ್ಲಿದ್ದು,ಪಾತ್ರ ವರ್ಗದ ಬಗ್ಗೆ ಶೀಘ್ರದಲ್ಲಿ ಮಾಹಿತಿ ಹೊರ ಬೀಳಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next