Advertisement

ಲಾಠಿಚಾರ್ಜ್‌ಗೆ ಕಾರಣರಾದವರಿಗೆ ಶಿಕ್ಷೆಯಾಗಲಿ

05:25 PM Sep 07, 2020 | Suhan S |

ಬಳ್ಳಾರಿ: ಮಧ್ಯಪ್ರದೇಶದಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್‌ಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿ ಸಬೇಕು. ಪ್ರತಿಭಟನಾಕಾರರ ವಿರುದ್ಧ ಮಾಡಿರುವ ಸುಳ್ಳು ಆರೋಪಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ನಗರದ ಡಿಸಿ ಕಚೇರಿ ಆವರಣದಲ್ಲಿ ಎಐಡಿವೈಒ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಮಧ್ಯ ಪ್ರದೇಶದ ವಿವಿಧ ಜಿಲ್ಲೆಗಳ 1500ಕ್ಕೂ ಹೆಚ್ಚು ಯುವಕರು ತಮ್ಮ ಜಿಲ್ಲೆಗಳಲ್ಲಿ ನಿರಂತರ ಹಲವಾರು ಪ್ರತಿಭಟನೆಗಳ ನಂತರ ಭೋಪಾಲ್‌ನಲ್ಲಿ ಶುಕ್ರವಾರ ಸಭೆ ಸೇರಿದ್ದರು. ಎಲ್ಲರಿಗೂ ಉದ್ಯೋಗ ನೀಡಿ, ಎಸ್‌ಎಸ್‌ಸಿ, ರೈಲ್ವೆ, ಶಿಕ್ಷಕರು ಮತ್ತು ಪೊಲೀಸ್‌ ಇಲಾಖೆ ನೇಮಕಾತಿ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಬೇಕು. ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬ ಬೇಡಿಕೆಗಳೊಂದಿಗೆ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ ಅವರಿಗೆ ಮನವಿಪತ್ರ ಸಲ್ಲಿಸಲು ಮುಂದಾಗಿದ್ದರು. ಆದರೆ, ಅವರ ಅಹವಾಲಗಳನ್ನು ಕೇಳುವಬದಲು, ಮಧ್ಯಪ್ರದೇಶ ಪೊಲೀಸರು ಅವರ ಮೇಲೆ ಲಾಠಿಚಾರ್ಜ್‌ ಮಾಡಿದ್ದಾರೆ. ಇದರಿಂದ ಅನೇಕರು ಗಾಯಗೊಂಡಿದ್ದಾರೆ. ಈ ಹೋರಾಟದ ನಾಯಕತ್ವ ವಹಿಸಿದ್ದ ಎಐಡಿವೈಓ ಮಧ್ಯಪ್ರದೇಶ ರಾಜ್ಯ ಕಾರ್ಯದರ್ಶಿ ಪ್ರಮೋದ್‌ ನಾಮದೇವ್‌ ಅವರೊಂದಿಗೆ ನೂರಾರು ಯುವಕರನ್ನು ಬಂಧಿಸಲಾಗಿದೆ. ಪ್ರತಿಭಟನಾಕಾರರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಸ್‌ಎಸ್‌ಸಿ, ಶಿಕ್ಷಕರು, ರೈಲ್ವೆ ಮತ್ತು ಪೊಲೀಸ್‌ ನೇಮಕಾತಿ ಪರೀಕ್ಷೆಗಳ ಫಲಿತಾಂಶಗಳನ್ನು ತಕ್ಷಣ ಪ್ರಕಟಿಸಬೇಕು. ಮಧ್ಯಪ್ರದೇಶದಲ್ಲಿ ಮಾತ್ರವಲ್ಲ. ದೇಶವ್ಯಾಪಿ ಯುವಜನರಿಗೆ ಉದ್ಯೋಗವನ್ನು ಖಾತ್ರಿಪಡಿಸಬೇಕು. ದೇಶಾದ್ಯಂತ ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ 23 ಲಕ್ಷ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಅಲ್ಲದೇ, ಎನ್‌ ಆರ್‌ಎ ರಾಷ್ಟೀಯ ನೇಮಕಾತಿ ಸಂಸ್ಥೆಯ ಯುವ ವಿರೋಧಿ ನೀತಿ ವಿರುದ್ಧ, ನಿರುದ್ಯೋಗದ ವಿರುದ್ಧ ದೇಶಾದ್ಯಂತ ಪ್ರಬಲ ಯುವ ಚಳವಳಿಯನ್ನು ನಿರ್ಮಿಸಲು ಯುವ ಸಮುದಾಯದ ಪ್ರತಿಯೊಂದು ವಿಭಾಗವು ಮುಂದೆ ಬರಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ.

ಬಳಿಕ ಜಿಲ್ಲಾಡಳಿತದ ಮೂಲಕ ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು. ಎಐಡಿವೈಒ ಸಂಘಟನೆಯ ಎನ್‌.ಕೆ.ರಾಜ, ರಾಜಶೇಖರ್‌, ಹೊನ್ನೂರಸ್ವಾಮಿ, ಪಂಪ, ಪ್ರಭು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next