ಚೆನ್ನೈ: ತಮಿಳುನಾಡಿನ ರಾಜಕೀಯ ಬಿಕ್ಕಟ್ಟು ಒಂದು ಹಂತಕ್ಕೆ ಶಮನವಾದ ಬೆನ್ನಲ್ಲೇ ಇದೀಗ ಜಯಲಲಿತಾ ಉತ್ತರಾಧಿಕಾರಿ ಯಾರು ಎಂಬ ವಿಚಾರದಲ್ಲಿ ಹೊಸ ಯುದ್ಧ ಆರಂಭವಾಗಿದೆ. ರಾಜ್ಯದ ಸಿಎಂ ಹುದ್ದೆಗೆ ಪನ್ನೀರ್ಸೆಲ್ವಂ, ಶಶಿಕಲಾ, ಪಳನಿಸ್ವಾಮಿ ಇನ್ನಿಲ್ಲದ ಕಸರತ್ತು ನಡೆಸಿದ ಬಳಿಕ, ಜಯಲಲಿತಾ ಅವರ ಸೋದರಸೊಸೆ ದೀಪಾ ಜಯಕುಮಾರ್ ಈಗ ಇದೇ ಹಾದಿಯಲ್ಲಿ ಸಾಗಿದ್ದಾರೆ.
ಜಯಲಲಿತಾರ 69ನೇ ಹುಟ್ಟುಹಬ್ಬದ ದಿನವಾದ ಶುಕ್ರವಾರ ದೀಪಾ ಅವರು “ಅಮ್ಮಾ ದೀಪಾ ಪೆರವಾಯಿ’ ಎಂಬ ಹೊಸ ರಾಜಕೀಯ ವೇದಿಕೆಯೊಂದಕ್ಕೆ ಚಾಲನೆ ನೀಡಿದ್ದು, ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ್ದಾರೆ. ಅಷ್ಟೇ ಅಲ್ಲ, ದ್ರೋಹಿಗಳಿಂದ ಎಐಎಡಿಎಂಕೆಯನ್ನು ಮುಕ್ತಗೊಳಿಸುತ್ತೇನೆ ಎಂದೂ ಘೋಷಿಸಿದ್ದಾರೆ. ಜತೆಗೆ, ಜಯಾ ಅವರ ಆರ್ಕೆ ನಗರ ಕ್ಷೇತ್ರದಿಂದಲೇ ಅಸೆಂಬ್ಲಿ ಚುನಾವಣೆಯಲ್ಲಿ ಕಣಕ್ಕಿಳಿಯುವುದಾಗಿಯೂ ತಿಳಿಸಿದ್ದಾರೆ.
“”ಅಮ್ಮನ ಉತ್ತರಾಧಿಕಾರಿಯಾದ ನನ್ನ ರಾಜಕೀಯ ಪಯಣ ಆರಂಭವಾಗಿದೆ. ದ್ರೋಹಿಗಳ ಗುಂಪೊಂದುಸರಕಾರದ ಹಿಂದೆ ಕೆಲಸ ಮಾಡುತ್ತಿದ್ದು ಅದನ್ನು ಕಿತ್ತುಹಾಕಬೇಕು. ಶಶಿಕಲಾ ವಿರೋಧಿ ಬಣಗಳೆಲ್ಲ ಒಂದಾಗಿ, ಅಮ್ಮ ತೋರಿಸಿಕೊಟ್ಟ ದಾರಿಯಲ್ಲಿ ನಡೆಯಬೇಕು,” ಎಂದಿದ್ದಾರೆ ದೀಪಾ.
ಅಮ್ಮನ ಆಸ್ತಿ ನಮ್ಮದು: ಇನ್ನೊಂದೆಡೆ, ಈವರೆಗೆ ಶಶಿಕಲಾ ಬಣದಲ್ಲಿ ಗುರುತಿಸಿಕೊಂಡಿದ್ದ ಜಯಾ ಸೋದರಳಿಯ ದೀಪಕ್ ಜಯಕುಮಾರ್ ಶುಕ್ರವಾರ ಉಲ್ಟಾ ಹೊಡೆದಿದ್ದಾರೆ. ಪೊಯೆಸ್ ಗಾರ್ಡನ್ ನಿವಾಸ ಸೇರಿದಂತೆ ಜಯಾರ ಎಲ್ಲ ಆಸ್ತಿ ನನಗೆ ಹಾಗೂ ದೀಪಾಗೆ ಸೇರಬೇಕು. ವಿಲ್ನಲ್ಲಿ ಆಸ್ತಿಯನ್ನು ಜಯಾ ನಮಗೇ ಬರೆದಿಟ್ಟುಹೋಗಿದ್ದಾರೆ. ಬೇಕಿದ್ದರೆ, ಕೋರ್ಟ್ ವಿಧಿಸಿರುವ 100 ಕೋಟಿ ರೂ. ದಂಡವನ್ನೂ ನಾವು ಪಾವತಿಸುತ್ತೇವೆ ಎಂದಿದ್ದಾರೆ.
ಇದೇ ವೇಳೆ, ಜಯಾ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸಿಎಂ ಪಳನಿಸ್ವಾಮಿ, 69 ಲಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಮಾಜಿ ಸಿಎಂ ಪನ್ನೀರ್ಸೆಲ್ವಂ ಕೂಡ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಧರ್ಮಧಿಯುದ್ಧ ಮುಂದುವರಿಯಲಿದೆ ಎಂದಿದ್ದಾರೆ.
ಶತ್ರುಗಳು ಹಾಗೂ ದ್ರೋಹಿಗಳು ಪಕ್ಷವನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಯತ್ನಿಸಿದ್ದರು. ಆದರೆ, ಅಮ್ಮನ ಆತ್ಮವು ಎಐಎಡಿಎಂಕೆಸರಕಾರ ಅಸ್ತಿತ್ವ ಕಳೆದುಕೊಳ್ಳದಂತೆ ನೋಡಿಕೊಂಡಿತು. ನಮಗೆ ಸರಿಯಾದ ಮಾರ್ಗದರ್ಶನ ಮಾಡಿತು.
ಶಶಿಕಲಾ ನಟರಾಜನ್, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ