Advertisement

ಕೃಷಿಕ ಹೈರಾಣು ; ಕೃಷಿ ಉತ್ಪನ್ನಗಳಿಗೆ ಮಂಗನ ಹಾವಳಿ

12:17 AM Feb 09, 2020 | Sriram |

ಸುಳ್ಯ ತಾಲೂಕಿನ ಆಲೆಟ್ಟಿ, ಐವರ್ನಾಡು, ಬಾಳಿಲ, ಅರಂತೋಡು, ಕಲ್ಲುಗುಂಡಿ ಸಂಪಾಜೆ, ತೊಡಿಕಾನ, ಗುತ್ತಿಗಾರು, ಮಡಪ್ಪಾಡಿ ಇತರೆಡೆಗಳಲ್ಲಿ ಮಂಗಗಳ ಕಾಟ ಜಾಸ್ತಿ ಇದೆ. ಕೆಲವೊಂದು ವರ್ಷಗಳ ಹಿಂದೆ ಮಂಗಗಳ ಉಪಟಳ ಕಡಿಮೆ ಇತ್ತು. ಇತ್ತೀಚಿನ ದಿನದಲ್ಲಿ ಅರಣ್ಯ ನಾಶವಾಗಿದ್ದು, ಮಂಗಗಳು ಆಹಾರಕ್ಕಾಗಿ ಉಪಯೋಗಿಸುತ್ತಿದ್ದ ಹಣ್ಣು ಹಂಪಲು ಮರಗಳು ಕೂಡ ನಾಶಗೊಂಡಿದೆ. ಇದರಿಂದ ಮಂಗಳು ಹಳ್ಳಿಗಳಲ್ಲಿ ರೈತರ ತೋಟಗಳಿಗೆ ಆಹಾರ ಹುಡುಕುತ್ತ ಬರುತ್ತಿವೆ ಎಂದು ಪರಿಸರ ತಜ್ಞರ ಅಭಿಪ್ರಾಯ.

Advertisement

ಅರಂತೋಡು ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಮಂಗಗಳ ಹಾವಳಿ ಹೆಚ್ಚಾಗಿ ಕೃಷಿ ಬೆಳೆಗಳನ್ನು ನಾಶ ಮಾಡುತ್ತಿರುವುದರಿಂದ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಕೃಷಿ ಉತ್ಪನ್ನಗಳಿಗೆ ಇಂದು ಮಂಗಗಳ ಕಾಟ ಜಾಸ್ತಿಯಾಗಿವೆ. ಈ ವರ್ಷ ಬರಗಾಲದಿಂದ ಅಲ್ಪ ಸ್ವಲ್ಪ ಉಳಿದ ಕೃಷಿ ಬೆಳೆಗಳನ್ನು ಮಂಗಗಳ ಕಾಟದಿಂದ ರಕ್ಷಿಸಿಕೊಳ್ಳಲು ರೈತರು ತುಂಬಾ ಸಂಕಷ್ಟ ಎದುರಿಸಲಾಗದೆ ಹೈರಾಣಾಗಿದ್ದಾರೆ. ಮಂಗಗಳು ಕೃಷಿ ಬೆಳೆಗಳನ್ನು ನಾಶ ಮಾಡುತ್ತಿರುವ ಸಮಸ್ಯೆಯ ಬಗ್ಗೆ ಸರಕಾರ ಮತ್ತು ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.

ಗುಂಪು ಮಂಗಗಳು
ಗುಂಪು ಮಂಗಗಳು ಜಾಸ್ತಿ ಕೃಷಿ ತೋಟಕ್ಕೆ ಲಗ್ಗೆ ಇಡುತ್ತವೆ. ಗುಂಪಿನಲ್ಲಿ ಸುಮಾರು 70-80 ಮಂಗಗಳಿರುತ್ತವೆ. ಇದರಲ್ಲಿ ಒಂದು ದೊಡ್ಡ ಗಂಡು ಮಂಗವಿರುತ್ತವೆ. ಐದರಿಂದ ಆರು ಹೆಣ್ಣು ದೊಡ್ಡ ಮಂಗಗಳಿರುತ್ತವೆ. ಉಳಿದ ಮಂಗಗಳು ಇವುಗಳ ಸಂಸಾರ ಆಗಿರುತ್ತವೆ. ರೈತರಿಂದ ಅಪಾಯದ ಸೂಚನೆ ಕಂಡುಬಂದರೆ ತಾನು ಹೊರಡಿಸುವ ಒಂದು ಸ್ವರದಿಂದ ಪೂರ್ಣ ಸಂಸಾರ ಎಚ್ಚರವಾಗಿರಲು ಸೂಚನೆ ನೀಡುತ್ತದೆ. ಇದರಿಂದ ಎಲ್ಲ ಮಂಗಗಳು ಕೃಷಿ ಗಿಡ, ಮರಗಳ ಪೊದೆಗಳಲ್ಲಿ ಅಡಗಿ ಕುಳಿತು ಇಲ್ಲವೆ ಓಡಿ ಹೋಗಿ ಅಪಾಯದಿಂದ ಪಾರಾಗುತ್ತವೆ ಎಂದು ಮಂಗಗಳ ಚಲನವನವನ್ನು ಹತ್ತಿರದಿಂದ ಬಲ್ಲ ರೈತರು ಹೇಳುತ್ತಾರೆ.

ಉತ್ಪನ್ನಗಳನ್ನು ಒಯ್ಯುತ್ತವೆ
ರೈತರು ಕೃಷಿ ತೋಟದಲ್ಲಿ ಕಾಣದ ಸಂದರ್ಭದಲ್ಲಿ ಮಂಗಗಳು ತೋಟಗಳಿಗೆ ಗುಂಪು ಗುಂಪಾಗಿಯೇ ಲಗ್ಗೆಯಿಡುತ್ತವೆ. ಹೆಚ್ಚಿನ ಕೃಷಿ ಉತ್ಪನ್ನಗಳನ್ನು ಅವುಗಳು ತಿನ್ನುತ್ತವೆ. ತೆಂಗಿನ ಮರಕ್ಕೆ ಹತ್ತಿದರೆ ಸೀಯಾಳವನ್ನು ತೂತು ಮಾಡಿ ನೀರು ಕುಡಿದು ತಿನ್ನುತ್ತವೆ. ಬಾಳೆಕಾಯಿಗಳನ್ನು ಸುಲಿದು ತಿನ್ನುತ್ತವೆ. ಅಡಿಕೆ ಸಿಪ್ಪೆಯನ್ನು ಸುಲಿದು ಅದರ ರಸ ಹಿರುತ್ತವೆ. ಗೇರು, ಕೊಕ್ಕೊ ಬೀಜವನ್ನು ತಿನ್ನುತ್ತವೆ. ತರಕಾರಿಗಳನ್ನು ಬೆಳೆಸಿದರೆ ಅವುಗಳನ್ನು ಕೊಯ್ದು ಹೊತ್ತುಕೊಂಡು ಓಡಿ ಹೋಗಿ ಕಾಡಿನ ಮರದಲ್ಲಿ ಕೂತು ತಿನ್ನುತ್ತವೆ. ಹೀಗೆ ಹೆಚ್ಚಿನ ಕೃಷಿ ಉತ್ಪನ್ನಗಳನ್ನು ತರಕಾರಿಗಳನ್ನು ಮಂಗಗಳು ತಿನ್ನುತ್ತವೆ.

ಒಂಟಿ ಮಂಗ
ಕೆಲವೊಮ್ಮೆ ಒಂದು ಗಂಡು ಮಂಗ ಮಾತ್ರ ತೋಟದಲ್ಲಿ ಕಾಣಸಿಗುತ್ತದೆ. ಇದು ಗುಂಪು ಮಂಗಗಳೊಂದಿಗೆ ಸೇರುವುದಿಲ್ಲ. ಹೆಚ್ಚಾಗಿ ದೈತ್ಯ ಗಾತ್ರವನ್ನು ಹೊಂದಿರುತ್ತದೆ. ಇದು ಬಹಳ ಉಗ್ರವಾಗಿ ಇರುತ್ತದೆ. ಇದು ರೈತರನ್ನೇ ಗದರಿಸುತ್ತದೆ. ಮಹಿಳೆಯರು ಹೋಗಿ ಮಂಗ ಓಡಿಸುವ ಕೆಲಸ ಮಾಡಿದರೆ ಅವರನ್ನು ಇದು ಗದರಿಸಿ ಓಡಿಸಲು ಪ್ರಯತ್ನ ಮಾಡುತ್ತದೆ. ಇದು ಕೃಷಿ ತೋಟಗಳಿಗೆ ನುಗ್ಗಿ ಕೃಷಿ ಉತ್ಪನ್ನ ತಿನ್ನುತ್ತಿದ್ದರೆ ಗೊತ್ತಾಗುವುದು ಕಡಿಮೆ. ಅಪರೂಪಕೊಮ್ಮೆ ಕೃಷಿ ಗಿಡ, ಮರಗಳು ಅಲ್ಲಾಡಿದ್ದಾಗ ಮಾತ್ರ ಮಂಗನ ಇರುವಿಕೆ ಗೊತ್ತಾಗುತ್ತದೆ.

Advertisement

ಕ್ಯಾಟ್‌Å ಬಿಲ್ಲಿಗೆ ಹೆದರುತ್ತವೆ
ತೋಟಕ್ಕೆ ಕೋವಿ ಎತ್ತಿಕೊಂಡು ಹೋದರೂ ಅವುಗಳು ಭಯ ಪಡುವುದಿಲ್ಲ. ಕೋವಿಯ ಗುಂಡಿಗೂ ಅವುಗಳು ಸಿಗುವುದಿಲ್ಲ. ಒಂದು ಗುಂಡು ಹೊಡೆಯಲು ತುಂಬಾ ದುಬಾರಿಯಾಗುತ್ತದೆ. ಕ್ಯಾಟ್‌Å ಬಿಲ್ಲಿನ ಕಲ್ಲಿಗೆ ಮಂಗಗಳು ಸ್ವಲ್ಪ ಮಟ್ಟಿಗೆ ಹೆದರುತ್ತವೆ. ಈ ಬಿಲ್ಲಿನಲ್ಲಿ ಕಲ್ಲು ತುಂಬಾ ವೇಗವಾಗಿ ಹೋಗುತ್ತವೆ. ಕಲ್ಲು ಒಂದು ಮಂಗಕ್ಕೆ ತಾಗಿದರೆ ಕೆಲವು ದಿವಸ ಮಂಗಗಳ ಗುಂಪೇ ಆ ತೋಟಕ್ಕೆ ಬರುವುದಿಲ್ಲ.

ಹಳ್ಳ ಹಿಡಿದ ಮಂಕಿ ಪಾರ್ಕ್‌ ಪ್ರಸ್ತಾವ
ಮಂಗಗಳಿಂದ ಆಗುತ್ತಿರುವ ಕೃಷಿ ನಾಶವನ್ನು ಕಡಿಮೆ ಮಾಡಲು ಮಂಕಿ ಪಾರ್ಕ್‌ ನಿರ್ಮಾಣ ಮಾಡುವ ಬಗ್ಗೆ ಹಲವು ವರ್ಷಗಳ ಹಿಂದೆಯೇ ಸುಳ್ಯದಲ್ಲಿ ಪ್ರಸ್ತಾವ ಇತ್ತು.ಆದರೆ ಈಗ ಮಂಕಿ ಪಾರ್ಕ್‌ ನಿರ್ಮಾಣ ಮಾಡುವ ಬಗ್ಗೆ ಜನಪ್ರತಿನಿಧಿಗಳು ಸಂಬಂಧಪಟ್ಟ ಇಲಾಖೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ನಿಯಂತ್ರಿಸುವ ಕಾರ್ಯವಾಗಲಿ
ಮಂಗಗಳು ಆಹಾರದ ಕೊರತೆಯಾದಾಗ ಆಹಾರಗಳನ್ನು ಅರಸುತ್ತಾ ತಿರುಗಾಡುತ್ತವೆ. ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಅವುಗಳ ದಿನಚರಿ ಪ್ರಾರಂಭವಾಗುತ್ತವೆ. ಅವುಗಳದ್ದೇ ರೀತಿಯಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತವೆ. ಅವುಗಳು ತುಂಬಾ ಸೂಕ್ಷ್ಮ ಪ್ರಾಣಿಗಳು. ಇವುಗಳ ಸಂಖ್ಯೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿದ್ದು, ಅವುಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ದಿನ ನಿತ್ಯ ರೈತರ ಕೃಷಿ ತೋಟಗಳಿಗೆ ನುಗ್ಗಿ ಕೃಷಿ, ಮತ್ತದರ ಉತ್ಪನ್ನಗಳನ್ನು ನಾಶ ಮಾಡುತ್ತವೆ. ಇದರಿಂದ ಅನೇಕ ರೈತರು ನಷ್ಟಕ್ಕೊಳಗಾಗಿದ್ದು, ಸರಕಾರ ಮಂಗಗಳ ಹಾವಳಿಯನ್ನು ನಿಯಂತ್ರಿಸುವ ಕೆಲಸವನ್ನು ಅಗತ್ಯವಾಗಿ ಮಾಡಬೇಕು.

ಕಾಡಿನಲ್ಲಿ ಹಣ್ಣಿನ
ಮರ ಬೆಳೆಸಬೇಕು
ಮಂಗಗಳಿಗೆ ಕಾಡಿನಲ್ಲಿ ಆಹಾರ ದೊರೆಯದಿರುವುದೇ ಮಂಗಗಳು ರೈತರ ಕೃಷಿ ತೋಟಗಳಿಗೆ ನುಗ್ಗಿ ಕೃಷಿ ಬೆಳೆಗಳು° ತಿನ್ನುವುದಕ್ಕೆ ಮುಖ್ಯ ಕಾರಣ. ಕಾಡಿನಲ್ಲಿ ಹಣ್ಣು ಹಂಪಲು ಹಾಗೂ ಮಂಗಗಳು ತಿನ್ನುವ ಇತರ ಹಣ್ಣುಗಳ ಮರಗಳನ್ನು ನೆಡುವ ಮೂಲಕ ಮಂಗಗಳ ಉಪಟಳ ಕಡಿಮೆ ಮಾಡಬಹುದು. ಇನ್ನೊಂದು ಮಂಕಿ ಪಾರ್ಕ್‌ ನಿರ್ಮಾಣ ಮಾಡಬೇಕು. ಇದರಿಂದ ಮಂಗಗಳ ಹಾವಳಿಯನ್ನು ಕಡಿಮೆ ಮಾಡಬಹುದು.
– ಮೋಹನ್‌ ನಂಗಾರು
ಕೃಷಿ ಅಧಿಕಾರಿ, ಕೃಷಿ ಇಲಾಖೆ ಸುಳ್ಯ

ಬೆಳೆ ನಾಶಕ್ಕಿಲ್ಲ ಪರಿಹಾರ
ಸುಳ್ಯ ತಾಲೂಕಿನಲ್ಲಿ ಮಂಕಿ ಪಾರ್ಕಿಂಗ್‌ ನಿರ್ಮಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಹಿಂದೆ ಒಮ್ಮೆ ಪ್ರಸ್ತಾವ ಇತ್ತು. ಅರಣ್ಯ ಇಲಾಖೆಯ ಗೈಡ್‌ಲೈನ್ಸ್‌ ಪ್ರಕಾರ ಮಂಗಗಳು ನಾಶ ಮಾಡುವ ಬೆಳೆಗಳ ಬಗ್ಗೆ ಪರಿಹಾರ ಕೊಡಲು ಆಗುವುದಿಲ್ಲ. ಗಿಡ, ಮರ ನಾಶ ಆದರೆ ಮಾತ್ರ ಪರಿಹಾರ ಕೊಡಲು ಬರುತ್ತದೆ. ಇಲ್ಲದಿದ್ದರೆ ಅಸಾಧ್ಯ. ಬೆಳೆ ನಾಶವಾದಾಗಲೂ ಪರಿಹಾರ ನೀಡಬೇಕೆಂದು ನಾವು ತಮ್ಮ ಇಲಾಖೆ ವತಿಯಿಂದ ಮೇಲಾಧಿಕಾರಿಗಳಿಗೆ ಬರೆದುಕೊಂಡಿದ್ದೇವೆ.
– ಮಂಜುನಾಥ್‌
ಆರ್‌ಎಫ್ಒ ಸುಳ್ಯ

-ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next