Advertisement

Agriculturist: ದಿಲ್ಲಿ ಸ್ವಾತಂತ್ರ್ಯ ದಿನಕ್ಕೆ ವಿರೂಪಾಕ್ಷಾಚಾರ್‌

03:51 PM Aug 14, 2023 | Team Udayavani |

ನಾಗಮಂಗಲ: ತಾಲೂಕಿನ ಎ.ನಾಗತಿಹಳ್ಳಿ ಗ್ರಾಮದ ಸಾವಯವ ಕೃಷಿಕ ವಿರೂಪಾಕ್ಷಾಚಾರ್‌ ಸಾವಯವ ಕೃಷಿ ಕ್ಷೇತ್ರದಲ್ಲಿ ತಾವು ಮಾಡಿರುವ ಗಣನೀಯ ಸಾಧನೆಗಾಗಿ 76ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಜರುಗುವ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಪ್ರಧಾನಮಂತ್ರಿಗಳ ಕಚೇರಿಯು ಆಹ್ವಾನಿಸಿರುವುದು ನಾಗಮಂಗಲ ತಾಲೂಕು, ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.

Advertisement

ವಿರೂಪಾಕ್ಷಾಚಾರ್‌ ತಾಲೂಕಿನ ನಾಗತೀಹಳ್ಳಿ ಗ್ರಾಮದವರಾಗಿದ್ದು, 4 ಎಕರೆ 10 ಕುಂಟೆ ಜಮೀನಿನಲ್ಲಿ ಸಾವಯವ ಕೃಷಿಯೊಂದಿಗೆ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದಾರೆ. ರಾಗಿ, ಜೋಳದ ಜೊತೆ ಆಹಾರ ಬೆಳೆಗಳು ತೋಟಗಾರಿಕಾ ಬೆಳೆ ಹಣ್ಣುಗಳ ಜೊತೆ ಡ್ರ್ಯಾಗನ್‌ ಫ್ರೂಟ್, ಏಲಕ್ಕಿ ಬೆಳೆ, ಬಾಳೆ, ವೀಲ್ಯೆದೆಲೆ, ಮೆಣಸು, ಮಾವು, ತೆಂಗು, ಸಪೋಟ, ಬೆಣ್ಣೆಹಣ್ಣು, ಅಂಜೂರ, ಲವಂಗ, ಚಕ್ಕೆ, ಸೀತಾಫ‌ಲ, ಪನ್ನೇರಳೆ, ರಾಮಫ‌ಲ, ಗಸಗಸೆ, ಜಾಯಿಕಾಯಿ, ಕೋಕೊ, ಕರಿಬೇವು, ಸೀಬೆ, ನಿಂಬೆ, ದಾಳಿಂಬೆ, ಮೂಸುಂಬಿ, ಕಿತ್ತಳೆ, ಬೋರೆಹಣ್ಣು, ಪರಂಗಿ, ಮರಸೇಬು, ಸೇಬು, ಶ್ರೀಗಂಧ  ಸೇರಿದಂತೆ ನೂರಕ್ಕೂ ಹೆಚ್ಚು ತಳಿಯ ಸಾವಿರಕ್ಕೂ ಹೆಚ್ಚು ಮರಗಿಡಗಳನ್ನು  ಬೆಳೆದು ಸಾವಯವ ಕೃಷಿಯಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ.

ರೈತರ ಸಮ್ಮುಖದಲ್ಲಿ ಪ್ರಾತ್ಯಕ್ಷಿಕೆ: ಸಾವಯವ ಕೃಷಿಯ ಬಗ್ಗೆ ಆಕಾಶವಾಣಿಯಲ್ಲಿ ಕಾರ್ಯಕ್ರಮವನ್ನೂ ನೀಡಿದ್ದಾರೆ  ಕೃಷಿ ಇಲಾಖೆ ತೋಟಗಾರಿಕೆ ಇಲಾಖೆಯ ವತಿಯಿಂದ ಇವರ ಜಮೀನಿನಲ್ಲಿ ನೂರಾರು ರೈತರ ಸಮ್ಮುಖದಲ್ಲಿ ಪ್ರಾತ್ಯಕ್ಷಿಕೆ ಕೂಡ ನಡೆಸಲಾಗಿದೆ.  ಇವರು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ಫ‌ಲಾನುಭವಿಯೂ ಆಗಿದ್ದಾರೆ.

ಸಂವಾದ ಕಾರ್ಯಕ್ರಮ: ಯೂಟ್ಯೂಬ್‌ನ ಕೃಷಿ ಬದುಕಿನ ಚಾನೆಲ್‌ನವರು ಒಂದು ಗಂಟೆಗೂ ಮಿಗಿಲಾಗಿ ಪ್ರಾತ್ಯಕ್ಷಿಕೆಯೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಗಿದೆ. ಇವೆಲ್ಲದರ ಜೊತೆ ಸಾವಿರಾರು ರೈತರು ಇವರ ಜಮೀನಿನ ಮಾದರಿಯನ್ನು ನೋಡಿ ತಮ್ಮ ಜಮೀನಿಗೆ ಅಳವಡಿಸಿ ಕೊಂಡಿದ್ದಾರೆ, ಇವೆಲ್ಲವನ್ನು ಗಮನಿಸುತ್ತಿದ್ದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಮಾಹಿತಿ ಕಳುಹಿಸಿ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಇವರನ್ನು ಗುರುತಿಸಿ ದೆಹಲಿಯ ಸ್ವಾತಂತ್ರ್ಯ ಕಾರ್ಯಕ್ರಮಕ್ಕೆ ಬರುವಂತೆ ವಿಶೇಷವಾಗಿ ಆಹ್ವಾನಿಸಲಾಗಿದೆ.

ರಾಜ್ಯ ಸರ್ಕಾರ ತಾಲೂಕಿನ ಕೃಷಿ ಅಧಿಕಾರಿ ಯುವರಾಜ್‌ ಅವರಿಗೆ ರೈತ ವಿರೂಪಾಕ್ಷಾಚಾರ್‌ ಅರವನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬರಲು ಸೂಚಿಸಿದೆ. ಈ ಸಂದರ್ಭದಲ್ಲಿ ಸಾವಯವ ಕೃಷಿ ಮಾಡದ ರೈತರು ಇವರನ್ನು ಮಾದರಿಯಾಗಿ ತೆಗೆದುಕೊಂಡು ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಸಾವಯವ ಕೃಷಿಗೆ ಒತ್ತು ನೀಡಬೇಕಿದೆ.

Advertisement

ವಾರ್ಷಿಕ 10 ಲಕ್ಷಕ್ಕೂ ಹೆಚ್ಚು ಲಾಭ:

ವಿರೂಪಾಕ್ಷಪ್ಪನವರು ತಮ್ಮ ತೋಟದಲ್ಲಿ ವಾರ್ಷಿಕ ಹತ್ತು ಲಕ್ಷ ಆದಾಯ ಗಳಿಸುತ್ತಿದ್ದಾರೆ. ತಮ್ಮ ಮನೆ ಮಂದಿಯೇ ಹೆಚ್ಚು ತೋಟದಲ್ಲಿ ತೊಡಗಿಸಿಕೊಳ್ಳುವುದರಿಂದ ಕೆಲಸದಾಳು ಕೊರತೆಯನ್ನೂ ನೀಗಿಸಿಕೊಂಡಿದ್ದಾರೆ. ಬೆಳಗ್ಗೆ 6 ಗಂಟೆಗೆ ತೋಟಕ್ಕಿಳಿಯುವ ತಮ್ಮ ಮಕ್ಕಳು, ಪತ್ನಿ  ಬೆಳಗ್ಗೆ 9 ಗಂಟೆಯವರಿಗೂ ತೋಟದಲ್ಲೇ ಕೆಲಸ ಮಾಡುತ್ತಾರೆ. ತಮಗೆ ಸಿಗುವ ಆದಾಯದ ಜತೆಗೆ ಪ್ರಕೃತಿಗೆ ಆಮ್ಲಜನಕವನ್ನು ಒದಗಿಸುವ ಸಂತೃಪ್ಪಿ ನಮಗಿದೆ ಎಂದು ವಿರೂಪಾಕ್ಷಪ್ಪ ಉದಯವಾಣಿಗೆ ತಿಳಿಸಿದ್ದಾರೆ. ಇವರು ಕಳೆದ ವರ್ಷ ತಾಲೂಕಿನ ಗಡಿಗ್ರಾಮ ಚೌಡಗೋನಹಳ್ಳಿಯಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿಯೊಂದಿಗೆ ರೈತ ಸಂವಾದದಲ್ಲಿಯೂ ಭಾಗಿಯಾಗಿದ್ದರು.

ನನ್ನ ತಾಲೂಕಿನ ರೈತನೋರ್ವ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರÂ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ಕಚೇರಿಯ ಆಹ್ವಾನದ ಮೇರೆಗೆ ಭಾಗವಹಿಸುತ್ತಿರುವುದು ಸಂತಸ ತಂದಿದೆ. ನಾನು ಕೃಷಿ ಸಚಿವನಾದ ನಂತರ ಮೊದಲು ಅವರ ತೋಟಕ್ಕೆ ಭೇಟಿ ನೀಡಿ ಸಂತಸ ಪಟ್ಟಿದ್ದೆ, ನನ್ನ ಹೆಸರಿನಲ್ಲಿ ಒಂದು ಗಿಡವನ್ನು ವಿರೂಪಾಕ್ಷಪ್ಪ ನೆಡಿಸಿದ್ದರು. ಬಯಲುಸೀಮೆಯಲ್ಲು ಏಲಕ್ಕಿ ಸೇರಿದಂತೆ ನೂರಾರು ತಳಿಯ ಗಿಡಮರಗಳನ್ನು ಬೆಳೆದಿರುವುದನ್ನು ನೋಡಿದಾಗ ವಿರೂಪಾಕ್ಷಮೂರ್ತಿಯವರ ಶ್ರಮ ಮತ್ತು ಕೃಷಿಯ ಬಗ್ಗೆ ಅವರಿಗಿದ್ದ ಕಾಳಜಿಗೆ ಹೆಮ್ಮೆ ಎನಿಸಿತು. ಇವರು ಇತರ ರೈತರಿಗೂ ಮಾದರಿ.-ಎನ್‌.ಚಲುವರಾಯಸ್ವಾಮಿ, ಕೃಷಿ ಸಚಿವ, ಕರ್ನಾಟಕ ಸರ್ಕಾರ

ಸಾವಯವ ಕೃಷಿಕ ವಿರೂಪಾಕ್ಷಾಚಾರ್‌ ಅವರಿಗೆ ಪ್ರಧಾನಮಂತ್ರಿ ಕಾರ್ಯಾ ಲಯದಿಂದ ವಿಶೇಷವಾಗಿ ಬಂದಿರುವ ಈ ಆಹ್ವಾನ ನಮ್ಮ ಜಿಲ್ಲೆಗೆ ರಾಜ್ಯಕ್ಕೆ ಸಂತಸ ತಂದಿದೆ.-ಡಾ.ಕುಮಾರ್‌, ಜಿಲ್ಲಾಧಿಕಾರಿ

-ಪಿ.ಜೆ.ಜಯರಾಂ

Advertisement

Udayavani is now on Telegram. Click here to join our channel and stay updated with the latest news.

Next