Advertisement

Agriculture; ಬಾಳೆ ಬೆಳೆದು ಗೆದ್ದ ಬಸವನಾಡಿನ ರೈತ: ಆದಾಯ ಕಂಡು ಐಟಿ ಅಧಿಕಾರಿಗಳೇ ದಂಗು!!

07:21 PM Jul 15, 2024 | Team Udayavani |

ವಿಜಯಪುರ : ಬ್ಯಾಂಕ್‍ನಿಂದ 1 ರೂ ಸಾಲ ಪಡೆದಿಲ್ಲ, ಆದರೂ ಕೃಷಿ ಎಂದರೆ ವೈಫಲ್ಯದ ಕ್ಷೇತ್ರವೆಂದು ನಕಾರಾತ್ಮಕ ಮಾತನಾಡುವ ಪ್ರಸ್ತುತ ಸಂದರ್ಭದಲ್ಲಿ ಬಸವನಾಡಿನ ಕೃಷಿಯನ್ನೇ ನಂಬಿರುವ ರೈತನೊಬ್ಬ ಆದಾಯ ತೆರಿಗೆ ಅಧಿಕಾರಿಗಳು ಬೆನ್ನುಬೀಳುವಂತೆ ಮಾದರಿಯಾಗಿ ನಿಂತಿದ್ದಾನೆ.ಹೆಸರು ಈರಣ್ಣ ಹಳ್ಳಿ, ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕುಬಕಡ್ಡಿ ಗ್ರಾಮದ ಮಾದರಿ ರೈತ. ಪಿತ್ರಾರ್ಜಿತವಾಗಿ ಬಂದಿದ್ದ 28 ಎಕರೆ ಜಮೀನಿನಲ್ಲಿ ಅಣ್ಣ ಸದಾಶಿವ ಅವರೊಂದಿಗೆ ಕೃಷಿಯಲ್ಲಿ ತೊಡಗಿದಾಗ ಬಂಜು ಭೂಮಿ ಈರಣ್ಣನ ಕನಸಿಗೆ ಸ್ಪಂದಿಸುತ್ತಿರಲಿಲ್ಲ. ಆದರೆ ಸೋಲೊಪ್ಪದ ಈರಣ್ಣ ಬಂಜರು ಭೂಮಿಯನ್ನೇ ಸಮತಟ್ಟು ಮಾಡಿ, ಸುಮಾರು 1.50 ಕೋಟಿ ರೂ. ಖರ್ಚು ಮಾಡಿ 19 ಕಿ.ಮೀ. ದೂರದ ಕೃಷ್ಣಾ ನದಿ ಹಾಗೂ 8 ಕಿ.ಮೀ. ದೂರದ ಮಮದಾಪುರ ಕೆರೆಯಿಂದ ಹೂಳು ತಂದು ಭೂಮಿಯನ್ನು ಹದಮಾಡಿಕೊಂಡ.

Advertisement

ನೀರಿಗಾಗಿ 69 ಬೋರ್‍ವೆಲ್ ಕೊರೆದರೂ ಅಲ್ಪಸ್ವಲ್ಪ ನೀರು ಸಿಕ್ಕಿದ್ದು 19 ಕೊಳವೆ ಭಾವಿಗಳಲ್ಲಿ ಮಾತ್ರ. ಸಿಕ್ಕ ನೀರಿನಲ್ಲಿ 2008 ರಿಂದ 28 ಎಕರೆಯಲ್ಲಿ ಬಾಳೆ-ಕಬ್ಬು ಬೆಳೆಯಲು ಆರಂಭಿಸಿದ ಈರಣ್ಣನಿಗೆ ಕೈ ಹಿಡಿದ್ದು ಬಾಳೆ. ಈರಣ್ಣ ಶಿಸ್ತುಬದ್ಧ ತಾಂತ್ರಿಕತೆಯಲ್ಲಿ ಬೆಳೆದ ಬಾಳೆ ವಿದೇಶಕ್ಕೆ ರಫ್ತು ಆಗತೊಡಗಿತು.

ಇರಾಕ್ ದೇಶದ ಉದ್ಯಮಿಗೆ ನೇರವಾಗಿ ಬಾಳೆ ರಫ್ತು ಮಾಡಿದಾಗ ವಂಚನೆಗೊಳಗಾದರು. ಪರಿಣಾಮ ಮಹಾರಾಷ್ಟ್ರದ ಪುಣೆ, ಅಕಲೋಜ, ಕೊಲ್ಹಾಪುರ ಜಲಗಾಂವ ಸೇರಿದಂತೆ ವಿದೇಶಕ್ಕೆ ರಫ್ತು ಮಾಡುವ ಮಧ್ಯವರ್ತಿಗಳನ್ನು ಸಂಪರ್ಕಿಸಿ ತಾವು ಬೆಳೆದ ಬಾಳೆ ಮಾರಾಟ ಮಾಡಲು ಆರಂಭಿಸಿದರು.

ನೋಡ ನೋಡುತ್ತಿದ್ದಂತೆ ಈರಣ್ಣ ಅವರ ಬಾಳೆ ಬೆಳೆಯ ಆದಾಯ ಒಂದೇ ಬಾರಿಗೆ 20-60 ಲಕ್ಷ ರೂ. ಆದಾಯ ಬರಲಾಂಭಿಸಿತು. ರೈತನೊಬ್ಬನ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂ. ಹಣ ಜಮೆ ಆಗುತ್ತಲೇ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನೋಟಿಸ್‌ ನೀಡಿದರು.

Advertisement

2016-18 ರ ವರೆಗೆ ಸತತ ಮೂರು ವರ್ಷ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟೀಸ್ ನೀಡಿದ್ದು, ತಾನು ಪರಿಶ್ರಮದಿಂದ ಬೆಳೆದ ಬೆಳೆಗೆ ಅಧಿಕೃತವಾಗಿ ಮಾರಾಟ ಮಾಡಿದ ಬಿಲ್ ಸಮೇತ ನೋಟಿಸ್‌ಗೆ ಉತ್ತರ ನೀಡಿದರು. ಇದನ್ನು ಕಂಡ ಆದಾಯ ತೆರಿಗೆ ಅಧಿಕಾರಿಗಳೇ ಹೌಹಾರಿದ್ದರು.

ಇಷ್ಟೆಲ್ಲ ಪರಿಶ್ರಮ ಮಾಡಿದರೂ ಈರಣ್ಣ ಯಾವುದೇ ಬ್ಯಾಂಕ್‍ನಿಂದ 1 ರೂ. ಸಾಲ ಮಾಡದೇ ಕೇವಲ ಭೂಮಿಯನ್ಣೇ ನಂಬಿ, ಕೃಷಿಯಲ್ಲೇ ಸಾಧನೆ ಮಾಡಿದ ಈರಣ್ಣ ರೈತ ನಾಯಕ ನಂಜುಂಡಸ್ವಾಮಿ ಅವರು ಹೇಳಿದ ರೈತ ಸಾಲಗಾರನಲ್ಲ, ಸರ್ಕಾರವೇ ಬಾಕಿದಾರ ಎಂಬ ಮಾತಿಗೆ ಜೀವಂತ ಸಾಕ್ಷಿಯಾಗಿದರು.

ಕುಬಕಡ್ಡಿ ಗ್ರಾಮದ ರೈತನ ಈ ಸಾಧನೆ ಕಂಡು ಸುತ್ತಲಿನ ಹತ್ತಾರು ಗ್ರಾಮಗಳ ಸುಮಾರು ಎರಡು ನೂರಕ್ಕೂ ಅಧಿಕ ರೈತರು ಈರಣ್ಣ ಅವರ ಮಾರ್ಗದರ್ಶನದಲ್ಲಿ ಬಾಳೆ ಬೆಳೆ ಆರಂಭಿಸಿದರು. ಅದರಲ್ಲಿ ನೂರಕ್ಕೂ ಹೆಚ್ಚು ರೈತರು ಈರಣ್ಣ ಅವರ ನಿವಾಗಣೆಯಲ್ಲೇ ಮಧ್ಯವರ್ತಿಗಳ ಮೂಲಕ ವಿದೇಶಕ್ಕೆ ಬಾಳೆ ರಫ್ತು ಮಾಡುತ್ತಿದ್ದಾರೆ.

ಬಾಳೆ ಕೃಷಿಯಿಂದಲೇ ಕಳೆದ ಒಂದು ದಶಕದಿಂದ ಲಕ್ಷಾಂತರ ರೂ. ಆದಾಯ ಪಡೆಯುತ್ತಿರುವ ಈರಣ್ಣ-ಸದಾಶಿವ ಸಹೋದರರು ಇದರ ಆದಾಯದಿಂದಲೇ 17 ಎಕರೆ ಜಮೀನು ಖರೀದಿಸಿದ್ದಾರೆ. ಬಾಳೆಯ ಆದಾಯದಲ್ಲೇ ಸದಾಶಿವ ಅವರ ಮಗ ಅಮಿತ್ ಐಎಎಸ್ ತರಬೇತಿ ಪಡೆಯುತ್ತಿದ್ದರೆ, ಈರಣ್ಣ ಅವರ ಮಗ ದಾನೇಶ ಕೆಎಎಸ್ ತರಬೇತಿಗೆ ಅಣಿಯಾಗಿದ್ದಾನೆ.

ಈರಣ್ಣ ಅವರ ಸಾಧನೆ ಕಂಡು ಕಳೆದ ವರ್ಷದಿಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹನಿ ನೀರಾವರಿ ಸೌಲಭ್ಯ ಕಲ್ಪಿಸಿದ್ದಾರೆ. ಪ್ರಸಕ್ತ ವರ್ಷದಿಂದ ಕನ್ಹೇರಿ ಕಾಡಸಿದ್ದೇಶ್ವರ ಶ್ರೀಗಳ ಪ್ರೇರಣೆಯಿಂದ ರಸಾಯನ ಮುಕ್ತವಾಗಿ ಗೋಕೃಪಾಮೃತ ಬಳಸಿ ಬಾಳೆ ಬೆಳೆಯುತ್ತಿದ್ದು, ನಿರೀಕ್ಷೆ ಮೀರಿದ ಗುಣಮಟ್ಟದ ಫಲ ಬಂದಿದೆ.

ಮೊದಲ ಬಾರಿಗೆ ಸಾವಯವದಲ್ಲಿ ಬೆಳೆದ ಬಾಳೆಯನ್ನು ಸೋಮವಾರ ಜು.15 ರಂದು ಮೊದಲ ಕಟಾವಿನ ಸಂದರ್ಭದಲ್ಲಿ ನೂರಾರು ರೈತರನ್ನು ತಮ್ಮ ತೋಟಕ್ಕೆ ಆಹ್ವಾನಿಸಿದ್ದಾರೆ. ಬೆಂಗಳೂರಿನಿಂದ ಬಾಣಸಿಗರನ್ನು ಕರೆಸಿದ್ದು, ವೈವಿಧ್ಯಮಯ ಭೋಜನ ಜೊತೆಗೆ ಕ್ಷೇತ್ರೋತ್ಸವ ನಡೆಸುತ್ತಿದ್ದಾರೆ.

”ಬಂಜರು ಭೂಮಿಯನ್ನು ಹದ ಮಾಡಿಕೊಂಡು ಬೆಳೆದ ಬಾಳೆ ನಮ್ಮ ಬಾಳು ಬೆಳಗಿದ್ದು, ಆರ್ಥಿಕವಾಗಿ ಸಬಲೀಕರಣ ಪಡೆದಿದ್ದೇವೆ. ಸಾಲವಿಲ್ಲದೇ ಕೃಷಿಯಲ್ಲಿ ಸಾಧನೆ ಮಾಡಿದ್ದು, ಈ ಬಾರಿ ಕನೇರಿ ಶ್ರೀಗಳ ಪ್ರೇರಣೆಯಿಂಧ ಸಾವಯವದಲ್ಲಿ ಬಾಳೆ ಬೆಳೆದಿದ್ದು, ನೂರಾರು ಜನರು ಅನುಕರಿಸುತ್ತಿದ್ದಾರೆ.”
ಈರಣ್ಣ ಹಳ್ಳಿ, ಬಾಳೆ ಬೆಳೆಗಾರ

”ನಮ್ಮ ಭಾಗದಲ್ಲಿ ಬಾಳೆಯಿಂದ ಬದುಕು ರೈತರು ಸುಸ್ಥಿರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿರುವ ಈರಣ್ಣ ನಮಗೆಲ್ಲ ಮಾದರಿಯಾಗಿದ್ದಾರೆ. ಅವರನ್ನು ಅನುರಿಸಿ ಬಾಳೆ ಬೆಳೆದಿರುವ ನಾನು ಆದಾಯ ಕಂಡಿದ್ದೇನೆ.”
ಶಿವು ನಿಡೋಣಿ, ಬಾಳೆ ಬೆಳೆಗಾರ ಸಾ.ಶಿರಬೂರು ತಾ.ಬಬಲೇಶ್ವರ.

”ಭವಿಷ್ಯವೇ ಇಲ್ಲದೇ ಕೃಷಿ ಎಂದರೆ ವೈಫಲ್ಯದ ಬದುಕು ಎಂಬ ನಕಾರಾತ್ಮಕ ಮನಸ್ಥಿತಿಯರಿಗೆ ನಮ್ಮೂರಿನ ಈರಣ್ಣ ಕೃಷಿಯಿಂದ ಖುಷಿ ಜೀವನ ಸಾಧ್ಯ ಎಂದು ಸಾಧಿಸಿ ತೋರಿಸಿದ್ದಾ ನೆ. ಆತನ ಪರಿಶ್ರಮಕ್ಕೆ ಸಾಧನೆಯ ಫಲ ಸಿಕ್ಕಿದೆ.”
*ಅಶೋಕ ಮೆಂಡೇಗಾರನಿವೃತ್ತ ಬ್ಯಾಂಕ್ ಅಧಿಕಾರಿ. ಸಾ.ಕುಬಕಡ್ಡಿ ತಾ.ಕೊಲ್ಹಾರ.

ಜಿ.ಎಸ್.ಕಮತರ

Advertisement

Udayavani is now on Telegram. Click here to join our channel and stay updated with the latest news.

Next