Advertisement

ಎಂಥ ಬೇಸಾಯ ಮಾಡಬೇಕು? ಅನಿಶ್ಚಿತತೆಯಲ್ಲಿ ಸಂರಕ್ಷಿತ ಕೃಷಿ ಬೆಸ್ಟ್‌

12:04 PM Dec 17, 2021 | Team Udayavani |

ಇತ್ತೀಚಿನ ವರ್ಷಗಳಲ್ಲಿ ಮಳೆ ನಕ್ಷತ್ರಗಳ ಆಧರಿತವಾಗಿ ಮಳೆ ಸುರಿಯುತ್ತಿರುವ ಬೆಳವಣಿಗೆ   ಕಡಿಮೆಯಾಗಿದೆ. ಜನವರಿಯಲ್ಲಿ ಆರಂಭವಾಗುವ ಮಳೆ ಡಿಸೆಂಬರ್‌ವರೆಗೂ ಸುರಿಯುತ್ತದೆ. ಮಳೆಗಾಲ ಯಾವುದು? ಬೇಸಗೆ ಕಾಲ ಯಾವುದು?  ಚಳಿಗಾಲ ಯಾವುದು? ಎಂಬುದು ಗೊತ್ತಾಗದಂಥ ಸ್ಥಿತಿ ಏರ್ಪಟ್ಟಿದೆ. ಇದಕ್ಕೆ ಜಾಗತಿಕ ತಾಪಮಾನ ಏರಿಕೆ ಕಾರಣ ಎಂಬುದು ತಜ್ಞರ ಆತಂಕ. ಇದರ ನಡುವೆಯೇ ಅಕಾಲಿಕ ಮಳೆಯಿಂದಾಗಿ ರೈತರು ಯಾವ ಬೆಳೆ ಬೆಳೆಯಬೇಕು? ಯಾವ ಸಂದರ್ಭದಲ್ಲಿ ಎಂಥ ಬೇಸಾಯ ಮಾಡಬೇಕು? ಎಂಬುದರ ಗೊಂದಲದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಉದಯವಾಣಿ ವಿವಿಧ ತಜ್ಞರಿಂದ ಕೃಷಿಯ ಭವಿಷ್ಯದ ಬಗ್ಗೆ ಸಂವಾದ ನಡೆಸುತ್ತಿದೆ…

Advertisement

ಹವಾಮಾನ ವೈಪರೀತ್ಯದಿಂದ ಹಿಂದಿನಂತೆ ಮಳೆಗಾಲ ಆರಂಭ­ವಾಗುತ್ತಿಲ್ಲ. ವಾಡಿಕೆಯಂತೆ ಮಳೆ ಜೂನ್‌ ಮೊದಲ ವಾರದಲ್ಲಿ ಆರಂಭವಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಬೇಸಗೆಯಲ್ಲೇ ಆರಂಭವಾದರೆ, ಚಳಿಗಾಲದಲ್ಲೂ ಸುರಿಯುತ್ತಿದೆ. ಇದರಿಂದ ರೈತರು, ಜನಸಾಮಾನ್ಯರು ತಮ್ಮ ಕೃಷಿ ಪದ್ಧತಿ ಜತೆಗೆ ಜೀವನ­ವನ್ನು ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಪ್ರಸಕ್ತ ಸಾಲಿನ ಮಳೆಯನ್ನೇ ಗಮನಿಸಿದರೆ ಈ ಬಾರಿ ಮಳೆ ಮಾರ್ಚ್‌ನಿಂದಲೇ ಆರಂಭವಾಯಿತು. ಇದರಿಂದ ಜನರಿಗೆ ಈ ಬಾರಿ ಬೇಸಗೆಯ ಬಿಸಿ ತಟ್ಟಲೇ ಇಲ್ಲ. ಮುಂಗಾರು ಪೂರ್ವದಲ್ಲಿ ಉತ್ತಮವಾಗಿ ಸುರಿದ ಮಳೆ, ಅನಂತರ ಬಿತ್ತನೆಗೂ ಅವಕಾಶ ನೀಡಲಿಲ್ಲ. ಅನಂತರ ಕೊಂಚ ಬಿಡುವು ನೀಡಿತ್ತಾದರೂ ಕಳೆ ತೆಗೆದು, ಬೆಳೆ ಹೂ ಬಿಡುವ ವೇಳೆಗೆ ಕೈಕೊಟ್ಟಿತು. ಅನಂತರ ಪ್ರಾರಂಭವಾದ ಮಳೆ ಕೊಯ್ಲಿಗೂ ಅವಕಾಶ ನೀಡದೆ ನಿರಂತರವಾಗಿ ಸುರಿದು ರೈತರ ವರ್ಷದ ಕೂಳನ್ನೇ ಕಿತ್ತುಕೊಂಡಿದೆ. ಇದರಿಂದ ಲಕ್ಷಾಂತರ ರೂ. ಬಂಡ­ವಾಳ ಹಾಕಿ ಬೆಳೆದ ಬೆಳೆ ಕೈಗೆ ಸಿಗದೆ ರೈತರು ಕಂಗಾ­ಲಾಗಿದ್ದಾರೆ. ಹಾಗಿದ್ದರೆ ಈ ಅನಿಶ್ಚಿತ ಮಳೆಯಲ್ಲಿ ರೈತರು ಯಾವ ಬೆಳೆ ಬೆಳೆಯ­ಬೇಕು, ಬೆಳೆ ನಷ್ಟ ಹೇಗೆ ಸರಿದೂಗಿಸಿ ಕೊಳ್ಳಬೇಕು, ಸಾಂಪ್ರದಾಯಿಕ ಕೃಷಿ ಪದ್ಧತಿ ಯಲ್ಲಿ ಯಾವ ರೀತಿ ಬದಲಾವಣೆ ಮಾಡಿ­ ಕೊಳ್ಳಲು ರಾಜ್ಯ ಸರಕಾರ‌ ಪೂರಕ ಯೋಜನೆಗಳನ್ನು ತರಬೇಕು.

ಇತ್ತೀಚಿಗೆ ಸುರಿದ ಮಳೆಯಿಂದ ಬಹುವಾರ್ಷಿಕ ಬೆಳೆಗಳಾದ ಅಡಿಕೆ, ತೆಂಗು, ಮಾವು, ಬಾಳೆ, ನಿಂಬೆ ಜಾತಿಗೆ ಸೇರಿದ ಬೆಳೆಗೆ ಅಷ್ಟು ತೊಂದರೆ ಆಗಿಲ್ಲ. ಆದರೆ ಕೊಯ್ಲು ಮಾಡಿದ ಅಡಿಕೆ, ಮೆಣಸು ಒಣಗಿಸಲು ಆಗದೆ ಬೆಳೆಗಾರರಿಗೆ ಸ್ವಲ್ಪ ಸಮಸ್ಯೆ ಆಗಿದೆ. ಇದನ್ನು ಹೇಗೋ ನಿಭಾಯಿಸಬಹುದು. ಆದರೆ ದಕ್ಷಿಣ, ಉತ್ತರ ಒಳನಾಡಿನಲ್ಲಿ ಮಳೆಯಾಶ್ರಿತ ಹತ್ತಿ, ಭತ್ತ, ರಾಗಿ, ಶೇಂಗಾ, ಮೆಕ್ಕೆ­ಜೋಳದ ಬೆಳೆ ಕೊಯ್ಲು ಮಾಡಲಾಗದೇ ನಿಲುವಿನಲ್ಲೇ ಮೊಳಕೆ ಬಂದರೆ, ತಿಂಗಳ ಲೆಕ್ಕದಲ್ಲಿ ಬೆಳೆಯುವ ಟೊಮೆಟೋ, ಹಸುರು ಮೆಣಸು, ಎಲ್ಲ ತರಹದ ತರಕಾರಿ, ಹೂವಿನ ಬೆಳೆ ಈ ಬಾರಿ ಜಮೀನಿ­ನಲ್ಲೇ ಕೊಳೆತು ಹೋಗಿದೆ. ಇಂತಹ ರೈತರು ಸಂರಕ್ಷಿತ ಬೇಸಾಯ ಪದ್ಧತಿ ಅಳವಡಿಸಿ ಕೊಂಡರೆ ಬೆಳೆ ನಷ್ಟದಿಂದ ಪಾರಾಗಬಹುದು.

ಸಂರಕ್ಷಿತ ಬೇಸಾಯ ಪದ್ಧತಿ:

Advertisement

ಈ ಅನಿಶ್ಚಿತ ಮಳೆ ನಷ್ಟದಿಂದ ಪಾರಾಗಲು ರೈತರು ಸಂರಕ್ಷಿತ ಬೇಸಾಯ ಪದ್ಧತಿ ಅಳವಡಿಸಿ­ಕೊಳ್ಳುವುದು ಅನಿವಾರ್ಯವಾಗಿದೆ. ಮೊದಲನೆದಾಗಿ ಪಾಲಿ ಹೌಸ್‌ನಲ್ಲಿ ಬೇಸಾಯ ಮಾಡುವುದು, ಈ ಬಾರಿ ಪಾಲಿಹೌಸ್‌ನಲ್ಲಿ ಟೊಮೆಟೋ, ಬದನೆ, ಮೆಣಸಿನಕಾಯಿ, ಇತರ ತರಕಾರಿ, ಹೂ ಬೆಳೆದ ರೈತರಿಗೆ ಬಂಪರ್‌ ಬೆಲೆ ಸಿಕ್ಕಿದೆ. ಹೀಗಾಗಿ, ಪಾಲಿಹೌಸ್‌ನಲ್ಲಿ ಎಲ್ಲ ಬೆಳೆ ಬೆಳೆಯಲಾಗದಿದ್ದರೂ ಸಾಧ್ಯವಿರುವ ಬೆಳೆ ಬೆಳೆದು ರೈತರು ಮಳೆಯಿಂದ ನಷ್ಟದಿಂದ ಪಾರಾಗುವುದರ ಜತೆಗೆ ಆ ಸಮಯದಲ್ಲಿ ಹೆಚ್ಚಿನ ಲಾಭ ಮಾಡಿಕೊಳ್ಳಬಹುದು.

ಸಮಗ್ರ ಕೃಷಿ ಪದ್ಧತಿ:

ರಾಜ್ಯದ ಬಹುತೇಕ ರೈತರು ಒಂದೇ ಬೆಳೆಯನ್ನೇ ಬೆಳೆಯುತ್ತಾರೆ.  ಅತಿವೃಷ್ಟಿ, ಅನಾವೃಷ್ಟಿ ಸಂಭವಿಸಿದರೆ ಇಡೀ ಬೆಳೆ ನಾಶವಾಗಿ, ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಾರೆ. ಹೀಗಾಗಿ ರೈತರು, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಸಾಕಷ್ಟು ಅನುಕೂಲ ಪಡೆಯಬಹುದು. ಈಗ ನೂರು ಮಾವಿನ ಮರ ಬೆಳೆಯುವ ಜಾಗದಲ್ಲಿ ಹತ್ತು ಮಾವಿನ ಜತೆಗೆ ತೆಂಗು, ಅಡಿಕೆ, ಏಕ, ದ್ವಿದಳ ಧಾನ್ಯ, ಸ್ವಲ್ಪ ಮಟ್ಟಿಗೆ ತರಕಾರಿ ಬೆಳೆದುಕೊಂಡರೆ ಅನುಕೂಲವಾಗುತ್ತದೆ. ಇದರ ಜತೆಗೆ ಪೌಲಿó, ಹೈನುಗಾರಿಕೆ, ಎರೆಹುಳು ಗೊಬ್ಬರ ತಯಾರಿಕೆ, ಹಂದಿ, ಕುರಿ, ಜೇನು, ಮೀನು ಸಾಕಣೆ ಹೀಗೆ ರೈತರು ತಮಗೆ ಯಾವುದು ಸೂಕ್ತ ಎನಿಸುತ್ತದೆಯೋ ಅದನ್ನು ಆಯ್ಕೆ ಮಾಡಿಕೊಂಡು ಸಮಗ್ರ ಕೃಷಿ ಪದ್ಧತಿ ಅಳವಡಿ ಕೊಂಡರೆ ಒಂದರಲ್ಲಿ ನಷ್ಟ ಅನುಭವಿಸಿದರೆ, ಮತ್ತೂಂದರಲ್ಲಿ ಹೆಚ್ಚಿನ ಲಾಭ ಪಡೆದು ನಷ್ಟ ಸರಿದೂಗಿಸಿಕೊಳ್ಳಬಹುದು.

ಬಹುವಾರ್ಷಿಕ ಬೆಳೆಗೆ ಆದ್ಯತೆ ನೀಡಿ:

ಇತ್ತೀಚಿಗೆ ಸುರಿದ ಅನಿಶ್ಚಿತ ಮಳೆಯಿಂದ ಹೆಚ್ಚು ನಷ್ಟ ಅನುಭವಿಸಿದ್ದು, ಕೃಷಿ ಬೆಳೆಗಾರರು. ತತ್ಕಾಲಕ್ಕೆ ತೋಟಗಾರಿಕ ಬೆಳೆಗಳಿಗೆ ಅಲ್ಪ ಮಟ್ಟಿನ ತೊಂದರೆ ಆದರೂ ಅದನ್ನು ಮುಂದಿನ ದಿನಗಳಲ್ಲಿ ಸರಿದೂಗಿಸಿಕೊಳ್ಳಬಹುದು. ಆದರೆ ಕೃಷಿ ಬೆಳೆಗಳು ಮಳೆ ಹೆಚ್ಚಾದರೆ ಅಥವಾ ಕಡಿಮೆ ಆದರೆ ಸಂಪೂರ್ಣ ನಾಶವೇ ಆಗುತ್ತದೆ. ಹೀಗಾಗಿ ಅಲ್ಪ ಸ್ವಲ್ಪ ನೀರಾವರಿ ಸೌಲಭ್ಯ ಇರುವವರು, ವಾರ್ಷಿಕ ಬೆಳೆಗಳ ಜತೆಗೆ ಬಹುವಾರ್ಷಿಕ ಬೆಳೆಯನ್ನೂ ಬೆಳೆಯುವುದರಿಂದ ಸ್ವಲ್ಪ ಮಟ್ಟಿಗೆ ಅನುಕೂಲ ಪಡೆಯಬಹುದು.

ಎಲ್ಲರೂ ಒಂದೇ ಬೆಳೆ ಬೆಳೆಯಬಾರದು :

ಶಿವಮೊಗ್ಗ ಜಿಲ್ಲೆಯೊಂದರಲ್ಲೇ 45 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿದ್ದ ಅಡಿಕೆ ಬೆಳೆ, ಈಗ ಲಕ್ಷ ಹೆಕ್ಟೇರ್‌ ದಾಟಿದೆ. ಹಾಗೆಯೇ ಮೆಕ್ಕೆಜೋಳ, ಶುಂಠಿ ಬೆಳೆಯುವ ಪ್ರದೇಶವೂ ಹೆಚ್ಚಾಗಿದೆ. ಹೀಗಾಗಿ ಎಲ್ಲ ರೈತರು, ಒಂದೇ ಬೆಳೆ ಬೆಳೆಯು­ವುದರಿಂದ ಹವಾಮಾನ ವೈಪರೀತ್ಯದಿಂದ ಒಮ್ಮೆಲೆ ಎಲ್ಲರೂ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ರೈತರು, ದೂರದೃಷ್ಟಿ, ಬೆಲೆ ಏರುಪೇರು ನೋಡಿಕೊಂಡು ಬೆಳೆ ಬೆಳೆಯುವುದರಿಂದ  ಲಾಭ ಪಡೆಯಬಹುದು.

 -ಡಾ| ನಾಗರಾಜಪ್ಪ ಅಡಿವೆಪ್ಪ,  ಶಿವಮೊಗ್ಗ ಕೃಷಿ ವಿವಿ ಪ್ರಾಧ್ಯಾಪಕ  

Advertisement

Udayavani is now on Telegram. Click here to join our channel and stay updated with the latest news.

Next