Advertisement

ಅಲ್ಪಾವಧಿ ಕೃಷಿ ಸಾಲ ಯೋಜನೆ ಷರತ್ತು ಮರುಪರಿಶೀಲಿಸಿ

10:35 AM Apr 19, 2020 | sudhir |

ಮಂಗಳೂರು: ಅಲ್ಪಾವಧಿ ಕೃಷಿ ಸಾಲ ಯೋಜನೆಯ ಷರತ್ತನ್ನು ಮರು ಪರಿಶೀಲಿಸುವಂತೆ ರಾಜ್ಯ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರ ಮೂಲಕ ರಾಜ್ಯ ಸರಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಮನವಿ ಮಾಡಿದ್ದಾರೆ.

Advertisement

2019-20ನೇ ಸಾಲಿನ ಅವಧಿಯಲ್ಲಿ ರೈತರಿಗೆ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಗರಿಷ್ಠ 3 ಲಕ್ಷ ರೂ. ವರೆಗೆ ಅಲ್ಪಾವಧಿ ಕೃಷಿ ಸಾಲ ನೀಡುವ ಯೋಜನೆಯನ್ನು ಕೆಲವೊಂದು ಷರತ್ತಿಗೆ ಒಳಪಟ್ಟು ರಾಜ್ಯ ಸಹಕಾರ ಇಲಾಖೆಯು ಮಾ. 30ರಂದು ಆದೇಶ ಹೊರಡಿಸಿತ್ತು.

ಆದರೆ 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ ಎಲ್ಲ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ಮಿತಿ ಮಂಜೂರಾತಿ ಹಾಗೂ ಸಾಲ ವಿತರಣೆ ಪ್ರಕ್ರಿಯೆ ಸಂಪೂರ್ಣಗೊಂಡಿರುತ್ತದೆ. 2019-20ನೇ ಸಾಲಿನ ಸಂಪೂರ್ಣ ಸಾಲ ವಿತರಣೆಯಾದ ಅನಂತರ ಈಗ ಮರುಪಾವತಿ ಸಮಯದಲ್ಲಿ ಈ ಆದೇಶದಲ್ಲಿ ವಿಧಿಸಿರುವ ಷರತ್ತುಗಳನ್ನು ಪಾಲಿಸಲು ಆಗುವ ತೊಂದರೆಗಳ ಬಗ್ಗೆ ರಾಜ್ಯ ಸರಕಾರ ತುರ್ತಾಗಿ ಗಮನಹರಿಸುವಂತೆ ಮನವಿ ಮಾಡಿದ್ದಾರೆ.

ಸರಕಾರದ ಆದೇಶದಲ್ಲಿ ವಿಧಿಸಿರುವ ಷರತ್ತಿನಂತೆ ರೈತರು ಆಧಾರ್‌, ರೇಷನ್‌ ಕಾರ್ಡ್‌ ಮತ್ತು ಆರ್‌ಟಿಸಿಯೊಂದಿಗೆ ಸ್ವಯಂ ದೃಢೀಕರಣ ಪತ್ರ ಸಲ್ಲಿಸಬೇಕು. ಈ ಪೈಕಿ ಒಂದು ಕುಟುಂಬ ಪಡೆದುಕೊಂಡಿರುವ 3 ಲಕ್ಷಗಿಂತ ಹೆಚ್ಚಿನ ಸಾಲಕ್ಕೆ, ಮಾಸಿಕ 20,000 ರೂ. ಪಿಂಚಣಿ/ಸಂಬಳ, ಆದಾಯ ಕರ ಪಾವತಿದಾರರು, ಭೂ ಮಾಲಕತ್ವ ಮತ್ತು ಸಾಗುವಳಿದಾರರ ಹೆಸರು ಪಹಣಿ ಪತ್ರದಲ್ಲಿ ಇಲ್ಲದೆ ಇದ್ದ ಪಕ್ಷದಲ್ಲಿ ಸದರಿ ರೈತರಿಗೆ ರಾಜ್ಯ ಸರಕಾರದ ಶೂನ್ಯ ಬಡ್ಡಿ ದರದ ಯೋಜನೆ ಅನ್ವಯಿಸುವುದಿಲ್ಲ. ನಮ್ಮ ಜಿಲ್ಲೆಯಲ್ಲಿ ಸುಮಾರು 1,05,000 ರೈತರಿಗೆ ಬೆಳೆ ಸಾಲ ವಿತರಣೆಯಾಗಿದು,ª ಈ ಪೈಕಿ ಸುಮಾರು 14,000 ರೈತರು ಶೂನ್ಯ ಬಡ್ಡಿ ದರದ ಯೋಜನೆಯಿಂದ ವಂಚಿತರಾಗುತ್ತಾರೆ. ಈ ರೈತರಿಗೆ ಈಗಾಗಲೇ ಮಂಜೂರು ಮಾಡಿ ನೀಡಿರುವ ಶೂನ್ಯ ಬಡ್ಡಿದರದ ಸಾಲವನ್ನು ಉಲ್ಲೇಖೀತ ಆದೇಶದಲ್ಲಿ ಕೇಂದ್ರ ಸರಕಾರದ ಶೇ.7ರ ಬಡ್ಡಿ ದರದಲ್ಲಿ ಬೆಳೆ ಸಾಲ ಒದಗಿಸುವ ಯೋಜನೆ ಅನ್ವಯವಾಗುತ್ತದೆ ಎಂಬುದಾಗಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಸರಕಾರದ ಆದೇಶದಲ್ಲಿ ವಿಧಿಸಿರುವ ಷರತ್ತುಗಳನ್ನು ಮರುಪರಿಶೀಲಿಸಿ, ಶೂನ್ಯ ಬಡ್ಡಿ ದರದ ಬೆಳೆ ಸಾಲವನ್ನು ಎಲ್ಲ ರೈತರಿಗೆ ಅನ್ವಯವಾಗುವಂತೆ ಪರಿಷ್ಕೃತ ಆದೇಶವನ್ನು ಹೊರಡಿಸುವ ಬಗ್ಗೆ ಡಾ| ರಾಜೇಂದ್ರ ಕುಮಾರ್‌ ಅವರು ಸರಕಾರದ ಗಮನಕ್ಕೆ ತಂದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next