Advertisement

ಮತ್ತೆ ಸಿಧು ಪಾಕ್‌ ವಿವಾದ

06:00 AM Oct 14, 2018 | Team Udayavani |

ಹೊಸದಿಲ್ಲಿ: ಪಾಕ್‌ ಮೇಲೆ ತಮಗಿರುವ ಪ್ರೀತಿ ವ್ಯಕ್ತಪಡಿಸುವ ಭರದಲ್ಲಿ ದಕ್ಷಿಣ ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಹೊಸ ವಿವಾದ ಸೃಷ್ಟಿಸಿದ್ದಾರೆ. ದಕ್ಷಿಣ ಭಾರತಕ್ಕೆ ಹೋಗುವುದಕ್ಕಿಂತ ಪಾಕಿಸ್ಥಾನಕ್ಕೆ ಹೋಗುವುದೇ ಉತ್ತಮ ಎಂಬ ಅವರ ಹೇಳಿಕೆ ವಿವಾದದ ಸ್ವರೂಪ ಪಡೆದಿದ್ದು, ದಕ್ಷಿಣ ಭಾರತ ವರ್ಸಸ್‌ ಉತ್ತರ ಭಾರತ ಎಂಬ ಜಗಳವನ್ನು ಹುಟ್ಟುಹಾಕಲಿದೆಯೇ ಎಂಬ ಅನುಮಾನ ಮೂಡಿದೆ. 

Advertisement

ಶನಿವಾರ ಹಿಮಾಚಲಪ್ರದೇಶದಲ್ಲಿ ನಡೆದ ಕಸೌಲಿ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ಸಿಧು, ದಕ್ಷಿಣ ಭಾರತದಲ್ಲಿ ಭಾಷೆ ಹಾಗೂ ಆಹಾರದ್ದೇ ದೊಡ್ಡ ಸಮಸ್ಯೆ. ಅಲ್ಲಿಗೆ ಹೋದರೆ ಅಲ್ಲಿನ ಒಂದು ಪದವೂ ನನಗೆ ಅರ್ಥವಾಗುವುದಿಲ್ಲ. ಇಡ್ಲಿಯಂಥ ಆಹಾರವನ್ನು ಸ್ವಲ್ಪಮಟ್ಟಿಗೆ ಸೇವಿಸುತ್ತೇನೆ. ಆದರೆ ಹೆಚ್ಚು ದಿನ ಅದನ್ನೇ ತಿನ್ನುತ್ತಿರಲು ನನ್ನಿಂದ ಸಾಧ್ಯವಿಲ್ಲ. ಅಲ್ಲಿನ ಸಂಸ್ಕೃತಿ ಸಂಪೂರ್ಣ ಭಿನ್ನ. ಆದರೆ ಪಾಕಿಸ್ಥಾನಕ್ಕೆ ಹೋದರೆ ಅಲ್ಲಿನ ಜನ ಪಂಜಾಬಿ ಮತ್ತು ಇಂಗ್ಲಿಷ್‌ ಭಾಷೆ ಮಾತನಾಡುತ್ತಾರೆ. ಅವರೊಂದಿಗೆ ಬೆರೆಯುವುದೂ ನನಗೆ ತುಂಬಾ ಸುಲಭ. ಅಲ್ಲಿ ಸಂಚರಿಸುವುದೇ ಒಂದು ಅದ್ಭುತ ಅನುಭವ. ಹೀಗಾಗಿ ದಕ್ಷಿಣ ಭಾರತಕ್ಕಿಂತ ಪಾಕಿಸ್ಥಾನಕ್ಕೆ ಹೋಗುವುದು ನನಗೆ ಹೆಚ್ಚು ಸೂಕ್ತವೆನಿಸುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಪಾಕ್‌ ಸೇನಾ ಮುಖ್ಯಸ್ಥ ಖಮರ್‌ ಜಾವೇಜ್‌ ಬಜ್ವಾರನ್ನು ಆಲಿಂಗಿಸಿದ್ದನ್ನೂ ಸಮರ್ಥಿಸಿಕೊಂಡಿದ್ದಾರೆ.

ಪಾಕ್‌ಗೆ ಹೋಗಲಿ ಸಿಧು ಅವರ “ದಕ್ಷಿಣ ಭಾರತ – ಪಾಕಿಸ್ಥಾನ’ ಹೇಳಿಕೆಗೆ ವಿವಿಧ ರಾಜಕೀಯ ಪಕ್ಷಗಳು ಕಿಡಿಕಾರಿವೆ. ಸಿಧು ಅವರು ಈಗ ಪಾಕಿಸ್ಥಾನಿ ಸಮರ್ಥಕರಾಗಿ ಬದಲಾಗಿದ್ದಾರೆ ಎಂದು ಪಂಜಾಬ್‌ನ ಅಕಾಲಿ ದಳದ ಹಿರಿಯ ನಾಯಕರೊಬ್ಬರು ತಿವಿದಿದ್ದಾರೆ. ತಮಿಳುನಾಡಿನ ಎಐಎಡಿಎಂಕೆ ನಾಯಕರೊಬ್ಬರು ಮಾತನಾಡಿ, ದ.ಭಾರತಕ್ಕಿಂತ ಪಾಕಿಸ್ಥಾನವೇ ಇಷ್ಟವೆಂದಾದರೆ ಅಲ್ಲಿಗೇ ಹೋಗಲಿ ಎಂದಿದ್ದಾರೆ. ಸಿಧು ಪಾಕ್‌ ಪ್ರೀತಿ ಬಗ್ಗೆ ಪ್ರಶ್ನೆ ಮಾಡಿದ ಬಿಜೆಪಿ, ಅವರ ಹೇಳಿಕೆ ಆಕ್ಷೇಪಾರ್ಹ ಎಂದಿದೆ. 

ಪಾಕ್‌ನೊಂದಿಗೆ ದ. ಭಾರತವನ್ನು ಹೋಲಿಕೆ ಮಾಡುವುದು ಸರಿಯಲ್ಲ; ಮಾತ್ರವಲ್ಲ ಅದು ಖಂಡನಾರ್ಹ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ನಳಿನ್‌ ಕೊಹ್ಲಿ ಹೇಳಿದ್ದಾರೆ. ಇದರಲ್ಲೇನೂ ವಿಶೇಷವಿಲ್ಲ. ಸುದ್ದಿಯಲ್ಲಿರಬೇಕೆಂದು ಸಿಧು ಹೀಗೆಲ್ಲ ಮಾತನಾಡುತ್ತಾರೆ ಎಂದು ಹೇಳುವ ಮೂಲಕ ಇನ್ನು ಕಾಂಗ್ರೆಸ್‌ ವಿವಾದವನ್ನು ತೇಲಿಬಿಡುವ ಯತ್ನಕ್ಕೆ ಕೈಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next