Advertisement

ಶಾಸಕರಾದ ಬಳಿಕ ರಾತ್ರಿ ಜತೆಯಾಗಿ ಉಂಡದ್ದೇ  ಇಲ್ಲ

06:15 AM Apr 09, 2018 | Team Udayavani |

ಕುಂದಾಪುರ: ತಾನು ಪ್ರತಿನಿಧಿಸುವ ಕ್ಷೇತ್ರದ ಎಲ್ಲ ಮನೆಗಳಲ್ಲೂ ವಿದ್ಯುತ್‌ ಸಂಪರ್ಕ, ಎಲ್ಲರಿಗೂ ನೀರಿನ ಸೌಲಭ್ಯ, ಪ್ರತಿ ಹಳ್ಳಿಗೂ ರಸ್ತೆ ಇರಬೇಕು ಎನ್ನುವುದು ಅಪ್ಪನ ಕನಸಾಗಿತ್ತು ಎನ್ನುವುದು ಐ.ಎಂ. ಜಯರಾಮ ಶೆಟ್ಟರ ಬಗ್ಗೆ ಪುತ್ರ ಸಿದ್ಧಾರ್ಥ್ ಶೆಟ್ಟಿ ಅವರ ಅಭಿಮಾನದ ನುಡಿ. ಇರ್ಮಡಿ ಮೂಡ್ಲಕಟ್ಟೆ ಜಯರಾಮ ಶೆಟ್ಟಿಯವರು 1994ರಲ್ಲಿ ಬೈಂದೂರಿನಿಂದ ಬಿಜೆಪಿ ಶಾಸಕರಾಗಿ ಆಯ್ಕೆ ಯಾಗಿದ್ದರು. ಅನಂತರ 1998ರಲ್ಲಿ ಕಾಂಗ್ರೆಸ್‌ನ ಆಸ್ಕರ್‌ ಫೆರ್ನಾಂಡಿಸ್‌ ಅವರ ವಿರುದ್ಧ ಗೆದ್ದ ಶೆಟ್ಟರು ಉಡುಪಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. 

Advertisement

5 ವರ್ಷ, 4 ಚುನಾವಣೆ
ಐ.ಎಂ. ಜಯರಾಮ ಶೆಟ್ಟರು 1994ರಿಂದ 1999 ವರೆಗಿನ 5 ವರ್ಷಗಳ ಅವಧಿಯಲ್ಲಿ 4 ಚುನಾವಣೆಗಳನ್ನು ಎದುರಿಸಿ, ಅದರಲ್ಲಿ 2 ಗೆಲುವು ಹಾಗೂ 2 ಸೋಲನ್ನು ಕಂಡವರು. 3 ಬಾರಿ ಲೋಕಸಭೆ ಹಾಗೂ 1 ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು.
 
ಆಗಿನ ಪ್ರಚಾರದ ಗಮ್ಮತ್ತೇ ಬೇರೆ
ಅದು 1994 ರ ಕಾಲ. ಆಗ ಈಗಿನ ರೀತಿ ಸಾಮಾಜಿಕ ಜಾಲತಾಣ ಅಥವಾ ಟಿವಿ ಮಾಧ್ಯಮಗಳ ಅಬ್ಬರವಿರಲಿಲ್ಲ. ಆಗ ಏನಿದ್ದರೂ ಬ್ಯಾನರ್‌, ಕಟೌಟ್‌ಗಳು, ಗೋಡೆ ಬರಹಗಳೇ ಪ್ರಚಾರದ ಪ್ರಮುಖ ಮಾಧ್ಯಮಗಳಾಗಿದ್ದವು. ನಾವು ಕೂಡ ಬ್ಯಾನರ್‌ಗಳನ್ನು ಹಾಕಲು ತೆರಳುತ್ತಿದ್ದೆವು. ನಮಗೆಲ್ಲ ಆಗ ಅದೇ ಒಂದು ಗಮ್ಮತ್ತಿನ ವಿಚಾರವಾಗಿತ್ತು ಎನ್ನುವುದಾಗಿ ಆಗ 10 -12 ವರ್ಷದ ಬಾಲಕನಾಗಿದ್ದ  ಪುತ್ರ ಸಿದ್ಧಾರ್ಥ್ ಶೆಟ್ಟಿ ನೆನಪು ಮಾಡಿಕೊಳ್ಳುತ್ತಾರೆ.  ತಂದೆ ಶಾಸಕರಾಗಿ ಆಯ್ಕೆಯಾದ ಅನಂತರ ರಾತ್ರಿ ಒಟ್ಟಿಗೆ ಊಟವನ್ನು ಮಾಡಿದ್ದು ಸಿದ್ಧಾರ್ಥರಿಗೆ ನೆನಪಿಲ್ಲ. 

ಶೆಟ್ಟರ ವಿರುದ್ಧ ಕೇಸು
ಕರ್ಕುಂಜೆಯಲ್ಲಿದ್ದ ಕಮಲಮ್ಮ ಎನ್ನುವ ವಿಧವೆಯೊಬ್ಬರ ಮನೆಯನ್ನು ಕಂದಾಯ ಅಧಿಕಾರಿಗಳು ಕೆಡವಿದ್ದರ ವಿರುದ್ಧ ಧ್ವನಿಯೆತ್ತಿದ  ಶಾಸಕ ಐ.ಎಂ. ಜಯರಾಮ ಶೆಟ್ಟರು ಕಂದಾಯ ಅಧಿಕಾರಿಗಳ ಕಚೇರಿ ಮುಂದೆಯೇ ಧರಣಿ ಕುಳಿತಿದ್ದರು. ಅವರನ್ನು ಆಗಿನ ಉಡುಪಿ ಶಾಸಕರಾಗಿದ್ದ ಯು.ಆರ್‌. ಸಭಾಪತಿ ಬೆಂಬಲಿಸಿದ್ದರು. ಈ ಸಂಬಂಧ ಇಬ್ಬರ ವಿರುದ್ಧವೂ ಕೇಸು ದಾಖಲಾಗಿತ್ತು. ಶೆಟ್ಟರು ಈ ಕುರಿತು ಸದನದಲ್ಲಿಯೂ ಧ್ವನಿ ಎತ್ತಿದರು. ಬಳಿಕ ಕೇಸು ಹಿಂದೆಗೆದುಕೊಳ್ಳಲಾಯಿತು, ಕಮಲಮ್ಮ ಅವರಿಗೆ ಶೆಟ್ಟರೇ ಮನೆ ಕಟ್ಟಿಕೊಟ್ಟರು.
 
94ರಲ್ಲಿಯೇ ರಸ್ತೆಗಳೆಲ್ಲ ಚತುಷ್ಪಥವಾಗಬೇಕು ಎನ್ನುವುದರ ಕುರಿತು ತಂದೆ ಕನಸು ಕಂಡಿದ್ದರು ಎನ್ನುವುದಾಗಿ ಸಿದ್ಧಾರ್ಥ ಹೇಳಿಕೊಳ್ಳುತ್ತಾರೆ. 

ಜನ ಈಗಲೂ ನೆನಪು ಮಾಡಿಕೊಳ್ತಾರೆ…
ಅಪ್ಪ ಶಾಸಕರಾಗಿದ್ದ ವೇಳೆ ಬೈಂದೂರು ಕ್ಷೇತ್ರದ ಹೆಚ್ಚಿನ ಜನರಿಗೆ ಅಕ್ರಮ-ಸಕ್ರಮದಡಿ ನಿವೇಶನ ಸಿಗಲು ಶ್ರಮಿಸಿದ್ದರು. ಅಪ್ಪ ಮೂಡ್ಲಕಟ್ಟೆಯಿಂದ ಬಸೂÅರು ಮೂರುಕೈವರೆಗೆ ನಡೆದುಕೊಂಡೇ ಹೋಗಿ ಅಲ್ಲಿಂದ ಮಣಿಪಾಲಕ್ಕೆ ಎಂಜಿನಿಯರಿಂಗ್‌ ವ್ಯಾಸಂಗಕ್ಕೆ ಹೋಗುತ್ತಿದ್ದರು. ಈ ಭಾಗದ ಮಕ್ಕಳಿಗೆ ಕಷ್ಟ ವಾಗಬಾರದು ಎಂದೇ ಗ್ರಾಮೀಣ ಪ್ರದೇಶ  ಮೂಡ್ಲಕಟ್ಟೆಯಲ್ಲಿ ತಾಂತ್ರಿಕ ಕಾಲೇಜು  ಸ್ಥಾಪಿಸಿ ದರು ಎನ್ನುತ್ತಾರೆ ಸಿದ್ಧಾರ್ಥ. 

ಶೆಟ್ಟರ ಪತ್ನಿ ವಿದ್ಯಾ ಶೆಟ್ಟಿ ಚುನಾವಣೆ ಸಂದರ್ಭ ಮನೆ ಮನೆಗೆ ಪ್ರಚಾರಕ್ಕೆ ಹೋಗು ತ್ತಿದ್ದರು. ಶೆಟ್ಟರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಕುಟುಂಬಸ್ಥರೆಲ್ಲ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪುತ್ರ ಸಿದ್ಧಾರ್ಥ ಶೆಟ್ಟಿ ಮೂಡ್ಲಕಟ್ಟೆ ತಾಂತ್ರಿಕ ಕಾಲೇಜಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

Advertisement

ಕಂಬಳಕ್ಕೆ ಬಂದಿದ್ದರು ಆಡ್ವಾಣಿ !
ಅಪ್ಪ ಶಾಸಕ, ಸಂಸದರಾಗಿದ್ದಾಗ ಎಲ್‌.ಕೆ. ಆಡ್ವಾಣಿ, ಜಾರ್ಜ್‌ ಫೆರ್ನಾಂಡಿಸ್‌, ಜೆ.ಎಚ್‌. ಪಟೇಲ್‌ ಸಹಿತ ಅನೇಕ ಗಣ್ಯ ನಾಯಕರು ಮನೆಗೆ ಬರುತ್ತಿದ್ದರು. ಮನೆಯಲ್ಲಿ ದಿನ ಬೆಳಗಾದರೆ 15 ರಿಂದ 20 ಮಂದಿ ಇರುತ್ತಿದ್ದರು. ಜಯರಾಮ ಶೆಟ್ಟರ ನೇತೃತ್ವದಲ್ಲಿ ನಡೆಯುತ್ತಿದ್ದ ಮೂಡ್ಲಕಟ್ಟೆ ಕಂಬಳಕ್ಕೆ ಆಡ್ವಾಣಿ ಬಂದಿದ್ದರು. ಬಿಜೆಪಿ ಬಳಿಕ ಸಮಾಜವಾದಿ ಪಕ್ಷ, ಕಾಂಗ್ರೆಸ್‌ ಪಕ್ಷಕ್ಕೆ ಸೇರಿದರು. 2014ರಲ್ಲಿ 63ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ವಿಧಿವಶರಾಗಿದ್ದು ಮೂಡ್ಲಕಟ್ಟೆಯಲ್ಲಿಯೇ ಅವರ ಅಂತಿಮ ಸಂಸ್ಕಾರ ನಡೆಸಲಾಯಿತು ಎಂದು  ನೆನಪಿಸಿಕೊಂಡರು ಪುತ್ರ ಸಿದ್ಧಾರ್ಥ.

 - ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next