Advertisement

ನೆರೆಯಲ್ಲಿ ಹೋಯ್ತು ಬಯಲು ಶೌಚಮುಕ್ತ ಪಟ್ಟ!

02:57 PM Jan 20, 2020 | Team Udayavani |

ಬೆಳಗಾವಿ: ಕಳೆದ ನಾಲ್ಕೈದು ತಿಂಗಳ ಹಿಂದೆ ಜಿಲ್ಲೆಗೆ ಬಂದೆರಗಿದ ಪ್ರವಾಹದಿಂದ ಸಂತ್ರಸ್ತರು ಸೂರಿನ ಆಶ್ರಯವನ್ನೇ ಕಳೆದುಕೊಂಡಿದ್ದು, ಈಗ ಅನಿವಾರ್ಯವಾಗಿ ಬಯಲು ಶೌಚವನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ನೆರೆಯಿಂದಾಗಿ ಎರಡು ವರ್ಷಗಳ ಹಿಂದೆ ಜಿಲ್ಲೆಗೆ ದೊರೆತಿದ್ದ ಬಯಲುಶೌಚ ಮುಕ್ತ ಜಿಲ್ಲೆ ಎಂಬ ಪಟ್ಟವೂ ನೀರಿನಲ್ಲಿ ತೇಲಿಕೊಂಡು ಹೋಗಿದೆ. ಹೀಗಾಗಿ ಬಯಲು ಶೌಚಮುಕ್ತ ಜಿಲ್ಲೆ ಎಂಬ ಘೋಷಣೆ ಈಗ ದಾಖಲೆಗಷ್ಟೇ ಸೀಮಿತವಾಗಿದೆ.

ಜಿಲ್ಲಾಡಳಿತದ ಮಾಹಿತಿಯ ಪ್ರಕಾರ ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ 872 ಗ್ರಾಮಗಳು ಬಾಧಿತವಾಗಿದ್ದು, 69 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಈ ಬಿದ್ದಿರುವ ಮನೆಗಳಲ್ಲಿ ಶೌಚಾಲಯಗಳೂ ಸೇರಿವೆ. ಇದರಿಂದ ಈ ಮನೆಗಳ ಜನರು ಅನಿವಾರ್ಯವಾಗಿ ಬಯಲು ಶೌಚವನ್ನೇ ಆಶ್ರಯಿಸಬೇಕಾಗಿದೆ. ಕೆಲವು ಕಡೆವೈಯಕ್ತಿಕ ಶೌಚಾಲಯಗಳಿದ್ದರೂ ಜನರು ಅವುಗಳನ್ನು ಬಳಕೆ ಮಾಡುತ್ತಿಲ್ಲ. ಬದಲಾಗಿ ಸ್ಟೋರ್‌ ರೂಮ್‌ ಆಗಿ ಬಳಸುತ್ತಿದ್ದಾರೆ. ಇನ್ನು ಕೆಲವು ಕಡೆ ನೀರಿನ ಸಮಸ್ಯೆಯಿಂದ ಶೌಚಾಲಯಗಳು ನಿರುಪಯುಕ್ತವಾಗಿವೆ.

ಜಿಲ್ಲೆಯಲ್ಲಿ ಒಟ್ಟು 5,41,264 ಕುಟುಂಬಗಳ ಪೈಕಿ ಇದುವರೆಗೆ 4,28,689 ಶೌಚಾಲಯಗಳನ್ನು ಕಟ್ಟಲಾಗಿದೆ. ಕೆಲ ಭಾಗಗಳಲ್ಲಿ ಸಾಮೂಹಿಕ ಶೌಚಾಲಯಗಳನ್ನು ಸಹ ನಿರ್ಮಾಣ ಮಾಡಲಾಗಿದೆ. ಇದೆಲ್ಲವನ್ನು ಆಧರಿಸಿ 2018ರಲ್ಲಿ ಜಿಲ್ಲೆಗೆ ಬಯಲುಶೌಚ ಮುಕ್ತ ಜಿಲ್ಲೆ ಎಂಬ ಪ್ರಮಾಣ ಪತ್ರ ನೀಡಲಾಗಿತ್ತು. ಆದರೆ ಈಗ ನೆರೆ ಹಾವಳಿಯಿಂದ ಸಾಕಷ್ಟು ಮನೆಗಳು ಬಿದ್ದಿದ್ದರಿಂದ ಜಿಲ್ಲೆಯಲ್ಲಿ ಮತ್ತೆ ಬಯಲು ಶೌಚ ಸಮಸ್ಯೆ ಕಾಡಲಾರಂಭಿಸಿದೆ.

ಇನ್ನೊಂದು ಕಡೆ ಸರಕಾರ ನೀಡುವ ಅಂಕಿ ಅಂಶಗಳಿಗೂ ಹಾಗೂ ವಾಸ್ತವ ಸ್ಥಿತಿಗೂ ಬಹಳಷ್ಟು ವ್ಯತ್ಯಾಸ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದರೂ ಆದರ ಬಳಕೆ ಮಾತ್ರ ಸರಿಯಾಗಿ ಆಗುತ್ತಿಲ್ಲ. ನೀರಿನ ಸಮಸ್ಯೆಯಿಂದ ಅನೇಕ ಕಡೆ ಈ ಶೌಚಾಲಯಗಳು ನಿರ್ವಹಣೆ ಸಮಸ್ಯೆ ಎದುರಿಸುತ್ತಿವೆ. ಗ್ರಾಮೀಣಪ್ರದೇಶಗಳ ಶಾಲೆಗಳಿಗೂ ಇದರ ಪರಿಣಾಮ ತಟ್ಟಿದೆ.ಈ ಹಿಂದೆ ಸಹಾಯಧನ ಪಡೆದು ಶೌಚಾಲಯ ಕಟ್ಟಿಕೊಂಡವರು ಈಗ ಪ್ರವಾಹದಲ್ಲಿ ಮನೆಗಳ ಜೊತೆಗೆ ಶೌಚಾಲಯವನ್ನೂ ಕಳೆದುಕೊಂಡಿದ್ದರೆ ಸರ್ಕಾರ ನೀಡುವ ಐದು ಲಕ್ಷ ರೂ. ಪರಿಹಾರದಲ್ಲಿ ಅದನ್ನು ಕಟ್ಟಿಕೊಳ್ಳಬೇಕು. ಅದಕ್ಕೆ ಈಗ ಪ್ರತ್ಯೇಕ ಸಹಾಯಧನ ನೀಡುತ್ತಿಲ್ಲ. ಆದರೆ ಪ್ರವಾಹದಲ್ಲಿ ಮನೆಗಳ ಜೊತೆಗೆ ಶೌಚಾಲಯಗಳು ಸಹ ಹಾಳಾಗಿವೆ.

Advertisement

ಇದರ ಸಮೀಕ್ಷೆ ಕಾರ್ಯವನ್ನು ನಂತರ ಕೈಗೊಳ್ಳಲಾಗುತ್ತಿದೆ. ಸಮೀಕ್ಷೆ ಕಾರ್ಯ ಪೂರ್ಣಗೊಂಡ ನಂತರ ಮತ್ತೆ ಶೌಚಾಲಯಗಳ ನಿರ್ಮಾಣಕ್ಕೆ ಹೊಸದಾಗಿ ಸಹಾಯಧನ ನೀಡಬೇಕೇ ಎಂಬುದರ ಬಗ್ಗೆ ಪರಿಶೀಲಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಎಂಬುದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕೆ.ವಿ.ಅವರ ಹೇಳಿಕೆ.

ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಬಹುತೇಕ ಕಡೆ ಸಾಕಷ್ಟು ಸಂಖ್ಯೆಯಲ್ಲಿಮನೆಗಳು ಬಿದ್ದಿದ್ದರಿಂದ ಅದರೊಂದಿಗೆ ಕಟ್ಟಿದ್ದ ಶೌಚಾಲಯಗಳು ಸಹ ನೆಲಕಚ್ಚಿವೆ. ಇದರಿಂದ ಜನರಿಗೆ ಬಹಳ ತೊಂದರೆಯಾಗಿರುವದು ಸರಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಎರಡನೇ ಹಂತದಲ್ಲಿ ಕಾರ್ಯಕ್ರಮ ಆರಂಭಿಸಲಾಗುತ್ತಿದೆ. ಈ ಕಾರ್ಯಕ್ರಮದಡಿ ಶೌಚಾಲಯ ನಿರ್ಮಾಣದ ಅಗತ್ಯವಿದ್ದವರು ಗ್ರಾಮ ಪಂಚಾಯತ್‌ಗಳ ಮೂಲಕ ತಮ್ಮ ಪಟ್ಟಿಯನ್ನು ಕೊಡಲು ಅವಕಾಶ ಕಲ್ಪಿಸಲಾಗಿದೆ. ಸರಕಾರದಿಂದ ಇದಕ್ಕೆ ಅನುದಾನ ಸಹ ಬಿಡುಗಡೆಯಾಗಿದೆ ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಆಶಾ ಐಹೊಳೆ ಹೇಳಿದರು.

ಈಗ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಇದಲ್ಲದೇ ಇದುವರೆಗೆಶೌಚಾಲಯ ಹೊಂದದೇ ಇರುವ ಕುಟುಂಬಗಳ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಜ.30 ರೊಳಗೆ ಈ ಸಮೀಕ್ಷೆ ಕಾರ್ಯಪೂರ್ಣಗೊಳಿಸಿ ಅಂತಹ ಕುಟುಂಬಗಳಿಗೆ ಶೌಚಾಲಯ ನಿರ್ಮಾಣಕ್ಕೆ ಹಣ ಸಹಾಯ ಒದಗಿಸಲಾಗುವುದು ಎನ್ನುತ್ತಾರೆ ಸಿಇಒ ರಾಜೇಂದ್ರ ಕೆ.ವಿ. ಸರಕಾರ ಈಗ ಬಿದ್ದಿರುವ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದು, ಐದು ಲಕ್ಷ ರೂ. ವರೆಗೆ ಪರಿಹಾರನೀಡುತ್ತಿದೆ. ಸಂತ್ರಸ್ತರು ಇದೇ ಹಣದಲ್ಲಿ ಶೌಚಾಲಯಕಟ್ಟಿಕೊಳ್ಳಬೇಕಾದ ಸ್ಥಿತಿಯಲ್ಲಿದ್ದಾರೆ. ಆದರೆ ಮನೆ ನಿರ್ಮಾಣಕ್ಕೆ ಹಣ ಸಾಕಾಗುವುದಿಲ್ಲ ಎನ್ನುವ ಸಂತ್ರಸ್ತರು ಶೌಚಾಲಯ ಕಟ್ಟಿಕೊಳ್ಳಲು ಮುಂದಾಗುವರೇ ಎಂಬ ಪ್ರಶ್ನೆ ಜಿಲ್ಲಾಡಳಿತವನ್ನು ಕಾಡುತ್ತಿದೆ.

 

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next