Advertisement

ಆಫ್ರಿಕಾ ದೇಶದ ಕತೆ: ಜೀವದ ಬೆಲೆ

06:00 AM Nov 04, 2018 | |

ಒಂದು ಹಳ್ಳಿಯಲ್ಲಿ ಮೂವರು ಅಣ್ಣ, ತಮ್ಮ ಇದ್ದರು. ಹೊಲದಲ್ಲಿ ದುಡಿದು ಧಾನ್ಯಗಳನ್ನು ಬೆಳೆದು ಜೀವನ ನಡೆಸಿಕೊಂಡಿದ್ದರು. ಒಂದು ದಿನ ಅವರು, “”ನಾವು ಹೀಗೆಯೇ ಇರಬಾರದು, ಮನಸ್ಸಿಗೊಪ್ಪುವ ಒಬ್ಬೊಬ್ಬ ಹುಡುಗಿಯನ್ನು ಹುಡುಕಿ ಮದುವೆಯಾಗಬೇಕು” ಎಂದು ಮಾತನಾಡಿಕೊಂಡರು. ಆಗ ಹಿರಿಯವನು, “”ನನಗೆ ಹುಡುಗಿ ಹುಡುಕುವ ಕೆಲಸವಿಲ್ಲ, ನೀವಿಬ್ಬರೂ ನಿಮ್ಮ ಕೈ ಹಿಡಿಯುವವಳು ಯಾರು ಎಂದು ಆಯ್ಕೆ ಮಾಡಿಕೊಳ್ಳಬಹುದು” ಎಂದು ಹೇಳಿದ. ತಮ್ಮಂದಿರು, “”ಹಾಗಿದ್ದರೆ ಕೆಲಸ ಸುಲಭವಾಯಿತು ತಾನೆ? ಅದಿರಲಿ, ನೀನು ಮೆಚ್ಚಿ ಕೊಂಡಿರುವ ಹುಡುಗಿಯಾದರೂ ಯಾರು, ಎಲ್ಲಿಯವಳು? ನಾವು ಕೂಡ ನಿನ್ನ ಹಾಗೆಯೇ ಒಬ್ಬಳು ಹುಡುಗಿಯನ್ನು ನೋಡಿ ಅವಳನ್ನೇ ಮದುವೆಯಾಗಬೇಕು ಎಂದು ಮನಸ್ಸಿನಲ್ಲಿ ನಿರ್ಧರಿಸಿದ್ದೇವೆ” ಎಂದು ಹೇಳಿದರು.

Advertisement

ಹಿರಿಯವನು, “”ನಾನು ಮದುವೆಯಾಗಲು ಬಯಸಿರುವ ಹುಡುಗಿ ಬಹು ಅಂದಗಾತಿ. ನಮ್ಮ ನೆರೆಮನೆಯಲ್ಲಿಯೇ ಇದ್ದಾಳೆ. ಹಂಸದಂತೆ ಬೆಳ್ಳಗೆ, ಚಂದ್ರನಂತೆ ಮುಖ, ಮಾತನಾಡಿದರೆ ಸಂಗೀತದಂತೆ ಕೇಳಿಸುತ್ತದಲ್ಲವೆ? ಅವಳನ್ನು ಮಾತನಾಡಿಸಿ ಒಪ್ಪಿಕೊಂಡರೆ ಮದುವೆ ಯಾಗಲು ದಿನ ನಿಶ್ಚಯಿಸುತ್ತೇನೆ” ಎಂದು ಹೇಳಿದ. ಅವನ ಮಾತು ಕೇಳಿ ತಮ್ಮಂದಿರ ಮುಖ ಕಪ್ಪಿಟ್ಟಿತು. ಮಧ್ಯಮನು, “”ಏನು, ನೀನು ಆ ಹುಡುಗಿಯನ್ನು ಮದುವೆಯಾಗಲು ಯೋಚಿಸಿದ್ದೀಯಾ? ಆದರೆ ನಾನು ಕೂಡ ಮನಸ್ಸಿನಲ್ಲಿ ಮದುವೆಯಾಗುವುದಾದರೆ ಅವಳನ್ನೇ ಎಂದು ನಿರ್ಧರಿಸಿದ್ದೇನೆ” ಎಂದನು. ಕಿರಿಯವನೂ ತಲೆತಗ್ಗಿಸಿ, “”ನೀವಿಬ್ಬರೂ ಯಾರನ್ನು ಮದುವೆಯಾಗಲು ಕನಸು ಕಾಣುತ್ತಿದ್ದೀರೋ ಅವಳೇ ನನ್ನ ಮನಸ್ಸನ್ನೂ ಗೆದ್ದಿದ್ದಾಳೆ. ಈಗ ಏನು ಮಾಡುವುದು?” ಎಂದುಬಿಟ್ಟ. 

“”ವಿಷಯ ಹೀಗಿದ್ದರೂ ಯಾರೂ ಚಿಂತಿಸುವ ಅಗತ್ಯವಿಲ್ಲ. ಆ ಹುಡುಗಿಯ ಬಳಿಗೆ ಹೋಗಿ ನಮ್ಮ ಮನಸ್ಸಿನಲ್ಲಿರುವ ಯೋಚನೆಯನ್ನು ಹೇಳುವ. ಯಾರನ್ನು ಅವಳು ಮನಮೆಚ್ಚಿ ಮದುವೆಯಾಗಲು ಒಪ್ಪಿಕೊಳ್ಳುವಳ್ಳೋ ಈ ನಿರ್ಧಾರವನ್ನು ಉಳಿದ ಇಬ್ಬರೂ ಒಪ್ಪಿಕೊಂಡರಾಯಿತು” ಎಂದು ಹಿರಿಯವನು ಹೇಳಿದ. ತಮ್ಮಂದಿರು ಅವನ ಮಾತಿಗೆ ಒಪ್ಪಿಕೊಂಡರು. ಅವರು ಹುಡುಗಿಯ ಮನೆಗೆ ಹೋಗಿ ತಮ್ಮ ಬಯಕೆಯನ್ನು ಹೇಳಿಕೊಂಡರು.

ಹುಡುಗಿಯು, “”ನಾನು ಹಣವನ್ನು, ರೂಪವನ್ನು ನೋಡಿ ನನ್ನ ಪತಿಯನ್ನು ಆರಿಸಿಕೊಳ್ಳುವುದಿಲ್ಲ. ನೀವು ಮೂವರು ಕೂಡ ದೇಶಾಟನೆಗೆ ಹೋಗಬೇಕು. ನನಗೆ ಇಷ್ಟವಾಗುವ ಉಡುಗೊರೆಯೊಂದನ್ನು ತರಬೇಕು. ಇದರಿಂದ ನನಗೆ ಯಾರು ಯೋಗ್ಯ ಗಂಡನೆಂದು ಆರಿಸಿಕೊಳ್ಳಲು ಸುಲಭವಾಗುತ್ತದೆ” ಎಂದು ಹೇಳಿದಳು. ಸಹೋದರರಿಗೆ ಅವಳ ತೀರ್ಮಾನ ಸರಿಯಾಗಿದೆಯೆಂದು ತೋರಿತು.ಅವರು, “”ಸರಿ, ನಾವು ಈಗಲೇ ದೇಶ ತಿರುಗಲು ಹೊರಡುತ್ತೇವೆ” ಎಂದು ಎದ್ದು ನಿಂತರು. ಹುಡುಗಿಯು ದೊಡ್ಡ ಪೀಪಾಯಿಯನ್ನು ಅವರಿಗೆ ತೋರಿಸಿದಳು. “”ಇದರಲ್ಲಿ ತುಂಬ ನೀರಿರುತ್ತದೆ. ಇದನ್ನು ಬೇರೆ ಬೇರೆ ಹಕ್ಕಿಗಳು ಅವಿರತವಾಗಿ ಕುಡಿಯುತ್ತ ಇರುತ್ತವೆ. ಪೀಪಾಯಿಯಲ್ಲಿರುವ ನೀರು ಖಾಲಿಯಾದರೆ ನನ್ನ ಜೀವ ಉಳಿಯುವುದಿಲ್ಲ. ನೀವು ಅದರೊಳಗೆ ಉಡುಗೊರೆಗಳೊಂದಿಗೆ ನನ್ನ ಬಳಿಗೆ ತಲುಪಿರಬೇಕು” ಎಂದು ನೆನಪು ಮಾಡಿದಳು.

“”ಸರಿ, ಅದರೊಳಗೆ ಬರುತ್ತೇವೆ” ಎಂದು ಹೇಳಿ ಸಹೋದರರು ತಮ್ಮ ಉಳಿತಾಯದ ಹಣವನ್ನು ಗಂಟು ಕಟ್ಟಿಕೊಂಡು ಮನೆಯಿಂದ ಹೊರಟರು. ತುಂಬ ದೂರ ಬಂದಾಗ ಒಬ್ಬನು ವಿಶೇಷವಾದ ಕನ್ನಡಿಗಳನ್ನು ಮಾರಾಟ ಮಾಡುವುದು ಕಾಣಿಸಿತು. ಹಿರಿಯವನು ಅದನ್ನು ಕಂಡು, “”ಕನ್ನಡಿ ಸುಂದರವಾಗಿದೆ. ಉಡುಗೊರೆಯಾಗಿ ನೀಡಿದರೆ ಹುಡುಗಿಗೆ ಇಷ್ಟವಾಗುತ್ತದೆ” ಎಂದುಕೊಂಡು ಬೆಲೆ ವಿಚಾರಿಸಿದ. “”ಇದರ ಬೆಲೆ ನೂರು ಚಿನ್ನದ ನಾಣ್ಯಗಳು. ಈ ಕನ್ನಡಿಯಲ್ಲಿ ನೀವು ಬಯಸಿದ ವ್ಯಕ್ತಿಯನ್ನು ಎಲ್ಲಿದ್ದರೂ ಕಂಡು ಅವರೊಂದಿಗೆ ಮಾತನಾಡಬಹುದು” ಎಂದನು ಮಾರಾಟಗಾರ. ಹಿರಿಯವನು ಅಷ್ಟು ಬೆಲೆ ಕೊಟ್ಟು ಕನ್ನಡಿಯನ್ನು ಖರೀದಿ ಮಾಡಿದ.

Advertisement

ಅವರು ಮತ್ತೆ ಮುಂದುವರೆದಾಗ ಒಬ್ಟಾತ ಹಾಸಿಗೆಗಳನ್ನು ಮಾರುತ್ತ ಇದ್ದ. ಆಕರ್ಷಕವಾಗಿದ್ದ ಹಾಸಿಗೆಯನ್ನು ಕಂಡು ಎರಡನೆಯವನಿಗೆ ತುಂಬ ಮೆಚ್ಚುಗೆಯಾಯಿತು. ಇದು ತನ್ನ ಮನಸ್ಸು ಗೆದ್ದ ಹುಡುಗಿಗೆ ಕೊಡಲು ಯೋಗ್ಯವಾದ ಉಡುಗೊರೆ ಎಂದು ನಿರ್ಧರಿಸಿ, “”ಎಷ್ಟಪ್ಪಾ ಇದರ ಬೆಲೆ?” ಎಂದು ಕೇಳಿದ. ಮಾರಾಟಗಾರ, “”ಬೆಲೆ ತುಂಬ ದುಬಾರಿ ಅನಿಸಬಹುದು. ಇನ್ನೂರು ಚಿನ್ನದ ನಾಣ್ಯಗಳು ಹಾಸಿಗೆಯ ಬೆಲೆ. ಇದರಲ್ಲಿ ಮಲಗುವುದಷ್ಟೇ ಅಲ್ಲ, ಕುಳಿತುಕೊಂಡು ಯಾವುದಾದರೂ ಊರಿಗೆ ಹೋಗಬೇಕೆಂದು ನಿರ್ಧರಿಸಿದರೆ ಆಕಾಶ ಮಾರ್ಗದಲ್ಲಿ ಸಂಚರಿ ಸುತ್ತ ಅಲ್ಲಿಗೆ ಸೇರಬಹುದು” ಎಂದು ವಿವರಿಸಿದ. ಎರಡನೆಯವನು ಹಣ ನೀಡಿ ಹಾಸಿಗೆಯನ್ನು ಕೊಂಡುಕೊಂಡ.

ಸಹೋದರರು ಇನ್ನೂ ಮುಂದೆ ಸಾಗಿದರು. ಒಂದೆಡೆ ಒಬ್ಬನು ಲಿಂಬೆಹಣ್ಣುಗಳನ್ನು ಮಾರುತ್ತ ಇದ್ದ. “”ಯಾರಿಗೆ ಬೇಕು ಕೊಳ್ಳಿ. ಜೀವ ಉಳಿಸುವ ಲಿಂಬೆ. ಸತ್ತವರ ಬಾಯಿಗೆ ಒಂದು ಲಿಂಬೆಯ ರಸ ಹಿಂಡಿದರೆ ಮರಳಿ ಬದುಕುತ್ತಾರೆ” ಎಂದು ಅವನು ಕೂಗುತ್ತಿದ್ದ. ಕಿರಿಯವನು ಅವನ ಬಳಿಗೆ ಹೋದ. “”ಬೆಲೆ ಎಷ್ಟು?” ಎಂದು ವಿಚಾರಿಸಿದ. “”ಸಾವಿರ ಚಿನ್ನದ ನಾಣ್ಯಗಳು” ಎಂದನು ಮಾರಾಟಗಾರ. ಕಿರಿಯವನ ಮುಖ ಬಾಡಿತು. “”ನಾನೊಬ್ಬಳು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಈ ಲಿಂಬೆಹಣ್ಣನ್ನು ತೆಗೆದುಕೊಂಡು ಹೋಗಿ ಅವಳಿಗೆ ಉಡುಗೊರೆಯಾಗಿ ನೀಡಿದರೆ ಮೆಚಿ      cಕೊಂಡು ಮದುವೆಯಾಗುತ್ತಾಳೆಂಬ ಧೈರ್ಯವೂ ನನಗಿದೆ. ಆದರೆ ಏನು ಮಾಡಲಿ, ನನ್ನ ಬಳಿ ಕೇವಲ ನೂರು ನಾಣ್ಯಗಳಿವೆ” ಎಂದು ದುಃಖದಿಂದ ಹೇಳಿದ.

ಮಾರಾಟಗಾರ ಕಿರಿಯವನನ್ನು ಬಳಿಗೆ ಕರೆದು ತಲೆ ನೇವರಿಸಿದ. “”ನಿನ್ನ ಪ್ರೀತಿ ಫ‌ಲ ನೀಡಲಿ. ನಿನ್ನಲ್ಲಿ ಎಷ್ಟು ಹಣವಿದೆಯೋ ಅದನ್ನು ಕೊಡು. ಒಂದು ಲಿಂಬೆಹಣ್ಣನ್ನು ತೆಗೆದುಕೊಂಡು ಹೋಗು” ಎಂದು ಕೊಟ್ಟು ಕಳುಹಿಸಿದ. ಮೂವರೂ ಮತ್ತೆ ಊರಿಗೆ ಹೊರಟರು. ದಾರಿಯ ಮಧ್ಯೆ ಹಿರಿಯವನಿಗೆ ತಾವು ಪ್ರೀತಿಸುವ ಹುಡುಗಿ ಏನು ಮಾಡುತ್ತಿದ್ದಾಳ್ಳೋ ತಿಳಿಯುವ ಕುತೂಹಲವಾಯಿತು. ಕನ್ನಡಿಯಲ್ಲಿ ನೋಡಿದ. ಅವಳನ್ನು ಕಂಡು ಗಾಬರಿಗೊಂಡ. “”ತುಂಬ ಪ್ರಮಾದವಾಗಿದೆ. ಅವಳು ಪೀಪಾಯಿ ಯಲ್ಲಿರಿಸಿದ ನೀರನ್ನೆಲ್ಲ ಹಕ್ಕಿಗಳು ಕುಡಿದು ಖಾಲಿ ಮಾಡಿವೆ. ಹೀಗಾದರೆ ತನ್ನ ಜೀವ ಉಳಿಯುವುದಿಲ್ಲವೆಂದು ಅವಳು ಹೇಳಿದ್ದಾಳಲ್ಲವೆ? ಈ ಕ್ಷಣವೇ ಅಲ್ಲಿಗೆ ಹೋಗಬೇಕು. ಆದರೆ ಹೋಗಲು ದಾರಿ ಏನಿದೆ? ನಾವು ತುಂಬ ದೂರಲ್ಲಿದ್ದೇವೆ” ಎಂದು ಹೇಳಿದ.

ಎರಡನೆಯವನು ಹಾಸಿಗೆಯನ್ನು ಬಿಡಿಸಿದ. “”ಬನ್ನಿ, ಇದರ ಮೇಲೆ ಕುಳಿತುಕೊಳ್ಳುವ. ಕ್ಷಣಮಾತ್ರದಲ್ಲಿ ಇದು ಗಗನ ಮಾರ್ಗದಲ್ಲಿ ಹಾರುತ್ತ ನಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತದೆ” ಎಂದು ಹೇಳಿದ. ಅವರು ಹಾಸಿಗೆಯ ನೆರವಿನಿಂದ ಹುಡುಗಿಯ ಬಳಿಗೆ ತಲುಪಿದಾಗ ಕೈಮೀರಿ ಹೋಗಿತ್ತು. ಹುಡುಗಿ ಕೊನೆಯುಸಿರೆಳೆದಿದ್ದಳು. ಮನೆಯವರು ಅವಳ ಪಕ್ಕದಲ್ಲಿ ಕುಳಿತು ದುಃಖೀಸುತ್ತ ಇದ್ದರು. ಆಗ ಕಿರಿಯವನು, “”ಯಾರೂ ದುಃಖಪಡುವ ಅಗತ್ಯವಿಲ್ಲ. ಇವಳನ್ನು ನಾನು ಬದುಕಿಸುತ್ತೇನೆ” ಎಂದು ಹೇಳಿ ತನ್ನಲ್ಲಿರುವ ಲಿಂಬೆಹಣ್ಣನ್ನು ಕತ್ತರಿಸಿ ಶವದ ಬಾಯಿಯೊಳಗೆ ಪೂರ್ಣವಾಗಿ ಹಿಂಡಿದ. ಮರುಕ್ಷಣವೇ ಹುಡುಗಿ ನಿದ್ರೆಯಲ್ಲಿದ್ದವಳ ಹಾಗೆ ಎದ್ದು ಕುಳಿತಳು.

ಸಹೋದರರು ತಾವು ಸಂಪಾದಿಸಿ ತಂದ ಉಡುಗೊರೆಗಳ ವಿಷಯ ವನ್ನು ಅವಳಿಗೆ ಹೇಳಿದರು. “”ನಮ್ಮಲ್ಲಿ ಯಾರು ತಂದ ಉಡುಗೊರೆ ನಿನಗೆ ಇಷ್ಟವಾಗಿದೆಯೋ ಅವರನ್ನು ನೀನು ವರಿಸಬಹುದು” ಎಂದು ಹೇಳಿದರು. ಹುಡುಗಿಯು, “”ಹಿರಿಯವನು ತಂದ ಕನ್ನಡಿ ಹಾಗೆಯೇ ಇದೆ. ಇನ್ನೂ ಅದರಲ್ಲಿ ಬೇಕಾದವರನ್ನು ಕಂಡು ಮಾತನಾಡಿಸಬಹುದು, ಎರಡನೆಯವನ ಹಾಸಿಗೆಯಲ್ಲಿ ಕುಳಿತು ಬೇಕಾದೆಡೆಗೂ ಹೋಗಬಹುದು. ಆದರೆ ಕಿರಿಯವನಲ್ಲಿ ಒಬ್ಬರ ಪ್ರಾಣ ಮಾತ್ರ ಉಳಿಸುವ ಲಿಂಬೆಹಣ್ಣು ಇತ್ತು. ಅದನ್ನು ಅವನು ತನಗಾಗಿ ಉಳಿಸಿಕೊಳ್ಳದೆ ನನಗೆ ಪ್ರಾಣ ನೀಡಲು ಬಳಸಿದ್ದಾನೆ. ಜೀವ ಕೊಟ್ಟವನೇ ನನಗೆ ಇಷ್ಟವಾಗುತ್ತಾನೆ. ನಾನು ಅವನ ಕೈ ಹಿಡಿಯುತ್ತೇನೆ” ಎಂದಳು. ಉಳಿದ ಇಬ್ಬರೂ ಅವಳ ತೀರ್ಮಾನವನ್ನು ಒಪ್ಪಿಕೊಂಡರು.

ಪ. ರಾಮಕೃಷ್ಣ ಶಾಸ್ತ್ರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next