ಅಫ್ಘಾನಿಸ್ಥಾನದಲ್ಲಿ ನೆಲೆಯೂರಿದ್ದ ಮೂಲಭೂತವಾದಿಗಳು ಮತ್ತು ಭಯೋತ್ಪಾದಕರನ್ನು ನಿಗ್ರಹಿಸಿ ದೇಶದಲ್ಲಿ ಶಾಂತಿ ಮತ್ತು ಪ್ರಜಾಸತ್ತಾತ್ಮಕ ಸ್ಥಿರ ಸರಕಾರವನ್ನು ಪ್ರತಿಷ್ಠಾಪಿಸುವ ಮೂಲಕ ಅಲ್ಲಿನ ಜನರನ್ನು ವಿಶ್ವದ ಮುಖ್ಯವಾಹಿನಿಗೆ ಕರೆತರುವ ಮಹಾನ್ ಸಂಕಲ್ಪದೊಂದಿಗೆ 20 ವರ್ಷ ಗಳ ಹಿಂದೆ ಅಫ್ಘಾನ್ ನೆಲದಲ್ಲಿ ಕಾಲೂರಿದ್ದ ಅಮೆರಿಕ ಪಡೆಗಳು ಇದೀಗ ಸಂಪೂರ್ಣವಾಗಿ ಸ್ವದೇಶಕ್ಕೆ ವಾಪಸಾಗಿವೆ. ಈ ವರ್ಷದ ಆರಂಭದಲ್ಲಿ ತಾಲಿಬಾನಿಗಳೊಂದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮಾಡಿಕೊಂ ಡಿದ್ದ ಒಪ್ಪಂದದಂತೆ ಅಮೆರಿಕ ಸೇನೆಯ ಕೊನೆಯ ತುಕಡಿ ಮಂಗಳ ವಾರ ಕಾಬೂಲ್ ವಿಮಾನ ನಿಲ್ದಾಣದಿಂದ ಸ್ವದೇಶದತ್ತ ಪ್ರಯಾಣ ಬೆಳೆಸುವುದರೊಂದಿಗೆ ಕಳೆದೆರಡು ದಶಕಗಳಿಂದ ಅಮೆರಿಕ ಸಹಿತ ನ್ಯಾಟೋ ಪಡೆಗಳು ಅಫ್ಘಾನಿಸ್ಥಾನದಲ್ಲಿ ಭಯೋತ್ಪಾದಕರ ವಿರುದ್ಧ ನಡೆ ಸಿದ ನಿರಂತರ ಯುದ್ಧ ಅಂತ್ಯಗೊಂಡಿದೆ. ಆದರೆ ಅಮೆರಿಕದ ಈ ನಡೆ ರಕ್ಷಣ ಮತ್ತು ವಿದೇಶಾಂಗ ಕಾರ್ಯತಂತ್ರದಲ್ಲಿನ ವೈಫಲ್ಯ ಎಂದು ಸಾರ್ವತ್ರಿಕ ಟೀಕೆಗೆ ತುತ್ತಾಗಿದೆ. ಇದು ಅಮೆರಿಕದ ಪ್ರತಿಷ್ಠೆಗೆ ಕುಂದು ಉಂಟುಮಾಡಿರುವುದೇ ಅಲ್ಲದೆ “ಜಾಗತಿಕ ದುರಂತ’ ಎಂಬ ಅಪ ಖ್ಯಾತಿಗೂ ಗುರಿಯಾಗಿದೆ. ಅಮೆರಿಕ ಪಡೆಗಳು ಅಫ್ಘಾನ್ನಿಂದ ಸಂಪೂ ರ್ಣವಾಗಿ ವಾಪಸಾಗುತ್ತಿರುವುದನ್ನು ಅಧ್ಯಕ್ಷ ಬೈಡೆನ್ ಖಚಿತ ಪಡಿಸು ತ್ತಿದ್ದಂತೆಯೇ ದೇಶದ ಒಂದೊಂದೇ ಪ್ರಾಂತ್ಯಗಳನ್ನು ತನ್ನ ವಶಕ್ಕೆ ತೆಗೆದು ಕೊಳ್ಳಲಾರಂಭಿಸಿದ ತಾಲಿಬಾನಿ ಪಡೆಗಳು ಕಾಬೂಲ್ ಪ್ರವೇಶಿಸಿದವು.
2001ರ ಸೆ. 11ರಂದು ನ್ಯೂಯಾರ್ಕ್ನ ಅವಳಿ ಕಟ್ಟಡಗಳನ್ನು ಅಲ್ಕಾಯಿದಾ ಉಗ್ರರು ಧ್ವಂಸಗೊಳಿಸಿದ ಬಳಿಕ ಅಮೆರಿಕ ಈ ಉಗ್ರ ಸಂಘ ಟನೆಯ ವಿರುದ್ಧ ಸಮರ ಸಾರಿತು.ಈ ಉಗ್ರರಿಗೆ ತಾಲಿಬಾನಿಗಳು ಬೆಂಬಲ ನೀಡುತ್ತಿರುವುದನ್ನು ಖಚಿತಪಡಿಸಿಕೊಂಡ ಅಮೆರಿಕ ಅಫ್ಘಾನಿಸ್ಥಾನದ ವಿರುದ್ಧ ಯುದ್ಧ ಘೋಷಿಸಿ ಅಲ್ ಕಾಯಿದಾ ಸಹಿತ ಉಗ್ರಗಾಮಿ ಸಂಘಟನೆಗಳನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿ ಅಫ್ಘಾನಿಸ್ಥಾನದಲ್ಲಿ ತನ್ನ ಬೆಂಬಲಿತ ಸ್ಥಳೀಯ ಸರಕಾರವನ್ನು ಪ್ರತಿಷ್ಠಾಪಿ ಸಿತು. ಇದಾದ ಬಳಿಕ ಕಳೆದ 20 ವರ್ಷಗಳ ಅವಧಿಯಲ್ಲಿ ಅಮೆರಿಕ ಸಹಿತ ನ್ಯಾಟೋ ಪಡೆಗಳನ್ನು ಅಲ್ಲಿನ ಭದ್ರತೆಗೆ ನಿಯೋಜಿಸಲಾಗಿತ್ತು. ಈ ಎಲ್ಲ ಹೋರಾಟದಲ್ಲಿ ನ್ಯಾಟೋ ಪಡೆಗಳ ಸೈನಿಕರು ಮತ್ತು ನಾಗರಿಕರ ಸಹಿತ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರು. ಇದರ ನಡುವೆ ಭಾರತ ಆದಿಯಾಗಿ ಹಲವು ದೇಶಗಳು ಹೂಡಿಕೆ ಮಾಡಿ ಅಫ್ಘಾನ್ನ ಪುನುರುತ್ಥಾನಕ್ಕೆ ನೆರವು ನೀಡಿದವು.
ಇನ್ನೇನು ಎಲ್ಲವೂ ಸಹಜ ಸ್ಥಿತಿಗೆ ಬರುತ್ತಿದೆ ಎನ್ನುವಷ್ಟರಲ್ಲಿ ಅಮೆರಿಕ ತಾಲಿಬಾನಿ ಮುಖಂಡರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿ ತನ್ನ ಪಡೆಗಳ ವಾಪಸಾತಿ ಘೋಷಿಸಿತು. ಪರಿಣಾಮ ತಾಲಿಬಾನಿಗಳು ಮತ್ತೆ ಅಫ್ಘಾನ್ನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಇದರೊಂದಿಗೆ ಅಫ್ಘಾನಿಸ್ಥಾನದ ಅಭಿವೃದ್ಧಿಗಾಗಿ ಕೈಗೊಂಡ ಕ್ರಮಗಳೆಲ್ಲವೂ ನೀರ ಮೇಲಣ ಹೋಮ ದಂತಾಗಿದೆ. ರಕ್ತದೋಕುಳಿ ಹರಿಯುತ್ತಿದ್ದರೂ ವಿಶ್ವ ಸಂಸ್ಥೆ ಮಾತ್ರ ಹೇಳಿಕೆ ಗಳಿಗೆ ಸೀಮಿತವಾಗಿದೆ. ಸದ್ಯದ ಸ್ಥಿತಿಯಲ್ಲಿ ಯಾವುದೇ ದೇಶ ಅಪಾಯ ವನ್ನು ಆಹ್ವಾನಿಸದಿರುವ ತಾತ್ಕಾಲಿಕ ಪರಿಹಾರ ಕ್ರಮಕ್ಕೆ ಜೋತು ಬಿದ್ದಿ ದೆಯೇ ಹೊರತು ದೂರಗಾಮಿ ಪರಿಣಾಮದ ಬಗೆಗೆ ಚಿಂತಿಸುತ್ತಿಲ್ಲ. ತಾಲಿಬಾನಿಗಳ ಸಹಿತ ಎಲ್ಲ ಮೂಲಭೂತವಾದಿಗಳ ನಿಗ್ರಹಕ್ಕೆ ಇನ್ನಾ ದರೂ ಜಾಗತಿಕ ಸಮುದಾಯ ಕೈಜೋಡಿಸಲೇಬೇಕಿದೆ. ಇಲ್ಲವಾದಲ್ಲಿ ಇಂದಲ್ಲ ನಾಳೆ ಜಾಗತಿಕ ಶಾಂತಿಗೆ ಉಗ್ರರು ಭಂಗ ತರುವುದು ನಿಶ್ಚಿತ.