Advertisement

ಉಗ್ರರಿಗೆ ಸಂಭ್ರಮ; ಜನರಿಗೆ ಆತಂಕ

11:36 PM Sep 01, 2021 | Team Udayavani |

ಕಾಬೂಲ್‌: ಅಫ್ಘಾನಿಸ್ಥಾನದಲ್ಲಿ ಮುಂದುವರಿದ ಉಗ್ರರ ಸಂಭ್ರಮ ಅಮೆರಿಕ ಮತ್ತು ನ್ಯಾಟೋ ಪಡೆಗಳ ಅಣಕು ಶವಯಾತ್ರೆ ಮುಂದೆ ಏನಾಗುವುದೋ ಯಾವ ದುಃಸ್ಥಿತಿ ಎದುರಾಗಲಿದೆಯೋ ಎಂಬ ಆತಂಕದಲ್ಲಿ ಅಫ್ಘಾನ್‌ನ ಜನರು…

Advertisement

ಇದು ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಯೋಧರು ದೇಶ ತೊರೆದ ಬಳಿಕ ಅಫ್ಘಾನ್‌ನ ಚಿತ್ರಣದ ಒಂದು ಸ್ಥೂಲ ನೋಟ. ರಾಜಧಾನಿ ಕಾಬೂಲ್‌ ಸೇರಿದಂತೆ ದೇಶಾದ್ಯಂತ ಇಪ್ಪತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿದೇಶಿ ಯೋಧರು ಕಂಡು ಬರಲಿಲ್ಲ. ಅವರ ಬದಲಿಗೆ ಅತ್ಯಾಧುನಿಕ ಬಂದೂಕುಗಳನ್ನು ಹಿಡಿದು ತೆರೆದ ವಾಹನಗಳಲ್ಲಿ ಸಂಚರಿಸುತ್ತಿರುವ ತಾಲಿಬಾನ್‌ ಉಗ್ರರು ಪಹರೆಯಲ್ಲಿ ನಿರತರಾಗಿದ್ದರು.

ಆದರೆ ಸಂಕಷ್ಟಕ್ಕೆ ಒಳಗಾದವರು ಮಾತ್ರ ಸಾಮಾನ್ಯ ಜನರು. ಎಟಿಎಂಗಳ ಮುಂದೆ ಜನರು ಸಾಲುಗಟ್ಟಿ ಹಣ ವಿಥ್‌ಡ್ರಾ ಮಾಡಲು ಕಾತರದಿಂದ ಕಾಯುತ್ತಿದ್ದರು. ಆದರೆ ಬ್ಯಾಂಕ್‌ಗಳ ಅಧಿಕಾರಿಗಳು ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರಕಾರ ಹಣದ ಸಂಗ್ರಹ ಕಡಿಮೆ ಇದೆ. ಹೀಗಾಗಿ ಎಟಿಎಂಗಳು ಯಾವುದೇ ಹಂತದಲ್ಲಿ ಬರಿದಾಗುವ ಹಂತದಲ್ಲಿದೆ ಎಂದು ಎಚ್ಚರಿಸಿದ್ದಾರೆ.

ಹಾಹಾಕಾರ ಸಾಧ್ಯತೆ: ಈಗಾಗಲೇ ಬಡತನ ಬರಗಾಲದಿಂದ ಕಂಗೆಟ್ಟು ಹೋಗಿರುವ ಅಫ್ಘಾನಿಸ್ಥಾನದಲ್ಲಿ ಶೀಘ್ರದಲ್ಲಿಯೇ ಅಗತ್ಯ ವಸ್ತುಗಳ ಪೂರೈಕೆಗೆ ಕೊರತೆ ಉಂಟಾಗುವ ಆತಂಕ ಎದುರಾಗಿದೆ. ಕಾಬೂಲ್‌ನಲ್ಲಿರುವ ಯುವತಿ ಮೋಸ್ಕಾ ಸಾಂಗೂರ್‌ ಮಾತನಾಡಿ “ನಿಜಕ್ಕೂ ಮುಂದಿನ ದಿನಗಳಲ್ಲಿ ನಮ್ಮ ಭವಿಷ್ಯದ ಬಗ್ಗೆ ಆತಂಕದ ದಿನಗಳು ಕಾಡುತ್ತಿವೆ. ಹೊಸ ಆಡಳಿತದಲ್ಲಿ ಏನಾಗಲಿದೆಯೋ ಎಂಬ ಬಗ್ಗೆ ಭೀತಿ ಶುರುವಾಗಿದೆ’ ಎಂದು ಹೇಳಿಕೊಂಡಿದ್ದಾರೆ. ಹಿಜಬ್‌ ಧರಿಸಬೇಕು ಎಂದು ಹೇಳಿರುವುದು ದೊಡ್ಡದಲ್ಲ. ಮಹಿಳೆಯರು ಕೆಲಸಕ್ಕೆ ಹೋಗಬಾರದು ಎಂದು ಹೇಳಿರುವುದೇ ಸವಾಲಿನ ವಿಚಾರ ಎಂದರು. ಇದರ ಜತೆಗೆ ದೇಶಾದ್ಯಂತ ಸಂಪರ್ಕ ವ್ಯವಸ್ಥೆ ಉಗ್ರರ ವಶದಲ್ಲಿರುವುದು ಮತ್ತೂಂದು ಸವಾಲಾಗಿ ಪರಿಣಮಿಸಿದೆ. ಸ್ಥಳೀಯರಿಗೆ ತೊಂದರೆ ನೀಡುವುದಿಲ್ಲ ಎಂದು ಉಗ್ರರ ನಾಯಕರು ಹೇಳಿಕೊಂಡರೂ ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಸೇನೆಗೆ 20 ವರ್ಷಗಳ ಅವಧಿಯಲ್ಲಿ ನೆರವು ನೀಡಿದವರ ಬಗ್ಗೆ ಶೋಧ ನಡೆಸಿ ಅವರನ್ನು ಕೊಲ್ಲಬಹುದು ಎಂಬ ಆತಂಕ ಅಫ್ಘಾನ್‌ನ ಜನರಲ್ಲಿ ಇನ್ನೂ ಇದೆ.

ಆಡಳಿತದ ಬಗ್ಗೆ ನಿರೀಕ್ಷೆ: 2001ರ ಹಿಂದಿನ ವರ್ಷಗಳ ಆಡಳಿತವೇ ಪುನರಾವರ್ತನೆಯಾಗಲಿದೆಯೇ ಅಥವಾ ಉಗ್ರರೇ ಹೇಳಿಕೊಂಡಂತೆ ಸಾಮಾನ್ಯ ಜನರೂ ಮೆಚ್ಚುವಂತೆ ಉತ್ತಮ ಆಡಳಿತ ನೀಡುತ್ತಾರೆಯೋ ಎಂಬ ಕುತೂಹಲ-ಆತಂಕ ಸ್ಥಳೀಯರದ್ದು. ಶಾಲೆಗಳನ್ನು ತೆರೆಯಲು ಉಗ್ರರು ಈಗಾಗಲೇ ಅನುಮತಿ ನೀಡಿದ್ದಾರೆ. ಆದರೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಪ್ರತ್ಯೇಕವಾಗಿ ಅಧ್ಯಯನ ನಡೆಸಬೇಕು ಎಂದು ಕಟ್ಟಪ್ಪಣೆ ಮಾಡಿದ್ದಾರೆ.  ಆಸ್ಪತ್ರೆಗಳು, ಬ್ಯಾಂಕ್‌ಗಳು ಮತ್ತು ಇತರ ಸಾರ್ವಜನಿಕರಿಗೆ ಅಗತ್ಯವಾಗಿರುವ ವ್ಯವಸ್ಥೆಗಳನ್ನು ತೆರೆದಿಡುವ ಮೂಲಕ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಗತ್ತಿಗೆ ತಿಳಿ ಹೇಳುವ ಪ್ರಯತ್ನವೂ ನಡೆದಿದೆ.

Advertisement

ಈ ನಡುವೆ ಕಾಬೂಲ್‌ ವಿಮಾನ ನಿಲ್ದಾಣ ಮುಚ್ಚಿದೆ. ಹೀಗಾಗಿ ಇತರ ಗಡಿಗಳ ಮೂಲಕ ಸಾರ್ವಜನಿಕರು ಅಫ್ಘಾನ್‌ತೊರೆಯಲು ಮುಂದಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಉಗ್ರರ ಪಹರೆಯಿಂದಾಗಿ ಬಿಕೋ ಎನ್ನುತ್ತಿದೆ. ಮತ್ತೂಂದು ಬೆಳವಣಿಗೆಯಲ್ಲಿ ಐರೋಪ್ಯ ಒಕ್ಕೂಟದ ರಾಷ್ಟ್ರವಾಗಿರುವ ನೆದರ್‌ಲ್ಯಾಂಡ್‌ ಜತೆಗೆ ವಿಮಾನ ನಿಲ್ದಾಣ ನಿರ್ವಹಣೆ ಬಗ್ಗೆ ಮಾತುಕತೆ ನಡೆಸಿದೆ ತಾಲಿಬಾನ್‌. ಉಗ್ರರ ನಾಯಕ ಶೇರ್‌ ಮೊಹಮ್ಮದ್‌ ಸ್ಟಾನಿಕ್‌ಜೈ ಈ ಬಗ್ಗೆ ನೇತೃತ್ವ ವಹಿಸಿದ್ದಾರೆ.

ಪಂಜ್‌ಶೀರ್‌ನಲ್ಲಿ ತಾಲಿಬಾನ್‌ಗೆ ಹಿನ್ನಡೆ? :

ಪಂಶ್‌ಶೀರ್‌ನಲ್ಲಿ ತಾಲಿಬಾನ್‌ ಉಗ್ರರು ಮತ್ತು ನಾರ್ದರ್ನ್  ಅಲಯನ್ಸ್‌ ನಡುವೆ ಭೀಕರ ಹೋರಾಟ ನಡೆದಿದೆ. ಇದರಿಂದಾಗಿ 41 ಮಂದಿ ತಾಲಿಬಾನ್‌ ಉಗ್ರರು ಹತ್ಯೆಯಾಗಿದ್ದಾರೆ ಮತ್ತು 20ಕ್ಕೂ ಅಧಿಕ ಮಂದಿಯನ್ನು ಸೆರೆ ಹಿಡಿಯಲಾಗಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ಸುದ್ದಿವಾಹಿನಿ “ರಿಪಬ್ಲಿಕ್‌ ಟಿವಿ’ ವರದಿ ಮಾಡಿದೆ. ಮತ್ತೂಂದೆಡೆ, ಅಂದರಾಬ್‌ನಲ್ಲಿ 34 ಮಂದಿ ತಾಲಿಬಾನ್‌ಗಳನ್ನು ಲೇಸರ್‌ ಅಸ್ತ್ರ ಪ್ರಯೋಗದಿಂದ ಕೊಲ್ಲಲಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಇದರಿಂದಾಗಿ ತಾಲಿಬಾನ್‌ಗೆ ಪಂಜ್‌ಶೀರ್‌, ಅಂದರಾಬ್‌ನಲ್ಲಿ ಉಗ್ರ ಸಂಘಟನೆಗೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ. ಆ ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದರೂ, ಇದುವರೆಗೆ ಸಾಧ್ಯವೇ ಆಗಿಲ್ಲ. ಇದೇ ವೇಳೆ, ನಾರ್ದರ್ನ್ ಅಲಯನ್ಸ್‌ ಮತ್ತು ತಾಲಿಬಾನ್‌ ಸಂಘಟನೆ ನಡುವೆ ಕದನ ವಿರಾಮ ಘೋಷಣೆ ಜಾರಿ ಮಾಡುವ ಬಗ್ಗೆ ಮಾತುಕತೆಗಳು ನಡೆದಿದ್ದವು. ಅದು ವಿಫ‌ಲಗೊಂಡ ಹಿನ್ನೆಲೆಯಲ್ಲಿ ಎರಡೂ ಕಡೆಗಳ ನಡುವೆ ಹೋರಾಟ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ. ಜತೆಗೆ ಉಗ್ರ ಸಂಘಟನೆ ಪರವಾಗಿ ಹೋರಾಟ ಮಾಡುವುದಿದ್ದರೆ ಸ್ವಾಗತ ಎಂದೂ ತಾಲಿಬಾನ್‌ ಹೇಳಿದೆ.

ಉಗ್ರರಿಗೆ ಸಿಕ್ಕ ವಿಮಾನ :

ಅಮೆರಿಕ ಯೋಧರು ಅಫ್ಘಾನಿಸ್ಥಾನ ಬಿಡುವ ಮೊದಲು 73 ವಿಮಾನಗಳನ್ನು ಮತ್ತು ಸಮರಕ್ಕೆ ಬಳಕೆ ಮಾಡುವ ತಂತ್ರಾಂಶಗಳನ್ನು ನಿಷ್ಕ್ರಿಯಗೊಳಿಸು ವುದಾಗಿ ಹೇಳಿಕೊಳ್ಳಲಾಗಿತ್ತು. ಇದೀಗ  48 ಸಮರ ವಿಮಾನಗಳು ತಾಲಿಬಾನ್‌ಗಳ ಕೈವಶವಾಗಿವೆ. ತಾಲಿಬಾನಿಗಳಿಗೆ ಅತ್ಯಾ ಧುನಿಕವಾಗಿರುವ ಸಮರ ಉಪಕರಣ ಗಳನ್ನು ಬಳಕೆ ಮಾಡಲು ತಾಂತ್ರಿಕ ಅಧ್ಯಯನ ಇಲ್ಲ. ಹೀಗಾಗಿ, ಹಿಂದಿನ ಅಫ್ಘಾನಿಸ್ಥಾನ ಸರಕಾರದ ಸೇನೆಯಲ್ಲಿ ಪೈಲಟ್‌ಗಳಾಗಿ ಸೇವೆ ಸಲ್ಲಿಸಿದ್ದವರಿಗಾಗಿ ಶೋಧ ನಡೆಸುವಂತೆ ಉಗ್ರರ ಅತ್ಯುನ್ನತ ಸಮಿತಿ ಫ‌ರ್ಮಾನು ಹೊರಡಿಸಿದೆ.

“ಅಣಕು ಶವಯಾತ್ರೆ’ :

ಅಫ್ಘಾನಿಸ್ಥಾನದಿಂದ ಅಮೆರಿಕ ಹಾಗೂ ನ್ಯಾಟೋ ಪಡೆಗಳು ಹೊರನಡೆದಿದ್ದಕ್ಕೆ ತಾಲಿಬಾನಿ ಬೆಂಬಲಿಗರು ಅಫ್ಘಾನಿಸ್ಥಾನದ ಖೋಸ್ತ್ ನಗರದಲ್ಲಿ ಅಣಕು ಶವಯಾತ್ರೆ ನಡೆಸುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಈ ಶವಯಾತ್ರೆಯಲ್ಲಿ ಸಾವಿರಾರು ಜನರ ನಡುವೆ ಕೆಲವರು ಅಮೆರಿಕ, ನ್ಯಾಟೋ ಸಂಘಟನೆಯ ಧ್ವಜಗಳನ್ನು ಸುತ್ತಿದ್ದ ಶವಪೆಟ್ಟಿಗೆಗಳಿಗೆ (ಕಫಿನ್‌) ಹೊತ್ತು ನಡೆದರು. ರಸ್ತೆಯಲ್ಲಿ ಸೇರಿದ್ದ ಜನಸಾಗರದ ನಡುವೆ ಈ ಕಫಿನ್‌ಗಳ ಸಾಗುತ್ತಿದ್ದರೆ, ಅವುಗಳ ಇಕ್ಕೆಲಗಳಲ್ಲಿ ತಾಲಿಬಾನಿ ಉಗ್ರರು ಹಾಗೂ ಅವರ ಬೆಂಬಲಿಗರು ಬಂದೂಕುಗಳನ್ನು ಮೇಲೆತ್ತಿ ಖುಷಿ ವ್ಯಕ್ತಪಡಿಸುತ್ತಿದ್ದರು.

ಸುಳ್ಳಿಗೆ ಪ್ರಚೋದಿಸಿದ್ದರೇ ಬೈಡೆನ್‌? :

ವಾಷಿಂಗ್ಟನ್‌: ಅಫ್ಘಾನಿಸ್ಥಾನದಿಂದ ಅಮೆರಿಕ ಸೇನೆ ವಾಪಸ್‌ ಹೋಗುವ ಮುನ್ನವೇ ಸೋಲಿನ ಮುನ್ಸೂಚನೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಗೊತ್ತಿತ್ತೇ?

ಹೌದು ಎನ್ನುತ್ತಿದೆ ಜೋ ಬೈಡೆನ್‌ ಮತ್ತು ಆಫ‌^ನ್‌ನ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅವರ ನಡುವಿನ ದೂರವಾಣಿ ಸಂಭಾಷಣೆ. ಜು.24 ರಂದು ಇವರಿಬ್ಬರು 14 ನಿಮಿಷಗಳ ಕಾಲ ದೂರವಾಣಿ ಸಂಭಾಷಣೆ ನಡೆಸಿದ್ದು, ಬುಧವಾರ ಅದರ ವಿವರ ಹೊರಬಿದ್ದಿದೆ. ಅಫ್ಘಾನ್‌ನಲ್ಲಿ ತಾಲಿಬಾನ್‌ ಕೈ ಮೇಲಾದರೂ ಅದನ್ನು ಎಲ್ಲೂ ತೋರಿಸಿಕೊಳ್ಳಬೇಡಿ. ಅದು ಸತ್ಯವಿರಲಿ ಅಥವಾ ಸುಳ್ಳೇ ಇರಲಿ ಎಂದು ಘನಿಗೆ ಬೈಡೆನ್‌ ಹೇಳಿದ್ದರು ಎನ್ನಲಾಗಿದೆ.

ಅಷ್ಟೇ ಅಲ್ಲ ತಾಲಿಬಾನಿಗರು ಎಂದಿಗೂ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯವನ್ನೂ ಜನರಲ್ಲಿ ಮೂಡಿಸುವಂತೆ ಬೈಡೆನ್‌ ಹೇಳಿದ್ದರು. ಅಫ್ಘಾನ್‌ ಸರಕಾರವೇ ಗಟ್ಟಿ ಇದೆ ಎಂಬ ಭಾವನೆ ಎಲ್ಲರಲ್ಲೂ ಬರಬೇಕು ಎಂದು ತೋರಿಸಿಕೊಳ್ಳುವಂತೆ ತಿಳಿಸಿದ್ದರು. ಇದೇ ಸಂದರ್ಭದಲ್ಲಿ ಅಫ್ಘಾನ್‌ನ ಸೇನೆಯ ಬಗ್ಗೆಯೂ ಹೊಗಳಿದ್ದ ಬೈಡೆನ್‌ ಈಗ ಎಂಥದ್ದೇ ಶತ್ರುಗಳು ಬಂದರೂ ಎದುರಿಸುವ ಸಾಮರ್ಥ್ಯವಿದೆ ಎಂದಿದ್ದರು.

ವಿಚಿತ್ರವೆಂದರೆ ಈ ಬೆಳವಣಿಗೆಗಳಾದ ಕೆಲವೇ ದಿನಗಳಲ್ಲಿ ಅಫ್ಘಾನ್‌ ಸೇನೆ ತಾಲಿಬಾನಿಗರಿಗೆ ಸಂಪೂರ್ಣ ಶರಣಾಯಿತು. ಇಡೀ ದೇಶ ತಾಲಿಬಾನಿಗರ ವಶಕ್ಕೆ ಹೋಯಿತು.

Advertisement

Udayavani is now on Telegram. Click here to join our channel and stay updated with the latest news.

Next