Advertisement

ಶಿಕ್ಷಣದ ಮೂಲಕ ಉನ್ನತ ಹುದ್ದೆಗೇರಲು ಯುವ ಸಮೂಹಕ್ಕೆ ಸಲಹೆ

11:53 PM Sep 11, 2019 | Team Udayavani |

ಮಡಿಕೇರಿ: ಕೊಡವ ಸಮುದಾಯದ ಯುವ ಸಮೂಹ ಉನ್ನತ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಎತ್ತರದ ಹುದ್ದೆಗಳನ್ನು ಅಲಂಕರಿಸಲು ಮುಂದಾಗಬೇಕು ಎಂದು ಲೀಡ್‌ ಬ್ಯಾಂಕ್‌ ನಿವೃತ್ತ ವ್ಯವಸ್ಥಾಪಕ ಕೆ.ಎ.ದೇವಯ್ಯ ಸಲಹೆ ನೀಡಿದ್ದಾರೆ.

Advertisement

ನಗರದ ಕೊಡವ ಸಮಾಜದಲಿ ಇಗ್ಗುತಪ್ಪ ಕೊಡವ ಕೇರಿ ವತಿಯಿಂದ ನಡೆದ ಕೈಲ್‌ ಮುಹೂರ್ತ ಹಬ್ಬ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರಕಾರದ ಉನ್ನತ ಹುದ್ದೆ ಹಾಗೂ ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಿಸಲು ಕೊಡವ ಯುವ ಪೀಳಿಗೆ ಹಿಂದೇಟು ಹಾಕುತ್ತಿದೆ. ಐಪಿಎಸ್‌, ಐಎಎಸ್‌, ಕೆಎಎಸ್‌ ಹಾಗೂ ಬ್ಯಾಂಕ್‌ ಪರೀಕ್ಷೆಗಳನ್ನು ಎದುರಿಸುವಲ್ಲಿ ಕೊಡವರು ಹಿಂದುಳಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸ್ವಯಂ ಉದ್ಯೋಗಕ್ಕೂ ಉತ್ತಮ ಅವಕಾಶಗಳಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ದೇವಯ್ಯ ಕಿವಿಮಾತು ಹೇಳಿದರು.

ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕೃಷಿಯೊಂದಿಗೆ ಸ್ವಯಂ ಉದ್ಯೋಗವನ್ನು ಅಳವಡಿಸಿಕೊಂಡರೆ ಆರ್ಥಿಕವಾಗಿ ಪ್ರಗತಿ ಸಾಧಿಸಬಹುದು. ಯುವ ಸಮೂಹದ ಅಭ್ಯುದಯಕ್ಕಾಗಿಯೇ ಬ್ಯಾಂಕ್‌ಗಳು ಸಾಲದ ಯೋಜನೆಗಳ ಮೂಲಕ ಪೋ›ತ್ಸಾಹ ನೀಡುತ್ತಿದೆ. ಬ್ಯಾಂಕ್‌ ನೀಡುವ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಿದರು.ಸಂಘಟನೆಯ ಜೊತೆ ಜೊತೆಯಲ್ಲೇ ಕೊಡವ ಭಾಷೆ, ಸಂಸ್ಕೃತಿ, ಆಚಾರ-ವಿಚಾರವನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದು ದೇವಯ್ಯ ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಕೊಡವರ ಸಂಖ್ಯೆ ಕ್ಷೀಣಿಸುತ್ತಿದೆ. ಹೊರ ಜಿಲ್ಲೆ, ರಾಜ್ಯ ಅಥವಾ ವಿದೇಶಗಳಲ್ಲಿ ಕೊಡವರು ಹೆಚ್ಚು ನೆಲಸುತ್ತಿದ್ದಾರೆ. ಇವರಲ್ಲಿಯೂ ಕೊಡಗಿನ ಸಂಸ್ಕೃತಿ ಉಳಿಯಬೇಕಾಗಿದ್ದು, ಸಂಘ ಸಂಸ್ಥೆಗಳು ನೆರವಾಗಬೇಕು ಎಂದರು.

Advertisement

ಕೊಡವ ಕೇರಿ ಅಧ್ಯಕ್ಷೆ ಕಾವೇರಿ ಪೂಣಚ್ಚ ಮಾತನಾಡಿ, ಕೊಡವರ ಕೇರಿಯೆಂದರೆ ಒಂದು ಸಂಸಾರವಿದ್ದಂತೆ. ಕೇರಿ ವ್ಯಾಪ್ತಿಯಲ್ಲಿ ಏನೇ ಕಷ್ಟ ನಷ್ಟಗಳು ಸಂಭವಿಸಿದರೆ ಎಲ್ಲರೂ ಸ್ಪಂದಿಸುವಂತಾಗಬೇಕು ಎಂದರು.

ಸಮುದಾಯ ಬಾಂಧವರು ಸದಸ್ಯತ್ವವನ್ನು ಪಡೆದುಕೊಂಡು ಸಂಘದ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಮುಂದೆ ಸಂಘದ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಸಂಘಟನೆಯನ್ನು ಬಲಗೊಳಿಸುವಂತೆ ಕರೆ ನೀಡಿದರು.

ಕೇರಿಯ ಖಜಾಂಚಿ ಪಿ.ಹರೀಶ್‌ ಮುತ್ತಪ್ಪ ಲೆಕ್ಕ ಪತ್ರ ಮಂಡಿಸಿದರು. ಕಾರ್ಯದರ್ಶಿ ಬೊಳ್ಳಚಂಡ ಲೀಲಾ ಸುಬ್ಬಯ್ಯ ಅವರು ವಾರ್ಷಿಕ ವರದಿ ಓದಿದರು.

10ನೇ ತರಗತಿ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಶೇ. 95 ರಷ್ಟು ಅಂಕಗಳಿಸಿದ ಬಿದೀಶ್‌ ಹಾಗೂ ಅಸಾಧಾರಣ ಪ್ರತಿಭೆಗಾಗಿ ವಿದ್ಯಾರ್ಥಿ ಕಾರ್ತಿಕ್‌ ಕುಟ್ಟಪ್ಪ ಅವರನ್ನು ಸಮ್ಮಾನಿಸಲಾಯಿತು .

ವಿವಿಧ ಸ್ಪರ್ಧೆ
ಸಭಾ ಕಾರ್ಯಕ್ರಮಕ್ಕೂ ಮೊದಲು ಕೈಲ್‌ ಮುಹೂರ್ತ ಹಬ್ಬದ ಪ್ರಯುಕ್ತ ಬೆಳಗ್ಗೆಯಿಂದಲೇ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತೆಂಗಿನಕಾಯಿಗೆ ಕಲ್ಲು ಹೊಡೆಯುವುದು, ಓಟ, ನಿಂಬೆ ಚಮಚದ ಓಟ, ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ಮ್ಯೂಸಿಕಲ್‌ ಚೇರ್‌ ಮತ್ತಿತರ ಸ್ಪರ್ಧೆಗಳಲ್ಲಿ ಸಮುದಾಯ ಬಾಂಧವರು ಉತ್ಸಾಹದಿಂದ ಪಾಲ್ಗೊಂಡರು. ವೇದಿಕೆಯಲ್ಲಿ ಇಗ್ಗುತಪ್ಪ ಕೊಡವ ಕೇರಿ ಪದಾಧಿಕಾರಿಗಳಾದ ನಂಜಪ್ಪ, ಕುಮಾರ್‌, ಬಿ. ಪ್ರಕಾಶ್‌ ಹಾಜರಿದ್ದರು. ಕೊಡವರ ಆಹಾರ ಪದ್ಧತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಮೇಳದ ಸಂದರ್ಭ ವಿಶಿಷ್ಟ ಖಾದ್ಯಗಳ ಆಹಾರ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next