ಶಹಾಬಾದ: ಜನಪದ ಸಾಹಿತ್ಯ ಬಂಗಾರವಿದ್ದಂತೆ. ಅದರಲ್ಲಿರುವ ಸತ್ವ, ತತ್ವಗಳನ್ನು ಪ್ರತಿಯೊಬ್ಬರೂ ಅರಿಯಬೇಕು. ಗ್ರಾಮೀಣ ಭಾಗದಲ್ಲಿ ಇನ್ನು ಜಿವಂತಿಕೆಯಿಂದಿರುವ ಜನಪದ ಸಾಹಿತ್ಯ ಉಳಿಸಿ, ಬೆಳೆಸುವ ಕಾರ್ಯ ಮಾಡಬೇಕಾಗಿದೆ ಎಂದು ತಹಶೀಲ್ದಾರ ಸುರೇಶ ವರ್ಮಾ ಹೇಳಿದರು.
ನಗರದ ಚುನ್ನಾಭಟ್ಟಿ ಬಡಾವಣೆಯ ಶ್ರೀ ಸಿದ್ಧಾರೂಡ ಸ್ವಾಮೀಜಿ ಶಿಕ್ಷಣ ಸಂಸ್ಥೆ , ಕಲಬುರಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜನಪದ ಜಾತ್ರೆ, ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆದಿಕಾಲದಿಂದ ಆಧುನಿಕ ಕಾಲದವರೆಗೂ ಸಮಾಜದಲ್ಲಿ ನಡೆದುಕೊಂಡು ಬಂದಿರುವ ಜನಪದ ಗೀತೆಗಳು ಮತ್ತು ಸಾಹಿತ್ಯ ಇಂದಿಗೆ ಮರೆಯಾಗುತ್ತಿವೆ. ಉತ್ತಮ ಸಾಹಿತ್ಯದ ಜಾಗದಲ್ಲಿ ಅನ್ಯ ಸಾಹಿತ್ಯ ಸೇರಿ ಕಲುಷಿತವಾಗುತ್ತಿದೆ. ಹಿಂದೆ ಗ್ರಾಮಾಂತರ ಪ್ರದೇಶಗಳಲ್ಲಿ ಅನಕ್ಷರಸ್ಥ ಮಹಿಳೆಯೂ ಮನೆ ಕೆಲಸ ಮಾಡುವಾಗ, ಮಗುವನ್ನು ಮಲಗಿಸುವಾಗ, ರಾಗಿ-ಜೋಳದ ಕಲ್ಲು ಬೀಸುವಾಗ, ಅಡುಗೆ ಮಾಡುವಾಗ, ಜಮೀನಿನಲ್ಲಿ ಕೆಲಸ ಮಾಡುವಾಗ ಇನ್ನಿತರ ಕೆಲಸ ಮಾಡುವ ಸಂದರ್ಭಗಳಲ್ಲಿ ಜನಪದ ಗೀತೆಗಳನ್ನು ಹಾಡುತ್ತಿದ್ದರು. ಆದರಿಂದು ಮಗುವನ್ನು ಮಲಗಿಸುವಾಗ ಹಾಡು ಹೇಳುವ ಜನ ಎಲ್ಲೂ ಇಲ್ಲ. ರಾಗಿ ಕಲ್ಲುಗಳ ಹಾಡುಗಳು ಮಾಯವಾಗಿವೆ. ಇದು ದುರಂತ ಎಂದರು.
ಸಂಗೀತ ಪ್ರೇಮಿ ರವಿಕುಮಾರ ಅಲ್ಲಂಶೆಟ್ಟಿ ಮಾತನಾಡಿ, ಬದಲಾದ ಕಾಲ ಘಟ್ಟದಲ್ಲಿ ನಮ್ಮ ನೋವು, ಜೀವನದ ಕ್ರಮ ಪದ್ಧತಿ ಬದಲಾಗಿದೆ. ಜನಪದ ಸಾಹಿತ್ಯ ಅಳಿವಿನ ಅಂಚಿನಲ್ಲಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಜನಪದ ಸಾಹಿತ್ಯ ಅರಿತು ಅರಗಿಸಿಕೊಂಡಿದ್ದರಿಂದಲೇ ಬೇಂದ್ರೆ ಹೆಚ್ಚೆಚ್ಚು ಕೃತಿಗಳನ್ನು ಬರೆಯಲು ಸಹಕಾರಿಯಾಯಿತು. ಅವರ ಸಾಹಿತ್ಯದಲ್ಲಿ ಜನಪದದ ವಾಸನೆ ಕಾಣಸಿಗುತ್ತದೆ ಎಂದು ಹೇಳಿದರು. ಮಾಜಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಬಸಪ್ಪ ಪಗಲಾಪುರ, ಡಿ.ಎಂ.ಎಸ್.ಎಚ್ ಅಧ್ಯಕ್ಷ ಶಿವರಾಜ ಕೋರೆ, ಬಹುಮುಖೀ ಸಾಹಿತಿ ನಾಗಪ್ಪ ಬೆಳಮಗಿ, ಭೀಮರಾಯ ಕನಗನಹಳ್ಳಿ, ನಗರಸಭೆಯ ಸದಸ್ಯೆ ಸುಧಾ ಅನೀಲ, ಮಹಾದೇವಯ್ಯ ಸ್ವಾಮಿ, ರಾಮಣ್ಣ ವರುಣಚಿ, ಉಮೇಶ ಪೋಚ್ಚಟ್ಟಿ, ವಿಶ್ವನಾಥ ಜಗದಳ್ಳಿ, ಲಕ್ಷ್ಮೀಕಾಂತ ಬಳಿಚಕ್ರ, ಸಿದ್ಧರಾಮ, ನಾಮದೇವ ಸಿಪ್ಪಿ, ಶಿವಲಿಂಗಪ್ಪ ಹೆಬ್ಟಾಳಕರ್, ಶ್ರೀಮಂತ ಅಟ್ಟೂರ್, ಮುದ್ದುರಂಗ ಮಾಸ್ಟರ್ ಹಾಜರಿದ್ದರು. ಎಸ್.ಎಸ್. ಟಿವಿಯ ಶಂಕರ ಕೋಡ್ಲಾ ಅಧ್ಯಕ್ಷತೆ ವಹಿಸಿದ್ದರು.