Advertisement

ಪ್ರತಿಕೂಲ ಹವಾಮಾನ: ಕೈಕೊಟ್ಟ ನಾಡದೋಣಿ ಮೀನುಗಾರಿಕೆ

09:32 AM Jul 21, 2019 | sudhir |

ಮಲ್ಪೆ: ಈ ಬಾರಿ ಉತ್ತಮ ಮೀನುಗಾರಿಕೆ ನಡೆಯಬಹುದೆಂಬ ನಿರೀಕ್ಷೆಗೆ ಪ್ರತಿಕೂಲ ಹವಾಮಾನ ತಣ್ಣೀರೆರಚಿದೆ.

Advertisement

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಗಾಲದ ಸಾಂಪ್ರದಾಯಿಕ ಮೀನುಗಾರಿಕೆ ಇನ್ನೂ ಸರಿಯಾಗಿ ಆರಂಭ ಗೊಂಡಿಲ್ಲ. ಅತ್ತ ಯಾಂತ್ರಿಕ ಮೀನು ಗಾರಿಕೆಯ ನಿಷೇಧದ ಅವಧಿಯೂ ಮುಗಿಯುತ್ತಾ ಬರುತ್ತಿದೆ. ಹೆಜಮಾಡಿ, ಉಚ್ಚಿಲ, ಕಾಪು ಗಂಗೊಳ್ಳಿ ಕೋಡಿ ಮತ್ತಿತರ ಕಡೆಗಳಲ್ಲಿಯೂ ಕೂಡ ಮೀನುಗಾರಿಕೆ ಸರಿಯಾಗಿ ನಡೆದಿಲ್ಲ.

ಕಳೆದ ಮೂರ್‍ನಾಲು ದಿನಗಳಲ್ಲಿ ಕೆಲವು ಕಡೆ ಕೆಲವೊಂದು ನಾಡದೋಣಿಗಳು ಸಮುದ್ರಕ್ಕೆ ಇಳಿದಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಮೀನುಗಳು ಸಿಕ್ಕಿಲ್ಲ. ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಶನಿವಾರ ಮತ್ತು ರವಿವಾರ ಸುಮಾರು 20ರಷ್ಟು ನಾಡದೋಣಿಗಳು ತೆರಳಿವೆ. ಸುಮಾರು 3-4 ದೋಣಿಗಳಿಗೆ 10-15
ಬುಟ್ಟಿಯಷ್ಟು ಸೋಡಿ ಮೀನು ದೊರಕಿದೆ. ಇದು ದಿನದ ಖರ್ಚಿಗೂ ಸಾಕಾಗುತ್ತಿಲ್ಲ ಎನ್ನುತ್ತಾರೆ ಮೀನುಗಾರರು.

ಕನಿಷ್ಠ 25 ಸಾವಿರ ರೂ. ಸಂಪಾದನೆ ಆಗಿಲ್ಲ
ಕಳೆದ ವರ್ಷ ಜೂನ್‌ ತಿಂಗಳಿನಿಂದ ಜು. 14ರ ವರೆಗೂ ಭಾರಿ ಮಳೆಗಾಳಿ
ಯಿಂದಾಗಿ ಸಮುದ್ರ ಪ್ರಕ್ಷುಬ್ಧ ಗೊಂಡು ಮೀನುಗಾರರು ಪೂರ್ಣ
ಪ್ರಮಾಣದಲ್ಲಿ ಕಡಲಿಗೆ ಇಳಿಯದಂತೆ ಮಾಡಿತ್ತು. ಆದರೂ ಈ ಸಮಯಕ್ಕಾಗು ವಾಗ ಪ್ರತಿ ದೋಣಿಗೆ ಕನಿಷ್ಠ 1 ಲಕ್ಷ ರೂ. ಮೌಲ್ಯದ ಮೀನು ದೊರಕಿತ್ತು. ಆದರೆ ಈ ಬಾರಿ ಯಾರಿಗೂ ಮೀನು ಸಿಕ್ಕಿಲ್ಲ. ಬೆರಳೆಣಿಕೆಯ ದೋಣಿಗಳಿಗೆ ಚಿಲ್ಲರೆ ಮೀನು ಸಿಕ್ಕಿದರೂ ಲಾಭಕ್ಕಿಂತ ನಷ್ಟದ ಪ್ರಮಾಣವೇ ಜಾಸ್ತಿಯಾಗಿದೆ. ಬಹುತೇಕ ಮೀನುಗಾರರು ಬರಿಗೈಯಲ್ಲಿ ವಾಪಾಸಾಗಿದ್ದಾರೆ.

ಮೀನು ಬಂದಿಲ್ಲ
ಉತ್ತಮ ಮಳೆಯಾಗದಿದ್ದರೆ ಮೀನು ಸಿಗುವುದು ಕಷ್ಟ. ಮಳೆ ಕೊರೆತೆಯಾಗಿದ್ದು ಒಂದೂ ನೆರೆ ಬಾರದ ಕಾರಣ ಸಿಹಿನೀರು ಕಡಲಿಗೆ ಸೇರಿಲ್ಲ. ಇದೇ ಕಾರಣ ಮೀನುಗಳು ತೀರ ಪ್ರದೇಶಕ್ಕೆ ಬಂದಿಲ್ಲ ಎನ್ನಲಾಗುತ್ತಿದೆ. ಇನ್ನೊಂದು ಕಾರಣ ಎರಡು ಮೂರು ತಿಂಗಳ ಹಿಂದೆ ಸಮುದ್ರತೀರದಲ್ಲಿ ಕಪ್ಪು ಬಣ್ಣದ ತೈಲ ಮಿಶ್ರಿತ ಜಿಡ್ಡಿನ ಪ್ರಮಾಣ ತೀರ ಪ್ರದೇಶವನ್ನು ಸೇರುತ್ತಿತ್ತು. ಸಮುದ್ರ ಮಧ್ಯೆ ಹಡಗುಗಳಿಂದ ಕಚ್ಚಾ ತೈಲದ ವಿಲೇವಾರಿಯಿಂದಾಗಿ ಅದು ಸಮುದ್ರ ತೀರವನ್ನು ಸೇರುತ್ತಿದೆ ಎನ್ನಲಾಗುತ್ತಿದ್ದು, ಇದು ಎರಡು ಮೂರು ಸಲ ಪುನರಾವರ್ತನೆಯಾಗಿತ್ತು. ಇದು ಜಲಚರ ನಾಶಕ್ಕೆ ಕಾರಣವಾಗಿರಬಹುದೆಂದು ಮೀನುಗಾರರು ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.

Advertisement

ದೇವರಿಗೆ ಮೊರೆ
ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಭಾರಿ ಹಿನ್ನೆಡೆಯಾಗಿದ್ದರಿಂದ ಮೀನುಗಾರರು ದೇವರಿಗೆ ಮೊರೆ ಹೋಗಿದ್ದಾರೆ. ಮೀನುಗಾರರು ಕಲ್ಮಾಡಿ ಬೊಬ್ಬರ್ಯ ದೈವಸ್ಥಾನದಲ್ಲಿ ದರ್ಶನ ಸೇವೆ ನಡೆಸಿದ್ದಾರೆ. ಕಾಪು ಮಾರಿಯಮ್ಮನಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ, ತಮ್ಮ ಕಷ್ಟವನ್ನು ತೋಡಿಕೊಳ್ಳಲಿದ್ದಾರೆ.

ಇಳುವರಿ ಇಲ್ಲದೆ ಸಾಲ ತೀರಿಸುವ ಚಿಂತೆ
ಇನ್ನೂ ಸರಿಯಾಗಿ ಮೀನುಗಾರಿಕೆ ಆರಂಭವಾಗಿಲ್ಲ. ಹೋದ ಮೀನುಗಾರರಿಗೆ ಸಂಪಾದನೆ ಇಲ್ಲ. ಸಮುದ್ರದಲ್ಲಿ ಸರಿಯಾದ ಮೀನಿನ ಇಳುವರಿ ಇಲ್ಲ. ಒಂದು ಸಲ ಕಡಲಿಗಿಳಿದು ಬರಬೇಕಾದರೆ 20ರಿಂದ 25ಸಾವಿರ ರೂಪಾಯಿ ಬೇಕು. ಮೀನು ಸಿಗದಿದ್ದರೆ ನಷ್ಟ. ಸಾಲ ತೀರಿಸುವ ಬಗ್ಗೆ ಚಿಂತೆಯಾಗಿದೆ.
-ರಮೇಶ್‌ ಮೈಂದನ್‌ ಕುತ್ಪಾಡಿ, ನಾಡದೋಣಿ ಮೀನುಗಾರರು

ಆಶಾದಾಯಕ ಮೀನುಗಾರಿಕೆ ಆದರೆ ಮಾತ್ರ ನೆಮ್ಮದಿ ಸಾಂಪ್ರದಾಯಿಕ ಮಳೆಗಾಲದ ಮೀನುಗಾರಿಕೆ ಜೂನ್‌ ತಿಂಗಳಲ್ಲಿ ಆರಂಭಗೊಂಡು
ಜು.31ಕ್ಕೆ ಕೊನೆಗೊಳ್ಳುತ್ತದೆ.
ಆ. 1ರಿಂದ ಯಾಂತ್ರಿಕ ಮೀನುಗಾರಿಕೆ ಆರಂಭವಾಗುತ್ತದೆ. ಆ.1ರಿಂದ ಟ್ರಾಲ್‌ಬೋಟ್‌ಗಳು ಸಮುದ್ರಕ್ಕೆ ಇಳಿಯಲು ಅವಕಾಶ ವಿದ್ದರೂ ಆ. 10ರ
ಬಳಿಕ ಹಿಂತಿರುಗುತ್ತವೆ. ಅಷ್ಟರೊಳಗೆ ನಾಡದೋಣಿ ಮೀನುಗಾರರಿಗೆ ಆಶಾದಾಯಕ ಮೀನುಗಾರಿಕೆ ನಡೆದರೆ ಮಾತ್ರ ಒಂಚೂರು
ನೆಮ್ಮದಿ ಸಿಗಬಹುದು.
-ಕೃಷ್ಣ ಎಸ್‌. ಸುವರ್ಣ, ಪಡುತೋನ್ಸೆ ಬೆಂಗ್ರೆ

Advertisement

Udayavani is now on Telegram. Click here to join our channel and stay updated with the latest news.

Next