Advertisement

ನಗರಕ್ಕೆ ಹೊಂದಿಕೊಂಡರೂ ಮೂಲ ಸೌಕರ್ಯ ಎಣಿಸಿದಷ್ಟು ಆಗಲಿಲ್ಲ !

12:40 PM Oct 04, 2019 | Team Udayavani |

ಮಹಾನಗರ: ಜೀವನದಿ ನೇತ್ರಾವತಿಯ ಇಕ್ಕೆಲಗಳ ಪ್ರಶಾಂತ ಪರಿಸರದಲ್ಲಿರುವ ಜಪ್ಪಿನ ಮೊಗರು ಹಲವು ವಿಶೇಷಗಳ ಪ್ರದೇಶ. ಮಹಾನಗರ ಪಾಲಿಕೆಯ ವ್ಯಾಪ್ತಿಯ ಗಡಿಯಲ್ಲಿರುವ ಇದು ಮಹಾನಗರಕ್ಕೆ ಸೇರಿದ್ದರೂ, ಭೌಗೋ ಳಿಕವಾಗಿ ಗ್ರಾಮೀಣ ಸೊಗಡನ್ನು ಇನ್ನೂ ಉಳಿಸಿಕೊಂಡಿದೆ.

Advertisement

ಪಾಲಿಕೆಯ 54 ನೇ ವಾರ್ಡ್‌ ಆಗಿರುವ ಈ ಪ್ರದೇಶ ವಾಣಿಜ್ಯವಾಗಿ ಅಷ್ಟಾಗಿ ತೆರೆದುಕೊಂಡಿಲ್ಲ. ಕಾಸರ ಗೋಡು-ಮಂಗಳೂರನ್ನು ಸಂಪರ್ಕಿಸುವ ನೇತ್ರಾವತಿ ಸೇತುವೆ ಹಾಗೂ ರಾ.ಹೆ. 66ರ ಒಂದಷ್ಟು ಉದ್ದದ ರಸ್ತೆಯೂ ಇದರ ವ್ಯಾಪ್ತಿಯಲ್ಲಿದೆ. ಬೇಸಗೆಯಲ್ಲಿ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ; ಮಳೆಗಾಲದಲ್ಲಿ ನೆರೆ ಭೀತಿ ಎದುರಿಸುತ್ತದೆ. ಇತ್ತೀಚೆಗೆ ಸುರಿದಿದ್ದ ಭಾರೀ ಮಳೆಗೆ ಇಲ್ಲಿನ ಹಲವು ಕುಟುಂಬಗಳು ತತ್ತರಿಸಿದ್ದವು.

“ಸುದಿನ’ ತಂಡವು ವಾರ್ಡ್‌ನಲ್ಲಿ ಸುತ್ತಾಡಿದಾಗ, ಬಹುತೇಕ ರಸ್ತೆಗಳು ಕಾಂಕ್ರೀಟ್‌ ಆದದ್ದು ಕಂಡು ಬಂದಿತು. ಮೂಲ ಸೌಕರ್ಯಗಳು ಪರವಾಗಿಲ್ಲ ಎನ್ನುವಂತಿತ್ತು. ಇನ್ನೂ ಕೆಲವು ರಸ್ತೆ ಈಗ ಕಾಮಗಾರಿ ಭಾಗ್ಯ ಕಾಣುತ್ತಿದೆ. ಮರಳು ಲಾರಿಗಳು ಚಲಿಸಿ ಹಾಳಾದ ಕೆಲವು ಒಳರಸ್ತೆಗಳು ಇನ್ನೂ ಹಾಗೇ ಇವೆ. ಊರಲ್ಲಿ ವಾರ್ಡ್‌ ಸದಸ್ಯರು ಏನಾದರೂ ಸಮಸ್ಯೆಯಿದ್ದರೆ ಸ್ಪಂದಿಸುತ್ತಾರೆಂಬ ಅಭಿಪ್ರಾಯ ವ್ಯಕ್ತವಾಯಿತು. ಹಾಗೆಂದು ಸಮಸ್ಯೆಯೇ ಇಲ್ಲ ಅನ್ನುವಂತಿಲ್ಲ,

ಒಳಚರಂಡಿ ಸಮಸ್ಯೆ ಬಗ್ಗೆ ಸ್ಥಳೀಯರಾದ ಗಿರಿಜಾ ನೋವು ತೋಡಿ ಕೊಂಡರು. ಗೂಡಂಗಡಿಯಲ್ಲಿ ಕುಳಿತಿದ್ದ ಹಿರಿಯ ರೊಬ್ಬರನ್ನು ಮಾತ ನಾಡಿಸಿದಾಗ “ಇಲ್ಲಿ ಹಾಗೇನು ಸಮಸ್ಯೆ ಇಲ್ಲ-ಆದರೆ, ಬೇಸಗೆ ಯಲ್ಲಿ ಕುಡಿಯುವ ನೀರು ಕೊರತೆ ಯಾಗತ್ತದೆ’ ಎಂದರು.

ಇಲ್ಲಿನ ಹೆದ್ದಾರಿಯಿಂದ ವಾರ್ಡ್‌ಗೆ
ತಿರುಗುವ ಸ್ಥಳ “ಅಪಘಾತ ವಲಯ’ ಎಂದೇ ಪ್ರಸಿದ್ಧ. ಹೆದ್ದಾರಿ ದಾಟಿ ಅತ್ತಿಂದಿತ್ತ ಹೋಗುವವರಿಗೆ ಈ ಜಾಗ ಅಪಾಯಕಾರಿ. ಇದನ್ನು ಹೆದ್ದಾರಿ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುವುದು ಕೃಷ್ಣಪ್ಪ ಅವರ ಅಭಿಪ್ರಾಯ.ಕುಡಿಯುವ ನೀರಿನ ಸಮಸ್ಯೆ ಎದುರಿಸಿದ್ದ ಸ್ಮಶಾನಗುಡ್ಡ ಪರಿಸರದ ಸ್ಥಳೀಯರ ಪ್ರಕಾರ ಕಳೆದ ಬೇಸಗೆಯಲ್ಲಿ ಹನಿ ನೀರಿಗೂ ಪರದಾಡಿದೆವು. ಕೊನೆಗೂ ಬೋರ್‌ವೆಲ್‌ ಕೊರೆದರೂ, ಕೆಲವೇ ದಿನದಲ್ಲಿ ಬಂದ್‌ ಆಯಿತು. ಕುಡಿಯುವ ನೀರಿಗೆ ಆದ್ಯತೆ ಅಗತ್ಯ ಎನ್ನುತ್ತಾರೆ.

Advertisement

ಇತ್ತೀಚೆಗೆ ನೆರೆ ನೀರು ನುಗ್ಗಿದ ಪ್ರದೇಶದವರು ಹೇಳುವ ಪ್ರಕಾರ, ಮಳೆಗಾಲದಲ್ಲಿ ಮನೆಯ ಅರ್ಧದವರೆಗೆ ನೀರು ನಿಲ್ಲುತ್ತದೆ. ರಾಜಕಾಲುವೆಯ ಅಸಮರ್ಪಕ ವ್ಯವಸ್ಥೆ ಯಿಂದ ಹೀಗಾಗಿದೆ. ಪಾಲಿಕೆ ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕು ಎಂದು ಆಗ್ರಹಿಸುತ್ತಾರೆ.

ನೇತ್ರಾವತಿಯ ನದಿ ಬದಿಯಲ್ಲಿ ಈ ವಾರ್ಡ್‌ನಲ್ಲಿ ಸಾಗಿದರೆ ಕಲ್ಲತಡಮೆ, ನದಿಯ ಇನ್ನೊಂದು ಬದಿ ಯಲ್ಲಿ ಆಡಂಕುದ್ರು. ಇಲ್ಲಿ ಮರಳುಗಾರಿಕೆ ಸಾಮಾನ್ಯ ದೃಶ್ಯ. ಲಾರಿಗಳ ಎಗ್ಗಿಲ್ಲದ ಸಾಗಾಟದಿಂದ ಒಳರಸ್ತೆಗಳು ಹೊಂಡಮಯ. ಇಲ್ಲಿ ಕೆಲವೆಡೆ ಅಕ್ರಮ ಮರಳು ಗಾರಿಕೆಯೂ ನಡೆಯುತ್ತಿದೆ. ನೇತ್ರಾವತಿ ಸೇತುವೆಯು ಇದೀಗ “ಆತ್ಮಹತ್ಯೆಗಳ ಸ್ಪಾಟ್‌’ ಆಗಿಯೂ ಗುರುತಿಸಿ ಕೊಳ್ಳುತ್ತಿದ್ದು, ಅದನ್ನು ತಪ್ಪಿಸಲು ಅಗತ್ಯ ಸುರಕ್ಷತಾ ಕ್ರಮ ಗಳನ್ನು ಕೈಗೊಳ್ಳಬೇಕಿದೆ. ಯೇನಪೊಯ, ಪ್ರಸ್ಟೀಜ್‌ ಶಿಕ್ಷಣ ಸಂಸ್ಥೆ, ಹಿ.ಪ್ರಾ.ಕ. ಶಾಲೆಗಳಿರುವ ಇಲ್ಲಿ ನಗರ ಪ್ರದೇಶದಲ್ಲಿರುವಂತೆ ದೊಡ್ಡ ಫ್ಲ್ಯಾಟ್‌ ಅಥವಾ ಬಹು ಮಹಡಿ ಜನವಸತಿ ಕಟ್ಟಡಗಳಿಲ್ಲ. ಸುಮಾರು 1,000 ಮನೆಗಳಿರಬಹುದು. ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಶ್ರೀ ಗುರುವನ ದೇವಸ್ಥಾನ, ಶ್ರೀ ಆದಿಮಾಯೆ ದೇವಸ್ಥಾನ, ಕಂರ್ಭಿಸ್ಥಾನ ದೇವಸ್ಥಾನ ಸಹಿತ ಹಲವು ದೈವಿಕ ಆರಾಧನಾ ಕ್ಷೇತ್ರಗಳಿವೆ.

ಕೂಗಳತೆಯಲ್ಲಿ ಉಳ್ಳಾಲ; ವ್ಯಾಪ್ತಿ ಮಾತ್ರ ಪಾಲಿಕೆಗೆ!
ತೊಕ್ಕೊಟ್ಟುವಿನಿಂದ ಮಂಗಳೂರು ಕಡೆಗೆ ಬರು ವಾಗ ನೇತ್ರಾವತಿ ಸೇತುವೆಯ ಎಡಭಾಗದಲ್ಲಿ ಕಿರಿದಾದ ಒಂದು ಕಾಲು ದಾರಿಯಿದೆ. ಅದರಲ್ಲಿ ಸಾಗಿದರೆ ರೈಲು ಹಳಿ ಸಿಗುತ್ತದೆ. ಅದನ್ನೂ ದಾಟಿ ಮುಂದೆ ಹೋದರೆ ಉಳ್ಳಾಲ ಹೊಗೆ ಪ್ರದೇಶ. ಉಳ್ಳಾಲ ನಗರಸಭೆಗೆ ಹತ್ತಿರದಲ್ಲಿದ್ದರೂ ಈ ಪ್ರದೇಶ ಸೇರುವುದು ಪಾಲಿಕೆಗೆ. ಇಲ್ಲಿ ಸುಮಾರು 40 ಮನೆಗಳಿವೆ. ಆದರೆ, ಇಲ್ಲಿನ ಜನರು ಯಾವುದೇ ಕೆಲಸಕ್ಕೆ ಪಾಲಿಕೆಗೆ ಬರಬೇಕೆಂದರೆ ಸುಮಾರು 2.30 ಕಿ.ಮೀ. ನದಿ ಬದಿಯಲ್ಲಿ ನಡೆದು ಸೇತುವೆ ಬಳಿ ಬರಬೇಕು. ವಾಹನದಲ್ಲಿ ಬರಲು ಉಳ್ಳಾಲ-ಅಲೆಕಳ ಶಾಲೆಯಾಗಿ-ಅಂಬೇಡ್ಕರ್‌ ಭವನ ರಸ್ತೆಯಾಗಿ ಸುತ್ತಿ ಬಳಸಿ ತೊಕ್ಕೊಟ್ಟುವಿಗೆ ಬಂದು ಮಂಗಳೂರಿಗೆ ಬರಬೇಕಿದೆ.

ಪ್ರಮುಖ ಕಾಮಗಾರಿ
– ಗಣೇಶನಗರ ರಸ್ತೆ ಕಾಂಕ್ರಿಟೀಕರಣ
– ಬಂಟರ ಸಂಘ ಕಲತಡಮೆ ರಸ್ತೆ ಅಭಿವೃದ್ಧಿ
– ಕಲ್ಲುರ್ಟಿ ದೈವಸ್ಥಾನ-ತಾರ್ದೊಲ್ಯ ಗುಡ್ಡ ರಸ್ತೆ ಅಭಿವೃದ್ಧಿ
–  ಆಡಂಕುದ್ರು ಹೊಸ ರಸ್ತೆ
– ಜಪ್ಪಿನಮೊಗರು ದೊಂಪದಬಲಿ ಗದ್ದೆ ಯಿಂದ ಕಂಬಳಗದ್ದೆಯ ರಸ್ತೆ ಅಭಿವೃದ್ಧಿ,
– ರಾಜಕಾಲುವೆ ದುರಸ್ತಿ, ಚರಂಡಿ ನಿರ್ಮಾಣ ಕಾರ್ಯ
–  ಆಡಂಕುದ್ರು ಉಳ್ಳಾಲ ಹೊಗೆ ತಂದೊಲಿಕೆ ಪಡು³ ಪ್ರದೇಶಕ್ಕೆ ಕುಡಿಯುವ ನೀರಿನ ವ್ಯವಸ್ಥೆ

ಜಪ್ಪಿನಮೊಗರು ವಾರ್ಡ್‌
ವಾರ್ಡ್‌ನ ಭೌಗೋಳಿಕ ವ್ಯಾಪ್ತಿ: ಕಲ್ಲಾಪು ಸಮೀಪದ ಆಡಂಕುದ್ರು ಶಾಲೆಯಿಂದ ಆರಂಭವಾಗಿ ರಾ.ಹೆ.66ರ ನೇತ್ರಾವತಿ ಸೇತುವೆಯಿಂದ ಪೆಗಾಸಸ್‌ ಬಳಿಯವರೆಗಿನ (ಹೆದ್ದಾರಿ ಮಧ್ಯೆ ಕೆಲವು ಭಾಗ ಹೊರತುಪಡಿಸಿ) ಹೆದ್ದಾರಿಯಿಂದ ಕಲ್ಕಾರು, ಸಾಲ್ಯಾನ್‌ ರೈಸ್‌ಮೀಲ್‌, ಸ್ಮಶಾನ ಗುಡ್ಡ ವ್ಯಾಪ್ತಿ ಹಾಗೂ ನೇತ್ರಾವತಿ ನದಿ ಬದಿಯಲ್ಲಿ ಆಡಂಕುದ್ರು, ಕಲ್ಲತಡಮೆ ವ್ಯಾಪ್ತಿ.
ಈ ವಾರ್ಡ್‌ ಸುಮಾರು 20 ಕಿ.ಮೀ. ಸುತ್ತಳತೆ ಹೊಂದಿದೆ.

ಒಟ್ಟು ಮತದಾರರು: 6,500
ನಿಕಟಪೂರ್ವ ಕಾರ್ಪೊರೇಟರ್‌- ಸುರೇಂದ್ರ


ರಸ್ತೆ ಮತ್ತು ಕುಡಿಯುವ ನೀರಿಗೆ ಆದ್ಯತೆ ನೀಡಿರುವೆ
ಜಪ್ಪಿನಮೊಗರು ವಾರ್ಡ್‌ನಲ್ಲಿ ಜನರ ಆಶಯಗಳಿಗೆ ಪೂರಕವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಪಕ್ಷಾತೀತವಾಗಿ ಮತ್ತು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ನಿರ್ವಹಿಸಿರುವೆ. ವಿವಿಧ ರಸ್ತೆ, ಕುಡಿಯುವ ನೀರಿನ ವಿಚಾರಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. -ಸುರೇಂದ್ರ

ಸುದಿನ ನೋಟ
ಈ ವಾರ್ಡ್‌ನಲ್ಲಿ ಸುತ್ತಾಡಿದಾಗಲೂ ಕೊರತೆ ಎನಿಸುವುದು ಅಭಿವೃದ್ಧಿ ಕಾಮಗಾರಿಗಳ ಆದ್ಯತೆಯ ಪ್ರಶ್ನೆ. ಮರಳುಗಾರಿಕೆ ನಡೆದು ಹಾಳಾದ ರಸ್ತೆಗಳ ದುರಸ್ತಿಗೆ ಗಮನ ಕೊಡಬೇಕಿತ್ತು. ಗ್ರಾಮೀಣ ಸೊಗಡಿನ ಪ್ರದೇಶದಲ್ಲಿ ರಸ್ತೆಗಳೇ ಪ್ರಮುಖ. ಜತೆಗೆ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಇವೆರಡರ ಜತೆಗೆ ಒಳಚರಂಡಿ ವ್ಯವಸ್ಥೆಯ ಸುಧಾರಣೆಗೆ ಕೊಟ್ಟ ಗಮನ ಕಡಿಮೆ. ಅಭಿವೃದ್ಧಿಯ ಪಟ್ಟಿಯಲ್ಲಿ ಇವುಗಳೂ ಸೇರಿ ಕಾರ್ಯಗತವಾಗಿದ್ದರೆ ಚೆನ್ನಾಗಿರುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next