ನವದೆಹಲಿ: ಮುಂದಿನ ಎರಡು-ಮೂರು ತಿಂಗಳಲ್ಲಿ ದೇಶದೊಳಗೇ ವಿಮಾನದಲ್ಲಿ ಸಂಚರಿಸಲೂ ಆಧಾರ್ ಕಡ್ಡಾಯವಾಗಲಿದೆ. ವಿಮಾನದಲ್ಲಿ ದುರ್ವರ್ತನೆ ತೋರುವವರಿಗೆ ನಿಷೇಧ ಹೇರಲು “ನೋ ಫ್ಲೈ ಲಿಸ್ಟ್’ ಅನ್ನು ಸಿದ್ಧಪಡಿಸಲಾಗುತ್ತಿದೆ. ಹೀಗಿರುವಾಗ ಪ್ರಯಾ ಣಿಕನ ಗುರುತು ಮುಖ್ಯ. ಈ ಕಾರಣಕ್ಕಾಗಿ ಇನ್ನು ದೇಶೀಯ ವಿಮಾನ ಗಳಲ್ಲಿ ಸಂಚರಿಸಲು ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗಲೇ ಆಧಾರ್ ಅಥವಾ ಪಾಸ್ಪೋರ್ಟ್ ಸಂಖ್ಯೆಯನ್ನು ಒದಗಿಸಬೇಕು. ಈ ಕುರಿತ ಪ್ರಸ್ತಾಪವನ್ನು ಸರ್ಕಾರ ಮುಂದಿನ ವಾರ ಸಾರ್ವಜನಿಕರ ಮುಂದಿಡಲಿದ್ದು, ಸಲಹೆಗಳನ್ನು ನೀಡಲು 30 ದಿನಗಳ ಕಾಲಾವಕಾಶ ನೀಡಲಾಗುವುದು ಎಂದು ಮೂಲಗಳು ತಿಳಿಸಿದೆ.
ಕೆಲ ದಿನಗಳ ಹಿಂದಷ್ಟೇ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಏರ್ ಇಂಡಿಯಾದ ಡ್ನೂಟಿ ಮ್ಯಾನೇಜರ್ಗೆ ಥಳಿಸಿ ಉಂಟಾಗಿದ್ದ ರಾದ್ಧಾಂತದ ಹಿನ್ನೆಲೆಯಲ್ಲಿ ಈ ನಿಯಮ ಜಾರಿಗೆ ತರಲಾಗುತ್ತಿದೆ ಎಂದು ಹೇಳಲಾಗಿದೆ.
ಆಧಾರ್ ಅಕ್ರಮ: ಸಾವಿರ ಆಪರೇಟರ್ಗಳು ಕಪ್ಪುಪಟ್ಟಿಗೆ: ಆಧಾರ್ ಸಂಖ್ಯೆ ಒದಗಿಸುವಾಗ ಜನರಿಂದ ಶುಲ್ಕ ವಸೂಲಿ ಸೇರಿದಂತೆ ವಿವಿಧ ರೀತಿಯ ಅಕ್ರಮಗಳಲ್ಲಿ ತೊಡಗಿದ್ದ ಒಂದು ಸಾವಿರ ಮಂದಿ ಆಪರೇಟರ್ಗಳನ್ನು ಕಳೆದ 3 ತಿಂಗಳಲ್ಲಿ ಕಪ್ಪುಪಟ್ಟಿಗೆ ಸೇರಿಸಿ, 10 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ಪೈಕಿ 20 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರದ ಸಿಇಒ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.
ಆಧಾರ್ ಸಂಖ್ಯೆ ಮಾಡಿಸಿಕೊಡಲು ಶುಲ್ಕ ಪಡೆಯುತ್ತಾರೆ, ಕಾರ್ಡ್ನಲ್ಲಿ ತಿದ್ದುಪಡಿ ಮಾಡಲು ಹೆಚ್ಚುವರಿ ಹಣ ವಸೂಲು ಮಾಡುತ್ತಾರೆ ಎಂಬೆಲ್ಲ ದೂರುಗಳು ಬಂದ ಹಿನ್ನೆಲೆಯಲ್ಲಿ ಇವರನ್ನು ಅಮಾನತು ಮಾಡಲಾಗಿದೆ. ಇದೇ ವೇಳೆ, ದೇಶದಲ್ಲಿ ಈವರೆಗೆ ಒಟ್ಟು 113ಕ್ಕೆ ಕೋಟಿ ಆಧಾರ್ ಐಡಿಗಳನ್ನು ನೀಡಲಾಗಿದೆ ಎಂದೂ ಪಾಂಡೆ ಮಾಹಿತಿ ನೀಡಿದ್ದಾರೆ.