Advertisement

ಹೆಚ್ಚುವರಿ ಹುದ್ದೆ, ಅನಗತ್ಯ ವೆಚ್ಚಕ್ಕೆ ಬ್ರೇಕ್‌: ಸಮಯೋಚಿತ ನಿರ್ಧಾರ

12:01 AM Oct 12, 2022 | Team Udayavani |

ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮತ್ತು ಅನಗತ್ಯ ಹುದ್ದೆ ಹಾಗೂ ವೆಚ್ಚ ಕಡಿತಕ್ಕಾಗಿ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ 2000 ಹುದ್ದೆ ರದ್ದುಗೊಳಿಸಲು ಸಂಪುಟ ಉಪ ಸಮಿತಿ ಕೈಗೊಂಡಿರುವ ತೀರ್ಮಾನ ಸ್ವಾಗತಾರ್ಹ.

Advertisement

ಮೂರು ಇಲಾಖೆಗಳಲ್ಲಿ ವರ್ಷಗಳ ಕಾಲ ಅನಗತ್ಯ ಹಾಗೂ ಹೆಚ್ಚುವರಿ ಹುದ್ದೆಗಳಿಂದ ಆರ್ಥಿಕವಾಗಿ ಸರಕಾರಕ್ಕೆ ದೊಡ್ಡ ಹೊರೆಯೇ ಆಗಿತ್ತು. ಸಂಪುಟ ಉಪ ಸಮಿತಿ ರಚಿಸಿ ಸಾಕಷ್ಟು ದಿನಗಳಾದರೂ ಹಲವು ಸಭೆಗಳ ಅನಂತರ ಅಂತಿಮವಾಗಿ ಉತ್ತಮ ತೀರ್ಮಾನ ಕೈಗೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ಸರಕಾರಕ್ಕೆ ಹೊರೆಯಾಗಿ ಪರಿಣಮಿಸಿರುವ ಕೃಷಿ ಇಲಾಖೆ ವ್ಯಾಪ್ತಿಯ ಮೂರು ನಿಗಮಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿರುವುದು ಒಳ್ಳೆಯ ಬೆಳವಣಿಗೆ.

ಅಧಿಕಾರಕ್ಕೆ ಬಂದವರು ರಾಜಕೀಯ ಕಾರಣಗಳಿಗೆ ನಿಗಮ -ಮಂಡಳಿ ರಚಿಸಿ ವಾರ್ಷಿಕವಾಗಿ ನೂರಾರು ಕೋ. ರೂ.ಗಳನ್ನು ಅವುಗಳ ನಿರ್ವಹಣೆಗಾಗಿಯೇ ವೆಚ್ಚ ಮಾಡಲಾಗುತ್ತಿದೆ. ಆದರೆ ಎಷ್ಟೋ ನಿಗಮಗಳಿಂದ ಸರಕಾರಕ್ಕೆ ಯಾವುದೇ ರೀತಿಯ ಪ್ರಯೋಜನ ಆಗುತ್ತಿಲ್ಲ. ಜತೆಗೆ ನಿಗಮ ರಚನೆಯ ಹಿಂದಿನ ಉದ್ದೇಶವೂ ಸಾಕಾರವಾಗುತ್ತಿಲ್ಲ. ಸಿಎಜಿ ವರದಿಯಲ್ಲೂ ಸಾಕಷ್ಟು ನಿಗಮ ಮಂಡಳಿಗಳು ಸರಕಾರಕ್ಕೆ ಆರ್ಥಿಕವಾಗಿ ಬಹುದೊಡ್ಡ ಹೊರೆಯಾಗಿರುವ ಬಗ್ಗೆ ಪ್ರಸ್ತಾವಿಸಲಾಗಿತ್ತು.

ಮೂರು ಇಲಾಖೆ ಹೊರತುಪಡಿಸಿ ರಾಜ್ಯದ 20 ಕ್ಕೂ ಹೆಚ್ಚು ಇಲಾಖೆಗಳಲ್ಲಿ ಇದೇ ರೀತಿ ಅನಗತ್ಯ ಹಾಗೂ ಹೆಚ್ಚುವರಿ ಹುದ್ದೆಗಳನ್ನು ಸೃಜಿಸಲಾಗಿದೆ. ಆ ಬಗ್ಗೆಯೂ ಸರಕಾರ ತೀರ್ಮಾನ ಕೈಗೊಳ್ಳಬೇಕು. ಉಪ ಸಮಿತಿಯು ಕೆಲವೊಂದು ಇಲಾಖೆಗಳ ಹುದ್ದೆ ಕಡಿತದ ಬಗ್ಗೆ ಸಲಹೆ ಕೇಳಿದೆ. ಇದೇ ರೀತಿ ರಾಜ್ಯದ ಎಲ್ಲ ಇಲಾಖೆಗಳಲ್ಲಿಯೂ ಇರುವ ಅನಗತ್ಯ ಹಾಗೂ ಹೆಚ್ಚುವರಿ ಹುದ್ದೆ ರದ್ದು ಮಾಡುವ ಬಗ್ಗೆ ಸರಕಾರ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ.

Advertisement

ಇದರ ಜತೆಗೆ ಇಲಾಖೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಾವಿರಾರು ಸಿಬ್ಬಂದಿ ನೇಮಿಸಿಕೊಳ್ಳುವ ಚಾಳಿ ಆರಂಭವಾಗಿದೆ. ವಿಧಾನಸೌಧ- ವಿಕಾಸಸೌಧ, ಬಹುಮಹಡಿ ಕಟ್ಟಡ, ಸಚಿವಾಲಯ, ವಿಧಾನಸಭೆ ಹಾಗೂ ವಿಧಾನಪರಿಷತ್‌ ಸಚಿವಾಲಯ, ಶಾಸಕರ ಭವನ ಇಲ್ಲಿ ಸಾವಿರಾರು ಮಂದಿ ಅನಗತ್ಯವಾಗಿ ಹೊರಗುತ್ತಿಗೆಯಲ್ಲಿ ನೇಮಕಗೊಂಡು ಮಾಡಲು ಕೆಲಸ ಇಲ್ಲದಂತಾಗಿದೆ. ಇದರ ಬಗ್ಗೆ ಸರಕಾರ ತತ್‌ಕ್ಷಣ ಗಮನಹರಿಸಬೇಕು.

ವಿಧಾನಸೌಧ- ವಿಕಾಸಸೌಧ, ಸಚಿವರ ನಿವಾಸ, ಶಾಸಕರ ಭವನ ನವೀಕರಣ, ಪೀಠೊಪಕರಣ ಬದಲಾವಣೆ, ಹೊರಗುತ್ತಿಗೆಯ ಸಿಬಂದಿ ವಾಹನ ಖರೀದಿ ಹಾಗೂ ಬಾಡಿಗೆಗೆ ವಾಹನ ಪಡೆಯುವುದು ಸರಕಾರಕ್ಕೆ ಅತೀ ದೊಡ್ಡ ಹೊರೆಯಾಗಿದೆ. ಕೋಟ್ಯಂತರ ರೂ. ವಾರ್ಷಿಕವಾಗಿ ಇದಕ್ಕೆ ವ್ಯಯಿಸಲಾಗುತ್ತಿದೆ. ಇದರ ಬಗ್ಗೆ ಸರಕಾರ ಅಗತ್ಯ ಗಮನಹರಿಸಬೇಕಾಗಿದೆ.

ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿರುವ ಅನಗತ್ಯ ಹುದ್ದೆ ಹಾಗೂ ವೆಚ್ಚಕ್ಕೆ ಕಡಿವಾಣ ಹಾಕಲೇಬೇಕಾಗಿದೆ. ಇಲ್ಲದಿದ್ದರೆ ಆರ್ಥಿಕ ಪರಿಸ್ಥಿತಿ ಸುಧಾರಣೆ ಸಾಧ್ಯವೇ ಇಲ್ಲ. ಸಂಪುಟ ಉಪ ಸಮಿತಿ ಕೈಗೊಂಡಿರುವ ಮಹತ್ವದ ತೀರ್ಮಾನದ ಜತೆಗೆ ಮುಂದಿನ ದಿನಗಳಲ್ಲಿ ಇತರ ಇಲಾಖೆಗಳ ಬಗ್ಗೆಯೂ ವರದಿ ತರಿಸಿಕೊಂಡು ಹುದ್ದೆ ಕಡಿತ ಹಾಗೂ ಅನಗತ್ಯ ವೆಚ್ಚ ಕಡಿತಕ್ಕೆ ಕ್ರಮ ಕೈಗೊಳ್ಳಲೇಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next