Advertisement

Darpan: ದರ್ಪಣ್‌ ತಂತ್ರಾಂಶಕ್ಕೆ ಬೇಕಿದೆ ಪೂರಕ ಉಪಕರಣ

12:40 AM Oct 08, 2023 | Team Udayavani |

ಬೆಂಗಳೂರು: ಗ್ರಾಮೀಣ ಅಂಚೆ ಕಚೇರಿಯ ಡಿಜಿಟಲ್‌ ಪ್ರಗತಿಯನ್ನು ಆಂತರಿಕವಾಗಿ ಅಭಿವೃದ್ಧಿಪಡಿಸಿ, ಗ್ರಾಹಕರ ಆರ್ಥಿಕ ಚಟುವಟಿಕೆಗಳನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಜಾರಿಗೆ ತರಲಾದ ನೂತನ ತಂತ್ರಾಂಶ ದರ್ಪಣ್‌ 2.0ಕ್ಕೆ ಅಗತ್ಯವಿರುವ ಪೂರಕ ಉಪಕರಣ ನೀಡಲು ಅಂಚೆ ಇಲಾಖೆಗೆ ಮರೆತು ಹೋಗಿದೆ. ಇದರಿಂದ ಗ್ರಾಹಕ ಸೇವೆಯಲ್ಲಿ ಅಡಚಣೆ ಎದುರಾಗಿದೆ.

Advertisement

ಅಂಚೆ ಇಲಾಖೆಯು 2012ರಲ್ಲಿ ಅಂಚೆ ಕಚೇರಿಯ ಸೇವೆಯನ್ನು ಸರಳಗೊಳಿಸಲು ಗ್ರಾಮೀಣ ಮಾಹಿತಿ ಸಂವಹನ ತಂತ್ರಜ್ಞಾನ ವ್ಯವಸ್ಥೆಯನ್ನು ಆಳವಡಿಸಿಕೊಂಡಿತ್ತು. ಈ ವೇಳೆ ಗ್ರಾಮೀಣ ಭಾಗ ಸಹಿತ ಕೆಲವು ನಗರ ಪ್ರದೇಶದಲ್ಲಿ ನೆಟ್‌ವರ್ಕ್‌ ಸಂಬಂಧಿಸಿ ಅನೇಕ ಸಮಸ್ಯೆಗಳು ಎದುರಾಗಿದ್ದವು. ಅನಂತರ ಸುಮಾರು 1 ದಶಕದ ಬಳಿಕ ಅನೇಕ ಬದಲಾವಣೆಯೊಂದಿಗೆ ಕಾರ್ಯಾಚರಿಸಿದೆ. ಈ ನೆಟ್‌ವರ್ಕ್‌ ಸಮಸ್ಯೆಗೆ ಮುಕ್ತಿ ನೀಡಲು 2023ರ ಅಕ್ಟೋಬರ್‌ 3ರಂದು ದರ್ಪಣ್‌ ಆ್ಯಪ್‌ ಸೇವೆ ಅಳವಡಿಸಿಕೊಂಡಿದೆ.

7,960 ಗ್ರಾಮೀಣ ಕಚೇರಿ
ನೆಟ್‌ವರ್ಕ್‌ ಸಮಸ್ಯೆಯಿಂದ ಹೊರಬರಲು ಅಂಚೆ ಇಲಾಖೆ ನೂತನ ತಂತ್ರಾಂಶ ದರ್ಪಣ್‌ 2.0 ಆ್ಯಪ್‌ನ್ನು ಆಳವಡಿಸಿಕೊಂಡಿದೆ. ಇದರಲ್ಲಿ ಆಯಾ ಸ್ಥಳದಲ್ಲಿ ಲಭ್ಯವಿರುವ 3ಜಿ, 4ಜಿ, 5ಜಿ ಹಾಗೂ ವೈ-ಫೈ ನೆಟ್‌ವರ್ಕ್‌ ಬಳಸಿಕೊಂಡು ಸೇವೆ ನೀಡಬಹುದಾಗಿದೆ. ರಾಜ್ಯದಲ್ಲಿ 7,960 ಗ್ರಾಮೀಣ ಅಂಚೆ ಕಚೇರಿಯಲ್ಲಿ ದರ್ಪಣ್‌ ಆ್ಯಪ್‌ ಅಳವಡಿಸಿಕೊಂಡು ಕಾರ್ಯಾಚರಣೆ ಪ್ರಾರಂಭಗೊಂಡಿದೆ. ಆರ್‌ಐಸಿಟಿ ಆ್ಯಪ್‌ ಬಳಸುತ್ತಿದ್ದ ಮೊಬೈಲ್‌ ಹಿಂಪಡೆದು, ನೂತನ ಮೊಬೈಲ್‌ಗ‌ಳನ್ನು ನೀಡಲಾಗುತ್ತಿದೆ. ಕಾರ್ಯಾಚರಣೆಯೂ ಪ್ರಾರಂಭವಾಗಿದೆ. ಎಲ್ಲ ಸೇವೆಗಳು ಒಂದೇ ತಂತ್ರಾಂಶದಲ್ಲಿ ಅಳವಡಿಸಿಕೊಂಡಿದೆ.

ಪೂರಕ ಉಪಕರಣವಿಲ್ಲ!
ಪ್ರಸ್ತುತ ಅಂಚೆ ಇಲಾಖೆ ದೇಶಾದ್ಯಂತ ನೂತನ ದರ್ಪಣ್‌ 2.0 ಎಂಬ ಹೊಸ ತಂತ್ರಾಂಶವನ್ನು ಅಳವಡಿಸಿಕೊಂಡಿದೆ. ಇದರಲ್ಲಿ ಆಧಾರ್‌ ಬಯೋಮೆಟ್ರಿಕ್‌, ಆಧಾರ್‌ ಒಟಿಪಿ ಲಾಗಿನ್‌, ಯೂಸರ್‌ ಐಡಿ ಬಳಸಿಕೊಂಡು ಕಾರ್ಯಾಚರಿಸಲಾಗುತ್ತದೆ.

ಇದಕ್ಕೆ ಮೊಬೈಲ್‌ ಜತೆಗೆ ಪ್ರತ್ಯೇಕ ಪ್ರಿಂಟರ್‌ ಹಾಗೂ ಬಯೋಮೆಟ್ರಿಕ್‌ ಉಪಕರಣದ ಅಗತ್ಯವಿದೆ. ತಂತ್ರಾಂಶವೇನೋ ಅಳವಡಿಸಿಕೊಳ್ಳಲಾಗಿದೆ. ಎಲ್ಲ ಅಂಚೆ ಕಚೇರಿಗೆ ಮೊಬೈಲ್‌ ವಿತರಿಸಿದ್ದು, ಇದಕ್ಕೆ ಅಗತ್ಯವಿರುವ ಪೂರಕವಾದ ಉಪಕರಣಗಳಾದ ಬಯೋಮೆಟ್ರಿಕ್‌ ಹಾಗೂ ಪ್ರಿಂಟರ್‌ ಉಪಕರಣಗಳು ಇದುವರೆಗೆ ಅಂಚೆ ಕಚೇರಿಗೆ ಲಭ್ಯವಾಗಿಲ್ಲ.

Advertisement

ವಿದ್ಯುತ್‌ ಬಿಲ್‌ ಪಾವತಿಗೆ ಅಂಚೆ ಕಚೇರಿಗೆ ಹೋದರೆ ಹಣ ಪಡೆದು ಬಿಲ್‌ ಪಾವತಿಸುತ್ತಾರೆ. ಆದರೆ ರಶೀದಿ ಮಾತ್ರ ನೀಡುತ್ತಿಲ್ಲ. ಬಿಲ್‌ ಪಾವತಿ ಬಗ್ಗೆ ಮೊಬೈಲ್‌ಗೆ ಸಂದೇಶ ಬರುವುದಾಗಿ ಹೇಳುತ್ತಾರೆ. ಆದರೆ ಅದನ್ನು ನೋಡಬೇಕಾದರೆ ನಾನು ಮನೆಗೆ ಹೋಗಬೇಕಾಗುತ್ತದೆ. ಈ ನಡುವೆ ಬಿಲ್‌ ಪಾವತಿಯಾಗಿದೆಯೋ ಇಲ್ಲವೋ ಎನ್ನುವುದಕ್ಕೆ ನಿಖರವಾದ ಮಾಹಿತಿ ದೊರಕುತ್ತಿಲ್ಲ. ಖಾತೆ ಠೇವಣಿ ವಿಚಾರವು ಅಷ್ಟೆ.
– ವಿನಾಯಕ್‌, ಅಂಚೆ ಕಚೇರಿ ಗ್ರಾಹಕ

ಕೇಂದ್ರದಿಂದ ಡಿಜಿಟಲ್‌ ಸೇವೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ತಜ್ಞರು ಪೇಪರ್‌ಲೆಸ್‌ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು ಸಲಹೆ ನೀಡಿದ್ದಾರೆ. ಆದರೆ ಕರ್ನಾಟಕದ ಗ್ರಾಮೀಣ ಭಾಗದ ಅಂಚೆ ಕಚೇರಿಗಳಲ್ಲಿ ಗ್ರಾಹಕರು ರಶೀದಿ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಪ್ರಿಂಟರ್‌ ಒದಗಿಸುವಂತೆ ಮನವಿ ಮಾಡಲಾಗಿದೆ. ಇನ್ನೂ ಬಯೋಮೆಟ್ರಿಕ್‌ ಹಂತ ಹಂತವಾಗಿ ಅಂಚೆ ಕಚೇರಿಗಳಿಗೆ ವಿತರಿಸಲಾಗುತ್ತದೆ.
-ರಾಜೇಂದ್ರ ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಕರ್ನಾಟಕ ವೃತ್ತ, ಬೆಂಗಳೂರು

ಸಮಸ್ಯೆ ಏನು?
ವಿದ್ಯುತ್‌ ಬಿಲ್‌, ಅಂಚೆ ಉಳಿತಾಯ ಖಾತೆ ಸೇರಿ ಇತರ ಆರ್ಥಿಕ ಚಟುವಟಿಕೆ ಹಾಗೂ ಬಿಲ್‌ ಪಾವತಿ ಸಂದರ್ಭದಲ್ಲಿ ಅಂಚೆ ಇಲಾಖೆ ಸಿಬಂದಿಗೆ ಪಾವತಿ ರಶೀದಿ ನೀಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ರಶೀದಿ ಜನರೇಟ್‌ ಆಗದೆ ಜನರು ಅಂಚೆ ಕಚೇರಿಯಿಂದ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಮ್ಯಾನುವಲ್‌ ಬಿಲ್‌ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಮ್ಯಾನುವಲ್‌ ರಶೀದಿ ನೀಡಿದರೆ ಅವ್ಯವಹಾರಕ್ಕೆ ನಾಂದಿಯಾಗುತ್ತದೆ. ಗ್ರಾಹಕರು ನೀಡುವ ಠೇವಣಿಗೆ ನೀಡುವ ಮೊತ್ತವೇ ಒಂದು ಹಾಗೂ ಖಾತೆಯಲ್ಲಿ ಜಮೆಯಾಗುವ ಮೊತ್ತವೇ ಬೇರೆಯಾಗುವ ಸಾಧ್ಯಗಳಿವೆ ಎಂದು ಇಲಾಖೆ ಸಿಬಂದಿ ಆತಂಕ ವ್ಯಕ್ತಪಡಿಸಿದರು.

 ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next