Advertisement

ಅಡ್ಡಹೊಳೆ –ಬಿ.ಸಿ.ರೋಡ್‌ ಕಾಮಗಾರಿ; ಏಕ ಪ್ಯಾಕೇಜ್‌ ಬದಲು ಮೂರು ಪ್ಯಾಕೇಜ್‌ಗೆ ಅಸ್ತು

09:38 AM Jun 20, 2020 | mahesh |

ಮಂಗಳೂರು: ಹಲವು ಕಾರಣಗಳಿಂದ ನನೆಗುದಿಗೆ ಬಿದ್ದಿರುವ ಬಿ.ಸಿ.ರೋಡ್‌- ಅಡ್ಡಹೊಳೆ ನಡುವಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಂಕ್ರೀಟ್‌ ಕಾಮಗಾರಿಯ ಗುತ್ತಿಗೆಯನ್ನು ಒಬ್ಬರಿಗೆ ವಹಿಸುವ ಬದಲು ಮೂರು ಹಂತಗಳಾಗಿ ವಿಭಜಿಸಿ ಪ್ರತ್ಯೇಕ ಮೂರು ಟೆಂಡರ್‌ ಮೂಲಕ ನಡೆಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.

Advertisement

ಬಿ.ಸಿ. ರೋಡ್‌ನಿಂದ ಅಡ್ಡಹೊಳೆಯವರೆಗಿನ ರಸ್ತೆ ಕಾಮಗಾರಿಯನ್ನು ಎಲ್‌ ಆ್ಯಂಡ್‌ ಟಿ ಕಂಪೆನಿ ಮಾತ್ರ ವಹಿಸಿತ್ತು. ಆದರೆ, ಒಂದೇ ಕಂಪೆನಿಗೆ ಈ ಕಾಮಗಾರಿ ನಡೆಸಲು ಕಷ್ಟ ಹಾಗೂ ಅರಣ್ಯ ಇಲಾಖೆ ಸಂಬಂಧಿತ ವಿವಿಧ ಇಲಾಖೆಗಳ ಒಪ್ಪಿಗೆ ಪಡೆಯಲು ಸಮಸ್ಯೆಗಳಿವೆ ಎಂಬ ಕಾರಣಕ್ಕಾಗಿ ಏಕ ಪ್ಯಾಕೇಜ್‌ ಕೈ ಬಿಟ್ಟು ಮೂರು ಪ್ಯಾಕೇಜ್‌ಗಳ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲು ಈಗ ನಿರ್ಧರಿಸಲಾಗಿದೆ. ಈ ಪೈಕಿ ಎರಡು ಪ್ಯಾಕೇಜ್‌ಗಳ ಟೆಂಡರ್‌ ಪೂರ್ಣಗೊಂಡಿದ್ದು, ಮತ್ತೂಂದು ಪ್ಯಾಕೇಜ್‌ನ ಟೆಂಡರ್‌ ವಾರದೊಳಗೆ ನಿಗದಿಯಾಗುವ ನಿರೀಕ್ಷೆಯಿದೆ.

ಕೈ ಬಿಟ್ಟಿದ್ದ ಎಲ್‌ ಆ್ಯಂಡ್‌ ಟಿ ಅಡ್ಡಹೊಳೆಯಿಂದ ಬಿ. ಸಿ. ರೋಡ್‌ ಮಧ್ಯೆ 821 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸುವ ಹೊಣೆ ಯನ್ನು ಎಲ್‌ ಆ್ಯಂಡ್‌ ಟಿಗೆ ನೀಡಲಾಗಿತ್ತು. ಆದರೆ, ಭೂ ಸ್ವಾಧೀನದಲ್ಲಿ ವಿಳಂಬ, ಪರಿಸರ ಸಚಿವಾಲಯದಿಂದ ಬೇಕಾದ ಕ್ಲಿಯರೆನ್ಸ್‌ ಸಕಾಲದಲ್ಲಿ ಸಿಗದಿರು ವುದರಿಂದ ಗುತ್ತಿಗೆದಾರರು ಕಳೆದ ವರ್ಷ ಕೆಲಸ ಸ್ಥಗಿತಗೊಳಿಸಿದ್ದರು. ಜತೆಗೆ, ಅರಣ್ಯ ಇಲಾಖೆ ತಗಾದೆ ಇರುವ 16 ಕಿ.ಮೀ. ಭಾಗವನ್ನು ಟೆಂಡರ್‌ನಿಂದ ಕೈ ಬಿಡಲು ಪ್ರಾಧಿಕಾರ ಮುಂದಾಗಿದ್ದರಿಂದ ಎಲ್‌ ಆ್ಯಂಡ್‌ ಟಿ ಸಂಸ್ಥೆಗೆ ಅಸಮಾಧಾನ ಉಂಟಾಗಿತ್ತು. ಹೀಗಾಗಿ ಅದು ಗುತ್ತಿಗೆಯಿಂದ ಹಿಂದೆ ಸರಿದಿತ್ತು.

ಏನಿದು ಯೋಜನೆ ?
ಬೆಂಗಳೂರಿನ ನೆಲಮಂಗಲದಿಂದ ಹಾಸನದವರೆಗೆ ಇರುವ ಚತುಷ್ಪಥ ರಸ್ತೆಯನ್ನು ಮಂಗಳೂರುವರೆಗೂ ವಿಸ್ತರಿಸುವ ಯೋಜನೆ. ಶಿರಾಡಿ ಘಾಟ್‌ನಲ್ಲಿ ಎರಡು ಹಂತದಲ್ಲಿ ಕಾಂಕ್ರೀಟ್‌ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಉಳಿದಂತೆ, ಹಾಸನದಿಂದ ಶಿರಾಡಿಯ ಮಾರ್ನಹಳ್ಳಿಯವರೆಗೆ ಒಟ್ಟು 45 ಕಿ.ಮೀ. ಹಾಗೂ ಶಿರಾಡಿಯ ಅಡ್ಡಹೊಳೆಯಿಂದ ಬಂಟ್ವಾಳದವರೆಗೆ ಒಟ್ಟು 63 ಕಿ.ಮೀ. ರಸ್ತೆಯು ಚತುಷ್ಪಥಗೊಳ್ಳಲಿದೆ.

“ಟೆಂಡರ್‌ ವಾರದೊಳಗೆ ಪೂರ್ಣ’
ಬಿ.ಸಿ. ರೋಡ್‌-ಅಡ್ಡಹೊಳೆ ನಡುವಿನ ರಾ.ಹೆ. ಚತುಷ್ಪಥ ಕಾಂಕ್ರೀಟ್‌ ಕಾಮಗಾರಿಯನ್ನು ಒಂದು ಪ್ಯಾಕೇಜ್‌ ಬದಲು ಮೂರು ಪ್ಯಾಕೇಜ್‌ಗಳಾಗಿ ವಿಭಜಿಸಿ ಪ್ರತ್ಯೇಕ ಮೂರು ಟೆಂಡರ್‌ ನಡೆಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಎರಡು ಟೆಂಡರ್‌ ಅಂತಿಮವಾಗಿದ್ದು, ಇನ್ನೊಂದು ಟೆಂಡರ್‌ ವಾರದೊಳಗೆ ಪೂರ್ಣಗೊಳ್ಳಲಿದೆ.
– ನಳಿನ್‌ ಕುಮಾರ್‌ ಕಟೀಲು, ಸಂಸದರು-ದ.ಕ.

Advertisement
Advertisement

Udayavani is now on Telegram. Click here to join our channel and stay updated with the latest news.

Next