Advertisement

ಅದಾನಿ, ರೆಡ್ಡಿಗೆ ಬೇಲೆಕೇರಿ ಬಲೆ: ಅದಿರು ಸಾಗಾಟ ಕೇಸಿಗೆ ಮರುಜೀವ

07:16 AM Nov 04, 2017 | Team Udayavani |

ಬೆಂಗಳೂರು: ಇನ್ನೇನು ರಾಜ್ಯದ ವಿಧಾನಸಭೆ ಚುನಾವಣೆಗೆ ಕೆಲ ತಿಂಗಳುಗಳೇ ಬಾಕಿ ಇರುವ ಸಂದರ್ಭದಲ್ಲೇ ಮತ್ತೆ ಬಿಜೆಪಿ ನಾಯಕರಿಗೆ ಬೇಲೆಕೇರಿ ಹಗರಣದ ಹಗ್ಗ ಸುತ್ತಿಕೊಳ್ಳುವ ದಿನಗಳು ಹತ್ತಿರವಾಗುತ್ತಿವೆ. ಬೇಲೆಕೇರಿ ಹಗರಣ ಸಂಬಂಧ ಈಗಾಗಲೇ ತನಿಖೆ ನಡೆಸಿರುವ ಸಿಬಿಐ ತನಿಖೆ ಸ್ಥಗಿತಗೊಳಿಸಿದೆ ಎಂಬ ವರದಿ ಬೆನ್ನಲ್ಲೇ ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ಇದೇ ಹಗರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ.

Advertisement

ಒಂದು ವೇಳೆ ಈ ಹಗರಣ ಮತ್ತೆ ಜೀವ ಪಡೆದುಕೊಂಡರೆ ಗಣಿಧಣಿಗಳಾದ ಗಾಲಿ ಜನಾರ್ದನ ರೆಡ್ಡಿ, ಆನಂದ್‌ ಸಿಂಗ್‌ ಜತೆಗೆ, ಕೇಂದ್ರದ ಬಿಜೆಪಿ ನಾಯಕರ ಜತೆಗೆ ಉತ್ತಮ ಸಂಬಂಧ ಇರಿಸಿಕೊಂಡಿದ್ದಾರೆ ಎಂದೇ ಹೇಳಲಾಗುತ್ತಿರುವ ಉದ್ಯಮಿ ಅದಾನಿ ಅವರಿಗೆ ಸಂಕಷ್ಟದ ಕಾಲ ಎದುರಾಗಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಬೇಲೆಕೇರಿ ಅದಿರು ನಾಪತ್ತೆ ಹಾಗೂ ನವ ಮಂಗಳೂರು ಬಂದರಿನಿಂದ ಅಕ್ರಮವಾಗಿ ಅದಿರು ಸಾಗಿಸಿರುವ ಪ್ರಕರಣ ಕುರಿತಂತೆ ಸಿಬಿಐ ಸಾಕ್ಷ್ಯಾಧಾರದ ಕೊರತೆಯಿಂದ ತನಿಖೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಬಗ್ಗೆ ಅಧಿಕೃತವಾಗಿಯೇ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಹಾಗೂ ಹಗರಣದ ಕುರಿತಂತೆ ರಚನೆ  ಯಾಗಿರುವ ಸಂಪುಟ ಉಪ ಸಮಿತಿ ಅಧ್ಯಕ್ಷರೂ ಆಗಿರುವ ಎಚ್‌.ಕೆ. ಪಾಟೀಲ್‌ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಿಬಿಐನ ಮುಕ್ತಾಯ ವರದಿ ಹಿಂದೆ ರಾಜಕೀಯ ಷಡ್ಯಂತ್ರವಿದ್ದು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ. ಹೀಗಾಗಿ ಇದನ್ನು ರಾಜ್ಯ ಸರ್ಕಾರವೇ ಎಸ್‌ಐಟಿ ನೇಮಕ ಮಾಡಿ ತನಿಖೆ ನಡೆಸಲಿದೆ ಎಂದು ಹೇಳಿದರು.

ಪ್ರಕರಣ ಸಂಬಂಧ ದಾಖಲೆ ಮತ್ತು ಸಾಕ್ಷ್ಯಾ ಧಾರಗಳಿವೆ. ಬೇಲೆಕೇರಿ ಬಂದರಿನಿಂದ 79.36 ಲಕ್ಷ ಮೆಟ್ರಿಕ್‌ ಟನ್‌ ಅದಿರು ಅಕ್ರಮವಾಗಿ ಸಾಗಾಟ ಮಾಡಲಾಗಿದೆ. ನವ ಮಂಗಳೂರು ಬಂದರಿನಿಂದ 2.85 ಕೋಟಿ ಮೆಟ್ರಿಕ್‌ ಟನ್‌ ಅದಿರು ಅಕ್ರಮವಾಗಿ ಸಾಗಿಸಲಾಗಿದ್ದು, ಈ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಸಿಬಿಐ ತನಿಖೆಯನ್ನು ಪ್ರಾಥಮಿಕ ಹಂತದಲ್ಲಿಯೇ ಕೈ ಬಿಡಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ ಎಂದು ಎಚ್‌.ಕೆ. ಪಾಟೀಲ್‌ ಆರೋಪಿಸಿದರು. ಈ ಕುರಿತಂತೆ ಸಂಪುಟ ಉಪ ಸಮಿತಿ ವರದಿ ಸಿದ್ಧಪಡಿಸಿದ್ದು, ಶನಿವಾರ ಮತ್ತೂಂದು ಸಭೆ ಸೇರಿ, ಮುಂದಿನ ಸಂಪುಟ ಸಭೆಯಲ್ಲಿ ವರದಿ ಸಲ್ಲಿಕೆ ಮಾಡಲಾಗುವುದು ಎಂದು ಎಚ್‌.ಕೆ. ಪಾಟೀಲ್‌ ಹೇಳಿದರು.

ಪ್ರಕರಣದ ಹಿನ್ನೆಲೆ: 2009 ರಿಂದ ಮಾರ್ಚ್‌ 2010 ರವರೆಗೆ ವಿವಿಧ ಬಂದರುಗಳ ಮೂಲಕ ರಾಜ್ಯದಿಂದ ಲಕ್ಷಾಂತರ ಟನ್‌
ಕಬ್ಬಿಣದ ಅದಿರು ಅಕ್ರಮವಾಗಿ ವಿದೇಶಗಳಿಗೆ ಸಾಗಾಟ ಮಾಡಲಾಗಿದೆ ಎಂದು ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ತಮ್ಮ ವರದಿಯಲ್ಲಿ ಹೇಳಿದ್ದರು. ಅವರ ವರದಿ ಆಧರಿಸಿ ಸುಪ್ರೀಂಕೋರ್ಟ್‌ ಸಿಇಸಿ  ಮೂಲಕ ವರದಿ ಪಡೆದು, ಸಿಇಸಿ ವರದಿ ಆಧರಿಸಿ 50 ಸಾವಿರ ಮೆಟ್ರಿಕ್‌ ಟನ್‌ಗಿಂತ ಹೆಚ್ಚಿನ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿರುವ ಬೇಲೆಕೇರಿ ಹಾಗೂ ನವ ಮಂಗಳೂರು ಬಂದರಿನಿಂದ ಸಾಗಣೆಯಾದ ಪ್ರಕರಣಗಳನ್ನು ತನಿಖೆ ಮಾಡುವಂತೆ 2013 ರಲ್ಲಿ ಆದೇಶ ಹೊರಡಿಸಿತ್ತು. 50 ಸಾವಿರ
ಮೆಟ್ರಿಕ್‌ ಟನ್‌ಗಿಂತ ಕಡಿಮೆ ಅಕ್ರಮ ಸಾಗಾಟ ಮಾಡಿರುವ ಪ್ರಕರಣಗಳನ್ನು ರಾಜ್ಯ ಸರ್ಕಾರ ಎಸ್‌ಐಟಿ ಮೂಲಕ ತನಿಖೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಸಿಬಿಐ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಶಾಸಕರಾದ ಆನಂದ ಸಿಂಗ್‌, ನಾಗೇಂದ್ರ ಬಾಬು, ಸುರೇಶ್‌ ಬಾಬು, ಕಾಂಗ್ರೆಸ್‌ ಶಾಸಕ ಅನಿಲ್‌ ಲಾಡ್‌ ಸೇರಿದಂತೆ 26 ಜನರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದರು. ಹಾಗೂ ಅದಾನಿ ಕಂಪನಿ ವಿರುದ್ದವೂ ಅಕ್ರಮ ಅದಿರು ಸಾಗಣೆ ವಿರುದ್ದ ಪ್ರಕರಣ ದಾಖಲಿಸಲಾಯಿತು. ಅಲ್ಲದೇ ಜನಾರ್ದನ ರೆಡ್ಡಿ ಸೇರಿದಂತೆ 26 ಜನರನ್ನು ಬಂಧಿಸಿ ವಿಚಾರಣೆ ಸಹ ನಡೆಸಿದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮೂರು ವರ್ಷಗಳ ಕಾಲ ಜೈಲು ವಾಸ ಕೂಡ ಅನುಭವಿಸಿ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ.

ಬಹುಕೋಟಿ ಹಗರಣ
ಇದು 35 ಸಾವಿರ ಕೋಟಿ ರೂ.ಗಳ ಹಗರಣವಾಗಿದ್ದು, ಸಾಕ್ಷ್ಯಾ ಧಾರಗಳ ಕೊರತೆ ಕಾರಣದಿಂದಾಗಿ ಸಿಬಿಐ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಆದರೆ ಈ ಮುಕ್ತಾಯ ವರದಿ ಹಿಂದೆ ಬಿಜೆಪಿ ನಾಯಕರೇ ಇದ್ದಾರೆ ಎಂಬುದು ಮಾಜಿ ಸಿಎಂ
ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಪ. ಬಿಜೆಪಿ ನಾಯಕರೇ 2018ರ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಜನಾರ್ದನ ರೆಡ್ಡಿಯಿಂದ 500 ಕೋಟಿ ರೂ. ಪಡೆದು ಈ ಪ್ರಕರಣ ಮುಚ್ಚಿ ಹಾಕಿದ್ದಾರೆ ಎಂದು ಆಪಾದಿಸಿದ್ದರು.

Advertisement

ನವ ಮಂಗಳೂರು ಬಂದರಿನಿಂದ 2.85 ಕೋಟಿ ಮೆಟ್ರಿಕ್‌ ಟ್ರನ್‌ ಅದಿರು ಅಕ್ರಮವಾಗಿ ಸಾಗಿಸಲಾಗಿದ್ದು, ಈ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಸಿಬಿಐ ತನಿಖೆಯನ್ನು ಪ್ರಾಥಮಿಕ ಹಂತದಲ್ಲಿಯೇ ಕೈ ಬಿಡಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
 ●ಎಚ್‌.ಕೆ. ಪಾಟೀಲ್‌, ಸಂಪುಟ ಉಪ ಸಮಿತಿ ಅಧ್ಯಕ್ಷ

ವಿಐಪಿಗಳು ನಿರಪರಾಧಿಗಳು ಎಂದು ಬಿಂಬಿತವಾಗುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಮೇಲ್ಮನವಿ ಸಲ್ಲಿಸುವಲ್ಲಿ ಆಗಿರುವ ವಿಳಂಬ. ಎಸ್‌ಐಟಿ 3 ವರ್ಷಗಳ ಕಾಲ ಶ್ರಮ ಪಟ್ಟು ವರದಿ ತಯಾರಿಸಿತು. ಆದರೆ ಸಿಬಿಐಬಿ ರಿಪೋರ್ಟ್‌ ಸಲ್ಲಿಸಿದೆ.
 ●ನ್ಯಾ. ಸಂತೋಷ್‌ ಹೆಗ್ಡೆ, ಮಾಜಿ ಲೋಕಾಯುಕ್ತ 

Advertisement

Udayavani is now on Telegram. Click here to join our channel and stay updated with the latest news.

Next